ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shashidhara Halady Column: ವಾಂಟರ್ಕ ಎಂಬ ಜೀವಿ ಗೊತ್ತೇ ನಿಮಗೆ !

ಮಳೆ ಕಡಿಮೆಯಾದರೂ ಹರಿಯುತ್ತಲೇ ಇರುವ ಈ ನೀರು ಸ್ಫಟಿಕ ಶುದ್ಧ. ಕ್ರಮೇಣ ಮಳೆ ಕಡಿಮೆ ಯಾಗುತ್ತದೆ; ಎರಡನೆಯ ಬೆಳೆಗಾಗಿ ಗದ್ದೆಗಳನ್ನು ಹಸನು ಮಾಡುವ ಸಮಯ. ಚಳಿಗಾಲದ ಆರಂಭ ದಲ್ಲಿ ಹೀಗೆ ಗದ್ದೆಯನ್ನು ಉಳುಮೆ ಮಾಡಿ, ಬೀಜ ಬಿತ್ತಿದಾಗ, ಅದೆಲ್ಲಿಂದಲೋ ಬರುವ ‘ವಾಂಟರ್ಕ’ ಗಳು ಗದ್ದೆ ಮತ್ತು ಅಗೇಡಿಯನ್ನು ಉಳುಮೆ ಮಾಡುವುದುಂಟು!

Shashidhara Halady Column: ವಾಂಟರ್ಕ ಎಂಬ ಜೀವಿ ಗೊತ್ತೇ ನಿಮಗೆ !

-

ಶಶಾಂಕಣ

ಇದೊಂದು ಜೀವಿಯ ಹೆಸರನ್ನು ಕೇಳಿದ ನಿಮಗೆ ಅಚ್ಚರಿ ಎನಿಸಬಹುದು. ಇಂಥ ಹೆಸರಿನ ಮೂಲ ವೇನು, ಇದರ ಪದನಿಷ್ಪತ್ತಿ ಹೇಗೆ ಎಂಬ ಕುತೂಹಲವೂ ಮೂಡಬಹುದು. ‘ವಾಂಟರ್ಕ’ ಎಂಬ ಹೆಸರು ಬಹುಶಃ, ನಮ್ಮ ಹಳ್ಳಿಯ ಸುತ್ತಮುತ್ತಲಿನ ಸುಮಾರು 30 ಚದರ ಕಿ.ಮೀ. ವ್ಯಾಪ್ತಿಯ ಪ್ರದೇಶ ದಲ್ಲಿ ಮಾತ್ರ ಬಳಕೆಯಲ್ಲಿದೆ ಎನಿಸುತ್ತದೆ.

ಇದರ ಹೆಸರಿನ ಮೂಲ ಹುಡುಕುವುದಕ್ಕಿಂತ, ಇಂಥದೊಂದು ಪುಟಾಣಿ ಜೀವಿಯ ದಿನಚರಿಯನ್ನು, ಅದರ ಬದುಕನ್ನು ಗಮನಿಸುವುದೇ ಒಂದು ಕೌತುಕ. ಪೇಟೆಯಿಂದ ಮೂರು ಕಿ.ಮೀ. ದೂರದಲ್ಲಿ, ಅಷ್ಟೇನೂ ದಟ್ಟವಲ್ಲದ ಕಾಡಿನ ನಡುವೆ, ಗದ್ದೆ ಬಯಲಿನ ತುದಿಯಲ್ಲಿರುವ ನಮ್ಮ ಹಳ್ಳಿಮನೆಯ ಸುತ್ತ ಹಲವು ಪ್ರಾಕೃತಿಕ ವ್ಯಾಪಾರಗಳು ನಡೆಯುತ್ತಲೇ ಇರುತ್ತವೆ.

ಅದೆಷ್ಟೋ ಇಂಥ ವಿಸ್ಮಯಗಳು ನಮ್ಮ ಅರಿವಿಗೆ ಬಾರದೇ ಇರುವುದೂ ಉಂಟು. ನಮ್ಮ ಪಾಡಿಗೆ ನಾವು ಮಕ್ಕಳು ಶಾಲೆಗೆ ಹೋಗುತ್ತಿದ್ದರೆ, ದೊಡ್ಡವರು ಗದ್ದೆಯಲ್ಲಿ ಉಳುಮೆ ಮಾಡುತ್ತಾ, ನಾಟಿ ಮಾಡುತ್ತಾ, ಹಾಡಿಯಿಂದ ದರಲೆ ತರುತ್ತಾ, ಹಕ್ಕಲಿನಿಂದ ಸೌದೆ ತರುತ್ತಾ ತಮ್ಮ ದಿನಚರಿಯನ್ನು ದೂಡುತ್ತಿದ್ದರು.

