ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gururaj Gantihole Column: ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಘೋಷ್‌ ಶಂಖನಾದ

ಸಮಸ್ತ ಮಾನವಜಾತಿಯ ಕಲ್ಯಾಣದ ಉದ್ದೇಶವನ್ನಿಟ್ಟುಕೊಂಡು ಸ್ಥಾಪಿತವಾದ ಸನಾತನ ಸಂಸ್ಥೆಯ ರಜತ ಮಹೋತ್ಸವದ ಪ್ರಯುಕ್ತ ಮೇ 17ರಿಂದ 19ರವರೆಗೆ ಐಐಟಿ ಗೋವಾ ಕ್ಯಾಂಪಸ್ ನಲ್ಲಿ ನಡೆದ ‘ಸನಾತನ ರಾಷ್ಟ್ರ ಶಂಖನಾದ’ ಎಂಬ ಕಾರ್ಯಕ್ರಮವನ್ನು ಡಾ.ಜಯಂತ ಬಾಳಾಜಿ ಅಠವಲೆಯವರ 83ನೇ ಜನ್ಮದಿನೋತ್ಸವದ ಸಂದರ್ಭದಲ್ಲಿ ಆಯೋಜಿಸಲಾಗಿತ್ತು.

ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಘೋಷ್‌ ಶಂಖನಾದ

ಗಂಟಾಘೋಷ

ಜಗತ್ತಿನ ಯಾವುದೇ ಮೂಲೆಯಲ್ಲಿ ಇರುವ, ಹಿಂದೂ ದಂಪತಿಗಳಿಗೆ ಹುಟ್ಟುವ ಮಗು, ಜನನವಾದ ಕೂಡಲೇ ಭಾರತ ದೇಶದ ನಾಗರಿಕನಾಗುತ್ತಾನೆ, ಹಿಂದೂ ಎಂದು ಪರಿಗಣಿಸಲ್ಪಡುತ್ತಾನೆ ಎಂಬ ಕಾನೂನು ತರಬೇಕು ಎನ್ನುತ್ತಾರೆ ಘೋಷ್! ಬಾಂಗ್ಲಾ ಹಿಂದೂಗಳ ರಕ್ಷಣೆಗೆ ಘೋಷ್ ಶಂಖನಾದ ಪ್ರಪಂಚದ ಯಾವುದೇ ದೇಶದಲ್ಲಿ ಸಿಗದಷ್ಟು ಗೌರವ, ಸರಕಾರದ ಸೌಲಭ್ಯಗಳು ಭಾರತದಲ್ಲಿನ ಅಲ್ಪಸಂಖ್ಯಾತರಿಗೆ ಸಿಗುತ್ತಿರುವುದನ್ನು ನಾವು ಗಮನಿಸಿದರೆ, ಅಕ್ಷರಶಃ ಇಲ್ಲಿನ ಅಲ್ಪಸಂಖ್ಯಾತರು ಸ್ವರ್ಗದಲ್ಲಿ ಜೀವಿಸುತ್ತಿದ್ದಾರೆಂದೇ ಹೇಳಬಹುದು ಎಂದು ಬಾಂಗ್ಲಾದೇಶದ ಸರ್ವೋಚ್ಚ ನ್ಯಾಯಾ ಲಯದ ಪ್ರಮುಖ ವಕೀಲರಾಗಿರುವ ಶ್ರೀ ರವೀಂದ್ರ ಘೋಷ್ ಆಡಿದ ಮಾತು ನನ್ನನ್ನು ಬೆರಗು ಗೊಳಿಸಿತು.

