ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Hunj Column: ಪಿನಿಯಲ್‌ ಗ್ರಂಥಿಯ ಸ್ರವಿಕೆ ಯಾನೆ ʼಸ್ಖಲನʼದ ಮೇಲೊಂದು ನೋಟ..!

ಕೈಯಲ್ಲಿ ಏನನ್ನೂ ಹಿಡಿಯದೆ ಭ್ರೂಮಧ್ಯೆ ದೃಷ್ಟಿಯನ್ನು ಕೇಂದ್ರೀಕರಿಸಿ ಧ್ಯಾನಸ್ಥರಾಗುವುದರಿಂದ ಸಹ ಇದೇ ಜಾಗೃತಿ ಉಂಟಾಗುತ್ತದೆ ಎಂದು ಯೋಗಶಾಲೆಗಳು, ಅಧ್ಯಾತ್ಮ ಗುರುಗಳು ಮತ್ತು ಹಿಂದೂ ಸಂಸ್ಕೃತಿಯ ಮತಧರ್ಮಗಳು ಹೇಳುತ್ತವೆ. ವೀರಶೈವ ಧರ್ಮವೂ ಲಿಂಗವೆಂಬ ಕುರುಹು ಹಿಡಿದು ಧ್ಯಾನದ ಸಾಧನೆಯಲ್ಲಿ ಒಂದು ಮಟ್ಟವನ್ನು ದಾಟಿದ ನಂತರ ಕುರುಹಿನ ಅವಶ್ಯಕತೆ ಯಿಲ್ಲ ಎಂದೇ ಹೇಳುತ್ತದೆ.

ಪಿನಿಯಲ್‌ ಗ್ರಂಥಿಯ ಸ್ರವಿಕೆ ಯಾನೆ ʼಸ್ಖಲನʼದ ಮೇಲೊಂದು ನೋಟ..!

Profile Ashok Nayak Jun 18, 2025 7:07 AM

ಬಸವ ಮಂಟಪ

ರವಿ ಹಂಜ್‌

ravihanj@gmail.com

‘ವಿಶ್ವವಾಣಿ’ ದಿನಪತ್ರಿಕೆಯ ‘ಬಸವ ಮಂಟಪ’ ಅಂಕಣದಿಂದ ಕಂಗಾಲಾಗಿರುವ ಲಿಂಗಾಹತಿಗಳು ಕಳೆದ ವಾರದ ಲೇಖನದಲ್ಲಿ ಬಳಸಿರುವ ‘ಶೀಘ್ರಸ್ಖಲನ’ ಪದವನ್ನು ಹಿಡಿದು, “ಇದು ಸೊಂಟದ ಕೆಳಗಿನ ಭಾಷೆ. ಇಂಥ ಭಾಷೆ ಬಳಸುವುದು ಉಚಿತವೇ?" ಎಂದಿದ್ದಾರೆ. ಶೀಘ್ರ ಎಂದರೆ ತ್ವರಿತ, ಅಕಾಲಿಕ, ಕ್ಷಿಪ್ರ, ಅವಧಿಗೂ ಮುನ್ನ ಎಂಬರ್ಥವಿದೆ. ಸ್ಖಲನ ಎಂದರೆ ಸ್ರವಿಸುವುದು, ವಿಸರ್ಜಿಸು ವುದು ಎಂದಾಗುತ್ತದೆ. ಈವರೆಗೆ ಈ ಪ್ರಶ್ನಿಗರು ಓದಿದ ಸಾಹಿತ್ಯದಲ್ಲಿ ಶೀಘ್ರಸ್ಖಲನ ಎಂಬ ಪದವನ್ನು ಸೊಂಟದ ಕೆಳಗಿನ ಕ್ರಿಯೆಯಲ್ಲಿನ ದೋಷವನ್ನು ಬಣ್ಣಿಸಲಷ್ಟೇ ಬಳಸಿದ್ದರೆ ಅದು ಲೇಖಕರ ಭಾಷಾಬರವೇ ಹೊರತು ಪದದ ದೋಷವಲ್ಲ.

ಆ ಪದವನ್ನು ಕೇವಲ ಸೊಂಟದ ಕೆಳಗಿನ ಭಾಷೆಯಾಗಿ ಮಾತ್ರ ಬಳಸಬೇಕು ಎಂದು ಓದುಗರು ಜನಾಭಿಪ್ರಾಯ ಮಂಡಿಸುವುದು ಭಾಷೆಗೆ ಬಗೆಯುವ ದ್ರೋಹವೂ ಮತ್ತು ಮಡಿವಂತಿಕೆಯೂ ಎನಿಸುತ್ತದೆ. ಪ್ರಗತಿಪರವೆನ್ನುವ ಲಿಂಗಾಯತ ಪ್ರತ್ಯೇಕಿಗಳು ಎಂದಿನಿಂದ ಮಡಿವಂತಿಕೆಯನ್ನು ಆಚರಿಸಲಾರಂಭಿಸಿದರು? ಲಿಂಗವನ್ನು ಅಂಗೈಯಲ್ಲಿ ಹಿಡಿದು ದೃಷ್ಟಿಯನ್ನು ಲಿಂಗದಲ್ಲಿ ಕೇಂದ್ರೀ ಕರಿಸಿ ಧ್ಯಾನಸ್ಥರಾಗುವುದರಿಂದ ಮಿದುಳಿನಲ್ಲಿ ಪಿನಿಯಲ್ ಗ್ರಂಥಿ (ಗ್ಲ್ಯಾಂಡ್) ಜಾಗೃತ ಗೊಂಡು ಲಿಂಗವಂತನು ಹೆಚ್ಚಿನ ಕಾಯಕ, ಬೌದ್ಧಿಕ, ಆಧ್ಯಾತ್ಮಿಕ ಸಾಧನೆಗೈದು ಸದಾ ಸಮಚಿತ್ತನಾಗಿ ಶಾಂತಿಯನ್ನು ಹೊಂದಿರುತ್ತಾನೆ ಎಂದು ವೀರಶೈವ ಧರ್ಮವು ಹೇಳುತ್ತದೆ.