ಕಾಡು, ಹಾಡಿ, ಹಕ್ಕಲು, ಬ್ಯಾಣಗಳೊಂದಿಗೆ ದಟ್ಟ ಸಂಬಂಧ ಹೊಂದಿದ್ದ ನಮ್ಮೂರಿನ ಗದ್ದೆಗಳು ಅವೆಷ್ಟೋ ಅಚ್ಚರಿಗಳ ತವರು. ಇಂಥ ಅಚ್ಚರಿಗಳಲ್ಲಿ ಒಂದು ಎಂದರೆ ‘ವಾಂಟರ್ಕ’ ನಡೆಸುವ ಉಳುಮೆ!

ಜೂನ್ ಮೊದಲವಾರ ತಪ್ಪದೇ ಮಳೆಯಾಗುವ ಹಳ್ಳಿ ನಮ್ಮದು. ಈ ರೀತಿ ಸಮಯಕ್ಕೆ ಸರಿಯಾಗಿ ಮಳೆ ಬಿದ್ದರೆ ಕೃಷಿಕರಿಗೆ ನಿಜಕ್ಕೂ ಸಂತಸ. ಗದ್ದೆ, ಅಗೇಡಿಗಳನ್ನು ಹದಗೊಳಿಸಿ, ಭತ್ತದ ನಾಟಿಗೆ ತಯಾರು ಮಾಡತೊಡಗುತ್ತಾರೆ.

ಇದನ್ನೂ ಓದಿ: Shashidhara Halady Column: ನೋಡಲು ಚಂದ, ಆದರೆ ರೈತರಿಗೆ ಕಷ್ಟ !

ಒಮ್ಮೆ ಮಳೆ ಬಂತೆಂದರೆ ಸಕಲೆಂಟು ಜೀವಿಗಳಿಗೂ ಎಲ್ಲಿಲ್ಲದ ಉತ್ಸಾಹ, ಸ್ಪೂರ್ತಿ, ಜೀವನಾಸಕ್ತಿ. ರಾತ್ರಿಯಿಡೀ ವಟಗುಟ್ಟುವ ಕಪ್ಪೆಗಳು ತಮ್ಮ ಉತ್ಸಾಹವನ್ನು ಶಬ್ದಮಾಡಿ ತೋರಿಸಿದರೆ, ಮರ ವೊಂದರ ಮೇಲೆ ಮುತ್ತಿ ಕುಳಿತು, ಸೀರಿಯಲ್ ಸೆಟ್‌ನಂತೆ ಬೆಳಕು ಬೀರುವ ಮೂಲಕ ಮರವನ್ನೇ ಬೆಳಗುವ ಮಿಣುಕು ಹುಳಗಳ ಝಗಮಗ ಬೆಳಕಿನಾಟ ಇನ್ನೊಂದೆಡೆ.

ವಿದ್ಯುತ್ ಸಂಪರ್ಕವೇ ಇಲ್ಲದ ಅಂದಿನ ದಿನಗಳಲ್ಲಿ, ಕಗ್ಗತ್ತಲ ರಾತ್ರಿ, ಮನೆಯಿಂದ ಸ್ವಲ್ಪ ದೂರ ದಲ್ಲಿನ ಮರವೊಂದರಲ್ಲಿ ಕುಳಿತು ಒಮ್ಮೆಗೇ ಬೆಳಕು ಬೀರುವ ಸಾವಿರಾರು ಮಿಣುಕು ಹುಳುಗಳ ಇಂಥ ಸಾಮೂಹಿಕ ಬೆಳಕಿನ ಹಬ್ಬವು ನಮ್ಮಲ್ಲಿ ಉದಿಸುತ್ತಿದ್ದ ಬೆರಗನ್ನು ವರ್ಣಿಸಲು ಪದಗಳಿಲ್ಲ. ಮಳೆ ಬಂದು, ಎಲ್ಲೆಡೆ ನೀರು ಹರಿಯತೊಡಗಿದಾಗ ಒಳ್ಳೆ ಹಾವುಗಳಿಗಂತೂ ಎಲ್ಲಿಲ್ಲದ ಉಮೇದು. ಗದ್ದೆ, ತೋಟ, ಬಾವಿ, ತೋಡು, ಗದ್ದೆಯಂಚಿನ ನಮ್ಮ ದಾರಿ, ಬೇಲಿ ಎಂದು ಓಡಾಡುತ್ತಿರುತ್ತವೆ!

