ಹಿಮದಲ್ಲಿ ಸಿಲುಕಿದ ಕಾರನ್ನು ತಳ್ಳಿದ ಕಿರಣ್ ರಿಜಿಜು; ಕೇಂದ್ರ ಸಚಿವರ ಸರಳತೆಗೆ ನೆಟ್ಟಿಗರು ಫಿದಾ
ಅರುಣಾಚಲ ಪ್ರದೇಶದಲ್ಲಿ ಹಿಮದ ನಡುವೆ ಸಿಲುಕಿದ್ದ ವಾಹನವೊಂದು ಮುಂದೆ ಚಲಿಸುವಂತೆ ಮಾಡಲು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸಹಾಯ ಮಾಡಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ವೈರಲ್ ಆಗಿದ್ದು, ಸಾಕಷ್ಟು ಮಂದಿ ಸಚಿವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ಅರುಣಾಚಲ ಪ್ರದೇಶದಲ್ಲಿ (Arunachal pradesh) ಹಿಮದ (snow fall) ನಡುವೆ ಸಿಲುಕಿಕೊಂಡಿದ್ದ ವಾಹನ ಮುಂದೆ ಚಲಿಸುವಂತೆ ಮಾಡಲು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು (Union Parliamentary Affairs Minister Kiren Rijiju) ಅವರು ಇತರ ಕೆಲವರೊಂದಿಗೆ ಸೇರಿ ವಾಹನವನ್ನು ತಳ್ಳಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ವೈರಲ್ (Viral News) ಆಗಿದೆ. ಹಿಮದಿಂದ ಆವೃತವಾದ ರಸ್ತೆಯಲ್ಲಿ ಸಿಲುಕಿಕೊಂಡಿದ್ದ ವಾಹನವನ್ನು ತೆರವುಗೊಳಿಸಲು ಮತ್ತು ಸ್ಥಳಾಂತರಿಸಲು ಸ್ಥಳೀಯರು ಮತ್ತು ಕಾರ್ಮಿಕರೊಂದಿಗೆ ಸೇರಿಕೊಂಡು ಕಿರಣ್ ರಿಜಿಜು ಸಹಾಯ ಮಾಡುವುದನ್ನು ಈ ವಿಡಿಯೊದಲ್ಲಿ ಕಾಣಬಹುದಾಗಿದೆ.
ಅರುಣಾಚಲ ಪ್ರದೇಶದ ತವಾಂಗ್ನಲ್ಲಿ ಭಾರೀ ಹಿಮಪಾತದಿಂದಾಗಿ ಶೋಂಗಟ್ಸರ್ ಸರೋವರ ಮತ್ತು ಪಿಟಿ ತ್ಸೊ ಪ್ರದೇಶದ ನಡುವೆ ವಾಹನವೊಂದು ಸಿಲುಕಿಕೊಂಡಿತ್ತು. ತೀವ್ರ ಹಿಮಪಾತ ಮತ್ತು ವಾಹನ ಸಿಲುಕಿಕೊಂಡಿದ್ದು, ರಸ್ತೆ ತಡೆಗೆ ಕಾರಣವಾಗಿದೆ. ಇದನ್ನು ತೆರವುಗೊಳಿಸಲು ಕಿರಣ್ ರಿಜಿಜು ಸಹಾಯ ಮಾಡಿದ್ದಾರೆ.
ಪ್ರೇಮಿಗಳ ದಿನವೇ ಪತ್ನಿಯ ಕೊಲೆ; ದರೋಡೆಯ ಕಥೆ ಕಟ್ಟಿದ ಆರೋಪಿ ಪತಿ ಸಿಕ್ಕಿ ಬಿದ್ದಿದ್ದು ಹೇಗೆ?
ಬಳಿಕ ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅವರು ವಿಡಿಯೊ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಹಿಮದಿಂದ ಆವೃತವಾದ ರಸ್ತೆಯಲ್ಲಿ ಸಿಲುಕಿದ್ದ ವಾಹನವನ್ನು ತೆರವುಗೊಳಿಸಲು ಮತ್ತು ಸ್ಥಳಾಂತರಿಸಲು ಸ್ಥಳೀಯರು ಮತ್ತು ಕಾರ್ಮಿಕರೊಂದಿಗೆ ಸಹಾಯ ಮಾಡುವುದನ್ನು ತೋರಿಸಲಾಗಿದೆ.