ಕೈಯಲ್ಲಿ ಏನನ್ನೂ ಹಿಡಿಯದೆ ಭ್ರೂಮಧ್ಯೆ ದೃಷ್ಟಿಯನ್ನು ಕೇಂದ್ರೀಕರಿಸಿ ಧ್ಯಾನಸ್ಥರಾಗುವುದರಿಂದ ಸಹ ಇದೇ ಜಾಗೃತಿ ಉಂಟಾಗುತ್ತದೆ ಎಂದು ಯೋಗಶಾಲೆಗಳು, ಅಧ್ಯಾತ್ಮ ಗುರುಗಳು ಮತ್ತು ಹಿಂದೂ ಸಂಸ್ಕೃತಿಯ ಮತಧರ್ಮಗಳು ಹೇಳುತ್ತವೆ. ವೀರಶೈವ ಧರ್ಮವೂ ಲಿಂಗವೆಂಬ ಕುರುಹು ಹಿಡಿದು ಧ್ಯಾನದ ಸಾಧನೆಯಲ್ಲಿ ಒಂದು ಮಟ್ಟವನ್ನು ದಾಟಿದ ನಂತರ ಕುರುಹಿನ ಅವಶ್ಯಕತೆ ಯಿಲ್ಲ ಎಂದೇ ಹೇಳುತ್ತದೆ.

ಒಟ್ಟಾರೆ ಧ್ಯಾನದ ಸಾಧನೆಯಿಂದ ಯೋಗನಿದ್ರೆ ಹೊಂದಿ ಸಾಧಕನು ಭೂತ, ವರ್ತಮಾನ, ಭವಿಷ್ಯತ್ ಕಾಲದ ಪ್ರಮುಖ ಆಗುಹೋಗುಗಳನ್ನು ಕಾಣುತ್ತಾನೆ. ಆತನು ಕುಳಿತಲ್ಲಿಂದಲೇ ತನ್ನ ಆತ್ಮವನ್ನು ಬಯಸಿದ ಸ್ಥಳ, ಮನೆ, ಊರು, ಬೀದಿ, ದೇಶಗಳನ್ನು ಸುತ್ತಿಸುತ್ತಾನೆ. ಒಟ್ಟಾರೆ ಕಾಲಾತೀತ, ಜಾಗಾತೀತನಾಗಿ ಅನಿಕೇತನನೇ ಆಗಿರುತ್ತಾನೆ ಎಂದು ಅನೇಕ ಸಾಧು ಸಾಧಕರಲ್ಲದೆ ಶೈವ, ವೀರಶೈವ, ವೈದಿಕ, ಸನಾತನ ಮತಧರ್ಮಗಳೆಲ್ಲವೂ ಹೇಳುತ್ತವೆ.

ಸಾಧಕರ ಸಾಧನೆಗೆ ತಕ್ಕಂತೆ ಅವರ ಅನಿಕೇತನದ ಶಕ್ತಿಯಿರುತ್ತದೆ. ಇಂಥ ಪರಂಪರೆಯ ಸಾಧು, ಸನ್ಯಾಸಿ, ಅವಧೂತ, ಯೋಗಿ, ಅನುಭಾವಿ, ಮುಮಕ್ಷು, ಪುರಿ, ಯತಿ, ಒಡೆಯರ್, ದೇಶಿಕೇಂದ್ರ, ಭಗವಾನ್ ಇತ್ಯಾದಿಯಾಗಿ ಹಿಮಾಲಯದ ನಗ್ನ ಫಕೀರರಿಂದ ಸಾಂಸಾರಿಕರಲ್ಲದೆ ಕಾರ್ಪೊರೇಟ್ ಮಾದರಿಯ ಹೈಟೆಕ್ ಆಶ್ರಮಗಳ ರೂವಾರಿಗಳು ಇದ್ದಾರೆ.