ಹತ್ತಾರು ದಿನ ಚೆನ್ನಾಗಿ ಮಳೆ ಬಿದ್ದು, ಗದ್ದೆಯಲ್ಲಿ ನೀರು ನಿಂತು, ಗದ್ದೆ ಬಯಲಿನ ಉದ್ದಕ್ಕೂ ಒಂದು ಭಾಗದಲ್ಲಿ ಹರಿಯುವ ತೋಡಿನಲ್ಲಿ ಉಜರು (ಝರಿ) ನೀರು ಹರಿಯ ತೊಡಗಿದ ತಕ್ಷಣ ನಮ್ಮೂರಲ್ಲಿ ಹಾವುಗಳ ಮೆರವಣಿಗೆ! ಗದ್ದೆಯಿಂದ ಬಾವಿಗೆ, ಬಾವಿಯಿಂದ ಅಂಗಳಕ್ಕೆ, ಅಂಗಳದಿಂದ ತೋಟಕ್ಕೆ ಓಡಾಡುತ್ತಿರುತ್ತವೆ!

ಹೆಚ್ಚಿನವು ‘ಒಳ್ಳೆ ಹಾವು’! ಅವು ಒಳ್ಳೆಯವೂ ಹೌದು, ಅವುಗಳ ಹೆಸರು ಸಹ ಒಳ್ಳೆ! ದುರ್ಗ ಸಿಂಹನ ಪಂಚತಂತ್ರದಲ್ಲಿ, ಪಂಪನ ಕಾವ್ಯದಲ್ಲೂ ಇಂಥ ಹಾವುಗಳನ್ನು ‘ಒಳ್ಳೆ’ ಎಂದೇ ಕರೆದಿದ್ದಾರೆ. ಹತ್ತಾರು ದಿನ ಮಳೆ ಬಂದು, ಗದ್ದೆ ತುಂಬಾ ನೀರು ತುಂಬಿದಾಗ, ಅಲ್ಲಿ ಓಡಾಡುವ ಮನುಷ್ಯರ ಕಾಲಿಗೂ ಒಳ್ಳೆ ಹಾವು ತಾಗುವುದುಂಟು!

ಅದು ಕಚ್ಚಿದರೂ ಏನೂ ತೊಂದರೆ ಇಲ್ಲ ಎಂಬ ಮಾಹಿತಿ ಇರುವ ನಮ್ಮ ಹಳ್ಳಿಯ ಜನರು, ಅವುಗಳನ್ನು ನಿರ್ಲಕ್ಷಿಸಿ, ತಮ್ಮ ಪಾಡಿಗೆ ಒಳ್ಳೆ ಹಾವುಗಳಿದ್ದ ಗದ್ದೆಗಳಲ್ಲೇ ನಾಟಿಮಾಡುವುದೂ ಉಂಟು! ಚೆನ್ನಾಗಿ ಮಳೆ ಹುಯ್ದ ನಂತರ, ಕಾಡು ಗುಡ್ಡಗಿಂದ, ಮರಗಳ ಬೇರಿನ ಸಂದಿಯಿಂದ ಸೃಜಿಸಿ ಕೆಳಗೆ ಹರಿಯುವ ಉಜರು ನೀರು, ನಾಲ್ಕೆಂಟು ವಾರಗಳ ತನಕ ತೋಡುಗಳಲ್ಲಿ ಹರಿಯು ತ್ತಲೇ ಇರುತ್ತದೆ.

ಮಳೆ ಕಡಿಮೆಯಾದರೂ ಹರಿಯುತ್ತಲೇ ಇರುವ ಈ ನೀರು ಸ್ಫಟಿಕ ಶುದ್ಧ. ಕ್ರಮೇಣ ಮಳೆ ಕಡಿಮೆ ಯಾಗುತ್ತದೆ; ಎರಡನೆಯ ಬೆಳೆಗಾಗಿ ಗದ್ದೆಗಳನ್ನು ಹಸನುಮಾಡುವ ಸಮಯ. ಚಳಿಗಾಲದ ಆರಂಭ ದಲ್ಲಿ ಹೀಗೆ ಗದ್ದೆಯನ್ನು ಉಳುಮೆ ಮಾಡಿ, ಬೀಜ ಬಿತ್ತಿದಾಗ, ಅದೆಲ್ಲಿಂದಲೋ ಬರುವ ‘ವಾಂಟರ್ಕ’ ಗಳು ಗದ್ದೆ ಮತ್ತು ಅಗೇಡಿಯನ್ನು ಉಳುಮೆ ಮಾಡುವುದುಂಟು!

