ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chandrashekher Hegde Badami Column: ಮನುಷ್ಯತ್ವದ ಚಿಕಿತ್ಸೆ ನೀಡುವ ಎಚ್..ಎಸ್.ವಿ ಕಾವ್ಯ

ಕನ್ನಡಿಗರ ಹೃದಯದಲ್ಲಿ ಪ್ರೀತಿ, ಪ್ರಣಯ, ಕರುಣೆ, ಅಂತಃಕರಣ, ಭಾವದೀಪ್ತಿಯನ್ನು ಬೆಳಗಿಸಿದ ಅಪೂರ್ವ ಕವಿ ಎಚೆಸ್ವಿಯವರು, ನಮ್ಮಂತಹ ಸಹೃದಯರ ಎದೆಯ ಕಡಲಿನಲ್ಲಿ ಕೇವಲ ಕಾವ್ಯದ ಹಾಯಿದೋಣಿಯಾಗಿ ತೇಲದೇ, ಅದರ ಜಗದಗಲದ ಮುಗಿಲಗಲ ಮಿಗೆಯಗಲದ ಆಳವನ್ನರಿತು ಮಾನವೀಯ ಸಂಬಂಧಗಳ ನೆಲೆ ಬೆಲೆಗಳನ್ನು ಲೋಕಕ್ಕೆ ತಿಳಿಸಿದವರು. ಅಳಿಮನದವರಾಗಿ ಮನುಷ್ಯ ಪ್ರೇಮವನ್ನು ಲಾಭನಷ್ಟದ ವ್ಯವಹಾರಿಕ ತಕ್ಕಡಿಯಲ್ಲಿಟ್ಟು ತೂಗುವ ನಮ್ಮಂತಹ ಆಧುನಿಕರಿಗೆ ಎಚೆಸ್ವಿಯರ ಕಾವ್ಯ ಮನುಷ್ಯತ್ವದ ಚಿಕಿತ್ಸೆ ನೀಡುವಂತಿದೆ. ಸ್ವಾರ್ಥದ ಬಯಕೆ ಯೆಂದಿಗೂ ಶರಣಾ ಗತಿಯ ಭಾವವನ್ನು ರೂಪಿಸುವುದಿಲ್ಲ; ಹಾಗೆ ಪ್ರೀತಿಯನ್ನೂ. ಆಸೆಗಳ ಸುಳಿಯಿಂದ ಪ್ರೀತಿಯನ್ನು ಕಾಪಾಡಿಕೊಳ್ಳಬೇಕಾದ ಜರೂರತ್ತು ವಿಶ್ವಕ್ಕಿದೆ.

ಮನುಷ್ಯತ್ವದ ಚಿಕಿತ್ಸೆ ನೀಡುವ ಎಚ್..ಎಸ್.ವಿ ಕಾವ್ಯ

Profile Ashok Nayak Jun 8, 2025 1:57 PM

ಚಂದ್ರಶೇಖರ ಹೆಗಡೆ ಬಾದಾಮಿ

ಅಂತರವನ್ನೇ ಒಡಲಾಳವನ್ನಾಗಿಸಿಕೊಂಡಿರುವ ಆಧುನಿಕ ಸಂಬಂಧಗಳಿಗೆ ಕಾರುಣ್ಯದ ಅಂತರಾಳ ವನ್ನು ತೆರೆದು ತೋರಿದ ಎಚ್.ಎಸ್.ವೆಂಕಟೇಶಮೂರ್ತಿ ಅವರ (ಎಚ್‌ಎಸ್‌ವಿ) ಕಾವ್ಯ ಮೀಮಾಂಸೆ ಯು ಮನುಷ್ಯಪ್ರೀತಿಯುಳ್ಳದ್ದು. ಮಾನವ ಸ್ವಭಾವಗಳನ್ನು ತಮ್ಮ ಕಾವ್ಯದ ಮೂಲಕ ಒರೆಗೆ ಹಚ್ಚಿದ ಎಚೆಸ್ವಿಯವರು ಮನುಷ್ಯನ ಬುದ್ಧಿವಂತಿಕೆಯ ಬಯಲಾಟವನ್ನು ಬಯಲು ಮಾಡಿದರು. ಹೊಂದಿಕೆಯಾಗಬಲ್ಲ ಸಮಯಕ್ಕೊಂದು ಮುಖವಾಡವನ್ನು ತೊಟ್ಟು ಕಾರ್ಯ ಸಾಧಿಸಿಕೊಳ್ಳ ಬಯಸುವ ಮಾನವ ಲೋಕದ ವ್ಯಾಪಾರವನ್ನು ಹೃದಯಗೀತೆಗಳ ಮೂಲಕ ಎಚ್ಚರಿಸಿ ತಿದ್ದಿದ ಸಾಹಸ ಎಚೆಸ್ವಿಯವರದು. ಭಾವಲೋಕದ ಮಾಂತ್ರಿಕ ಶಕ್ತಿಯ ಸ್ಪರ್ಶದಿಂದ ಮಾಹಿತಿಯುಗದ ಬದುಕಿನ ಒತ್ತಡಗಳನ್ನು ಹಾಡಾಗಿಸಿ ಅನಿಕೇತನವಾದವರು ಎಚೆಸ್ವಿಯವರು.

ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರು

ಅರಿತೆವೇನು ನಾವು ನಮ್ಮ ಅಂತರಾಳವ?

ಎಂದು ಹಾಡುತ್ತಲೇ ತಮ್ಮ ಭಾವಗೀತೆಗಳ ಮುಂದೆ ಪೂರ್ಣವಿರಾಮವನ್ನಿಟ್ಟು ಎದ್ದುಹೋದ ಭಾವಕವಿ ಇನ್ನಿಲ್ಲವೆಂಬುದು ಅರಗಿಸಿಕೊಳ್ಳಲಾಗದ ಭಾವಪ್ರಳಯ. ಕನ್ನಡಿಗರ ಹೃದಯದಲ್ಲಿ ಪ್ರೀತಿ, ಪ್ರಣಯ, ಕರುಣೆ, ಅಂತಃಕರಣ, ಭಾವದೀಪ್ತಿಯನ್ನು ಬೆಳಗಿಸಿದ ಅಪೂರ್ವ ಕವಿ ಎಚೆಸ್ವಿ ಯವರು, ನಮ್ಮಂತಹ ಸಹೃದಯರ ಎದೆಯ ಕಡಲಿನಲ್ಲಿ ಕೇವಲ ಕಾವ್ಯದ ಹಾಯಿದೋಣಿಯಾಗಿ ತೇಲದೇ, ಅದರ ಜಗದಗಲದ ಮುಗಿಲಗಲ ಮಿಗೆಯಗಲದ ಆಳವನ್ನರಿತು ಮಾನವೀಯ ಸಂಬಂಧ ಗಳ ನೆಲೆ ಬೆಲೆಗಳನ್ನು ಲೋಕಕ್ಕೆ ತಿಳಿಸಿದವರು. ಸಾವಿರಾರು ಸಂಬಂಧಗಳಿಂದ ಬೆಸೆದುಕೊಂಡು ಸಮೃದ್ಧವಾಗಿದ್ದರೂ, ಬದುಕಿನ ಕನ್ನಡಿಯ ಪಾಲಿಗೆ ಒಂದಾದರೂ ಆಪ್ತವಾಗಿ ಉಳಿಯುವುದೇ ಎಂಬ ತಮ್ಮ ಕಾವ್ಯದಲ್ಲಿನ ವಿಷಾದವನ್ನು ವಾಸ್ತವಿಕ ನೆಲೆಯಲ್ಲಿ ವಿಮರ್ಶೆಗೊಡ್ಡಿದವರು.

ಎಳೆಯರಿಗೆ ಮಾರ್ಗದರ್ಶನ: ಬದುಕಿನ ನಿಗೂಢತೆಗಳನ್ನು, ರಹಸ್ಯಗಳನ್ನು, ಚಲನಶೀಲತೆ ಯನ್ನು, ಅನಿವಾರ್ಯಗಳನ್ನು, ಕಹಿಸತ್ಯಗಳನ್ನು ಮೋಹಕ ಉಪಮೆ, ದೃಷ್ಟಾಂತ, ರೂಪಕಗಳ ಮೂಲಕ ಕಣ್ಣೆದುರು ಕುಣಿಯುವಂತೆ ಕಾವ್ಯ ಕಟ್ಟಬಲ್ಲವರಾಗಿದ್ದ ಎಚೆಸ್ವಿಯವರು ಜಾಲತಾಣಗಳ ಯುಗದ ಅದೆಷ್ಟೋ ಕವಿಗಳನ್ನು ಕೈಹಿಡಿದು ಮುನ್ನಡೆಸಿ ಕಾವ್ಯಲೋಕವನ್ನು ಶ್ರೀಮಂತಗೊಳಿಸಿ ದರು. ’ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ’ ಎಂದು ಹಾಡಿ ಮುಗ್ಧತೆಯ ಮನಸು ಗಳಿಗೆ ಕಚಗುಳಿ ಇಟ್ಟು, ಮುದವನ್ನೆರೆದು ಮಗುವಾದವರು ಎಚೆಸ್ವಿಯವರು.

ಇದನ್ನೂ ಓದಿ: Hari Paraak Column: ಕರೋನಾ ಪ್ಯಾರ್‌ ಹೈ !