ಈ ಅಧ್ಯಾತ್ಮದ ಹಾದಿಯಲ್ಲಿ ಏನಾದರೂ ಸತ್ಯವಿರುವ ಕಾರಣವೇ ಇಷ್ಟೆ ಭೌತಿಕ ಬೆಳವಣಿಗೆಗಳು ಸಾಧ್ಯ. ಯಾರು ಏನೇ ಹೇಳಿದರೂ ಜಗತ್ತಿನಾದ್ಯಂತ ಇರುವ ಅನೇಕ ಬುದ್ಧಿವಂತರು ಇಂಥ ಸಾಧಕ ಗುರುಗಳನ್ನು ಅವಲಂಬಿಸಿರುವ ಕಾರಣ ಅಧ್ಯಾತ್ಮ, ಧ್ಯಾನ, ಯೋಗಗಳಲ್ಲಿ ಏನೋ ಒಂದು ಶಕ್ತಿ ಇರಲೇಬೇಕು. ಆದರೆ ಅದರ ಅನುಭೂತಿಯನ್ನು ವೈಜ್ಞಾನಿಕವಾಗಿ ಇನ್ನೂ ಸಾಬೀತು ಮಾಡಲು ಆಗಿಲ್ಲವಷ್ಟೇ.

ಇದನ್ನೇ ವಿವೇಕಾನಂದರು ತಮ್ಮ ‘ರಾಜಯೋಗ’ ಕೃತಿಯಲ್ಲಿ, “ಜಗತ್ತಿನಲ್ಲಿ ಕೆಲವು ಸಂಗತಿಗಳು ಸ್ಥೂಲವಾಗಿಯೂ ಕೆಲವು ಸೂಕ್ಷ್ಮವಾಗಿಯೂ ಇರುವುದೆಂದು ಯೋಗಿಗಳು ಹೇಳುತ್ತಾರೆ. ಸೂಕ್ಷ್ಮ ಸಂಗತಿಗಳೇ ಕಾರಣಗಳು. ಸ್ಥೂಲ ಸಂಗತಿಗಳೇ ಕಾರ್ಯಗಳು. ಸ್ಥೂಲವಸ್ತುಗಳು ಸುಲಭವಾಗಿ ಇಂದ್ರಿಯಕ್ಕೆ ಕಾಣಿಸುವುವು. ಸೂಕ್ಷ್ಮವಸ್ತುಗಳ eನವು ರಾಜಯೋಗದ ಅಭ್ಯಾಸದಿಂದ ಪ್ರಾಪ್ತ ವಾಗುವುದು.

ಹಿಂದೂಶಾಸ್ತ್ರಗಳಲ್ಲಿರುವ ಆಸ್ತಿಕ ಸಿದ್ಧಾಂತಗಳು ಜೀವನಿಗೆ ಪೂರ್ಣತೆಯನ್ನು ಸಂಪಾದಿಸಿ ಮುಕ್ತಿ ಯನ್ನು ಪಡೆಯುವ ಕ್ರಮವನ್ನು ತಿಳಿಸುವ ಏಕೈಕ ಉದ್ದೇಶ ಹೊಂದಿವೆ. ಈ ಮುಕ್ತಿಗೆ ಯೋಗವೇ ಸಾಧನ. ಯೋಗವು ಅನೇಕ ವಿಷಯವನ್ನೊಳಗೊಂಡಿದೆ. ಸಾಂಖ್ಯಶಾಸ್ತ್ರ, ವೇದಾಂತ ದರ್ಶನ ಗಳು ಯಾವುದಾದರೊಂದು ರೂಪದಲ್ಲಿ ಯೋಗಸಾಧನವನ್ನೇ ಹೇಳುತ್ತವೆ.

ಚಮತ್ಕಾರಿಕ ಕಾರ್ಯಗಳು ಪ್ರಾರ್ಥನೆಯ ಮೂಲಕ ಮೋಡಗಳ ಆಚೆ ಇರುವ ಯಾವುದೋ ಒಂದು ವಸ್ತುವಿನಿಂದ ಈಡೇರುವುದೆಂದು ಹೇಳಿದ ಮಾತ್ರಕ್ಕೇ ಅವುಗಳನ್ನೇನೂ ವಿವರಿಸಿ ಹೇಳಿದಂತಾಗದು. ಮನುಷ್ಯವರ್ಗಕ್ಕೆ ಆಧಾರವಾಗಿರುವ ಜ್ಞಾನ ಮತ್ತು ಶಕ್ತಿಗಳ ಸಾಗರಕ್ಕೆ ಪ್ರತಿಯೊಬ್ಬನೂ ಒಂದೊಂದು ಮೇಲುಗಾಲುವೆಯಂತೆ ಇರುವನೇ ಹೊರತು ಮತ್ತೇನೂ ಇಲ್ಲವೆಂದೇ ಯೋಗವು ಹೇಳುವುದು.