ಹೊಳವಾದ ದಿನ ಮುಂಜಾನೆ ಎದ್ದು, ಮನೆ ಮುಂದಿನ ಅಗೇಡಿಯನ್ನು ಕಂಡರೆ, ಅಲ್ಲಿ ಬೆಳೆದಿದ್ದ ಬತ್ತದ ಸಸಿಯ ನಡುವೆ, ಸುಮಾರು ಒಂದಡಿ ಅಗಲದ ದಾರಿ ಕಾಣಿಸುತ್ತದೆ. ಅದಕ್ಕೂ ಒಂದು ವಾರ ಮುಂಚೆ ಮನುಷ್ಯರು ಉಳುಮೆ ಮಾಡಿ, ಕೆಸರು ಗದ್ದೆಯಲ್ಲಿ ಭತ್ತ ಬಿತ್ತಿ, ಸಸಿಯಾಗಿ ನಾಲ್ಕಾರು ದಿನಗಳ ನಂತರ, ಈ ರೀತಿ ರಾತ್ರಿಯ ಹೊತ್ತಿನಲ್ಲಿ ಆ ಭತ್ತದ ಸಸಿಗಳ ನಡುವೆ ಚಲಿಸಿ, ಉಳುಮೆ ಯಂಥ ಕೆಲಸವನ್ನು ಮಾಡಿ, ಅಲ್ಲಿನ ಭತ್ತದ ಸಸಿಗಳನ್ನು ಮಡಿಸಿ ದಾರಿ ಮಾಡಿದಂತೆ ಮಾಡಿದ ಭೂಪನಾದರೂ ಯಾರು? “ಅದಾ. ಅದು ವಾಂಟರ್ಕನ ಕೆಲಸ. ಅಗೇಡಿಯ ಮಧ್ಯ ಹೂಟಿ ಮಾಡಿ ದಂತಿದೆ" ಎನ್ನುತ್ತಿದ್ದರು ನಮ್ಮೂರಿನ ರೈತರು.

ನಮ್ಮ ಹಾಲಾಡಿ ಸುತ್ತಲಿನ ಕನ್ನಡದಲ್ಲಿ ‘ವಾಂಟರ್ಕ’ ಎಂದರೆ ಪುಟ್ಟ ಆಮೆ! (ತೇಜಸ್ವಿಯವರು ಮೂಡಿಗೆರೆ ಸನಿಹ ಕಂಡ ಇಂಥ ಆಮೆಯನ್ನು ‘ವಾಟರ್ಕ’ ಎಂದು, ತಮ್ಮ ಒಂದು ಲೇಖನದಲ್ಲಿ ಕರೆದಿದ್ದಾರೆ). ಸಿಹಿನೀರಿನಲ್ಲಿ ವಾಸಿಸುವ ಈ ಆಮೆಗಳು, ರಾತ್ರಿ ಹೊತ್ತಿನಲ್ಲಿ ಅಗೇಡಿಯಲ್ಲಿ ಅತ್ತಿಂದಿತ್ತ ಓಡಾಡಿ ಮಾಡಿದ ಆ ದಾರಿಯನ್ನು ಬೆಳಗಿನ ಹೊತ್ತಿನಲ್ಲಿ ನೋಡುವ ಅನುಭವ ವಿಶಿಷ್ಟ.

