ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yagati Raghu Naadig Column: ಕಳ್ಳಬೆಕ್ಕಿನ ಕಥನದಲ್ಲಿ ಕುಲಮೂಲದ ಕಾರ್ಯಾಗಾರ !

ಅವಧೂತರು ಹೀಗಂದಿದ್ದೇ ಅಂದಿದ್ದು, ‘ಕ್ರೀ...ಕ್’ ಎಂದು ಜೋರಾಗಿ ಸದ್ದುಮಾಡಿ ಕಾರು ಗಕ್ಕನೆ ನಿಂತು ಬಿಟ್ಟಿತು. ಅದಕ್ಕೆ ಕಾರಣ, ಅದರ ಚಾಲಕ. ಅವಧೂತರು ಹೋದಲ್ಲಿ ಬಂದಲ್ಲಿ ಅವರ ಜತೆಗೇ ಇದ್ದು ಕೊಂಡು ಪಯಣಕ್ಕೆ ಸಾಥ್ ನೀಡುತ್ತಿದ್ದ ಆತನಿಗೆ, ಅವಧೂತರು ಕಾರಿನೊಳಗೆ ಇದ್ದುಕೊಂಡೇ ತಮ್ಮ ಶಿಷ್ಯರೊಂದಿಗೆ ಹೀಗೆ ಲೋಕಾಭಿರಾಮದ ಮಾತುಕತೆ ನಡೆಸುವುದು ಗೊತ್ತಿತ್ತು, ಆ ವೈಖರಿಗೆ ಆತನೂ ಹೊಂದಿಕೊಂಡುಬಿಟ್ಟಿದ್ದ

ಕಳ್ಳಬೆಕ್ಕಿನ ಕಥನದಲ್ಲಿ ಕುಲಮೂಲದ ಕಾರ್ಯಾಗಾರ !

ರಸದೌತಣ ( ಭಾಗ-3)

ಶಿಷ್ಯರೊಂದಿಗೆ ಅವಧೂತರು ಪಯಣಿಸುತ್ತಿದ್ದ ಕಾರಿನೊಳಗೆ ಮೌನವೇ ಮೈವೆತ್ತಂತಿತ್ತು. ರಸ್ತೆಬದಿ ಯಲ್ಲಿನ ಮರಗಳ ಹಿಮ್ಮುಖ ಚಲನೆಯನ್ನು ಕಂಡೋ ಏನೋ ‘ಹಿನ್ನೋಟ’ದಲ್ಲಿ ವಿಹರಿಸುತ್ತಿದ್ದ ಅವಧೂತರು ಕೆಲವು ಕ್ಷಣಗಳ ನಂತರ ಒಮ್ಮೆ ‘ಶಂಭೋ ಶಂಕರಾ..’ ಎಂದು ಉದ್ಗರಿಸಿ ಗಂಟಲು ಸರಿಮಾಡಿಕೊಂಡರು. ಅದು ಅವರು ಹಿನ್ನೋಟದಲ್ಲಿ ಮೆಲುಕು ಹಾಕಿದ್ದನ್ನು ಶಿಷ್ಯರೊಂದಿಗೆ ಹಂಚಿಕೊಳ್ಳಲು ಉದ್ಯುಕ್ತರಾಗಿದ್ದರ ದ್ಯೋತಕ. ಅದನ್ನು ಗ್ರಹಿಸಿದ ಶಿಷ್ಯರು ಕುತೂಹಲ ಭರಿತರಾಗಿ ಕಿವಿಗಳನ್ನು ತೆರೆದಿಟ್ಟುಕೊಂಡರು. ಅವಧೂತರು ಮಾತಿಗಿಳಿದರು...

