ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಉರಗ ರಕ್ಷಕನ ಮೇಲೆಯೇ ದೈತ್ಯ ಕಾಳಿಂಗ ಸರ್ಪದ ಡೆಡ್ಲಿ ಅಟ್ಯಾಕ್‌; ಎದೆ ಝಲ್ಲೆನಿಸೋ ವಿಡಿಯೊ ಇಲ್ಲಿದೆ

King Cobra Tries to Attack: ಉತ್ತರಾಖಂಡದ ಹರಿದ್ವಾರದ ಕಂಖಾಲ್ ಬೈರಾಗಿ ಶಿಬಿರದ ಲಕ್ಕರ್ ಬಸ್ತಿ ಪ್ರದೇಶದಲ್ಲಿ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡಿತು. 12 ಅಡಿ ಉದ್ದದ ಕಾಳಿಂಗಸರ್ಪದ ರಕ್ಷಣಾ ಕಾರ್ಯಾಚರಣೆಯ ರೋಚಕ, ಮೈಜುಮ್ಮೆನ್ನಿಸುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ದೈತ್ಯ ಕಾಳಿಂಗ ಸರ್ಪದ ಡೆಡ್ಲಿ ಅಟ್ಯಾಕ್‌- ವಿಡಿಯೊ ವೈರಲ್‌

-

Priyanka P Priyanka P Oct 28, 2025 12:29 PM

ಹರಿದ್ವಾರ: ಬೃಹತ್ ಕಾಳಿಂಗಸರ್ಪದ (King Cobra) ರಕ್ಷಣಾ ಕಾರ್ಯಾಚರಣೆಯೊಂದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ (Viral Video) ಆಗಿದೆ. ಉತ್ತರಾಖಂಡದ ಹರಿದ್ವಾರದ (Haridwar) ಕಂಖಾಲ್ ಬೈರಾಗಿ ಶಿಬಿರದ ಲಕ್ಕರ್ ಬಸ್ತಿ ಪ್ರದೇಶದಲ್ಲಿ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡಿತು. ಉಗ್ರರೂಪ ತಾಳಿದ್ದ 12 ಅಡಿ ಉದ್ದದ ಕಾಳಿಂಗಸರ್ಪವನ್ನು ನೋಡಿ ಸ್ಥಳೀಯರು ಭೀತಿಗೊಂಡಿದ್ದರು. ಕೆಲವು ಕುತೂಹಲಕಾರಿ ಜನರು, ದೈತ್ಯ ಮತ್ತು ಆಕ್ರಮಣಕಾರಿ ಹಾವನ್ನು ನೋಡಲು ನೆರೆದಿದ್ದರು.

ಕಾಳಿಂಗ ಸರ್ಪವನ್ನು ನೋಡಿದ ನಂತರ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ರಕ್ಷಣಾ ತಂಡದೊಂದಿಗೆ ಕೂಡಲೇ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಒಂದು ಕ್ಷಣ ಅವಕ್ಕಾದರು. ಈ ಭಯಾನಕ ಘಟನೆಯ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಹರಿದ್ವಾರ ನಿವಾಸಿಗಳಲ್ಲಿ ಭೀತಿಯನ್ನು ಉಂಟುಮಾಡಿದ್ದಲ್ಲದೆ, ನೆಟ್ಟಿಗರನ್ನು ಆಘಾತಕ್ಕೆ ದೂಡಿತು. ಲಕ್ಕರ್ ಬಸ್ತಿಯ ಸ್ಥಳೀಯರಿಂದ ಮಾಹಿತಿ ಪಡೆದ ಕೂಡಲೇ ಅರಣ್ಯ ಇಲಾಖೆಯ ತಂಡ ತಕ್ಷಣ ಸ್ಥಳಕ್ಕೆ ತಲುಪಿತು.

ವಿಡಿಯೊದಲ್ಲಿ, ಒಬ್ಬ ನುರಿತ ಉರಗ ರಕ್ಷಕನು ಬೃಹತ್ ಕಾಳಿಂಗ ಸರ್ಪವನ್ನು ಚೀಲದೊಳಗೆ ಕೊಂಡೊಯ್ಯಲು ಎಚ್ಚರಿಕೆಯಿಂದ ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಆದರೆ, ಹಾವು ಪದೇ ಪದೇ ತಂಡದ ಮೇಲೆ ದಾಳಿ ಮಾಡಿ, ತನ್ನ ಹೆಡೆಯನ್ನು ಮೇಲಕ್ಕೆತ್ತಿ ನೋಡುಗರನ್ನು ಬೆದರಿಸಿತು. ಉದ್ವಿಗ್ನ ಮತ್ತು ಎಚ್ಚರಿಕೆಯ ಪ್ರಯತ್ನದ ನಂತರ, ತಂಡವು ಕಾಳಿಂಗಸರ್ಪವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಯಿತು. ನಂತರ ಅಧಿಕಾರಿಗಳು ಕಾಳಿಂಗ ಸರ್ಪವನ್ನು ಯಾವುದೇ ಅದರ ನೈಸರ್ಗಿಕ ಆವಾಸಸ್ಥಾನಕ್ಕೆ ಸುರಕ್ಷಿತವಾಗಿ ಬಿಡುಗಡೆ ಮಾಡಲಾಗಿದೆ ಎಂದು ದೃಢಪಡಿಸಿದರು.