ಭತ್ತದ ಸಸಿ ತುಂಬಿರುವ ಅಗೇಡಿಯ ಹಸಿರು ಕ್ಯಾನ್‌ವಾಸಿನ ಮೇಲೆ ಅದಾರೋ ಪ್ರಕೃತಿ ಪ್ರೇಮಿ, ನೀರವ ರಾತ್ರಿಯಲ್ಲಿ ಸಂಚರಿಸುತ್ತಾ, ವಿಶಿಷ್ಟ ಅರ್ಥ ನೀಡುವ ಒಂದು ರೇಖಾಚಿತ್ರ ಬರೆದಂತಿರುತ್ತದೆ. ಈ ವಾಂಟರ್ಕ ಎಂಬ ಆಮೆಗಳು ಸಾಮಾನ್ಯವಾಗಿ ನಿಶಾಚರಿಗಳು. ಅರ್ಧ ಅಡಿಯಿಂದ ಒಂದಡಿ ಉದ್ದದ, ಹಸಿರು ದೇಹದ ಆ ಆಮೆಗಳು, ತಮ್ಮ ಚಿಪ್ಪಿನಿಂದ ತಲೆಯನ್ನು ಹೊರಗೆ ಹಾಕಿ ನೋಡುವ ರೀತಿಯೇ ವಿಭಿನ್ನ, ಕಾವ್ಯಾತ್ಮಕ. ನಮ್ಮೂರಿನ ಕೆಲವು ರೈತರು ಅವುಗಳನ್ನು ಆಗಾಗ ಹಿಡಿಯುವು ದುಂಟು, ಪದಾರ್ಥ ಮಾಡಲು!

ಈ ಪುಟ್ಟ ಆಮೆಗಳು ನಿಶಾಚರಿಗಳು ಎಂದೆನಲ್ಲ, ಅದಕ್ಕೆ ನಮಗೆ ಒಮ್ಮೊಮ್ಮೆ ಪುರಾವೆ ದೊರೆಯು ತ್ತಿತ್ತು! ಅದು ವಿದ್ಯುತ್ ಇಲ್ಲದ ಕಾಲ. ಅಂಥ ರಾತ್ರಿಯಲ್ಲಿ, ಅವು ಕಣ್ಣಿಗೆ ಕಾಣದೇ ಇದ್ದರೂ, ವಾಂಟ ರ್ಕಗಳ ಓಡಾಟ ನಮಗೆ ಸಶಬ್ದವಾಗಿ ಕೇಳುವುದುಂಟು! ಅದು ಹೇಗೆಂದರೆ- ನಮ್ಮ ಹಳ್ಳಿ ಮನೆಯ ಮುಂದೆ ಇರುವ ಅಂಗಳದ ಒಂದು ಅಂಚಿನಲ್ಲಿ, ಒಂದು ಬಗ್ಗುಬಾವಿ ಇದೆ.

ಬಗ್ಗು ಬಾವಿ ಅಂದರೆ, ಬಾವಿಗೆ ಆವರಣ ಇಲ್ಲ, ನೆಲ ಮಟ್ಟದಲ್ಲೇ ಒಂದಡಿ ಎತ್ತರದ ಕಲ್ಲುಗಳ ರಕ್ಷಣಾಗೋಡೆ ಅಷ್ಟೆ. ನಮಗೆ ಕುಡಿಯುವ ನೀರು ಮತ್ತು ಬೇರೆಲ್ಲಾ ಉದ್ದೇಶಕ್ಕೆ ಬಳಸುವ ನೀರನ್ನು ಕೊಡುವ ಬಾವಿ ಅದು. ಬೇಸಗೆಯ ತನಕವೂ ಅದರಲ್ಲಿ ನೀರುರುತ್ತಿತ್ತು. ಒಂದೊಂದು ರಾತ್ರಿ, ಆ ಬಾವಿಗೆ ‘ದುಡುಂ’ ಎಂದು ಯಾರೋ ನೆಗೆದ ಸದ್ದು. ಆ ಸದ್ದು ಕೇಳಿದ ತಕ್ಷಣ, “ಹಾಂ, ಕಾಣಿ, ವಾಂಟರ್ಕ ಬಾಮಿಗೆ ಹಾರಿತು" ಎನ್ನುತ್ತಿದ್ದರು ನಮ್ಮ ಅಮ್ಮಮ್ಮ.

