Viral News: ರೈಲಿನಲ್ಲಿ ಡ್ರಗ್ಸ್ ನೀಡಿ ರಾಬರಿ- ಯೂಟ್ಯೂಬರ್ ಗೋಳಾಟ ಹೇಳೋರಿಲ್ಲ...ಕೇಳೋರಿಲ್ಲ!
ಮಾದಕ ದ್ರವ್ಯ (Drug) ನೀಡಿ ರೈಲಿನಲ್ಲಿ ತನ್ನನ್ನು ದರೋಡೆ (Robbery on train) ಮಾಡಲಾಗಿದೆ. ಈ ಬಗ್ಗೆ ಪೋಲೀಸರು ಸಹಾಯ ಮಾಡಲು ನಿರಾಕರಿಸಿದ್ದಾರೆ ಎಂದು ಯೂಟ್ಯೂಬರ್ (YouTuber Kanika Devrani) ಒಬ್ಬರು ಇನ್ ಸ್ಟಾಗ್ರಾಮ್ (Instagram) ಖಾತೆಯಲ್ಲಿ ಹೇಳಿಕೊಂಡಿದ್ದು, ಇದೀಗ ರೈಲು ಪ್ರಯಾಣದ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸುವಂತೆ ಮಾಡಿದೆ.


ನವದೆಹಲಿ: ಮಾದಕ ದ್ರವ್ಯ (drug) ನೀಡಿ ರೈಲಿನಲ್ಲಿ ತನ್ನನ್ನು ದರೋಡೆ (robbery on train) ಮಾಡಲಾಗಿದೆ. ಈ ಬಗ್ಗೆ ಪೋಲೀಸರು ಸಹಾಯ ಮಾಡಲು ನಿರಾಕರಿಸಿದ್ದಾರೆ ಎಂದು ಯೂಟ್ಯೂಬರ್ (YouTuber Kanika Devrani ) ಒಬ್ಬರು ಇನ್ ಸ್ಟಾಗ್ರಾಮ್ (Instagram) ಖಾತೆಯಲ್ಲಿ ಹೇಳಿಕೊಂಡಿದ್ದು, ಇದೀಗ ರೈಲು ಪ್ರಯಾಣದ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸುವಂತೆ ಮಾಡಿದೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ (social media) ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಹಲವಾರು ಇನ್ ಸ್ಟಾಗ್ರಾಮ್ ಬಳಕೆದಾರರು ಭಾರತೀಯ ರೈಲ್ವೆ ನಿಗಮ (Indian Railways) ಮತ್ತು ಪಶ್ಚಿಮ ಬಂಗಾಳ ಪೊಲೀಸರಿಗೆ (West Bengal Police) ಇದನ್ನು ಟ್ಯಾಗ್ ಮಾಡಿ ಈ ಬಗ್ಗೆ ಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.
ಯೂಟ್ಯೂಬರ್ ಕನಿಕಾ ದೇವ್ರಾಣಿ ಅವರು ತಾವು ನವದೆಹಲಿಯಿಂದ ಗುವಾಹಟಿಗೆ ಬ್ರಹ್ಮಪುತ್ರ ಮೇಲ್ನಲ್ಲಿ ಎರಡನೇ ಎಸಿ ಕೋಚ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಮಾದಕ ದ್ರವ್ಯ ನೀಡಿ ತನ್ನನ್ನು ದರೋಡೆ ಮಾಡಲಾಗಿದೆ. ಈ ಬಗ್ಗೆ ಪೊಲೀಸರು ಸಹಾಯ ಕೇಳಿದಾಗ ಅವರು ನಿರಾಕರಿಸಿದ್ದಾರೆ ಎಂದು ಹೇಳಿದ್ದಾರೆ.