ವಿಡಿಯೊ ವೀಕ್ಷಿಸಿ:



ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ದೈತ್ಯ ಕಾಳಿಂಗ ಸರ್ಪ ಪ್ರತ್ಯಕ್ಷ

ಉತ್ತರಾಖಂಡದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ಆಗಸ್ಟ್‌ನಲ್ಲಿ ಡೆಹ್ರಾಡೂನ್‌ನಲ್ಲಿ ಮನೆಯ ಗೋಡೆಯ ಉದ್ದಕ್ಕೂ ದೈತ್ಯ ಕಾಳಿಂಗಸರ್ಪ ಕಾಣಿಸಿಕೊಂಡಿತ್ತು. ಇದು ಸ್ಥಳೀಯ ನಿವಾಸಿಗಳಲ್ಲಿ ಭೀತಿಯನ್ನು ಉಂಟುಮಾಡಿತ್ತು.

ಇದನ್ನೂ ಓದಿ: Viral News: "ಅಯ್ಯೋ ರಾತ್ರಿಯಾಗುತ್ತಲೇ ನನ್ನ ಹೆಂಡತಿ ಹಾವಾಗಿ ಬದಲಾಗುತ್ತಾಳೆ"; ಕಾಪಾಡಿ ಎಂದು ಪೊಲೀಸರಿಗೆ ದೂರು ನೀಡಿದ ಪತಿ

ಉತ್ತರಾಖಂಡದ ಝಜ್ರಾ ಶ್ರೇಣಿಯಲ್ಲಿ ನಡೆದ ಈ ಘಟನೆಯು ಭಾರಿ ಜನಸಂದಣಿಯನ್ನು ಸೆಳೆಯಿತು. ಜನರು ಬೃಹತ್ ಸರ್ಪವನ್ನು ವೀಕ್ಷಿಸಲು ಜಮಾಯಿಸಿದರು. ವಿಡಿಯೊದಲ್ಲಿ, ಹಲವಾರು ಮಂದಿ ಗೋಡೆಯ ಪಕ್ಕದಲ್ಲಿರುವ ಮರದಿಂದ ಕಾಳಿಂಗಸರ್ಪವನ್ನು ಕೆಳಗೆ ಎಳೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಹಾವು ಪದೇ ಪದೇ ರಕ್ಷಣಾ ಸಿಬ್ಬಂದಿಯ ಮೇಲೆ ದಾಳಿಯೆಸಗಲು ಮುಂದಾಗಿದ್ದಲ್ಲದೆ, ತನ್ನ ಹೆಡೆಯನ್ನೆತ್ತಿ ನೆರೆದವರನ್ನು ಭೀತಿಗೊಳಿಸಿತು.

ನಾವು ಕಾರ್ಯಾಚರಣೆ ಆರಂಭಿಸಿದ ತಕ್ಷಣ, ನಾಗರಹಾವು ರಕ್ಷಣಾತ್ಮಕವಾಗಿ ತಿರುಗಿ ಹಲವಾರು ಬಾರಿ ದಾಳಿ ಮಾಡಿತು. ಅದು ನಮ್ಮ ಕೆಲಸಗಾರರೊಬ್ಬರ ಮೇಲೆಯೂ ದಾಳಿ ಮಾಡಿತು. ಆದರೆ ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದರು. ಹಲವಾರು ಪ್ರಯತ್ನಗಳ ನಂತರ, ಸೀಮಿತ ಉಪಕರಣಗಳು ಮತ್ತು ಸವಾಲಿನ ಪರಿಸ್ಥಿತಿಗಳ ಹೊರತಾಗಿಯೂ, ಉರಗ ರಕ್ಷಕರು ಆಕ್ರಮಣಕಾರಿ ಸರ್ಪವನ್ನು ಚೀಲದಲ್ಲಿ ಸೆರೆಹಿಡಿಯುವಲ್ಲಿ ಯಶಸ್ವಿಯಾದರು. ನಂತರ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.

ಈ ಎರಡು ಪ್ರತ್ಯೇಕ ಘಟನೆಗಳಲ್ಲಿ ಯಾವುದೇ ಗಾಯಗಳಾಗಿಲ್ಲ. ಆದರೆ ಒಂದರ ನಂತರ ಒಂದರಂತೆ ಕಾಳಿಂಗಸರ್ಪ ಕಾಣಿಸಿಕೊಂಡಿರುವುದು ಮತ್ತು ಅವುಗಳ ಆಕ್ರಮಣಕಾರಿ ವರ್ತನೆ ಗ್ರಾಮಸ್ಥರನ್ನು ಭಯಭೀತಗೊಳಿಸಿದೆ.