ಮನೆ ಮುಂದಿನ ಅಗೇಡಿ ಗದ್ದೆಯಿಂದಲೋ, ಬೇರೆಲ್ಲಿಂದಲೋ ನಡೆದು ಬರುವ ಆ ವಾಂಟರ್ಕಗಳು, ಅಂಗಳ ದಾಟಿ, ಬಗ್ಗುಬಾವಿಯ ಹತ್ತಿರ ಹೋಗಿ, ಮೇಲಿನಿಂದ ಬಾವಿಗೆ ನೆಗೆದಾಗ ಆಗುವ ‘ದುಡುಂ’ ಸದ್ದು ಅದು. ಗದ್ದೆಯಿಂದ ಬಾವಿಗೆ, ಬಾವಿಯಿಂದ ಗದ್ದೆಗೆ ರಾತ್ರಿ ಹೊತ್ತಿನಲ್ಲಿ ನಡೆಯುವ ಅವುಗಳ ಸರ್ಕೀಟಿನ ಉದ್ದೇಶವಾದರೂ ಏನು? ಅಗೇಡಿಯಲ್ಲಿ ಬೆಳೆಸಿದ್ದ ಬತ್ತದ ಸಸಿಯ ನಡುವೆ ಸಂಚರಿಸಿ, ತಮ್ಮದೇ ರೀತಿಯ ದಾರಿ ಮಾಡಿದ ನಂತರ, ಅಲ್ಲಿಂದ ಸುಮಾರು ನೂರು ಅಡಿ ದೂರದ ಬಾವಿಗೆ ಬರುವ ಅವುಗಳ ನಡೆಯ ಮರ್ಮವೇನು? ಅಗೇಡಿ ಮತ್ತು ಬಾವಿಯ ನಡುವೆ ಇರುವ ನುಣುಪಾದ, ಮಣ್ಣು ಹಾಕಿ ಸಾರಿಸಿದ ಅಂಗಳದ ಮೇಲೆ ನಿಧಾನವಾಗಿ ನಡೆಯುತ್ತಾ, ಬಾವಿಯ ದಿಕ್ಕಿಗೆ ಚಲಿಸಲು ಅವುಗಳಿಗೆ ದೊರೆಯುವ ಪ್ರೇರಣೆ ಅದಾವುದು? ಸರಳವಾಗಿ ಹೇಳಬೇಕೆಂದರೆ ಅದೇ ಅವುಗಳ ದಿನಚರಿ!

ಇದು ಅಗೇಡಿಯ ವಾಂಟರ್ಕಗಳ ವಿಚಾರವಾಯಿತು. ಇನ್ನು, ನಮ್ಮ ಮನೆಯ ಹಿಂದಿನ ಹಾಡಿ ಹಕ್ಕಲುಗಳಲ್ಲೂ ಬೇರೊಂದು ಪ್ರಭೇದದ ಪುಟ್ಟ ಆಮೆಗಳಿವೆ. ನಾನು ಕಾಲೇಜು ವಿದ್ಯಾಭ್ಯಾಸ ಮುಗಿಸಿ ಒಂದು ವರ್ಷ ಮನೆಯಲ್ಲೇ ಇದ್ದೆ- ನಿರುದ್ಯೋಗಿಯಾಗಿ. ಆಗೆಲ್ಲಾ ಈಗಿನಂತೆ ಪದವಿ ಮುಗಿಸಿದ ತಕ್ಷಣ ಕೆಲಸ ಸಿಗುವ ಸಂಭವವೇ ಇದ್ದಿಲ್ಲವಲ್ಲ.

ಅರ್ಜಿ ಹಾಕಿ ಕಾಯುವುದು, ಅಂಚೆಯಣ್ಣ ತರುವ ಪತ್ರಗಳನ್ನು ನಿರೀಕ್ಷಿಸುತ್ತಾ ಕೂರುವುದು ಅಂದಿನ ದಿನಚರಿ. ಆ ಏಕತಾನತೆಯನ್ನು ತೊಡೆದು ಹಾಕಲು, ಹಗಲು ಹೊತ್ತಿನಲ್ಲಿ, ಹಾಡಿ, ಹಕ್ಕಲು, ಗುಡ್ಡಗಳನ್ನು ಸುತ್ತುವುದು, ಅಲ್ಲಿನ ಹಕ್ಕಿಗಳನ್ನು ನೋಡುವುದು, ಅವುಗಳನ್ನು ಗುರುತಿಸಿ ಪುಸ್ತಕ ವೊಂದರಲ್ಲಿ ಗುರುತು ಮಾಡಿಕೊಳ್ಳುವುದು, ನಂತರ ಸಲೀಂ ಅಲಿಯವರ ‘ಬುಕ್ ಆಫ್ ಇಂಡಿಯನ್ ಬರ್ಡ್ಸ್’ ಪುಸ್ತಕದಲ್ಲಿ ಅವುಗಳನ್ನು ಗುರುತಿಸುವುದು- ಇದೇ ನನ್ನ ಅಂದಿನ ಪ್ರಮುಖ ಹವ್ಯಾಸ ಎನಿಸಿತ್ತು!‌