ಭಾರೀ ಹಿಮಪಾತದ ಸಮಯದಲ್ಲಿ ನಾವು ಯಾವುದೇ ಪರಿಸ್ಥಿತಿಗೆ ಸಿದ್ಧರಾಗಿರಬೇಕು. ಗಡಿ ರಸ್ತೆಗಳ ಸಂಘಟನೆಯ ಸಿಬ್ಬಂದಿ ರಕ್ಷಣಾ ಪಡೆಗಳು ಮತ್ತು ನಾಗರಿಕರ ನಿರಂತರ ಚಲನೆಗಾಗಿ ಸದಾ ಜಾಗರೂಕರಾಗಿರುತ್ತಾರೆ. ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯ ಅಡಿಯಲ್ಲಿ ಶೋಂಗಟ್ಸರ್ ಸರೋವರ ಮತ್ತು ಪಿಟಿ ತ್ಸೋ ಪ್ರದೇಶದ ನಡುವೆ ನಾವು ದೊಡ್ಡ ಹಿಮ ದಿಗ್ಬಂಧನವನ್ನು ಎದುರಿಸಿದೆವು ಎಂದು ಅವರು ತಿಳಿಸಿದ್ದಾರೆ.
During heavy snow we must prepared for any situation. Personnel of Border Roads Organisation are forever alert for continuous movement of Defence Forces and Civilians. We faced huge Snow blockade, between Shongatser Lake and PT Tso area, under Tawang district, Arunachal Pradesh pic.twitter.com/UZPaHUwJuy
— Kiren Rijiju (@KirenRijiju) February 16, 2026
ಅರುಣಾಚಲ ಪ್ರದೇಶದಲ್ಲಿ ಸಾಮಾನ್ಯವಾಗಿ ಚಳಿಗಾಲದಲ್ಲಿ ಭಾರಿ ಹಿಮಪಾತವಾಗುತ್ತದೆ. ವಿಶೇಷವಾಗಿ ಸೆಲಾ ಪಾಸ್ ಮತ್ತು ತವಾಂಗ್ನಂತಹ ಎತ್ತರದ ಪ್ರದೇಶಗಳಲ್ಲಿ ಹಿಮಪಾತದಿಂದಾಗಿ ರಸ್ತೆ ತಡೆಯಾಗುವುದು ಸಾಮಾನ್ಯವಾಗಿರುತ್ತದೆ.
ಅರುಣಾಚಲ ಪ್ರದೇಶದ ಸೆಲಾ ಪಾಸ್ ಬಳಿ ಕಳೆದ ವರ್ಷ ಹೆಪ್ಪುಗಟ್ಟಿದ ಸರೋವರದಲ್ಲಿ ನಾಲ್ಕು ಸಂದರ್ಶಕರು ನೀರಿಗೆ ಬಿದ್ದಿದ್ದರು. ಬಳಿಕ ಪ್ರವಾಸಿಗರು ಇಲ್ಲಿ ಎಚ್ಚರಿಕೆಯಿಂದ ಇರುವಂತೆ ಕಿರಣ್ ರಿಜಿಜು ಕೇಳಿಕೊಂಡಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಹಂಚಿಕೊಂಡ ಅವರು, ಪ್ರಯಾಣಿಕರು ಅನುಭವಿ ಮಾರ್ಗದರ್ಶಿಗಳೊಂದಿಗೆ ಮಾತ್ರ ಹೆಪ್ಪುಗಟ್ಟಿದ ಸರೋವರಗಳ ಮೇಲೆ ನಡೆಯಲು, ಹಿಮದಿಂದ ಆವೃತವಾದ ರಸ್ತೆಗಳಲ್ಲಿ ಎಚ್ಚರಿಕೆಯಿಂದ ಚಾಲನೆ ಮಾಡಲು ಮತ್ತು ಹಿಮಪಾತಗಳ ಬಗ್ಗೆ ಜಾಗರೂಕರಾಗಿರಲು ಸಲಹೆ ನೀಡಿದ್ದರು.
2021ರಲ್ಲಿ ಭಾರೀ ಹಿಮಪಾತದಿಂದ ಬೈಶಾಖಿ, ಸೆಲಾ ಪಾಸ್ ಮತ್ತು ನುರಾನಾಂಗ್ ನಡುವಿನ ರಸ್ತೆಗಳು ಅಪಾಯಕಾರಿಯಾಗಿ ಪರಿಗಣಿಸಲ್ಪಟ್ಟಿತ್ತು. ಅನಂತರ ತವಾಂಗ್ಗೆ ಪ್ರಯಾಣಿಕರು ತೆರಳದಂತೆ ರಿಜಿಜು ಪ್ರವಾಸಿಗರಿಗೆ ಎಚ್ಚರಿಕೆ ನೀಡಿದ್ದರು. ಹಿಮದಿಂದ ಆವೃತವಾದ ಪ್ರದೇಶದಲ್ಲಿ ಅವರು ಪೊಲೀಸ್ ಸಿಬ್ಬಂದಿಯೊಂದಿಗೆ ನಡೆದುಕೊಂಡು ಹೋಗಿ ಸಿಕ್ಕಿಬಿದ್ದ ವಾಹನಗಳಿಗೆ ಮಾರ್ಗದರ್ಶನ ನೀಡಿದ್ದರು.