ಮಣ್ಣು, ಮರ, ಹಣ್ಣು, ಬಾನು, ಭಾನು, ಹಕ್ಕಿ ಇತ್ಯಾದಿ ಪ್ರಾಕೃತಿಕ ಸತ್ಯಗಳು ಇವರ ಕಾವ್ಯದ ಪ್ರತಿಮಾ ಲೋಕವನ್ನು ಇನ್ನಿಲ್ಲದಂತೆ ಬೆಳಗಿವೆ. ಎಲ್ಲರನೂ ಸಲಹುವ ಪ್ರಕೃತಿಯ ಮೇಲೆ ಅಪಾರ ನಂಬಿಕೆ ಯನ್ನಿಟ್ಟುಕೊಂಡಿದ್ದ ಎಚೆಸ್ವಿಯವರು ತಮ್ಮ ಕಾವ್ಯದಲ್ಲಿ ಪಂಚಭೂತಗಳನ್ನೇ ಮಾನವ ಬದುಕಿಗೆ ದಾರಿದೀವಿಗೆಯಾಗಬಲ್ಲ ಉಪಮೆ- ರೂಪಕಗಳನ್ನಾಗಿ ಹೆಣೆದು ಮುಡಿವ ಭೋಗಿಗಳಿಗೆ ಪೊಸ ಬಾಸಿಗವನ್ನಾಗಿ ಕಟ್ಟುತ್ತಾರೆ.

ಸದಾಕಾಲ ತಬ್ಬುವಂತೆ ಮೇಲೆ ಬಾಗಿಯೂ

ಮಣ್ಣ ಮುತ್ತು ದೊರಕಿತೇನು ನೀಲಿ ಬಾನಿಗೆ

ಎಂಬ ಕವಿಯ ರೂಪಕ ಸಾಮ್ರಾಜ್ಯ ಮಾನವನ ಅಂತಃಪ್ರeಯನ್ನು ಕಲಕಿ ಜಾಗೃತಗೊಳಿಸುತ್ತದೆ. ಜಾತಿ, ಮತ, ಪಂಥಗಳು ಸಾಲದೆಂಬಂತೆ ಹಣ, ಅಧಿಕಾರ, ಅಂತಸ್ತು, ಅಹಂಕಾರಗಳ ಗೋಡೆಗಳ ಮಧ್ಯೆ ತೊಳಲಾಡುತ್ತಿರುವ ಮನುಷ್ಯನ ನಾಲ್ಕು ದಿನದ ಬದುಕಿನಲ್ಲಿ ಹೊಂದಾಣಿಕೆಯೆಂಬುದೇ ಕಷ್ಟಾತಿಕಷ್ಟವಾದ ಸಂಕಟವಾಗಿರುವುದು ವಿಷಾದನೀಯ.

ತಂತ್ರಜ್ಞಾನದ ದೀಕ್ಷೆ ಪಡೆದಿರುವ ಇಂದಿನ ಮಾನವನಿಗೆ ಯಂತ್ರ- ತಂತ್ರಗಳೇ ಜೀವನದ ಮಂತ್ರ ಗಳಾಗಿವೆ. ಯಾಂತ್ರಿಕ ಜೀವನದಾಚೆಗಿರುವ ಕಾಣದ ಕಡಲಾಗಿರುವ ಕಾರುಣ್ಯಕ್ಕಾಗಿ ಹಂಬಲಿಸ ಬೇಕಾಗಿದೆ ಎಮ್ಮ ಮನ. ಮೇಲಿನ ಸಾಲುಗಳ ಮೂಲಕ ಕವಿಯು ಬದುಕಿನ ವಿಪರ್ಯಾಸಗಳ ಮೂಲಕ ಅಂತಿಮ ಸತ್ಯಗಳನ್ನು ಶೋಧಿಸುತ್ತಾರೆ.

ಚೈತನ್ಯದಿಂದ ಬದುಕು: ಬಾರದು ಬಪ್ಪದು ಬಪ್ಪುದು ತಪ್ಪದು ಎಂಬುದು ಸಾಧಕನ ಸೂತ್ರ ವಾಗಿರಬೇಕು. ಸತ್ಯ ಕಹಿಯಾಗಿದ್ದರೂ ನಂಬಿ ಚೈತನ್ಯದಿಂದ ಜೀವಿಸಬೇಕಾದ ಧೀಮಂತಿಕೆ ಮನುಷ್ಯ ನಲ್ಲಿರಬೇಕೆನ್ನುವುದು ಕವಿಯ ಸದಾಶಯ. ಮಾನವ್ಯದ ಸ್ವರೂಪ, ಸ್ವಭಾವಗಳನ್ನು ಪ್ರಕೃತಿಯ ತತ್ವಗಳಿಗೆ ಅನ್ವಯಿಸಿ ಮನದಲ್ಲಿ ಅಚ್ಚೊತ್ತುವಂತೆ ಮಾಡಬಲ್ಲ ಕವಿ ಎಚೆಸ್ವಿಯವರ ಕಾವ್ಯದರ್ಶನ ಮಾನವನ ಕಲ್ಯಾಣವನ್ನೇ ಜಪಿಸುತ್ತದೆ. ಪ್ರೀತಿಯು ನೀಡಿದ ಕಣ್ಣು: ಲೋಕದ ಕಣ್ಣಿಗಿಂತ ಕವಿಯ ಕಣ್ಣು ಹೇಗೆ ಭಿನ್ನವೆಂಬುದಕ್ಕೆ ಕೆಳಗಿನ ಕಾವ್ಯವನ್ನೊಮ್ಮೆ ಕೇಳಲೇಬೇಕು-

ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು

ನನಗೋ ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು

ಲೋಕದ ಕಣ್ಣಿಗೆ ಪ್ರಣಯಾರಾಧನೆಯ ಲತಾಂಗಿಯಾಗಿ ಮಾತ್ರ ಗೋಚರವಾಗಬಲ್ಲ ರಾಧೆಯನ್ನು ಕೃಷ್ಣನ ನಿರ್ಮಲ ಮಾನವಪ್ರೇಮದ ದರ್ಶನ ಮಾಡಿಸುವ ಕಣ್ಣಾಗಿ ಕಂಡ ಕವಿ ಎಚ್ಚೆಸ್ವಿಯವರು, ಲಾಲಿತ್ಯಪೂರ್ಣವಾದ ಸುಗಮ ಗೀತೆಗಳ ಮೂಲಕ ‘ಕೃಷ್ಣಕತೆ’ಯನ್ನು ತಿಳಿಯ ಹೇಳಿದವರು. ಕೃಷ್ಣ-ರಾಧೆಯರು ಕೇವಲ ದ್ವಾಪರಯುಗದ ಪುರಾಣದ ಪಾತ್ರಗಳಾಗದೇ, ವಿರಹವನ್ನಪ್ಪಿಕೊಂಡು ತಿಂಗಳ ರಾತ್ರಿಯಲ್ಲಿ ಚಂದಿರನನ್ನು ಶಪಿಸುತ್ತಾ ಕುಳಿತ ಈ ಲೋಕದ ಅದೆಷ್ಟೋ ರಾಧಾ-ಮೋಹನರ ಪ್ರತಿರೂಪಗಳಾಗಿದ್ದಾರೆ ಎಂಬುದನ್ನು ಎಚೆಸ್ವಿಯವರ ಕಾವ್ಯಗಳು ಮಾರ್ಮಿಕವಾಗಿ ಬಣ್ಣಿಸುತ್ತವೆ.

ಭಕ್ತಿಯ ಒಡಲಾಳದ ಜ್ಯೋತಿಯಾಗಿರುವ ಪ್ರೇಮದ ಕಾಣಿಕೆಯಾಗಿ ರಾಧಾಕೃಷ್ಣರನ್ನು ವರ್ತಮಾ ನೀಕರಿಸುವ ಕವಿವರ್ಯರ ಸಂವಹನ ಸಂವೇದನಾಶೀಲವಾದುದು. ಕರುಣೆಯ ಹೃದಯಲ್ಲಿ ಮಾತ್ರ ಮೊಳಕೆಯೊಡೆಯಬಲ್ಲ ನಿಜದೊಲವಿನ ಸಾಂಗತ್ಯವನ್ನು ವ್ಯಾಖ್ಯಾನಿಸುವ ಎಚೆಸ್ವಿಯವರ ಕಾವ್ಯಾರಾಧನೆಯು ಆಧುನಿಕ ಲೋಕದ ಬತ್ತಿದ ಎದೆಗಳಿಗೆ ಜೀವಸೆಲೆಯನ್ನೆರೆಯುತ್ತದೆ.

ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ; ಮೋಡ ಕಟ್ಟೀತು ಹೇಗೆ’ ಎಂಬ ಜಿಎಸ್ ಎಸ್ ಅವರ ಕಾವ್ಯದ ಸಾಲುಗಳು ಬ್ರಹ್ಮಾಂಡದಲ್ಲಿರುವ ಪ್ರೀತಿಯ ಅಮೃತ ಬಳ್ಳಿಗಳನ್ನು ಪರಿಶೋಽಸಿ, ಜಗದ ಸಾಮಾಜಿಕ ವ್ಯಾಽಗಳಿಗೆ ನೀಡಬಲ್ಲ ಮದ್ದನ್ನಾಗಿ ನಮ್ಮ ಮುಂದಿಡುವಂತೆ, ಎಚೆಸ್ವಿಯವರ ಮೇಲಿನ ಕಾವ್ಯವು ಕೂಡ ಲೋಕದ ಗುಪ್ತಗಾಮಿನಿಯಾಗಿರುವ ಪ್ರೇಮವು ಮಹಾಪ್ರವಾಹವಾಗಿ ಸಂಭವಿಸುವು ದರ ಅಗತ್ಯವನ್ನು ಒತ್ತಿ ಹೇಳುತ್ತದೆ.