ಅಂಥ ಒಂದು ದಿನ, ಮನೆ ಹಿಂದಿನ ದರೆ ಹತ್ತಿ, ಗಾಣದಡಿಯ ಬೈಲಿನ ಮೇಲ್ಭಾಗದಲ್ಲಿದ್ದ ಹಕ್ಕಲಿ ನಲ್ಲಿ ಕುಳಿತಿದ್ದೆ. ಅಂದು ಅದು ದಟ್ಟವಾದ ಪೊದೆ ಮತ್ತು ಕುರುಚಲು ಕಾಡಿನಿಂದ ತುಂಬಿತ್ತು. ಆ ಕಾಡಿನ ನಡುವ ಒಂದು ತೊರೆಯೂ ಹರಿಯುತ್ತಿತ್ತು. ಅಲ್ಲೆಲ್ಲಾ ಅಂದು ಜನಸಂಚಾರ ಬಹಳ ಕಡಿಮೆ; ಒಂದರಿಂದ ಎರಡು ಕಿ.ಮೀ. ದೂರದ ಫಾಸಲೆಯಲ್ಲಿ ಯಾವುದೇ ಮನೆಗಳಿರಲಿಲ್ಲ, ಹಾಡಿ, ಹಕ್ಕಲು, ಗುಡ್ಡ, ಕಣಿ, ತೋಡು ಇವೇ ಅಲ್ಲಿ ಹರಡಿದ್ದವು.

ಈಚೆಗೆ ಅಲ್ಲೆಲ್ಲಾ ಮನೆಗಳಾಗಿವೆ. ಆ ಹಕ್ಕಲಿನ ನಡುವೆ ಒಂದು ಕಣಿ (ಕಣಿವೆ). ಎರಡೂ ಕಡೆ ದಟ್ಟ ವಾಗಿ ಬೆಳೆದಿದ್ದ ನಾನಾ ರೀತಿಯ ಗಿಡ, ಬಳ್ಳಿಗಳು. ಯಾವುದಾದರೊಂದು ಹಕ್ಕಿ ಹಾರಿ ಬಂದು ಅಲ್ಲಿನ ಗಿಡದ ಮೇಲೆ ಕುಳಿತುಕೊಳ್ಳಬಹುದು, ಅದನ್ನು ನಾನು ಗುರುತಿಸಿಯೇನು ಎಂಬ ನಿರೀಕ್ಷೆಯಲ್ಲಿ, ಮೌನವಾಗಿ ಒಂದು ಕಲ್ಲಿನ ಮೇಲೆ ಕುಳಿತಿದ್ದೆ.

ಸುತ್ತಲಿನ ಪರಿಸರವೂ ಮೌನವಾಗಿತ್ತು. ನಡು ಹಗಲಿನ ಹೊತ್ತು. ಆದರೂ, ಅಲ್ಲಿ ಬಿರುಸಾದ ಬಿಸಿಲು ಇರಲಿಲ್ಲ, ಎಲೆಗಳು ಅಲುಗದಂಥ ನಿಶ್ಶಬ್ದ ವಾತಾವರಣ. ಆಗ, ನಿಧಾನವಾಗಿ ನೆಲದ ಮೇಲಿನ ದರಲೆಯ (ತರಗಲೆ) ನಡುವೆ ಪರಪರ ಸದ್ದಾಯಿತು.

ಸದ್ದು ಬಂದತ್ತ ನೋಡಿದರೆ, ಮೊದಲಿಗೆ ಏನೂ ಕಾಣಲಿಲ್ಲ. ನಂತರ ಕಂಡಿತು, ಮಸುಕು ಕಲ್ಲಿನ ಬಣ್ಣದ, ಅರ್ಧ ಅಡಿ ಅಗಲದ ಸಣ್ಣ ಆಮೆ, ತೆವಳಿಕೊಂಡು ಸಾಗುತ್ತಿದೆ! ಅದರ ಮೇಲೆ ಮಬ್ಬಾಗಿ ನಕ್ಷತ್ರಾಕಾರದ ಗುರುತುಗಳು. ನಾನು ಮೌನವಾಗಿಯೇ ಕುಳಿತು, ಅದನ್ನೇ ಗಮನಿಸುತ್ತಾ, ಆ ಜೀವಿಯ ವಿವರಗಳನ್ನು ತಿಳಿಯಲು ಯತ್ನ ನಡೆಸುತ್ತಿದೆ.