ಬ್ರಹ್ಮಪುತ್ರ ಮೇಲ್ನಲ್ಲಿ ರೈಲು ಸಿಬ್ಬಂದಿ ಟಿಕೆಟ್ ಇಲ್ಲದ ಅಪರಿಚಿತ ವ್ಯಕ್ತಿಯನ್ನು ಕೋಚ್ ಒಳಗೆ ಬಿಟ್ಟಿರುವುದಾಗಿ ಅವರು ಇನ್ ಸ್ಟಾಗ್ರಾಮ್ ನಲ್ಲಿ ಹೇಳಿಕೊಂಡಿದ್ದಾರೆ. ಈ ಘಟನೆ ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ (NJP) ರೈಲು ನಿಂತಿದ್ದಾಗ ನಡೆದಿದ್ದು, ತಮಗೆ ಮಾತ್ರವಲ್ಲ ತಮ್ಮೊಂದಿಗೆ ಇದ್ದ ಸಹ ಪ್ರಯಾಣಿಕರಿಗೂ ಮಾದಕ ದ್ರವ್ಯ ನೀಡಿ ದರೋಡೆ ಮಾಡಲಾಗಿದೆ ಎಂದು ಕನಿಕಾ ಆರೋಪಿಸಿದ್ದಾರೆ.
"ಪ್ರಯಾಣ ಸುರಕ್ಷಿತ" ಎನ್ನುವ ಶೀರ್ಷಿಕೆಯೊಂದಿಗೆ ಇನ್ ಸ್ಟಾಗ್ರಾಮ್ ನಲ್ಲಿ ಈ ಸ್ಟೋರಿಯನ್ನು ಅವರು ಪೋಸ್ಟ್ ಮಾಡಿದ್ದಾರೆ. ಇದು ಈಗ ರೈಲ್ವೆ ಪ್ರಯಾಣ ಸುರಕ್ಷತೆಯ ಬಗ್ಗೆ ಆನ್ಲೈನ್ನಲ್ಲಿ ಕಳವಳವನ್ನು ಹುಟ್ಟುಹಾಕಿದೆ.
ಹಲವಾರು ಇನ್ ಸ್ಟಾಗ್ರಾಮ್ ಬಳಕೆದಾರರು ಭಾರತೀಯ ರೈಲ್ವೆ ನಿಗಮ ಮತ್ತು ಪಶ್ಚಿಮ ಬಂಗಾಳ ಪೊಲೀಸರನ್ನು ಟ್ಯಾಗ್ ಮಾಡಿದ್ದು, ಈ ವಿಷಯವನ್ನು ಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ದೇವ್ರಾಣಿ, ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಏನಾಗಿತ್ತು?
ಘಟನೆಯ ಬಗ್ಗೆ ಕನಿಕಾ ಹೇಳಿರುವುದು ಹೀಗೆ.. 2ಎಸಿ ಕೋಚ್ನಲ್ಲಿ ನಾನು ಪ್ರಯಾಣಿಸುತ್ತಿದ್ದೆ. ಈ ವೇಳೆ ಟಿಕೆಟ್ ಇಲ್ಲದ ಅಪರಿಚಿತ ವ್ಯಕ್ತಿ ಕಂಪಾರ್ಟ್ಮೆಂಟ್ಗೆ ಪ್ರವೇಶಿಸಿದ್ದಾನೆ. ಆ ವ್ಯಕ್ತಿ ಕೋಚ್ನಲ್ಲಿ ನಡದುಕೊಂಡು ಹೋಗುವಾಗ ಕೆಲವು ಪ್ರಯಾಣಿಕರೊಂದಿಗೆ ಸಂವಹನ ನಡೆಸಿದ್ದಾನೆ.