ಮನುಷ್ಯನಲ್ಲಿಯೇ ಆಸೆಗಳು, ಬಯಕೆಗಳು ಇವೆ. ಮನುಷ್ಯನಲ್ಲಿಯೇ ಇವುಗಳನ್ನು ಈಡೇರಿಸಿ ಕೊಳ್ಳುವ ಶಕ್ತಿಯೂ ಇದೆ. ಈ ಆಸೆಯಾಗಲಿ, ಬಯಕೆಯಾಗಲಿ, ಪ್ರಾರ್ಥನೆಯಾಗಲಿ ನೆರವೇರಿದ್ದುದು ಮತ್ತು ನೆರವೇರುವುದು ಈ ಅನಂತವಾದ ಉಗ್ರಾಣದಿಂದಲೇ ಹೊರತು ಯಾವುದೋ ಒಂದು ಅದ್ಭುತ ಪ್ರಾಣಿಯಿಂದಲ್ಲ. ಅದ್ಭುತ ಪ್ರಾಣಿಗಳಲ್ಲಿ ನಂಬಿಕೆ ಇಡುವುದರಿಂದ ಮನುಷ್ಯರಲ್ಲಿ ಸ್ವಲ್ಪಮಟ್ಟಿಗೆ ಕೆಲಸ ಮಾಡುವ ಶಕ್ತಿಯು ಹೆಚ್ಚುವುದೇ ಹೊರತು ಇದರಿಂದ ಧಾರ್ಮಿಕತೆಯು ಹಾಳಾಗುವುದು. ಏಕೆಂದರೆ ಇಂಥ ದೃಷ್ಟಾಂತಗಳ ಬಹುಭಾಗವು ಮೂಢರಿಂದಲೋ ಅತಿ ವಿಶ್ವಾಸಿ ಗಳಿಂದಲೋ ಮೋಸಗಾರರಿಂದಲೋ ಹೇಳಲ್ಪಟ್ಟು ನಂಬಿಕೆಗೆ ಅರ್ಹವಾಗಿರುವುದಿಲ್ಲ.

ಆದರೆ ಯಾವುದನ್ನೇ ಆಗಲಿ ತಾರ್ಕಿಕವಾಗಿ ವಿಶ್ಲೇಷಿಸದೇ ಸುಮ್ಮನೆ ನಿರಾಕರಿಸುವುದು ವಿದ್ಯಾವಂತ-ಬುದ್ಧಿವಂತರಿಗೆ ಸಲ್ಲದು. ಕೆಲವು ಭೌತಿಕ ಶಾಸ್ತ್ರಜ್ಞರು ಅಲ್ಪಾಲೋಚನೆ ಮಾಡಿ ವಿಷಯದಾಳ ತಿಳಿಯದೆ ಸುಪ್ತ ಮನಸ್ಸಿನ ಅಲೌಕಿಕ ಕ್ರಿಯೆಗಳನ್ನು ವಿವರಿಸಲಾಗದೆ ಅವುಗಳ ಇರುವನ್ನೇ ತಿರಸ್ಕರಿಸುವರು.

ಹಾಗಾಗಿ ಪ್ರಾರ್ಥನೆಗಳು ಮೇಘಮಂಡಲದ ಆಚೆ ಇರುವ ಯಾವುದೋ ವಸ್ತು(ಗಳಿಂದ) ನೆರವೇರುವುದೆಂದು ಯೋಚಿಸುವವರಿಗಿಂತಲೂ, ಮತ್ತು ತಾವು ಸಲ್ಲಿಸುವ ಪ್ರಾರ್ಥನೆಗಳಿಂದ ಜಗತ್ತಿನ ನಿಯಮವನ್ನೇ ಬದಲಿಸಬಹುದೆಂದು ತಿಳಿಯುವವರಿಗಿಂತಲೂ ಈ ಭೌತಿಕ ಶಾಸ್ತ್ರಜ್ಞರು ಹೆಚ್ಚು ಅಪರಾಧಿಗಳೆನಿಸುವರು. ಆ ಜನರಿಗೆ ಮೌಢ್ಯವೋ ಅಥವಾ ಕೊನೆಯ ಪಕ್ಷಕ್ಕೆ ಅವರಿಗೆ ಸಿಕ್ಕಿರುವ ಶಿಕ್ಷಣಪದ್ಧತಿಯ ಕೊರತೆಯೋ ಯಾವುದಾದರೊಂದು ನೆಪವಾದರೂ ಇದೆ.

ಆದರೆ ಈ ಭೌತಿಕ ಶಾಸ್ತ್ರಜ್ಞರಿಗೆ ಇಂಥ ಯಾವುದೇ ನೆಪವಿಲ್ಲ, ಕ್ಷಮೆಯೂ ಇಲ್ಲ" ಎಂದಿದ್ದಾರೆ. ವಿವೇಕಾನಂದರು ಹೇಗೆ ಹಿಂದೂ ಪ್ರಭೇದದ ಧಾರ್ಮಿಕ ಸಿದ್ಧಾಂತಗಳಲ್ಲಿ ಜ್ಞಾನ, ಕಾರ್ಯ ಮತ್ತು ಶಕ್ತಿಗಳೇ ಮಾನವರ ಉದ್ಧಾರಕ್ಕಿರುವ ಸಾಧನಗಳು ಎಂದಿರುವರೋ ಅದನ್ನೇ ವೀರಶೈವವೂ ಪ್ರತಿಪಾದಿಸುತ್ತದೆ. ಸ್ಕಂದ ಪುರಾಣದ “ಶಿವಾಶ್ರಿತೇಷು ತೇ ಶೈನಾ ಜ್ಞಾನಯಜ್ಞ ರತಾ ನರಾಃ | ಮಾಹೇಶ್ವರಾಃ ಸಮಾಖ್ಯಾ ತಾಃ ಕರ್ಮಯಜ್ಜ ರತಾ ಭುವಿ|" ಎಂಬ ಶ್ಲೋಕದ ಅರ್ಥ, ವೀರಶೈವ ಮಾಹೇಶ್ವರರು ಜ್ಞಾನಯಜ್ಞದಲ್ಲಿ, ಕರ್ಮಯಜ್ಞದಲ್ಲಿ ರತರಾಗಿರುವವರು.