“ಸಂಸ್ಥೆಯ ಮ್ಯಾನೇಜರ್ ಒಂದು ತಿಂಗಳ ಹಿಂದೆಯೇ ನಮ್ಮ ಮನೆಗೆ ಬಂದು ಸಮಸ್ಯೆ ಹೇಳಿ ಕೊಂಡಾಗ, ಅದಕ್ಕಿರುವ ಪರಿಹಾರ ಮಾರ್ಗವನ್ನು ನೇರವಾಗಿ ಹೇಳದೆಯೇ, ‘ಸಂಸ್ಥೆಯ ಆವರಣ ದಲ್ಲಿರುವ ಕಳ್ಳಬೆಕ್ಕನ್ನು ಹುಡುಕಿ ಜಾಗ ಖಾಲಿ ಮಾಡಿಸಿ’ ಎಂದು ನಾನು ಒಗಟಾಗಿ ಹೇಳಿದ್ದೇಕೆ ಅನ್ನೋದು ನಿಮ್ಮ ಪ್ರಶ್ನೆಯಲ್ಲವೇ? ಈ ಜಿಜ್ಞಾಸೆಗೆ ಉತ್ತರ ಬೇಕೆಂದರೆ, ಕೆಲ ದಿನಗಳ ಹಿಂದಿನ ನಿದರ್ಶನವೊಂದನ್ನು ನಿಮಗೆ ಹೇಳಬೇಕು. ಅದಕ್ಕೂ ಮುನ್ನ ಇನ್ನೊಂದು ಸಂಗತಿ- ನಾವು ಆಶ್ರಮದಿಂದ ಹೊರಡುವಾಗ 14ರ ಹರೆಯದ ಹುಡುಗಿಯೊಬ್ಬಳು ಕಾರಿನ ಬಳಿ ಬಂದು ನಮಸ್ಕರಿಸಿ ದಳಲ್ಲವೇ? ಆ ಪುಟ್ಟ ‘ಹೃದಯ’ವೇ ಇದುವರೆಗೂ ನಡೆದ-ನಡೆಯುತ್ತಿರುವ ಕಥಾನಕದ ‘ಹೃದಯ ಭಾಗ’ ಕಣ್ರಯ್ಯಾ..." ಎನ್ನುತ್ತಾ ನಸುನಗೆ ಬೀರಿದರು.