ನವದೆಹಲಿಯಿಂದ ಗುವಾಹಟಿಗೆ ಬ್ರಹ್ಮಪುತ್ರ ಮೇಲ್ನಲ್ಲಿ ಮೊದಲ ದರ್ಜೆಯ ಎಸಿ ಟಿಕೆಟ್ ಸಿಗದ ಕಾರಣ ನಾನು ಎರಡನೇ ಎಸಿ ಟಿಕೆಟ್ ಬುಕ್ ಮಾಡಿದ್ದೆ. ಎಲ್ಲವೂ ಸುರಕ್ಷಿತವಾಗಿದೆ ಎಂದೇ ಭಾವಿಸಿದ್ದೆ. ರೈಲು ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ನಿಲ್ದಾಣದಲ್ಲಿ ನಿಂತಿತ್ತು. ಫೋನ್ ಅನ್ನು ಚಾರ್ಜ್ಗೆ ಹಾಕಿ ನಾನು ನಿದ್ರೆಗೆ ಜಾರಿದ್ದೆ. ಯಾರೋ ನಾನು ಇದ್ದಲ್ಲಿಗೆ ಬಂದು ನನ್ನ ದಿಂಬಿನ ಕೆಳಗೆ ಇದ್ದ ಫೋನ್ ಅನ್ನು ತೆಗೆದುಕೊಂಡರು.
ಅಪರಿಚಿತ ವ್ಯಕ್ತಿ ಮೊದಲು ನನ್ನ ಬರ್ತ್ನಲ್ಲಿ ಮೇಲಿದ್ದ ಪ್ರಯಾಣಿಕನೊಂದಿಗೆ ಸಂಭಾಷಣೆ ನಡೆಸಿದ್ದು, ಈ ವೇಳೆ ಆತ ಸೀಟ್ ಸಂಖ್ಯೆಗಳನ್ನು ಕೇಳುತ್ತಿದ್ದನು. ನನ್ನ ಮೇಲೆ ಏನೋ ಸಿಂಪಡಿಸಿದಂತಾಗಿತ್ತು. ಹೀಗಾಗಿ ಆತ ಏನು ಮಾತನಾಡುತ್ತಿದ್ದಾನೆ ಎಂದು ನನಗೆ ಏನೂ ಅರ್ಥವಾಗಲಿಲ್ಲ.

ನಾನು ಮಾತ್ರವಲ್ಲ ಇನ್ನೊಬ್ಬ ಪ್ರಯಾಣಿಕರು ತಮ್ಮ ಫೋನ್ ಕಳೆದುಕೊಂಡಿದ್ದಾರೆ. ಕಳ್ಳತನದ ಬಗ್ಗೆ ಜನರು ಮಾತನಾಡುತ್ತಿರುವ ಶಬ್ದದಿಂದ ನಾನು ಎಚ್ಚರಗೊಂಡೆ. ಆಗ ನನ್ನ ಫೋನ್ ಕೂಡ ಸ್ಥಳದಲ್ಲಿ ಇರಲಿಲ್ಲ.
ಬಳಿಕ ಆರ್ಪಿಎಫ್ ಅಧಿಕಾರಿ ಎಂದು ಹೇಳಿ ಯಾರೋ ನನ್ನ ಫೋನ್ನಿಂದ ತಾಯಿಗೆ ಕರೆ ಮಾಡಿ ಪಾಸ್ವರ್ಡ್ ಕೇಳಿದ್ದಾರೆ. ಈ ಬಗ್ಗೆ ಸಹಾಯ ಮಾಡಲು ಪೊಲೀಸರು ನಿರಾಕರಿಸಿದ್ದಾರೆ ಎಂದು ಕನಿಕಾ ವಿವರಿಸಿದ್ದಾರೆ.
ಕನಿಕಾ ಅವರ ಈ ವಿಡಿಯೋ ಆನ್ಲೈನ್ನಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಿಶೇಷವಾಗಿ ಭದ್ರತಾ ಲೋಪಗಳು, ಅನಧಿಕೃತ ಪ್ರವೇಶ ಮತ್ತು ರೈಲ್ವೆ ಅಧಿಕಾರಿಗಳ ಪ್ರತಿಕ್ರಿಯೆ ಸಂಬಂಧಿಸಿ ಚರ್ಚೆಯನ್ನು ಹುಟ್ಟು ಹಾಕಿತ್ತು.