ಹಾಗೆಯೇ ವೀರಶೈವವು ಸೃಷ್ಟಿಯಲ್ಲಿ ಶಕ್ತಿಯ ಪಾತ್ರವನ್ನು ಗುರುತಿಸುತ್ತದೆ. ಶಿವನು ತನ್ನ ಲೀಲೆಗಾಗಿ ಸೃಷ್ಟಿಯನ್ನು ರಚಿಸಿದನು, ಶಕ್ತಿಯು ಶಿವನಲ್ಲಿ ಉದ್ಭವಿಸಿ ನಂತರ ಸ್ವಪ್ರೇರಣೆಯಿಂದ ಕಲಾಶಕ್ತಿ ಮತ್ತು ಭಕ್ತಿಶಕ್ತಿ ಎಂಬ ಎರಡವತಾರಗಳನ್ನು ಧರಿಸುತ್ತಾಳೆ. ಕಲಾಶಕ್ತಿಯು ಮಾಯೆಯ ಸ್ವರೂಪಳು, ಅವಳೇ ಅವಿದ್ಯೆ; ಅವಿದ್ಯೆಯೇ ಜೀವ ಮತ್ತು ಶಿವನ ನಡುವಿನ ಭೇದಕ್ಕೆ ಕಾರಣ.

ಭಕ್ತಿಶಕ್ತಿಯು ಸಚ್ಚಿದಾನಂದ ಸ್ವರೂಪಳೂ, ಮೋಕ್ಷಪ್ರದಾಯಿನಿಯೂ, ಈ ಭವದ ಬಂಧನಗಳನ್ನು ಬಿಡಿಸುವವಳೂ ಅವಳೇ ಆಗಿರುವಳು. ಹೀಗೆ ವೀರಶೈವರು ಎರಡು ವಿರುದ್ಧ ದಿಕ್ಕಿಗೆಳೆಯುವ ಶಕ್ತಿಗಳನ್ನು ನಂಬುತ್ತಾರೆ. ಭಕ್ತಿಯಿಂದ ವಾಸನಾ ಮುಕ್ತಿ, ಇದರಿಂದಾಗಿ ನಿವೃತ್ತಿ, ಅಲ್ಲಿಂದ ಮುಂದೆ ಮೋಕ್ಷ, ಹೀಗೆ ಅವಿದ್ಯೆಯ ನಿವಾರಣೆಯಾಗಿ ಜೀವವು ಶಿವನೊಡನೆ ಐಕ್ಯವಾಗುತ್ತದೆ.

ಇರಲಿ, ಮತ್ತೆ ಪಿನಿಯಲ್ ಗ್ರಂಥಿಗೆ ಬರೋಣ. ಪಿನಿಯಲ್ ಗ್ರಂಥಿಯು ಪೈನ್ ಗಿಡದ ಸಣ್ಣಕಾಯಿಯ ಆಕಾರದಲ್ಲಿರುವುದರಿಂದ ಇದಕ್ಕೆ ಪೈನಲ್ ಯಾ ಪಿನಿಯಲ್ ಗ್ರಂಥಿ ಎಂದು ಹೆಸರು ಬಂದಿದೆ. ಈ ಗ್ರಂಥಿಯು ಪ್ರಮುಖವಾಗಿ ಮೆಲಟೋನಿನ್ (ಹಾರ್ಮೋನ್) ರಸವನ್ನು ಸ್ರವಿಸುತ್ತದೆ ಯಾನೆ ಸ್ಖಲಿಸುತ್ತದೆ. ಈ ಮೆಲಟೋನಿನ್ ರಸವು ಮನುಷ್ಯನ ರಾತ್ರಿಯ ನಿದ್ದೆ, ಹಗಲಿನ ಎಚ್ಚರವಿರುವ ದಿನಚರಿ ಚಕ್ರವನ್ನು ನಿಯಂತ್ರಿಸುತ್ತದೆ. ವ್ಯಕ್ತಿಯು ಮಲಗಿದ್ದಾಗ ಹೆಚ್ಚು ಸ್ರವಿಸಿ ಎಚ್ಚರವಿದ್ದಾಗ ಕಡಿಮೆ ಮೆಲಟೋನಿನ್ ಸ್ರವಿಸುವ ಕಾರ್ಯಚಕ್ರವನ್ನು ಪಿನಿಯಲ್ ಗ್ರಂಥಿ ನಿರ್ವಹಿಸುತ್ತದೆ.

