ಗೆಳೆಯ ಕೆನ್ನೆಗೆ ಹೊಡೆದನೆಂದು ಮೊಬೈಲ್ ಟವರ್ ಏರಿದ ಭೂಪ; ಕ್ಷಮೆ ಕೋರಲು ಪಟ್ಟು ಹಿಡಿದ ʼಸ್ವಾಭಿಮಾನಿʼ ಯುವಕ
Viral Video: ಕುಡಿದ ಮತ್ತಿನಲ್ಲಿ ಗೆಳೆಯ ಕೆನ್ನೆಗೆ ಹೊಡೆದಿದ್ದಾನೆ ಎಂದು ಯುವಕ ಮೊಬೈಲ್ ಟವರ್ ಏರಿ ಹೈಡ್ರಾಮಾ ಸೃಷ್ಟಿಸಿದ್ದಾನೆ. ಗೆಳೆಯ ಕ್ಷಮೆ ಕೋರದ ಹೊರತು ಇಳಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾನೆ. ಸದ್ಯ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಚಾಟ್ಜಿಪಿಟಿ ರಚಿತ ಚಿತ್ರ -
ಗಾಂಧಿನಗರ, ಜೂ. 29: ಕುಡಿದ ಮತ್ತಿನಲ್ಲಿ ಕೆಲವರು ವಿಚಿತ್ರವಾಗಿ ಆಡುತ್ತಾರೆ. ಕೆಲವೊಮ್ಮೆ ಇಂತಹ ವಿಚಿತ್ರ ವರ್ತನೆಗಳೇ ಮಹಾನ್ ಯಡವಟ್ಟಾಗಿ ಬದಲಾಗುತ್ತವೆ. ಅಂತಹದ್ದೇ ವಿಕ್ಷಿಪ್ತ ಘಟನೆಯೊಂದು ಗುಜರಾತ್ನಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿ ಗೆಳೆಯ ಕೆನ್ನೆಗೆ ಹೊಡೆದಿದ್ದಾನೆ ಎಂದು ಯುವಕ ಮೊಬೈಲ್ ಟವರ್ ಏರಿ ಹೈಡ್ರಾಮಾ ಸೃಷ್ಟಿಸಿದ್ದಾನೆ. ಗೆಳೆಯ ಕ್ಷಮೆ ಕೋರದ ಹೊರತು ಇಳಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾನೆ (Viral Video). ಕೊನೆಗೂ ಆತನನ್ನು ಇಳಿಸುವಲ್ಲಿ ಸ್ಥಳೀಯರು ಯಶಸ್ವಿಯಾಗಿದ್ದು, ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಾಲಿವುಡ್ನ 'ಶೋಲೆ' ಚಿತ್ರದ ದೃಶ್ಯವನ್ನು ನೆನಪಿಸುವ ಈ ಘಟನೆ ಕೆಲವು ತಾಸುಗಳ ಕಾಲ ಗೊಂದಲ ಸೃಷ್ಟಿಸಿತು. ಗುಜರಾತ್ನ ನವ್ಸರಿ ನಗರದ ದಶಹರ ಟೆಕ್ರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ಗೆಳೆಯ ಕೆನ್ನಗೆ ಹೊಡೆದಿದ್ದಾನೆ, ಇದರಿಂದ ತನಗೆ ಅವಮಾನವಾಗಿದೆ, ಕ್ಷಮೆ ಕೇಳುವವರೆಗೆ ತಾನು ಇಳಿಯುವುದಿಲ್ಲ ಎಂದು ಟವರ್ ಹತ್ತಿ ಯುವಕ ಹುಚ್ಚಾಟ ಮೆರೆದಿದ್ದಾನೆ. ಘಟನೆ ಬಗ್ಗೆ ತಿಳಿದು ಟವರ್ ಸುತ್ತ ನೂರಾರು ಜನರು ಗುಂಪುಗೂಡಿ ಯುವಕನ ವಿಚಿತ್ರ ವರ್ತನೆಗೆ ಪ್ರತ್ಯಕ್ಷ ಸಾಕ್ಷಿಯಾದರು.
ವೈರಲ್ ವಿಡಿಯೊ:
Slapped By Friend, Gujarat Man Climbs Mobile Tower, Comes Down After Apology pic.twitter.com/n3yMCFD9Hy
— NDTV (@ndtv) June 29, 2026
ಘಟನೆ ವಿವರ
ತುಷಾರ್ ದಂತಾನಿ ಮತ್ತು ಆತನ ಗೆಳೆಯ ಆರ್ಯನ್ ಪಟೇಲ್ ಕಂಠಮಟ್ಟ ಕುಡಿದು ಯಾವುದೋ ವಿಚಾರಕ್ಕೆ ಕಿತ್ತಾಡಿಕೊಂಡರು. ಜಗಳ ತಾರಕಕ್ಕೇರಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಈ ವೇಳೆ ಆರ್ಯನ್ ಎಲ್ಲರೆದುರೇ ತುಷಾರ್ ಕೆನ್ನಗೆ ಒಂದೇಟು ಬಿಗಿದ. ಇದರಿಂದ ತುಷಾರ್ಗೆ ಅವಮಾನವಾದಂತಾಯ್ತು.
ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಕನ್ನಡ ನಟಿ ಶ್ರೀಲೀಲಾಗೆ ಅವಮಾನ ಮಾಡಿದ್ರಾ ಮಹಾರಾಷ್ಟ್ರ ಸಿಎಂ ಪತ್ನಿ?
ಕೂಡಲೇ ಸ್ಥಳದಿಂದ ತೆರಳಿದ ತುಷಾರ್ ಎಲ್ಲರೂ ನೋಡುತ್ತಿದ್ದಂತೆ ಮೊಬೈಲ್ ಟವರ್ ಏರಿ ಇಳಿಯಲು ನಿರಾಕರಿಸಿದ. ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಕೂಡಲೇ ಸಾರ್ವಜನಿಕರು ಸ್ಥಳಲ್ಲಿ ಜಮಾಯಿಸಿದರು. ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿಯೂ ಆಗಮಿಸಿದರು. ಅಷ್ಟಾಗಿಯೂ ಪೊಲೀಸ್ ಸಿಬ್ಬಂದಿ, ಸ್ಥಳೀಯರ ಮನವಿಯ ಹೊರತಾಗಿಯೂ ತುಷಾರ್ ಇಳಿಯಲು ನಿರಾಕರಿಸುತ್ತಲೇ ಇದ್ದ.
ಸಾರ್ವಜನಿಕರೆದುರೇ ಕ್ಷಮೆ ಕೋರಿದ ಆರ್ಯನ್
ಕೊನೆಗೆ ಅಧಿಕಾರಿಗಳು ಆರ್ಯನ್ ಬಳಿ ಬಂದು ಸಾರ್ವಜನಿಕವಾಗಿ ಗೆಳೆಯನ ಬಳಿ ಕ್ಷಮೆ ಕೋರುವಂತೆ ಸೂಚಿಸಿದರು. ಟವರ್ ಬುಡದಲ್ಲಿ ನಿಂತ ಆರ್ಯನ್ ಎಲ್ಲರೆದುರೇ ತುಷಾರ್ ಬಳಿ ಕ್ಷಮೆ ಯಾಚಿಸಿದ. ಇದರಿಂದ ತೃಪ್ತನಾದ ತುಷಾರ್ ಕೆಳಗಿಳಿಯಲು ಸಮ್ಮತಿಸಿದ. ಹೀಗೆ ಗಂಟೆಗಳ ಕಾಲ ಗೊಂದಲ ಸೃಷ್ಟಿಸಿದ್ದ ಹೈಡ್ರಾಮಾ ಯಾವುದೇ ಸಮಸ್ಯೆ ಇಲ್ಲದೆ ಸುಖಾಂತ್ಯಗೊಂಡಿತು. ಆ ಮೂಲಕ ಸಾರ್ವಜನಿಕರು ನೆಮ್ಮದಿಯ ನಿಟ್ಟಿಸಿರು ಬಿಟ್ಟರು.
ಯುವಕರಿಗೆ ಕಿರುಕುಳ ನೀಡಿ ತಾವೇ ಬಟ್ಟೆ ಹರಿದುಕೊಂಡ ಕಿʼಲೇಡಿʼಗಳು: ಮಹಿಳೆಯರ ಕಳ್ಳಾಟ ಕ್ಯಾಮರಾದಲ್ಲಿ ಸೆರೆ
ಸದ್ಯ ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಲವರು ಬಾಲಿವುಡ್ ಚಿತ್ರ ʼಶೋಲೆʼಯ ದೃಶ್ಯದೊಂದಿಗೆ ಇದನ್ನು ಹೋಲಿಸುತ್ತಿದ್ದಾರೆ. ನೆಟ್ಟಿಗರು ಮೋಜಿನ ಕಮೆಂಟ್ ಮೂಲಕ ತುಷಾರ್ನ ಕಾಲೆಳೆದಿದ್ದಾರೆ. ಕುಡುಕರ ಇಂತಹ ಓವರ್ ಆ್ಯಕ್ಟ್ ನೋಡಲು ಮಜವಾಗಿರುತ್ತದೆ ಎಂದು ಹಲವರು ಹೇಳಿದ್ದಾರೆ. ಹೈಡ್ರಾಮಾ ಸೃಷ್ಟಿಸಿದ ಇಬ್ಬರಿಗೂ ಒದ್ದು ಪೊಲೀಸರು ಬುದ್ಧಿ ಕಲಿಸಬೇಕಿತ್ತು ಎಂದು ಇನ್ನು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ವೈರಲ್ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.