ಅವಧೂತರು ಹೀಗಂದಿದ್ದೇ ಅಂದಿದ್ದು, ‘ಕ್ರೀ...ಕ್’ ಎಂದು ಜೋರಾಗಿ ಸದ್ದು ಮಾಡಿ ಕಾರು ಗಕ್ಕನೆ ನಿಂತುಬಿಟ್ಟಿತು. ಅದಕ್ಕೆ ಕಾರಣ, ಅದರ ಚಾಲಕ. ಅವಧೂತರು ಹೋದಲ್ಲಿ ಬಂದಲ್ಲಿ ಅವರ ಜತೆಗೇ ಇದ್ದುಕೊಂಡು ಪಯಣಕ್ಕೆ ಸಾಥ್ ನೀಡುತ್ತಿದ್ದ ಆತನಿಗೆ, ಅವಧೂತರು ಕಾರಿನೊಳಗೆ ಇದ್ದುಕೊಂಡೇ ತಮ್ಮ ಶಿಷ್ಯರೊಂದಿಗೆ ಹೀಗೆ ಲೋಕಾಭಿರಾಮದ ಮಾತುಕತೆ ನಡೆಸುವುದು ಗೊತ್ತಿತ್ತು, ಆ ವೈಖರಿಗೆ ಆತನೂ ಹೊಂದಿಕೊಂಡು ಬಿಟ್ಟಿದ್ದ. ಹೀಗಾಗಿ, ಒಂದೆಡೆ ಅವರ ಮಾತುಗಳಿಗೆ ಕಿವಿಯಾಗಿರು ವಂತೆಯೇ, ಕಣ್ಣ ನೋಟವನ್ನು ರಸ್ತೆಯ ಮೇಲಿಟ್ಟು ನಿಗಾವಹಿಸಿ ವಾಹನವನ್ನು ಚಾಲಿಸುವುದು ಅವನ ವಾಡಿಕೆಯಾಗಿತ್ತು, ಕಾರ್ಯಶ್ರದ್ಧೆಯ ಸಂಕೇತವಾಗಿತ್ತು. ಅವಧೂತರ ಜತೆಗಿನ ಸಾಕಷ್ಟು ಪಯಣಗಳಲ್ಲಿ ಇಂಥ ಹತ್ತು ಹಲವು ಧರ್ಮಸೂಕ್ಷ್ಮದ ಪ್ರಸಂಗಗಳನ್ನು ಕೇಳಿಸಿಕೊಂಡೇ ಬಂದಿದ್ದ ಆ ಚಾಲಕ, ಈ ಬಾರಿ ನಿಜಕ್ಕೂ ನಿಬ್ಬೆರಗಾಗಿದ್ದ. ಕಾರಣ, ಧರ್ಮಸೂಕ್ಷ್ಮದ ಆ ಕಥಾನಕದಲ್ಲಿ ಅವಧೂತರು ಹದವಾಗಿ ಬೆರೆಸಿಕೊಂಡು ಬಂದ ಪತ್ತೇದಾರಿಕೆ ಶೈಲಿಯ ಅಂಶಗಳು! ಈ ವಿರಳಾತಿ ವಿರಳ ಕಥನದ ಶ್ರಾವ್ಯಸುಖಕ್ಕೆ ಒಡ್ಡಿಕೊಂಡಿದ್ದ ಆ ಚಾಲಕ, ಯಾವಾಗ ಅವಧೂತರು “ಆ 14ರ ಹರೆಯದ ಪುಟ್ಟ ಹೃದಯವೇ ಈ ಕಥಾನಕದ ಹೃದಯಭಾಗ ಕಣ್ರಯ್ಯಾ" ಎಂದುಬಿಟ್ಟರೋ, ಆ ಅನಿರೀಕ್ಷಿತ ರೋಚಕತೆಯನ್ನು ತಕ್ಷಣಕ್ಕೆ ದಕ್ಕಿಸಿಕೊಳ್ಳಲಾಗದೆ, ಆ ಥ್ರಿಲ್ ನಿಂದ ಆದ ಹಿತವಾದ ‘ಆಘಾತ’ವನ್ನು ಅನುಭವಿಸಲೆಂದು, ತರುವಾಯದಲ್ಲಿ ಚೇತರಿಸಿಕೊಳ್ಳಲೆಂದು ಮತ್ತು ಸಹಪಯಣಿ ಗರ ಹಿತದೃಷ್ಟಿಯಿಂದ ಹಠಾತ್ತನೆ ಬ್ರೇಕ್ ಅದುಮಿದ ಕಾರಣಕ್ಕೆ ಕಾರು ಹಾಗೆ ‘ಕ್ರೀ...ಕ್’ ಎಂದು ಜೋರಾಗಿ ಸದ್ದುಮಾಡಿ ಗಕ್ಕನೆ ನಿಂತಿದ್ದು!!