ಇದಿಷ್ಟು ಪಿನಿಯಲ್ ಗ್ರಂಥಿಯು ವೈeನಿಕ ವಿವರ. ಈ ಗ್ರಂಥಿಯ ಸ್ಖಲನದಲ್ಲಿ ಶೀಘ್ರವೋ, ವಿಳಂಬಿತ ವೋ, ಒಟ್ಟಾರೆ ವ್ಯತ್ಯಾಸವುಂಟಾದಾಗ ಅಥವಾ ವ್ಯಕ್ತಿಯು ನಿಯಮಬದ್ಧ ಜೀವನಶೈಲಿ ಯಿಂದ ವಿಮುಖನಾದಾಗ ಸಹ ಅಂಥ ವ್ಯಕ್ತಿಯ ದಿನಚರಿ ಚಕ್ರವು ಹಾದಿ ತಪ್ಪುತ್ತದೆ. ಇದನ್ನೇ ಯೋಗವು ಯಮನಂತಿರದೆ ನಿಯಮವಾಗಿರಬೇಕು ಎಂದು ನಿಯಮಬದ್ಧತೆಯ ಆರಂಭಿಕ ಹಂತವನ್ನು ಹೊಂದಿದೆ.

ಹೀಗೆ ನಿಯಮ/ಹಾದಿ ತಪ್ಪುವಿಕೆ ಕಾರ್ಪೊರೇಟ್ ವಲಯದಲ್ಲಿ ಹೆಚ್ಚಿರುವ ಕಾರಣ ಅವರಿಗೆ ಯೋಗ, ಧ್ಯಾನಗಳ ಶಿಬಿರಗಳನ್ನು ಏರ್ಪಡಿಸುತ್ತಾರೆ. ಉಳಿದವರು ತಮ್ಮಷ್ಟಕ್ಕೆ ತಾವೇ ತಮ್ಮ ಸಾಂಸಾರಿಕ, ವ್ಯಾವಹಾರಿಕ, ಸಾಮಾಜಿಕ ಒತ್ತಡಗಳನ್ನು ಹಗುರಗೊಳಿಸಿಕೊಳ್ಳಲು ಸಾಧಕರ ಮೊರೆ ಹೋಗುತ್ತಾರೆ.

ಕಣ್ಣು ಮುಚ್ಚಿಯೋ ಅಥವಾ ದೃಷ್ಟಿಯನ್ನು ವಸ್ತುವೊಂದರಲ್ಲಿ ಕೀಲಿಸಿಯೋ, ಉರಿಯುವ ದೀಪದ ಜ್ವಾಲೆ, ಮೋಂಬತ್ತಿಯ ಜ್ವಾಲೆಯನ್ನು ದಿಟ್ಟಿಸುತ್ತಲೋ ಧ್ಯಾನಸ್ಥರಾದರೆ ಈ ಗ್ರಂಥಿಯು ಜಾಗೃತ ಗೊಂಡು ಒತ್ತಡವನ್ನು ಕಡಿಮೆಗೊಳಿಸಿ ಸಮಚಿತ್ತವನ್ನು ತರುತ್ತದೆ ಎಂಬುದು ಒಂದು ನಂಬಿಕೆ. ವ್ಯಕ್ತಿಯು ತಾತ್ಕಾಲಿಕವಾಗಿ ಕಣ್ಣು ಮುಚ್ಚಿ ತಟಸ್ಥನಾಗಿ ಕುಳಿತಾಗ ಕತ್ತಲಾವರಿಸಿ ಮಲಗಿದ್ದಾನೆಂದು ಪಿನಿಯಲ್ ಗ್ರಂಥಿಯು ಹುಸಿಗೊಂಡು ಭ್ರಮಿಸಿ ಮೆಲಟೋನಿನ್ನನ್ನು ಶೀಘ್ರಸ್ಖಲಿಸಿ ಧ್ಯಾನಸ್ಥನಿಗೆ ಒಂದು ‘ಆಹ್’ ಅನುಭೂತಿಯನ್ನು ನೀಡಬಹುದು.

ಇದರಿಂದ ಕೆಲವರ ಒತ್ತಡ ಕಡಿಮೆಯೂ ಆಗಿರಬಹುದು. ಹಾಗಾಗಿಯೇ ಕೆಲವರು ಧ್ಯಾನವೆಂದರೆ ಒಂದು ಒತ್ತಡ ನಿಯಂತ್ರಣ ಸಾಧನ ಎನ್ನುತ್ತಾರೆ ಎಂಬುದು ನನ್ನ ವೈಯಕ್ತಿಕ ತಾರ್ಕಿಕ ವಿಶ್ಲೇಷಣೆ. ಸನಾತನ ಧರ್ಮದ ಯೋಗದಲ್ಲಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಎಂಬ ಸಾಧನೆಯ ಹಂತಗಳಿವೆ. ಈ ಸಾಧನೆಯ ಮಾರ್ಗವೇ ಅಷ್ಟಾಂಗಯೋಗ. ಯೋಗದ ಅಷ್ಟಾಂಗದಂತೆ ವೀರಶೈವದಲ್ಲಿ ಷಟ್‌ಸ್ಥಲವಿದೆ ಷಟ್‌ಸ್ಥಲದಲ್ಲಿ ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ ಎಂಬ ಸಾಧನೆಯ ಹಂತಗಳಿವೆ.