ಅದು ‘ಆಮೆ ವೇಗ’ದಿಂದ ನಡೆಯುತ್ತಾ, ತರಗಲೆಗಳ ಸಂದಿಯಲ್ಲಿ ತುಸುದೂರ ಸಾಗಿ, ಹಕ್ಕಲಿನ ದಟ್ಟ ನೆರಳಿನಲ್ಲಿ, ಇನ್ನೊಂದು ಪ್ರದೇಶದ ತರಗೆಲೆಗಳ ನಡುವೆ ಮಾಯವಾಯಿತು. ಗದ್ದೆಯ ನೀರಿನಲ್ಲಿ, ಬಾವಿಯ ಕಲ್ಲಿನ ಸಂದಿಯಲ್ಲಿ ಮಾತ್ರ ಆಮೆಗಳನ್ನು ಕಂಡಿದ್ದ ನನಗೆ, ನಮ್ಮೂರಿನ ಕಾಡು ಪ್ರದೇಶ ದಲ್ಲೂ ಆಮೆಗಳಿವೆ ಎಂದು ತಿಳಿದಾಗ ವಿಸ್ಮಯ ಎನಿಸಿತ್ತು.

ನೀರಿನಿಂದ ಬಹುದೂರ ಎನಿಸುವ ಆ ಜಾಗದಲ್ಲಿದ್ದ ಆ ಪುಟಾಣಿ ಆಮೆಯು, ಕಣಿಯತ್ತ ಸಾಗಿತ್ತು. ಬಹುಶಃ ಅಲ್ಲೆಲ್ಲೋ ನೀರಿನ ಪಸೆ ಇದ್ದಿರಬಹುದು ಅಥವಾ ಅದರ ವಾಸಸ್ಥಳ ಇರಬಹುದು ಎಂದು ಕೊಂಡೆ. ಆಮೆಗಳು ನೀರಿನ ಸನಿಹ ಮಾತ್ರ ಇರುತ್ತವೆ ಎಂಬ ಭಾವನೆ ನನ್ನಲ್ಲಿತ್ತು; ಬೆಟ್ಟ ಗುಡ್ಡ ಗಳಲ್ಲೂ, ನೀರಿನಿಂದ ಬಹು ದೂರ ಇಂಥ ಆಮೆಗಳಿರುತ್ತವೆ ಎಂಬ ಹೊಸ ವಿಚಾರವನ್ನು ಕಂಡು ಕೊಂಡ ಬೆರಗು ನನ್ನಲ್ಲಿ.

ಕೆಲವು ದಿನಗಳ ನಂತರ ಗಾಣದಡಿಯ ದ್ಯಾವಣ್ಣ ನಾಯಕನು ಮಾತಿಗೆ ಸಿಕ್ಕಿದಾಗ, ಈ ರೀತಿ ನೀರಿ ನಿಂದ ಬಹುದೂರದಲ್ಲಿ, ಅವನ ಮನೆಯ ಹಿಂಭಾಗದ ಹಕ್ಕಲಿನಲ್ಲೂ ಪುಟ್ಟ ಆಮೆಗಳಿವೆ ಗೊತ್ತಾ ಎಂದು ಅಚ್ಚರಿಯಿಂದ ಕೇಳಿದೆ. ಸದಾ ಕಾಡು, ಹಾಡಿ, ಹಕ್ಕಲು, ಗುಡ್ಡಗಳಲ್ಲಿ ಓಡಾಡುವ ಅವನಿಗೆ ಅದೊಂದು ಹೊಸ ವಿಚಾರವೇ ಆಗಿರಲಿಲ್ಲ. “ಓ ಅದಾ, ಅದೂ ಒಂದು ನಮೂನಿ ವಾಂಟರ್ಕ ಮಾರಾಯ್ರೆ. ಸುಟ್ಟು ತಿಂದರೆ ಬಹಳ ರುಚಿ" ಎಂದು ನಕ್ಕ! ಅವನ ಮಾನದಂಡದಲ್ಲಿ ಯಾವ ಆಮೆ ಹೆಚ್ಚು ರುಚಿ ಎಂಬುದೇ ಪ್ರಮುಖ ಸ್ಥಾನ ಪಡೆದಿತ್ತು.