ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಧರ್ಮರಾಯನಿಗೆ ಸಮಯದ ಪಾಠ ಮಾಡಿದ ಭೀಮ

ಭೀಮಸೇನನು, ಒಂದು ಸಂತಸದ ಸುದ್ದಿಯನ್ನು ಹೇಳಲಿದ್ದೇನೆ ಎಂದನು. ನಂತರ ಅವನು ಅಣ್ಣನಾದ ಧರ್ಮರಾಜನು ಪಾದಗಳಿಗೆ ನಮಸ್ಕರಿಸುತ್ತ ಅಲ್ಲಿ ನೆರೆದಿದ್ದ ಪ್ರಜೆಗಳ ಕಡೆಗೆ ತಿರುಗಿ, ‘ನಮ್ಮ ಅಣ್ಣನು ದೊಡ್ಡ ವಿಜಯವನ್ನು ಸಂಪಾದಿಸಿದ್ದಾನೆ. ತಾವೆಲ್ಲರೂ ಆ ವಿಷಯವನ್ನು ಕೇಳಿದ ಮೇಲೆ ನನಗಿಂತ ಹೆಚ್ಚಿನ ಸಂತೋಷವನ್ನು ಪಡುವಿರಿ. ಹಾಗೆಯೇ ನಾವೆಲ್ಲರೂ ಅಣ್ಣನ ಸಂತೋಷದಲ್ಲಿ ಪಾಲ್ಗೊಳ್ಳೋಣ’ ಎಂದನು.

ಧರ್ಮರಾಯನಿಗೆ ಸಮಯದ ಪಾಠ ಮಾಡಿದ ಭೀಮ

ಒಂದೊಳ್ಳೆ ಮಾತು

rgururaj628@gmail.com

ಒಮ್ಮೆ ಒಬ್ಬ ಬ್ರಾಹ್ಮಣ ಯಾವುದೋ ಒಂದು ದಾನ ಕೇಳುತ್ತಾ ಧರ್ಮರಾಜನ ಬಳಿಗೆ ಹೋಗಿದ್ದನು. ಆದರೆ ಆತನು ಮರಳಿ ಬರುವಾಗ ಮಾತ್ರ ಬರಿಗೈಯಲ್ಲಿ ಬರುತ್ತಿದ್ದನು ಅದನ್ನು ಗಮನಿಸಿದ ಭೀಮಸೇನನು ಅವನನ್ನು ತನ್ನ ಬಳಿ ಕರೆದು ವಿಚಾರಿಸಿದನು.

ಆಗ ಆತ ಅವರು ನಾಳೆ ಬರಲು ತಿಳಿಸಿದ್ದಾರೆ ಎಂದನು. ಧರ್ಮರಾಜನಿಂದ ಭೀಮಸೇನನು ಇಂತಹ ಉತ್ತರವನ್ನು ನಿರೀಕ್ಷಿಸಿರಲಿಲ್ಲ. ಭೀಮಸೇನನು ಬ್ರಾಹ್ಮಣನನ್ನು ಹೋಗದಂತೆ ತಡೆದು ಅಲ್ಲೇ ನಿಲ್ಲಿಸುತ್ತ ಮಹಾರಾಜನ ಅರಮನೆಯ ಬಳಿಯಿರುವ ಒಂದು ದೊಡ್ಡ ಗಂಟೆಯನ್ನು ಜೋರಾಗಿ ಬಾರಿಸತೊಡಗಿದ.

ಮಹಾರಾಜನ ಬಳಿ ಇರುವ ಈ ಗಂಟೆಯನ್ನು ಯಾವಾಗಲೂ ಬಾರಿಸುವುದಿಲ್ಲ. ಕೆಲವೊಂದು ವಿಶಿಷ್ಟ ಸಂದರ್ಭಗಳಲ್ಲಿ ಅಂದರೆ ಅತಿ ಪ್ರಾಮುಖ್ಯವಾದ ಘಟನೆಗಳು ನಡೆದಾಗ ಮಾತ್ರ ಅದನ್ನು ಜನರ ಗಮನಕ್ಕೆ ತರಲು ಬಾರಿಸಲಾಗುತ್ತಿತ್ತು. ಧರ್ಮರಾಜ ಮಹಾಜನರೊಡಗೂಡಿ ಅಲ್ಲಿಗೆ ಓಡೋಡಿ ಬಂದರು. ಅವರಾರ ಬರವನ್ನೂ ಲೆಕ್ಕಿಸದೇ ಭೀಮಸೇನನು ಗಂಟೆಯನ್ನು ಬಾರಿಸುತ್ತಲೇ ಇದ್ದನು. ಆಗ ಅಲ್ಲಿಗೆ ಆಗಮಿಸಿದ ಧರ್ಮರಾಯನು ಭೀಮಸೇನನನ್ನು ತಡೆಯುತ್ತ, ಯಾರಿಗೆ ಅನ್ಯಾಯವಾಗಿದೆ ಎಂದು ಈ ರೀತಿ ಗಂಟೆಯನ್ನು ಬಾರಿಸುತ್ತಿದ್ದೀಯ ? ಎಂದು ಕೇಳಿದನು.