7 R

ಹೀಗೊಂದು ಅನಿರೀಕ್ಷಿತ ಬೆಳವಣಿಗೆಯಾಗುವುದು ತಮಗೆ ಗೊತ್ತೇ ಇರಲಿಲ್ಲವೇನೋ ಎಂಬಂತೆ ಅವಧೂತರು, “ಏನ್ರೀ ಪಾರ್ಥಸಾರಥಿ ಕೃಷ್ಣ ಪರಮಾತ್ಮರೇ, ಇಷ್ಟೊಂದು ಮಂದಿ ಪಾರ್ಥರು ಕೂತಿರುವ ಈ ಚೈತನ್ಯರಥವನ್ನು ಹೀಗೆ ಇದ್ದಕ್ಕಿದ್ದಂತೆ ನಿಲ್ಲಿಸಿದ ಉದ್ದೇಶವಾದರೂ ಏನು?" ಎಂದು ತುಂಟದನಿಯಲ್ಲಿ ತಮಾಷೆ ಮಾಡಿದರು. ಇತರ ಶಿಷ್ಯರು ಕೂಡ, ಆ ವಿದ್ಯಾರ್ಥಿ ನಿಲಯದ ಹುಡುಗಿ ಯನ್ನು ಕಥಾನಾಯಕಿಯನ್ನಾಗಿಸಿದ ಅವಧೂತರ ಕಥನಶೈಲಿಯು ನೀಡಿದ ಹಿತವಾದ ಆಘಾತ ದಿಂದ ಹೊರಬಂದಿರಲಿಲ್ಲ. ಅದಕ್ಕೆ ಮದ್ದು ಅರೆಯುವವರಂತೆ ಮಾತಿಗಿಳಿದ ಅವಧೂತರು, “ಕಾರು ಹೀಗೆ ಹಠಾತ್ತನೆ ನಿಂತದ್ದು ಯಾಕಾದರೂ ಇರಲಿ, ಅದಕ್ಕೊಂದು ಪೂರ್ವನಿಯಾಮಕ ‘ನಿಮಿತ್ತ’ ವಂತೂ ಇದ್ದೇ ಇರುತ್ತದೆ. ಎಲ್ಲರೂ ಕೆಳಗಿಳಿಯಿರಿ, ಇಲ್ಲೊಬ್ಬರು ಅಮಾಯಕ ಭಕ್ತರು ಇಂದು ಮುಂಜಾನೆಯಿಂದಲೇ ನಮ್ಮನ್ನು ತುಂಬಾ ನೆನೆಯುತ್ತಿದ್ದರು. ಅವರನ್ನು ಭೇಟಿಯಾಗಲೆಂದೇ ಆ ಭಗವಂತ ನಮ್ಮ ಈ ಸಾರಥಿಯ ಮೂಲಕ ಹೀಗೆ ಹಠಾತ್ತನೆ ಬ್ರೇಕ್ ಹಾಕಿಸಿದ್ದಾನೆ ಎನಿಸುತ್ತದೆ. ಅವರೊಂದಿಗೆ ಕೊಂಚ ಮಾತನಾಡಿ ಪಯಣ ಮುಂದುವರಿಸೋಣ. ಕಥೇನೂ ಮುಂದುವರಿಸ್ತೀನಿ ಕಣ್ರಯ್ಯಾ..." ಎಂದರು ಮತ್ತದೇ ತುಂಟದನಿಯಲ್ಲಿ ನಗುತ್ತಾ.