ಈ ಸಾಧನೆಯ ಮಾರ್ಗಕ್ಕೆ ಪೂರಕವಾಗಿ ಅನುವಾಗಲು ಅಷ್ಟಾವರಣ, ಪಂಚಾಚಾರಗಳಿವೆ. ವೀರ ಶೈವವು ತನ್ನ ಷಟ್‌ಸ್ಥಲದಲ್ಲಿ ಯೋಗದ ಯಮ, ನಿಯಮ, ಆಸನಗಳನ್ನು ಒಂದು ರೀತಿಯಲ್ಲಿ ಎಲ್ಲರೂ ಅಳವಡಿಸಿಕೊಂಡಿರುತ್ತಾರೆಂದು ಅವುಗಳನ್ನು ಹೊರತುಪಡಿಸಿ ಅಧ್ಯಾತ್ಮಕ್ಕೆ ಹೆಚ್ಚು ಪ್ರಸ್ತುತವಾದ ಪ್ರಾಣಾಯಾಮ, ಧಾರಣ, ಧ್ಯಾನಕ್ಕೆ ಒತ್ತು ಕೊಟ್ಟಿದೆ.

ಇವುಗಳ ಸಾಧನೆಯ ಮಾರ್ಗವೇ ಲಿಂಗಾಯತ! ಉಳಿದಂತೆ ಸಿದ್ಧಾಂತ ಶಿಖಾಮಣಿ, ಶಕ್ತಿ ವಿಶಿಷ್ಟಾ ದ್ವೈತ, ಕರಣಹಸಿಗೆ, ಮಂತ್ರಗೋಪ್ಯ, ಹಿರಿಯ ಮಂತ್ರಗೋಪ್ಯ, ಮಿಶ್ರಾರ್ಪಣ, ಘಟಚಕ್ರ ಗ್ರಂಥಗಳು ಸಮಗ್ರವಾಗಿ ಧರ್ಮದ ಆಚರಣೆ, ಅನುಷ್ಠಾನಗಳ ಕುರಿತು ಹೇಳಿವೆ.

ವಿವೇಕಾನಂದರು ಹೇಳಿರುವಂತೆ ಯೋಗವು ಹೇಗೆ ಧರ್ಮ ಎನಿಸದೆ ಸಾಧನೆಯ ಮಾರ್ಗ ಎನಿಸುವುದೋ ಹಾಗೆಯೇ ಲಿಂಗಾಯತವು ವೀರಶೈವ ಸಾಧನೆಯ ಮಾರ್ಗವೇ ಹೊರತು ಧರ್ಮ ವಲ್ಲ. ಷಟ್‌ಸ್ಥಲದ ಸಾಧನೆಯ ಮಾರ್ಗದ ಮೊದಲ ಹಂತವಾದ ‘ಭಕ್ತ ಸ್ಥಲ’ದ ಮುಖ್ಯ ಉದ್ದೇಶ ಭಕ್ತನಲ್ಲಿ ಶ್ರದ್ಧೆ, ಶರಣಾಗತಿ, ಅಂತರಂಗ ಶುದ್ಧಿ ಮತ್ತು ಕ್ರಿಯೆಯಲ್ಲಿ ನಿರತನಾಗಿರುವ ಸ್ಥಿತಿಯನ್ನು ಸಾಧಿಸುವುದು. ಈ ಆರಂಭಿಕ ಹಂತದಲ್ಲಿ ಚಿತ್ತಚಾಂಚಲ್ಯಕ್ಕೆ ಈಡಾಗದೆ ಸಾಧನೆಯಲ್ಲಿ ತೊಡಗಿರ ಬೇಕು ಎಂಬ ಕಾರಣಕ್ಕಾಗಿಯೇ, “ಕಟ್ಟಿದ ಲಿಂಗವ ಕಿರಿದು ಮಾಡಿ, ಬೆಟ್ಟದ ಲಿಂಗವ ಹಿರಿದು ಮಾಡುವ ಪರಿಯ ನೋಡ!

ಇಂತಪ್ಪ ಲೊಟ್ಟಿಮೂಳರ ಕಂಡರೆ ಗಟ್ಟಿವುಳ್ಳ ಪಾದರಕ್ಷೆಯ ತೆಗೆದುಕೊಂಡು ಲೊಟಲೊಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ" ಎಂಬ ವಚನವಿರುವುದು! ಇಲ್ಲಿ ಆರಂಭಿಕ ಸ್ಥಲದಲ್ಲಿರುವ ಅವಿದ್ಯಾವಂತ ಭಕ್ತನು ಚಾಂಚಲ್ಯಕ್ಕೀಡಾಗದೆ ವಿದ್ಯೆಯೆಡೆ ಸಾಗಿ ಲಿಂಗದಲ್ಲಿ ಲೀನನಾಗಲಿ ಎಂದು ಸಾಧನೆಗೆ ತೊಡಗಿಸಲು ಇಂಥ ವಚನಗಳು ರಚನೆಯಾಗಿವೆಯೇ ಹೊರತು ದ್ವೇಷಭಾವದಿಂದಲ್ಲ.