ಸಮಸ್ತ ಮಾನವಜಾತಿಯ ಕಲ್ಯಾಣದ ಉದ್ದೇಶವನ್ನಿಟ್ಟುಕೊಂಡು ಸ್ಥಾಪಿತವಾದ ಸನಾತನ ಸಂಸ್ಥೆಯ ರಜತ ಮಹೋತ್ಸವದ ಪ್ರಯುಕ್ತ ಮೇ 17ರಿಂದ 19ರವರೆಗೆ ಐಐಟಿ ಗೋವಾ ಕ್ಯಾಂಪಸ್ ನಲ್ಲಿ ನಡೆದ ‘ಸನಾತನ ರಾಷ್ಟ್ರ ಶಂಖನಾದ’ ಎಂಬ ಕಾರ್ಯಕ್ರಮವನ್ನು ಡಾ.ಜಯಂತ ಬಾಳಾಜಿ ಅಠವಲೆಯವರ 83ನೇ ಜನ್ಮದಿನೋತ್ಸವದ ಸಂದರ್ಭದಲ್ಲಿ ಆಯೋಜಿಸಲಾಗಿತ್ತು.

ಜಗತ್ತಿನಾದ್ಯಂತ 23 ರಾಷ್ಟ್ರಗಳಿಂದ ವಿಶೇಷ ಪ್ರತಿನಿಧಿಗಳು ಇದರಲ್ಲಿ ಭಾಗಿಯಾಗಿದ್ದರು. ಅಲ್ಲಿ ದೇಶದೆಲ್ಲೆಡೆಯಿಂದ ಬಂದ ಅನೇಕ ಸಾಧು-ಸಂತರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಮತ್ತು ರಾಜ್ಯ ಸರಕಾರಗಳ ಅನೇಕ ಸಚಿವರು, ಉದ್ಯಮಿಗಳು, ಪತ್ರಿಕಾ ಸಂಪಾದಕರು, ನ್ಯಾಯವಾದಿ ಗಳು, ವಿಚಾರವಂತರು ಸೇರಿದಂತೆ 20 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜನ ಸಾಗರ ನೆರೆದಿತ್ತು. ರಾಷ್ಟ್ರೀಯ ಐಕ್ಯತೆ, ರಾಷ್ಟ್ರರಕ್ಷಣೆ, ಧರ್ಮರಕ್ಷಣೆ ಸೇರಿದಂತೆ ಹಲವು ವಿಚಾರಗಳ ಚಿಂತನ-ಮಂಥನ ನಡೆಯಿತು. ಯೋಗ-ಆಧ್ಯಾತ್ಮ, ಸಂಸ್ಕೃತಿ ಆಚರಣೆ ಸೇರಿದಂತೆ ಚರ್ಚೆಗಳು ನಡೆದವು. ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಿಂದ ಹಿಂದೂ ಧರ್ಮದ ಪ್ರತಿನಿಧಿಯಾಗಿ ಕೆಲವರು ಭಾಗವಹಿಸಿ, ತಮಗಾಗುತ್ತಿರುವ ದೌರ್ಜನ್ಯದ ಕುರಿತು ಇದೇ ವಿಚಾರ ಸಂಕಿರಣದಲ್ಲಿ ತಮ್ಮ ನೋವು ಗಳನ್ನು ಹಂಚಿಕೊಂಡರು.

ಇದನ್ನೂ ಓದಿ: Gururaj Gantihole Column: ಬೆಳ್ಳಿಹಬ್ಬದ ಸಾರ್ಥಕತೆ ಕಂಡ ಸರಕಾರಿ ಶಿಕ್ಷಣ ಯೋಜನೆ !