ನಾನು ನನ್ನದು ನನ್ನವರೆಂಬ ಹಲವು ತೊಡಕುಗಳ ಮೀರಿ

ಭಾವಿಸಿ ಸೇರಲು ಬೃಂದಾವನವ ರಾಧೆ ತೋರುವಳು ದಾರಿ

ನಾನು ನನ್ನದು ನನ್ನವರು ಮಾತ್ರವೆಂಬ ಅಜ್ಞಾನದ ಪ್ರಪಂಚದಿಂದಾಚೆಗೆ ಹರಿದಾಗಲೇ ಅಲ್ಲಮನ ನಿರಾಕಾರ, ನಿರ್ಗುಣ ಶೂನ್ಯವಾದ ಬಯಲು ತೋರುವಂತೆ ಎಚೆಸ್ವಿಯವರು ಬಯಲಿಗಾಗಿ ಹಂಬಲಿಸಿರುವುದು ಸಹಜವೇ ಆಗಿದೆ. ಸ್ವಾರ್ಥದ ಸುಂಕಕ್ಕಂಜಿ ಹರಿದ ಗೋಣಿಯಲ್ಲಿ ಭಕ್ತಿಯ ಭತ್ತ ತುಂಬಿ ಇರುಳೆಲ್ಲಾ ನಡೆದರೆ ಪ್ರೇಮವನ್ನು ಕಾಣಲು ಸಾಧ್ಯವೇ? ಪವಿತ್ರ ಪ್ರೇಮದ ಸ್ವರೂಪ ವಾಗಿರುವ ಕೃಷ್ಣನನ್ನು ಕಾಣಲು ಸಾಧ್ಯವೇ?

ಮನುಷ್ಯತ್ವದ ಚಿಕಿತ್ಸೆ!: ಅಳಿಮನದವರಾಗಿ ಮನುಷ್ಯಪ್ರೇಮವನ್ನು ಲಾಭನಷ್ಟದ ವ್ಯವಹಾರಿಕ ತಕ್ಕಡಿಯಲ್ಲಿಟ್ಟು ತೂಗುವ ನಮ್ಮಂತಹ ಆಧುನಿಕರಿಗೆ ಎಚೆಸ್ವಿಯರ ಕಾವ್ಯ ಮನುಷ್ಯತ್ವದ ಚಿಕಿತ್ಸೆ ನೀಡುವಂತಿದೆ. ಸ್ವಾರ್ಥದ ಬಯಕೆಯೆಂದಿಗೂ ಶರಣಾಗತಿಯ ಭಾವವನ್ನು ರೂಪಿಸುವುದಿಲ್ಲ; ಹಾಗೆ ಪ್ರೀತಿಯನ್ನೂ. ಆಸೆಗಳ ಸುಳಿಯಿಂದ ಪ್ರೀತಿಯನ್ನು ಕಾಪಾಡಿಕೊಳ್ಳಬೇಕಾದ ಜರೂರತ್ತು ವಿಶ್ವಕ್ಕಿದೆ. ವಿಶ್ವಪ್ರೇಮದ ರೂಪವನ್ನೆತ್ತಿ ಆಗಾಗ್ಗೆ ನಮ್ಮೊಳಗೆ ಪ್ರಕಟ ವಾಗುವ ರಾಧೆಯೇ ಪ್ರೀತಿಯಿಲ್ಲದ ಬದುಕಿನ ಹಾದಿಯನ್ನು ತನ್ನ ಆವಿರ್ಭಾವದಿಂದ ಹಸಿರಾಗಿಸುವವಳು ಎಂಬ ಕವಿಯ ನಂಬಿಕೆಯೇ ಸಮಷ್ಟಿ ಪ್ರಜ್ಞೆಯುಳ್ಳದ್ದು.

ಮುಕ್ತ ಮುಕ್ತ: ಪ್ರೀತಿಯೆಂದರೆ ಕೇವಲ ವ್ಯಾಮೋಹದ ವ್ಯಾಪಾರವಲ್ಲ; ಅದು ನಾನು ನನ್ನದು ಎಂಬುದನ್ನು ತೊರೆದು ಜೀವಿಸಬಲ್ಲ ನಿರ್ಮೋಹದ ನಿರಾಳತೆಯೂ ಹೌದು ಎಂಬುದು ಎಚೆಸ್ವಿ ಯವರ ಕಾವ್ಯದ ಮಹೋನ್ನತ ತತ್ವ. ಇವರ ಕಾವ್ಯದ ಧಿಃಶಕ್ತಿಯ ಹಿಮಾಲಯವೆಂಬಂತೆ ರಚನೆ ಯಾಗಿರುವ ಟಿ. ಎನ್. ಸೀತಾರಾಮ ಅವರ ನಿರ್ದೇಶನದ ‘ಮುಕ್ತ ಮುಕ್ತ... ಧಾರಾವಾಹಿಯ ಶಿರ್ಷಿಕೆ ಗೀತೆಯಂತೂ ಜಗದ ಎಲ್ಲ ಸಂಕಟಗಳಿಗೆ ಮುಕ್ತಿಯ ಪಥವನ್ನು ತೋರುವಂತೆ ರಚನೆಯಾಗಿರು ವುದು ಕವಿಯ ಹೆಗ್ಗಳಿಕೆಯಾಗಿದೆ.