ಇದನ್ನೂ ಓದಿ: Roopa Gururaj Column: ಜ್ಞಾನ ದಕ್ಕಿಸಿಕೊಳ್ಳಲು ಬೇಕಾದ ಅರ್ಹತೆ

ಭೀಮಸೇನನು, ಒಂದು ಸಂತಸದ ಸುದ್ದಿಯನ್ನು ಹೇಳಲಿದ್ದೇನೆ ಎಂದನು. ನಂತರ ಅವನು ಅಣ್ಣನಾದ ಧರ್ಮರಾಜನು ಪಾದಗಳಿಗೆ ನಮಸ್ಕರಿಸುತ್ತ ಅಲ್ಲಿ ನೆರೆದಿದ್ದ ಪ್ರಜೆಗಳ ಕಡೆಗೆ ತಿರುಗಿ, ‘ನಮ್ಮ ಅಣ್ಣನು ದೊಡ್ಡ ವಿಜಯವನ್ನು ಸಂಪಾದಿಸಿದ್ದಾನೆ. ತಾವೆಲ್ಲರೂ ಆ ವಿಷಯವನ್ನು ಕೇಳಿದ ಮೇಲೆ ನನಗಿಂತ ಹೆಚ್ಚಿನ ಸಂತೋಷವನ್ನು ಪಡುವಿರಿ. ಹಾಗೆಯೇ ನಾವೆಲ್ಲರೂ ಅಣ್ಣನ ಸಂತೋಷ ದಲ್ಲಿ ಪಾಲ್ಗೊಳ್ಳೋಣ’ ಎಂದನು.

ಅವನ ಮಾತುಗಳನ್ನು ಕೇಳಿ ಉಳಿದವರ ವಿಷಯ ಹಾಗಿರಲಿ, ಸ್ವತಃ ಧರ್ಮರಾಜನಿಗೆ ಈ ವಿಷಯ ಅರ್ಥವಾಗಲಿಲ್ಲ. ಈ ದಿನ ಆತನು ಅರಮನೆಯನ್ನು ಬಿಟ್ಟು ಹೊರಕ್ಕೇ ಹೋಗಿರಲಿಲ್ಲ. ಯಾರೊ ಡನೆಯೂ ಯುದ್ಧ ಮಾಡಿರಲಿಲ್ಲ. ಅಂತಹುದರಲ್ಲಿ ವಿಜಯವನ್ನು ಸಂಪಾದಿಸುವುದಾದರೂ ಹೇಗೆ? ಹಾಗಾಗಿ ಅವನು ಆಶ್ಚರ್ಯದಿಂದ ಭೀಮಸೇನನ ಕಡೆಗೆ ತಿರುಗಿ ನೋಡುತ್ತ, ‘ಅರೆ! ಭೀಮಸೇನ ಇದೇನು. ಹೇಳುತ್ತಿರುವಿ? ಯಾವ ಜಯ? ಎಲ್ಲಿ ಸಂಪಾದಿಸಿರುವೆ? ನಿನಗೇನಾದರೂ ಕನಸು ಬಿದ್ದಿದೆಯಾ?’ ಎಂದು ಕೇಳಿದನು. ಆಗ ಭೀಮಸೇನನು ನಗುತ್ತ, ಪ್ರಭು, ಇಂದು ಬ್ರಾಹ್ಮಣ ನೋರ್ವನು ತಮ್ಮ ಬಳಿಗೆ ಬಂದು ಯಾವುದೋ ಒಂದು ವಸ್ತುವನ್ನು ಕೇಳಿದಾಗ ಆ ವಸ್ತು ತಮ್ಮ ಬಳಿ ಇಲ್ಲವೆಂದೂ ನಾಳೆಯ ದಿನ ತರಿಸಿಕೊಡುವುದಾಗಿಯೂ ತಿಳಿಸಿದರಂತೆ. ಅಂದರೆ ನಾಳೆಯ ದಿನದ ತನಕ ತಾವು ಬದುಕಿರುವುದಾಗಿಯೂ ಹಾಗೂ ಆ ಬ್ರಾಹ್ಮಣನೂ ಬದುಕಿ ಉಳಿಯುವುದರ ಬಗ್ಗೆ ತಮಗೆ ಖಾತ್ರಿ ಇದೆ ಎಂದಂತಾಯಿತು.