ಅದರಂತೆ, ಪಕ್ಕದ ಬಾಂಗ್ಲಾದೇಶದಿಂದ ಶ್ರೀಯುತ. ರವೀಂದ್ರ ಘೋಷ್ ಅವರೂ ಬಂದು ಭಾಗವಹಿಸಿದ್ದರು. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳು ಎದುರಿಸುತ್ತಿರುವ ಭೀಕರ ಹತ್ಯಾಕಾಂಡಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಕಾರ್ಯಕ್ರಮದ ಬಳಿಕ, ನಮ್ಮೊಂದಿಗೆ ನೇರ ಮಾತಿಗಿಳಿದ ಬಾಂಗ್ಲಾದೇಶದ ಸುಪ್ರೀಂಕೋರ್ಟಿನ ಖ್ಯಾತ ವಕೀಲರೂ, ಮಾನವಹಕ್ಕುಗಳ ಕಾರ್ಯಕರ್ತ ಮತ್ತು Human rights Congress for Bangladesh Minorities (HRCBM) ಢಾಕಾ ಅಧ್ಯಕ್ಷರಾಗಿರುವ ಶ್ರೀ ರವೀಂದ್ರ ಘೋಷ್ ಅವರು, ಪ್ರಸ್ತುತ ಬಾಂಗ್ಲಾ ಹಿಂದುಗಳ ಅಸಹಾಯಕ ಸ್ಥಿತಿಯನ್ನು ವಿವರಿಸುತ್ತ, ಭಾರತದಿಂದ ಮತ್ತು ಪ್ರಪಂಚದ ವೇದಿಕೆಯಿಂದ ಇದಕ್ಕೆ ಬೆಂಬಲ ಮತ್ತು ಪರಿಹಾರೋಪಾಯಗಳನ್ನು ಯಾಚಿಸಲು ಯತ್ನಿಸುತ್ತಿರುವ ವಿಚಾರಗಳನ್ನು ಹಂಚಿಕೊಂಡರು.

ಮುಂದುವರೆದು, ಅಲ್ಲಿನ ಸಮಸ್ಯೆಗಳನ್ನು ಹೇಳುತ್ತ ಹೋದ ರವೀಂದ್ರ ಘೋಷರ ಮಾತುಗಳನ್ನೇ ಇಲ್ಲಿ ಹೇಳುವುದಾದರೆ, ‘ಬಾಂಗ್ಲಾದೇಶ ವಿಮೋಚನೆಗೊಂಡಾಗಿನಿಂದ ಹಿಂದೂಗಳನ್ನು ವ್ಯವಸ್ಥಿತ ವಾಗಿ ಹತ್ತಿಕ್ಕುವ ಪ್ರಯತ್ನವಾಗುತ್ತಿದ್ದು, ಅಪ್ರಾಪ್ತರನ್ನು ಹೊತ್ತೊಯ್ದು ಅತ್ಯಾಚಾರವೆಸಗಿ, ಕೊಲೆ ಮಾಡಿ ಬಹಿರಂಗವಾಗಿ ದೇಹಗಳನ್ನು ಬಿಸಾಡುವ ಮೂಲಕ, ಹಿಂದೂ ಧರ್ಮಿಯರಲ್ಲಿ ಭಯ ಉಂಟುಮಾಡಲಾಗುತ್ತಿದೆ.

ಇದರಿಂದ ಕೆಲವರು ಹುಟ್ಟಿದ ಊರು ತೊರೆದು ಪಲಾಯನ ಮಾಡುತ್ತಿದ್ದರೆ, ಇನ್ನು ಕೆಲವರ ಮನೆ-ಜಮೀನುಗಳನ್ನು ಬಲವಂತವಾಗಿ ಕಿತ್ತುಕೊಂಡು, ಸಮಾಜದಲ್ಲಿ ಅವಮಾನಕರವಾಗಿ ನಡೆಸಿ ಕೊಂಡು, ತಾವಾಗಿಯೇ ಊರು ತೊರೆಯುವಂತೆ ಮಾಡಲಾಗುತ್ತಿದೆ. ಕೆಲವೆಡೆ, ಬಲವಂತದ ಮತಾಂತರದ ಮೂಲಕ ಶೋಷಿಸಲಾಗುತ್ತಿದೆ’. ಪಾಕಿಸ್ತಾನದೊಂದಿಗಿನ ರಕ್ತಸಿಕ್ತ ವಿಮೋಚನೆಯ ಯುದ್ಧದಿಂದ 1971ರಲ್ಲಿ ಹುಟ್ಟಿದ ಬಾಂಗ್ಲಾದೇಶವು ಜಾತ್ಯತೀತ, ಪ್ರಜಾಪ್ರಭುತ್ವ ರಾಷ್ಟ್ರವಾಗಿ ಸ್ಥಾಪನೆಯಾಯಿತು.