ಹಾವಾಡಿಗನ ಪುಂಗಿಯಾಟಕ್ಕೆ ತಲೆದೂಗುವ ಹಾವಿನಂತೆ ಶಿಷ್ಯರೆಲ್ಲರೂ ಕಾರಿನಿಂದ ಇಳಿದು ಅವಧೂತರನ್ನು ಹಿಂಬಾಲಿಸಿದರು. ರಸ್ತೆಯಿಂದ ಕೆಳಗಿಳಿದು ಸರಸರನೆ ಹೆಜ್ಜೆಹಾಕಿದ ಅವಧೂತರು, ಪಾಳುಬಿದ್ದ ದೇಗುಲವೊಂದರ ಪಕ್ಕದಲ್ಲಿದ್ದ, ನಾಡಹೆಂಚು ಹೊದಿಸಿದ್ದ ಸಾಧಾರಣ ಮನೆಯೊಂದ ರೆಡೆಗೆ ಸಾಗಿ ಹೊರಗಿನಿಂದಲೇ, “ಮುನಿಯಪ್ಪಾ, ಚಿಕ್ಕತಾಯವ್ವಾ.. ಏನು ಮಾಡ್ತಾ ಇದ್ದೀರಾ..?" ಎಂದು ಕರೆದರು. ಅಷ್ಟೇ! ಬಾಗಿಲು ತೆರೆದು ಹೊರಬಂದ ಮಧ್ಯವಯಸ್ಕ ದಂಪತಿ, ಅದು ರಸ್ತೆ ಬದಿಯ ಕೆಸರುಮಣ್ಣಿನ ನೆಲ ಎಂಬುದನ್ನೂ ನೋಡದೆ ಅಲ್ಲೇ ಅವಧೂತರಿಗೆ ಸಾಷ್ಟಾಂಗ ನಮಸ್ಕಾರ ಮಾಡಿಬಿಟ್ಟರು, ಅವಧೂತರ ಪಾದಗಳಿಗೆ ಅವರ ಕಣ್ಣೀರಿನ ಅಭಿಷೇಕವಾಯಿತು. “ವತ್ತಾರೆಯಿಂದ ನಿಮ್ಮನ್ನೇ ನೆನಿಸ್ಕಾತ ಇದ್ವೀ ಒಡೆಯಾ... ಕೊನೆಗೂ ಬಂದ್ ಬಿಟ್ಯಾ ನಮ್ಮಪ್ಪಾ... ಆ ದ್ಯಾವರು ಕೊನೆಗೂ ನಮ್ ಮ್ಯಾಕೆ ಕಣ್ಣು ತೆರೆದುಬಿಟ್ಟಾ..." ಎನ್ನುತ್ತಾ ತಮ್ಮದೇ ಮುಗ್ಧ ಭಾಷೆ ಯಲ್ಲಿ ಕೃತಜ್ಞತಾ ಭಾವವನ್ನು ಸೂಚಿಸುತ್ತಾ ಅವಧೂತರ ಎರಡೂ ಬದಿಯಲ್ಲಿ ಕೈಗಳನ್ನು ಹಿಡಿದು ಕೊಂಡು ಮನೆಯತ್ತ ಕರೆದೊಯ್ಯತೊಡಗಿದರು. ಜತೆಗೆ, “ಬರ್ರಪ್ಪಾ.... ಬರ್ರಿ ಬರ್ರಿ..." ಎನ್ನುತ್ತಾ ಶಿಷ್ಯರನ್ನೂ, ಕಾರಿನ ಚಾಲಕರನ್ನೂ ಆಹ್ವಾನಿಸಿದರು.

ಇದನ್ನೂ ಓದಿ:Yagati Raghu Naadig Column: ಮಬ್ಬಾಗಿ ಮುಸುಕಿತ್ತು ಮಠದೊಳಗಿನ ಮಾರ್ಜಾಲ..!