ಅದನ್ನು ಬಿತ್ತುತ್ತಿರುವುದು ಯಾರೆಂದು ಇಂದು ಜಗಜ್ಜಾಹೀರಾಗಿದೆ. ಇಂದಿನ ನೂರಕ್ಕೆ ನೂರು ಪ್ರತಿಶತ ಅವಿದ್ಯಾವಂತ ಅವಿವೇಕಿ ಪ್ರತ್ಯೇಕಿಗಳು ಈ ಭಕ್ತ ಸ್ಥಲದಲ್ಲಿಯೇ ಇನ್ನೂ ನೆಲೆಸಿಲ್ಲ. ಅವರಿನ್ನೂ ಅವಧಿ ಮೀರಿದ ಸಾಮಾಜಿಕ ವಚನಗಳಲ್ಲಿಯೇ ಲೀನರಾಗಿದ್ದಾರೆ. ಅದರಾಚೆಯ ಷಟ್‌ಸ್ಥಲಗಳು ಅವರಿಗೆ ಇನ್ನೂ ಅಂದಾಜಿಗೆ ಸಿಕ್ಕಿಲ್ಲ.

ಹಾಗಾಗಿ ಇವರಲ್ಲಿ ಯಾವ ಧಾರ್ಮಿಕ ಶ್ರದ್ಧೆಯಾಗಲಿ, ಗುರುವಿಂಗೆ ಶರಣೆಂಬೆ ಎಂಬ ‘ಶರಣು’ ಸಂಸ್ಕೃತಿಯಗಲಿ, ಅಂತರಂಗ ಶುದ್ಧಿಯಾಗಲಿ ಅವರ ಎಲ್ಲಾ ನಡೆನುಡಿಗಳಲ್ಲಿ ಈವರೆಗೆ ಕಂಡಿಲ್ಲ. ಇದಕ್ಕೆ ಪುರಾವೆಯಾಗಿ ಈ ಸರಣಿಯಲ್ಲಿ ಇವರ ಜಗನ್ಮಾತೆ, ರಂಗಜಂಗಮ, ಸಂಶೋಧಕ ಶಿರೋಮಣಿ, ಇತಿಹಾಸಜ್ಞ, ಆಡಳಿತಜ್ಞರ ಭಗ್ನಾವರೂಪಗಳ ಅನಾವರಣವನ್ನು ತೋರಲಾಗಿದೆ. ಲಿಂಗಪೂಜೆಯಿಂದ ಪಿನಿಯಲ್ ಗ್ರಂಥಿಯು ಸ್ರವಿಸುವ/ಸ್ಖಲಿಸುವ ಅನುಭೂತಿಯನ್ನೇ ಇವರ ಗುರುಗಳಾದಿಯಾಗಿ ಸಮಸ್ತ ಪಡೆಯು ಪಡೆಯದಿರುವುದಕ್ಕೆ ಏನೆನ್ನಬೇಕು? ಹಾಗಾಗಿಯೇ ಲಿಂಗಾಹತಿ ಎನ್ನುವುದು ಇವರಿಗೆ ಹೊಂದುವ ಅತ್ಯಂತ ಸೂಕ್ತ ಪದ. ಇವರ ಆತುರದ ಚಿಂತನೆ, ಸಂಶೋಧನಾ ಕ್ರಿಯೆಗಳಿಗೆ ‘ಶೀಘ್ರಸ್ಖಲನ’ ಪ್ರಶಸ್ತ ಪದ.

ಪ್ರತ್ಯೇಕತೆಯ ಬೇಗುದಿಯಲ್ಲಿ ಬೇಯುತ್ತಿರುವ, ಸಮೃದ್ಧ ಭಾಷೆಯ ಪದಸಂಪತ್ತನ್ನು ‘ಸೊಂಟದ ಕೆಳಗಿನ ಭಾಷೆ’ ಎಂಬ ವರ್ಗೀಕರಣದ ಅಸ್ಪೃಶ್ಯತೆಯಲ್ಲಿ ಸಿಲುಕಿರುವ, ಅವಿದ್ಯಾವಂತ ಅವಿವೇಕಿಗಳ ಪಿನಿಯಲ್ ಗ್ರಂಥಿ ಸ್ರವಿಸಿ/ಸ್ಖಲಿಸಿ ವಿದ್ಯಾವಂತರಾಗಿಸಿ ವಿವೇಕದೆಡೆ ಸಾಗಲಿ. ಇದೆಲ್ಲಕ್ಕೂ ಮೊದಲು ಇವರು ಯಾವುದೇ ಮಡಿ ಮೈಲಿಗೆಯಿರದ ಇಷ್ಟಲಿಂಗವನ್ನು ಅವಿರತವಾಗಿ ಧರಿಸಲಿ.

(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)