ದುರದೃಷ್ಟವಶಾತ್, ಜಾತ್ಯತೀತತೆಯ ಶತ್ರುಗಳು ತಮ್ಮ ಪ್ರಭಾವವನ್ನು ಬೀರುವ ಮೂಲಕ, ಬಾಂಗ್ಲಾದೇಶವನ್ನು ಅದರ ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ಹಾದಿಯಿಂದ ತೆಗೆದುಹಾಕಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ.

ಅಧ್ಯಕ್ಷ ಜನರಲ್ ಜಿಯಾ ಅವರ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) 1977ರಲ್ಲಿ ಜಾತ್ಯತೀತ ತತ್ವವನ್ನು ತ್ಯಜಿಸಿತು. ಜನರಲ್ ಜಿಯಾ ಅವರ ಮರಣದ ನಂತರ, ಜನರಲ್ ಇರ್ಷಾದ್ 1988ರಲ್ಲಿ ಇಸ್ಲಾಂ ಅನ್ನು ರಾಜ್ಯಧರ್ಮವನ್ನಾಗಿ ಮಾಡಿದಾಗ ಜಾತ್ಯತೀತ ಸಂಪೂರ್ಣವಾಗಿ ಸತ್ತುಹೋಯಿತೆಂದೇ ಹೇಳಬಹುದು. ಬಾಂಗ್ಲಾದೇಶದ ರಾಜಕೀಯ ಮತ್ತು ಸಾಮಾಜಿಕ ವಾತಾ ವರಣವು ನಾಟಕೀಯವಾಗಿ ಬದಲಾಯಿತು.

ಜಾತ್ಯತೀತತೆ, ರಾಜ್ಯ ಮತ್ತು ಧರ್ಮದ ಪ್ರತ್ಯೇಕತೆಯನ್ನು ತಾರತಮ್ಯ ಮತ್ತು ಧಾರ್ಮಿಕ ಅಸಹಿಷ್ಣು ತೆಯ ಮೂಲಕ ಮೂಲಭೂತ ರಾಷ್ಟ್ರವನ್ನಾಗಿ ಬದಲಾಯಿಸಲಾಯಿತು. 1988ರಿಂದ ಹಿಂದೂ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರವು ಆತಂಕಕಾರಿ ಪ್ರಮಾಣದಲ್ಲಿ ತೀವ್ರಗೊಂಡಿದೆ.

1992ರಲ್ಲಿ ಬೇಗಂ ಖಲೀದಾ ಜಿಯಾ ಅವರ ಬಿಎನ್‌ಪಿ ಪಕ್ಷ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ಬಾಂಗ್ಲಾದೇಶದ ಹಿಂದೂಗಳು ಮಾನವ ಹಕ್ಕುಗಳ ಉಲ್ಲಂಘನೆಯು ಉತ್ತುಂಗವನ್ನು ಕಾಣಬೇಕಾ ಯಿತು. 92ರ ದಶಕದಲ್ಲಿ, ಅಸಂಖ್ಯಾತ ಹಿಂದೂ ಕೊಲ್ಲಲ್ಪಟ್ಟರು. 2000ಕ್ಕೂ ಹೆಚ್ಚು ಹಿಂದೂ ಯುವತಿಯರು ಅತ್ಯಾಚಾರಕ್ಕೊಳಗಾದರು. 10000ಕ್ಕೂ ಹೆಚ್ಚು ಜನರು ಗಾಯಗೊಂಡರು. ಇದರೊಟ್ಟಿಗೆ, 2 ಲಕ್ಷದಷ್ಟು ಹಿಂದುಗಳು ನಿರಾಶ್ರಿತರಾದರು.