ಬಂದವರೆಲ್ಲರಿಗೂ ಈಚಲು ಚಾಪೆ ಹಾಸಿ ಕೂರಿಸಿದ ಆ ದಂಪತಿ, ಮಣ್ಣಿನ ಹೂಜಿ ಹಾಗೂ ಕುಡಿಕೆ ಯನ್ನು ಒಬ್ಬೊಬ್ಬರ ಬಳಿಗೂ ತಂದು “ಮೊದಲು ನೀರು ಕುಡೀರಿ..." ಎಂದು ಸತ್ಕರಿಸಿದರು. ಸಮಾಜದ ಮಿಕ್ಕವರಿಂದ ‘ನಿಮ್ನ ವರ್ಗದವರು’ ಎಂಬ ಹಣೆಪಟ್ಟಿ ಮೆತ್ತಿಸಿಕೊಂಡು ಊರಿನ ಹೊರಗೆ ನೆಲೆಯೂರಿದ್ದ ಕುಟುಂಬವದು. ಅವರಿಬ್ಬ ರಲ್ಲಿ ಸಂಭ್ರಮ ಅದೆಷ್ಟರ ಮಟ್ಟಿಗೆ ಚಿಮ್ಮುತ್ತಿತ್ತು ಎಂದರೆ ದಂಪತಿಯಿಬ್ಬರ ಕಂಗಳಲ್ಲೂ ನೀರು ‘ದಳದಳ’ ಸುರಿಯುತ್ತಿತ್ತು. ಇಬ್ಬರನ್ನೂ ಆಪ್ಯಾಯತೆ ಯಿಂದ ಹತ್ತಿರಕ್ಕೆ ಕರೆದ ಅವಧೂತರು ಕಣ್ಣೀರು ಒರೆಸಿ, ತಲೆಯ ಮೇಲೆ ಕೈಯಿಟ್ಟು ಹರಸಿದರು. ಮನೆಯಾಕೆಯು ಎಲ್ಲರ ಆತಿಥ್ಯಕ್ಕೆ ಅನುವಾಗುತ್ತಿದ್ದಂತೆ ಆಕೆಯ ದೇಹಭಾಷೆಯನ್ನು ಗ್ರಹಿಸಿದ ಅವಧೂತರು, “ಪರವಾಗಿಲ್ಲ ತಾಯಿ, ಏನೂ ಬೇಡ..." ಎಂದರು.

ಆಗ ಮನೆಯ ಯಜಮಾನ, “ಎಲ್ಲಾದ್ರೂ ಉಂಟೇ ಒಡೆಯಾ..?" ಎನ್ನುತ್ತಾ ಮನೆಯ ಹಿತ್ತಲಿಗೆ ಹೋದ. ಆಗ ಅವಧೂತರು ಆಕೆಯನ್ನು ಉದ್ದೇಶಿಸಿ, “ಇನ್ನೇನೂ ಚಿಂತೆ ಮಾಡಬೇಡ ತಾಯೀ, ಎಲ್ಲವೂ ಸರಿಹಾದಿಯಲ್ಲೇ ನಡೆಯಲಿದೆ" ಎಂದರು. ಮನೆಯಾಕೆ ಸಮಾಧಾನಗೊಂಡು ಅವಧೂತ ರಿಗೆ ನಮಸ್ಕರಿಸಿದಳು. ಇದೇನು ನಡೆಯುತ್ತಿದೆ ಎಂದು ಶಿಷ್ಯರು ಅಯೋಮಯ ಗೊಂಡಿರುವಾಗಲೇ ಮನೆಯ ಯಜಮಾನ ಹತ್ತಾರು ಮುತ್ತುಗದ ಎಲೆಗಳನ್ನು ತಂದು, ಅವಧೂತರಿಗೂ ಶಿಷ್ಯರಿಗೂ ಇತ್ತ. ಮತ್ತೆ ಒಳಗೆ ಹೋಗಿ, ಆಗಷ್ಟೇ ಕಿತ್ತು ತ್ವರೆಯಲ್ಲಿ ಬಿಡಿಸಿದ್ದ, ಮರದಲ್ಲೇ ಹಣ್ಣಾಗಿದ್ದ ಜೇನು ಹಲಸಿನ ತೊಳೆಗಳನ್ನು ಎಲ್ಲರ ಎಲೆಗೂ ಒಂದೊಂದು ಹಿಡಿಯಷ್ಟು ತಂದು ಹಾಕಿದ.