ಸಾವಿರಾರು ಸಂಕೋಲೆಗಳಲ್ಲಿ ಬಂಧಿಸಿಕೊಂಡಿರುವ ಮನುಷ್ಯನ ಮನಸ್ಸಿನ ಒಳತೋಟಿಗಳನ್ನು, ಪ್ರಕೃತಿಯಲ್ಲಿ ತೇಯುವ ಜೀವ ಸಂಕುಲದ ರೂಪಕಗಳ ಮೂಲಕ ತೆರೆದಿಡುವ ಕವಿ ಎಚೆಸ್ವಿ ಯವರದು ಅಪ್ರತಿಮ ಮುಕ್ತಕ ಕಾವ್ಯ.

ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ

ಬೇವ ಅಗಿವ ಸವಿಗಾನದ ಹಕ್ಕಿ ಹಾಡಿ ಮುಕ್ತ ಮುಕ್ತ

ಎಂಬ ಸಾಲುಗಳೇ ಸಾಕು ನಮ್ಮೊಳಗಿನ ಅಸೀಮ ಋಣಾನುಬಂಧಗಳನ್ನರಿಯಲು, ಹೊತ್ತಿರುವ ಜವಾಬ್ದಾರಿಗಳನ್ನು ದಡ ಮುಟ್ಟಿಸಿ ಪೊರೆಯಲು. ಬಿಡುಗಡೆಯೆಂಬುದು ಪಡೆದುಕೊಂಡು ಕೃತಾರ್ಥ ವಾಗುವುದಲ್ಲ; ನೀಡಿ ಹಾಡಿ ನಮ್ಮನ್ನು ನಾವು ಸಮರ್ಪಣೆಯ ಯಜ್ಞಕ್ಕೆ ತೊಡಗಿಸಿಕೊಳ್ಳು ವುದಾಗಿದೆ.

ಬಂಧನವಿದ್ದಾಗಲೇ ಮಕ್ತಿಯ ಹಾಡನ್ನು ಹಾಡಲು ಸಾಧ್ಯ; ಸ್ವಾತಂತ್ರ್ಯದ ಪ್ರಾರ್ಥನೆಯನ್ನು ಸಲ್ಲಿಸಲು ಸಾಧ್ಯ; ಬಂಧನ ವಿದ್ದಾಗಲೇ ಸಂಘರ್ಷದ ವಿರುದ್ಧ ಹೋರಾಡುವ ಶಕ್ತಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ಬದುಕಿನಲ್ಲಿ ಬೇಯುವುದರ ಸುಖವನ್ನು ಜಗತ್ತಿನ ಯಾವ ಸಿರಿವಂತಿಕೆಯೂ ನೀಡಲಾರದು. ಹೀಗಾಗಿ ಚಕ್ರವ್ಯೂಹವೂ ನಮ್ಮದೇ ಹೊರಬರ ಬೇಕಾದವರೂ ನಾವೇ ಎಂಬುದರ ತಾತ್ವಿಕ ಚಿಂತನೆಗೀಡು ಮಾಡುವ ಎಚೆಸ್ವಿಯವರ ಕಾವ್ಯ ಬೇವ ಸವಿದಂತೆ.

ಬಯಲೇ ಜೀವನ್ಮುಕ್ತಿ

ನೀಡಿ, ಹಾಡಿ, ಬೀಸಿ, ಬಿಚ್ಚಿ ಬಯಲಾಗುವ ಬೆಳಕನ್ನು ಕುರಿತು ಕವಿ ಹಾಡಿದ ಹಾಡನ್ನೊಮ್ಮೆ ಕೇಳಿ- ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ

ಬಯಲೇ ಜೀವನ್ಮುಕ್ತಿ

ಹೌದು. ಬಯಲೊಂದು ಮುಕ್ತಿಯ ಜೀವಂತ ರೂಪಕ. ಅಸತೋಮಾ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ ಎಂಬ ತತ್ವವು ಕೂಡ ಈ ಬೆಳಕಿನ ಬಯಲನ್ನೇ ಬಗೆದು ವಿಶ್ಲೇಷಿಸುವಂತಿದೆ. ಎಚೆಸ್ವಿಯವರು ಹಾಡುವ ಮುಕ್ತಿಯು ಸಾವಿನ ನಂತರ ಆಲಾಪವಾಗಬಲ್ಲ ನಿರಾಯಾಸದ ಸದ್ಗತಿಯ ಹಾಡಲ್ಲ; ಪರಂತು ಬದುಕಿದ್ದಾಗಲೇ ಮನದೊಳಗೆ ತುಂಬಿಕೊಂಡ ದ್ವೇಷಾಸೂಯೆಗಳ ತಮಂಧವನ್ನು ಕಳೆದುಕೊಂಡು ಜಗಕೆ ಬೆಳಕಾಗಬಲ್ಲ ಜ್ಯೋತಿಯ ಪಾಡದು. ಇಂತಹ ಬಿಡುಗಡೆಗೆ ನಮಗಿಂದು ಅತ್ಯವಶ್ಯಕವಾಗಿರುವುದು ಅರಿವು. ತನ್ನ ತಾನರಿದು ತಾನಾರೆಂದು ತಿಳಿದೊಡೆ ತಾನೇ ಪ್ರತ್ಯಕ್ಷ ದೈವ ನೋಡಾ ಅಪ್ರಮಾಣ ಕೂಡಲಸಂಗಮದೇವಾ ಎಂದು ಬಸವಣ್ಣನವರು ಹಾಡಿರು ವುದು ಇದೇ ಬಿಡುಗಡೆಯ ಭಾಗ್ಯಕ್ಕಾಗಿ. ತಾನುರಿದು ಬೆಳಕು ನೀಡಿದಾಗಲೇ ಜ್ಯೋತಿಗೆ ಮುಕ್ತಿ ಪ್ರಾಪ್ತವಾದಂತೆ ನಾವು ಕರ್ತಾರನ ಕಮ್ಮಟವಾದ ಈ ಮರ್ತ್ಯಲೋಕದಲ್ಲಿ ಬೆಂದಾಗಲೇ ಅಲ್ಲಿ ಸಲ್ಲುವುದಕ್ಕೆ ಸಾಧ್ಯ. ಕರ್ತವ್ಯದ ಯಜ್ಞವನ್ನು ಮರೆಯಬಾರದಷ್ಟೇ. ಮುಕ್ತಿಯ ಪಥ ನಮ್ಮದಾಗ ಬೇಕಾದರೆ ಬೇವ ಅಗೆದು ಸವಿಗಾನ ಹಾಡುವ ಹಕ್ಕಿಯಂತಾಗಿಡಬೇಕೆನ್ನುವುದು ಕವಿ ಎಚೆಸ್ವಿ ಯವರು ಕಲಿಸುವ ಜೀವನಪಾಠ. ಬಿಕ್ಕಟ್ಟುಗಳೇ ಇರಿಯುವ ಮುಳ್ಳುಗಳಾದಾಗ ತಾಳಿ ಕೊಳ್ಳ ಬೇಕಾಗಿರುವುದು ಮನುಷ್ಯನಿಗೆ ಅನಿವಾರ್ಯ. ಚಿತ್ತ ಹುತ್ತಗಟ್ಟುವವರೆಗೆ ಕಾಯುವಂತೆ ಸಂಘರ್ಷ ಗಳು ಮುಗಿಯುವವರೆಗೂ ಕಾಯಬೇಕು.

ತಲ್ಲಣಿಸದಿರು ಕಂಡ್ಯ ತಾಳು ಮನವೇ

ತಾಳುವಿಕೆಗಿಂತ ತಪವು ಬೇರಿಲ್ಲ

ಎಂದು ರಾಗಿಸಿದ ಕನಕದಾಸರು ನಾವು ತಲ್ಲಣಗಳನ್ನು ಎದುರಿಸಬೇಕಾದ ಬಗೆಯನ್ನು ಬಿಡಿಸಿ ತೋರುತ್ತಾರೆ. ಎಚೆಸ್ವಿಯವರು ಈ ತಾತ್ವಿಕತೆಯನ್ನೇ ಮುಕ್ತಿಯ ಪಥವನ್ನಾಗಿ ಘೋಷಿಸಿದ್ದಾರೆ. ‘ತನ್ನಾವರಣವೆ ಸೆರೆಮನೆಯಾದರೆ ಜೀವಕೆ ಎಲ್ಲಿಯ ಮುಕ್ತಿ’ ಎಂದು ಹಾಡುವ ಭಾವಕವಿಯ ಆಲಯಸಿದ್ಧಾಂತವು ಅಕ್ಕಮಹಾದೇವಿಯ ‘ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ ತನ್ನ ನೂಲು ತನ್ನನೇ ಸುತ್ತಿ ಸಾವ ತೆರನಂತೆ’ ಎಂಬ ವಚನವನ್ನು ನೆನಪಿಸುವಂತೆ ಮಾಡುತ್ತದೆ. ಮುಕ್ತ ಧಾರವಾಹಿಗೆ ಶೀರ್ಷಿಕೆ ಗೀತೆಯಾಗಿರುವ ಈ ಕಾವ್ಯವು ಕಾಲ್ಪನಿಕ ಕಥೆಯನ್ನಾಧರಿಸಿ ರಚನೆ ಯಾಗಿದ್ದರೂ, ನಮ್ಮದೇ ಜೀವನದ ಸಿಕ್ಕುಗಳನ್ನು, ತೊಡಕುಗಳನ್ನು, ಅನಾವರಣಗೊಳಿಸಿ ಜೀವ ಹಾಗೂ ಆತ್ಮದ ವಿಕಾಸಕ್ಕೆ ಪ್ರೇರಣೆ ನೀಡುವಂತಿದೆ.