ಸುಮಾರು 3600ಕ್ಕೂ ಅಧಿಕ ದೇವಾಲಯಗಳನ್ನು ಧ್ವಂಸಗೊಳಿಸಲಾಯಿತು, 40000 ಮನೆಗಳನ್ನು ಹಾಡಹಗಲೇ ನಾಶಪಡಿಸಲಾಯಿತು. ಕೆಲವನ್ನು ಸುಡಲಾಯಿತು. ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಮತ್ತು ಜಮಾತೆ ಇಸ್ಲಾಂ ನೇತೃತ್ವದ ಪ್ರಧಾನಮಂತ್ರಿ ಖಲೀದಾ ಜಿಯಾ ಸಮ್ಮಿಶ್ರ ಸರ್ಕಾರ, 2001ರಲ್ಲಿ ಅಧಿಕಾರಕ್ಕೆ ಬಂದ ಬಳಿಕ, ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತರುಗಳಾದ ಹಿಂದೂಗಳು, ಬೌದ್ಧರು, ಕ್ರಿಶ್ಚಿಯನ್ನರು ಮತ್ತು ಬುಡಕಟ್ಟು ಜನರ ವಿರುದ್ಧ ಹೆಚ್ಚಿದ ಕ್ರೌರ್ಯ ಮತ್ತು ಹಿಂಸಾ ಚಾರವು ಹೊಸ ಕಟ್ಟರ್ ಅಲೆಯನ್ನು ಹುಟ್ಟು ಹಾಕಿತು.

2001ರ ನವೆಂಬರ್ 16 ರಂದು ಪ್ರೊಫೆಸರ್ ಗೋಪಾಲ್ ಕೃಷ್ಣ ಮುಹುರಿ (ಪ್ರಾಂಶುಪಾಲರು, ನಜೀರಹತ್ ಕಾಲೇಜು, ಚಿತ್ತಗಾಂಗ್), 2002ರ ಏಪ್ರಿಲ್‌ನಲ್ಲಿ ಬೌದ್ಧ ಸನ್ಯಾಸಿ, ಶ್ರೀಜ್ಞಾನಜ್ಯೋತಿ ಬರುವಾ ಅವರನ್ನು, 2002ರ ಏಪ್ರಿಲ್ 30ರಂದು ಹಿಂದೂ ಸನ್ಯಾಸಿ ಮದನ್ ಗೋಪಾಲ್ ಅವರನ್ನು ಹತ್ಯೆಗೈಯುವ ಮೂಲಕ ಜಿಹಾದಿಗಳ ಕ್ರೂರಮುಖ ಜಗತ್ತಿಗೆ ಅನಾವರಣಗೊಂಡಿತು.

ಇಂದಿಗೂ, ನಿಲ್ಲದ ಪ್ರಮುಖ ಅಲ್ಪಸಂಖ್ಯಾತ ನಾಯಕರ ಕ್ರೌರ್ಯ ಮತ್ತು ಹತ್ಯೆಗಳು, ಬಾಂಗ್ಲಾದೇಶ ದಲ್ಲಿ ಹೆಚ್ಚುತ್ತಿರುವ ಅಲ್ಪಸಂಖ್ಯಾತರ ಮೇಲಿನ ದಾಳಿಯು ಧಾರ್ಮಿಕ ಹತ್ಯಾಕಾಂಡವಾಗಿ ಬದಲಾ ಗುತ್ತಿವೆ. ಬಾಂಗ್ಲಾದೇಶ ಉದಯವಾದ ಬಳಿಕ 1971ರಲ್ಲಿ ಶೇ.19ರಷ್ಟಿದ್ದ ಹಿಂದೂಗಳ ಸಂಖ್ಯೆ, ಸದ್ಯ ಶೇ.7 ತಲುಪಿರುವುದು ಅಲ್ಲಿನ ಅಲ್ಪಸಂಖ್ಯಾತರ ಮೇಲಾಗುತ್ತಿರುವ ರಾಕ್ಷಸೀ ಕೃತ್ಯಕ್ಕೆ ನೇರ ಸಾಕ್ಷಿ ಯಾಗಿದೆ.

ಇಂತಹ ಅಲ್ಪಸಂಖ್ಯಾತರ ಪರವಾಗಿ, ಗಟ್ಟಿಧ್ವನಿಯಾಗಿ ಹೋರಾಡುತ್ತಿರುವ ನನ್ನ ಮೇಲೆಯೂ ನಿರಂತರವಾಗಿ ದಾಳಿಗಳಾಗುತ್ತಿವೆ. ಹಾಗಿದ್ದರೂ, ಹಿಂದುಗಳ, ಅಬಲೆಯರ ಪರವಾಗಿ ನಿರಂತರ ಹೋರಾಟ ಮುಂದುವರೆಸಿದ್ದೇನೆ. ಜೊತೆಗೆ, ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯ ಗಳ ಗಮನ ಸೆಳೆಯಲು ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ.