ಅದನ್ನು ಕಂಡ ಅವಧೂತರು, “ಹಸಿದು ಹಲಸು ತಿನ್ನಬೇಕು, ಉಂಡು ಮಾವು ತಿನ್ನಬೇಕು ಅಂತಾ ಕೇಳಿಲ್ವಾ ಸ್ವಾಮೀ? ತಿನ್ನಿ ತಿನ್ನಿ... ಅಯಾಚಿತವಾಗಿ ದೇವರ ಪ್ರಸಾದವೇ ಸಿಕ್ಕಿರುವಾಗ ಕುಲದ ಮೂಲವನ್ನು ಹುಡುಕಲು ಹೋಗಬಾರದು. ‘ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇ ನಾದರೂ ಬಲ್ಲಿರಾ?’ ಅಂತ ಕನಕದಾಸರೇ ಹಾಡಿಲ್ಲವೇ..?" ಎಂದು ಹೇಳುವ ಮೂಲಕ ಶಿಷ್ಯ ರೊಬ್ಬರ ಮನಕ್ಕೆ ಕುಣಿಕೆಯಾಗಿದ್ದ ‘ಕರ್ಮಠತೆ’ಯ ಹಗ್ಗವನ್ನು ಮಾತಿನಲ್ಲೇ ಕಳಚಿ ಹೊರ ಸೆಳೆದು ಒಗೆದು ಬಿಟ್ಟರು...!

ಆಶ್ರಮದಿಂದ ಬೆಳ್ಳಂಬೆಳಗ್ಗೆಯೇ ಹೊರಟಿದ್ದ ಎಲ್ಲರಿಗೂ ರಣಹಸಿವು ಆಗಿದ್ದು ನಿಜ. ಅದಕ್ಕಾಗಿ ಮಾರ್ಗಮಧ್ಯದಲ್ಲಿ ಎಲ್ಲಾದರೂ ಹೋಟೆಲ್‌ನಲ್ಲಿ ಹೊಟ್ಟೆಗೆ ಹಾಕಿಕೊಳ್ಳುವುದು ಅಂತ ಶಿಷ್ಯರು ಎಣಿಕೆ ಹಾಕಿದ್ದೂ ನಿಜ. ಆದರೆ ಅವಧೂತರ ಲೆಕ್ಕಾಚಾರವೇ ಬೇರೆಯದಾಗಿತ್ತು. ‘ಒಂದೇ ಬಾಣದಲ್ಲಿ ಎರಡು ಗುರಿಯ ಸಾಧನೆ’ ಎಂಬ ಮಾತಿನಂತೆ ಮುಂಜಾನೆಯಿಂದ ಆರ್ತರಾಗಿ ಪ್ರಾರ್ಥಿಸುತ್ತಿದ್ದ ಭಕ್ತರಿಗೂ ಅವಧೂತರು ದರ್ಶನ ಕೊಟ್ಟಿದ್ದರು, ಜತೆಜತೆಗೆ ಅವರ ಆತಿಥ್ಯ ಸ್ವೀಕರಿಸಿ ಸಮಾಧಾನ ವನ್ನೂ ದಯಪಾಲಿಸಿದ್ದರು, ತನ್ಮೂಲಕ ಶಿಷ್ಯರ ಜಠರಬಾಧೆಯನ್ನೂ, ಮತ್ತೊಬ್ಬ ಕರ್ಮಠ ಶಿಷ್ಯರ ಶಿರೋಬಾಧೆಯನ್ನೂ ನೀಗಿಸಿದ್ದರು! ಆದರೆ ಶಿಷ್ಯಗಣದ ಮನದಲ್ಲಿ ಮಾತ್ರ ಜಿಜ್ಞಾಸೆಯೊಂದು ಗಿರಕಿ ಹೊಡೆಯುತ್ತಲೇ ಇತ್ತು- ‘ನಮ್ಮ ಕಾರು ಹೀಗೆ ಈ ಜಾಗದಲ್ಲಿ ಗಕ್ಕನೆ ನಿಂತಿದ್ದು, ಅವಧೂತರು ಹೇಳುತ್ತಿದ್ದ ಪತ್ತೇದಾರಿ ಶೈಲಿಯ ಕಥನಕ್ಕೆ ನಿಬ್ಬೆರಗಾಗಿ ಚಾಲಕರು ಹಠಾತ್ತನೆ ಬ್ರೇಕ್ ಒತ್ತಿದ ಕಾರಣಕ್ಕೋ? ಅಥವಾ ಈ ದಂಪತಿಯ ಮನೆಗೆ ಭೇಟಿ ನೀಡಲೆಂದು ಅವಧೂತರು ಆಡಿದ ಲೀಲಾ ವಿನೋದದಲ್ಲಿ ಅದೂ ಒಂದಾಗಿತ್ತೋ?’ ಎಂಬ ಲೆಕ್ಕಾಚಾರದಲ್ಲಿ ಶಿಷ್ಯರೆಲ್ಲರೂ ವ್ಯಸ್ತರಾಗಿ ದ್ದರು, ಹಣ್ಣನ್ನು ಮೆಲುಕು ಹಾಕುತ್ತಲೇ...!