ಆದರೆ ಹುಟ್ಟು ಸಾವಿನ ಬಗ್ಗೆ ಯಾರಿಗೂ ಖಾತ್ರಿಯಾಗಿ ಹೇಳಲಾಗುವುದಿಲ್ಲ. ಆದರೆ ತಾವು ಹೇಳು ತ್ತಿರುವಿರಿ ಎಂದರೆ ತಾವು ಜಯಿಸಲಸಾಧ್ಯವಾದ ಸಾವನ್ನೂ ಜಯಸಿರುವಿರಿ ಎಂದರ್ಥ ವಲ್ಲವೇ? ಹಾಗಾಗಿ ಇದೊಂದು ಭಾರೀ ವಿಜಯವಲ್ಲವೇ?’ ಎಂದು ಕೇಳಿದನು. ಭೀಮಸೇನನ ಮಾತುಗಳನ್ನು ಕೇಳಿದಾಗ ಧರ್ಮರಾಜನಿಗೆ ತನ್ನ ತಪ್ಪಿನ ಅರಿವಾಯಿತು.

ತನ್ನ ತಮ್ಮನನ್ನು ಪ್ರೀತಿಯಿಂದ ತಬ್ಬಿಕೊಳ್ಳುತ್ತ, ‘ಭೀಮಸೇನ, ನಿಜ ನಿಜ ನೀನು ಹೇಳುತ್ತಿರುವುದು ನಿಜ. ನೀನು ಸರಿಯಾದ ಸಮಯದಲ್ಲಿ ನನ್ನ ಕಣ್ಣುಗಳನ್ನು ತೆರೆಸಿದ್ದೀಯ. ಹುಟ್ಟು ಸಾವಿನ ಬಗ್ಗೆ ಯಾರೂ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಹಾಗಾಗಿ ನಾಳೆ ಮಾಡುವುದನ್ನು ಇಂದೇ ಮಾಡಬೇಕು.

ಇಂದು ಮಾಡುವುದನ್ನು ಈಗಲೇ ಮಾಡಬೇಕು ಬ್ರಾಹ್ಮಣದಾನ ಕೇಳಿದಾಗ ನಾನು ಅಲ್ಲೇ ನೀಡ ಬೇಕಿತ್ತು. ಆ ರೀತಿಯಲ್ಲಿ ಹಾಗೇ ಬರಿಗೈಯಲ್ಲಿ ಕಳಿಸಬಾರದಾಗಿತ್ತು’ ಎಂದು ತಡ ಮಾಡದೆ ಊರಿಗೆ ಹೊರಡಲು ತಯಾರಾಗಿದ್ದ ಆ ಬ್ರಾಹ್ಮಣನನ್ನು ತಕ್ಷಣವೇ ಕರೆಸಿ, ಅವನನ್ನು ಸತ್ಕರಿಸಿ, ಅವನು ಕೇಳಿದ್ದನ್ನ ಅಂದೇ ಕೊಟ್ಟು ಕಳುಹಿಸಿದನು.

ನಾವು ಕೂಡ ಮಾಡುವ ಕೆಲಸವನ್ನು ಮುಂದೂಡುತ್ತಾ ಇರುತ್ತೇವೆ. ಅಂದುಕೊಂಡದ್ದನ್ನು ನೆಪಗಳನ್ನು ಹೂಡದೆ ಮಾಡಲು ಮನಸು ಮಾಡಿದಾಗ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ. ಇದು ನಮ್ಮೆಲ್ಲರಿಗೂ ಪಾಠವಾಗಲಿ.