ತನ್ನೊಡಲ ತಾರೆಗಳ ಗುಡಿಸಿ ರಾಶಿಯ ಮಾಡಿ

ಬೆಳಕಿನುಂಡೆಯ ಬಾನಿಗುರುಳು ಬಿಟ್ಟು

ಹೇಗೆ ಮರೆಯಾಗುವುದೊ ನಿರ್ಧನಿಕ ನಟ್ಟಿರುಳು

ಹಾಗೆ ಬಾಳಿಸು ಗುರುವೆ ಕರುಣೆಯಿಟ್ಟೂ

ಎಚೆಸ್ವಿಯವರು ಗುರುವಿನ ಕಾರುಣ್ಯಕ್ಕಾಗಿ ಅನನ್ಯವಾದ ಪ್ರಾರ್ಥನೆಯನ್ನು ಹಾಡಿ ಹಂಬಲಿಸು ತ್ತಾರೆ. ನಿರ್ಧನಿಕ ಎಂಬ ಶಬ್ದವೇ ಶೂನ್ಯವನ್ನು ಮಾರ್ದನಿಸುವಂತಿದೆ. ಬಯಲೆಂದರೆ ಏನೂ ಇಲ್ಲದಿರುವುದು ಹಾಗೆಯೇ ಎಲ್ಲವನ್ನೂ ಒಳಗೊಂಡಿರುವುದು.

ಇದರಲ್ಲಿ ನಿರ್ಧನಿಕ ನಟ್ಟಿರುಳು ಕೂಡ ಒಂದು. ಏನೂ ಇಲ್ಲವೆಂದುಕೊಂಡಿರುವ ನಿರ್ಧನಿಕ ಕತ್ತಲೆಯ ಒಡಲಿನಲ್ಲಿಯೂ ತಾರೆಗಳ ರಾಶಿಯಿಂದುದಿಸಿದ ಅಮೂಲ್ಯವಾದ ಬೆಳಕಿದೆಯೆಂಬುದೇ ವಿಸ್ಮಯವನ್ನುಂಟು ಮಾಡುವ ಸತ್ಯ. ಕವಿಯ ಹೃದಯ ಮಾತ್ರ ಇದನ್ನು ಲೋಕದ ದೃಷ್ಟಿಗೆ ಅರಿಯುವಂತೆ ಮಾಡಬಲ್ಲರು ಎಂಬುದಕ್ಕೆ ಈ ಕಾವ್ಯ ಸಾಕ್ಷಿಯಾಗಿದೆ.

ಲೋಕದ ಕಣ್ಣಿಗೆ ಪ್ರಸಿದ್ಧ ಕವಿಯಾಗಿದ್ದರೂ ಹೊಸ ಕಾವ್ಯ- ಕವಿಗಳನ್ನು ಬೆಳೆಸುವ ತಾಯ್ತನವು ಅವರಲ್ಲಿ ಅದಮ್ಯವಾಗಿತ್ತು. ಎಚೆಸ್ವಿಯವರು ತಮ್ಮ ಗೀತೆಗಳ ಮೂಲಕ ಎಂದೆಂದಿಗೂ ಕನ್ನಡಿಗರ ಹೃದಯದಲ್ಲಿ ಜೀವಂತವಾಗಿರುತ್ತಾರೆಯೆಂಬುದೇ ಸದ್ಯದ ಸಾಂತ್ವನ.

ಜಗತ್ತಿನ ಯುದ್ಧದಾಹಕ್ಕೆ ಔಷಧ!

ಎಚೆಸ್ವಿಯವರ ಕಾವ್ಯ ಕೇವಲ ಗಂಡು ಹೆಣ್ಣಿನ ಮಧ್ಯೆದ ಒಲವಿನ ಜಿಜ್ಞಾಸೆಯಾಗಿರದೇ, ಮನುಷ್ಯ-ಮನುಷ್ಯರ ಮಧ್ಯದ ಮಾನವೀಯ ಸಂಬಂಧಗಳ ವಿವೇಚನೆಯೂ ಆಗಿರುವುದು ವಿಶ್ವಮಾನ್ಯ. ಪಾತ್ರವಿರದೇ (ಸೀಮೆಯಿರದೆ) ತೊರೆಯಾಗಿ ಹರಿಯಬಲ್ಲ, ಎಲ್ಲರನ್ನೂ ಪೊರೆದು ಕಾಯಬಲ್ಲ ರಾಧೆಯ ಪ್ರೀತಿಯ ಮಹಾಪ್ರವಾಹವು ಯುದ್ಧದಾಹಕ್ಕಾಗಿ ಹಪಹಪಿಸುತ್ತಿರುವ ಇಂದಿನ ಜಗತ್ತಿಗೆ ದಿವ್ಯೌಷಧಿಯಾಗಿದೆ.