ಜೇನು ಹಲಸಿನ ಸಮಾರಾಧನೆ ಮುಗಿದು ಎಲ್ಲರೂ ಕೈ ತೊಳೆದು ಎದ್ದರು. ಆ ದಂಪತಿಯಿಬ್ಬರೂ ಅವಧೂತರ ಪಾದಗಳಿಗೆ ಎರಗಿ ಕೈಮುಗಿದು ನಿಂತರು. ಅಭಯ ಮುದ್ರೆಯಿತ್ತ ಅವಧೂತರು ಹೊರಡುವ ಸೂಚನೆಯಿತ್ತರು. ಆ ದಂಪತಿಗೆ ನಮಸ್ಕರಿಸಿ ಅಲ್ಲಿಂದ ಹೊರಡುವಾಗ ಶಿಷ್ಯರೊಬ್ಬರು ಧೈರ್ಯಮಾಡಿ, “ಗುರುಗಳೇ, ‘ಇನ್ನೇನೂ ಚಿಂತೆ ಮಾಡಬೇಡ ತಾಯೀ, ಎಲ್ಲವೂ ಸರಿಹಾದಿಯಲ್ಲೇ ನಡೆಯಲಿದೆ’ ಎಂದು ಈ ಮನೆಯಾಕೆಗೆ ನೀವು ಹೇಳಿದಿರಲ್ಲಾ? ಇವರಿಗೆ ಇದ್ದ ತೊಂದರೆಯಾದರೂ ಏನು?" ಎಂದು ಪಿಸುದನಿಯಲ್ಲಿ ಪ್ರಶ್ನಿಸಿದರು. ಈ ಮಾತಿಗೆ ನಸುನಕ್ಕ ಅವಧೂತರು ಒಂದಕ್ಷರ ವನ್ನೂ ಮಾತಾಡದೆ, ಮನೆಯ ಒಂದು ಗೋಡೆಯತ್ತ ಬೆರಳುಮಾಡಿ ತೋರಿಸಿದರು. ಅಲ್ಲಿ, ದೇವ ಲೋಕದ ಅಪ್ಸರೆಯ ಸೌಂದರ್ಯವನ್ನೇ ಆವಾಹಿಸಿಕೊಂಡಂತಿದ್ದ ಹದಿಹರೆಯದ ಲಾವಣ್ಯವತಿ ಯೊಬ್ಬಳ ಭಾವಚಿತ್ರ ತೂಗಾಡುತ್ತಿತ್ತು. ಆ ಚಿತ್ರ ಮತ್ಯಾರದೂ ಅಲ್ಲ....

.... ಅದು, ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ಪಡೆದಿದ್ದ ಮತ್ತು ಅವಧೂತರ ಕಾರಿನ ಬಳಿಗೆ ಬಂದು ಕೃತಜ್ಞತಾ ಪೂರ್ವಕವಾಗಿ ನಮಸ್ಕರಿಸಿ ಬೀಳ್ಕೊಟ್ಟ ಆ 14ರ ಹರೆಯದ ಹುಡುಗಿಯದು..!

(ಮುಂದುವರಿಯುವುದು)