ಬಾಂಗ್ಲಾದೇಶದ ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿದ್ದರೂ, ಅದೇ ನ್ಯಾಯಾಲಯದ ಆಡಳಿತ ಪಕ್ಷದೊಂದಿಗೆ ಸಂಯೋಜಿತವಾದ ವಕೀಲರ ಗುಂಪು ವಿಡಿಯೊ ಕ್ಯಾಮೆರಾ ಮತ್ತು ವಿಡಿಯೊ ಟೇಪ್‌ ಗಳನ್ನು ಕಸಿದುಕೊಂಡು ಗಂಭೀರ ದಾಳಿ ನಡೆಸಿತು. ದೇಶದ ಅತ್ಯುನ್ನತ ಸಂಸ್ಥೆಯಾದ ಸುಪ್ರೀಂ ಕೋರ್ಟ್‌ನಲ್ಲಿ ದುಷ್ಕರ್ಮಿಗಳೊಂದಿಗೆ ಆಡಳಿತ ಪಕ್ಷಕ್ಕೆ ಸೇರಿದ ವಕೀಲರ ಗುಂಪೊಂದು ನನ್ನ ಮೇಲೆ ಹಲ್ಲೆ ನಡೆಸಿದ್ದನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ HRCBM ತೀವ್ರವಾಗಿ ಖಂಡಿಸಿತು.

ಬಾಂಗ್ಲಾದೇಶದ ಸತ್ಕಿರಾ ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಸತ್ಯವನ್ನು ಅನಾವರಣಗೊಳಿಸಿದ HRCBM ನ ತನಿಖೆಯು ಡೈಲಿ ಸಂಗ್ಬಾದ್ (ಬಾಂಗ್ಲಾದೇಶದ ಪ್ರಮುಖ ದಿನಪತ್ರಿಕೆ)ನಲ್ಲಿ ಪ್ರಕಟವಾಗಿದ್ದನ್ನು ಸಹಿಸದ ಗುಂಪು ಈ ದಾಳಿ ಮಾಡಿತು. ಇದಾದ ಬಳಿಕ ನಾನು, ದೇಶಗಳ ಪ್ರಮುಖ ಪತ್ರಿಕೆಗಳ ಪತ್ರಕರ್ತರೊಂದಿಗೆ ಸಾಥ್ಕಿರಾಗೆ ಭೇಟಿ ನೀಡಿ, ಸಂತ್ರಸ್ತರು, ಪೊಲೀಸ್ ಅಧಿಕಾರಿಗಳು ಮತ್ತು ದುಷ್ಕರ್ಮಿಗಳ ಹೇಳಿಕೆಗಳನ್ನು ವೀಡಿಯೋ ಟೇಪ್ ಮಾಡಿದ್ದಲ್ಲದೆ, ಸ್ಪಷ್ಟವಾಗಿ ಆಡಳಿತ ಪಕ್ಷ ಮತ್ತು ಅದರ ಮಿತ್ರಪಕ್ಷಗಳ ನಾಯಕರು ಹಿಂದೂಗಳ ವ್ಯವಸ್ಥಿತ ನರಮೇಧದ ಹಿಂದಿರುವ ಕೈಗಳು ಎಂಬುದನ್ನು ಬಹಿರಂಗಗೊಳಿಸಿದ ಬಳಿಕ, ನನ್ನ ಮೇಲೆ ಮಾರಣಾಂತಿಕ ದಾಳಿಗಳೂ ನಡೆದಿವೆ, ಇನ್ನೂ ನನ್ನನ್ನು ಹುಡುಕುತ್ತಲೇ ಇದ್ದಾರೆಂಬುದು ನನ್ನ ಜೀವಕ್ಕೆ ಇರುವ ದೊಡ್ಡ ಬೆದರಿಕೆಯಾಗಿದೆ.

2001ರ ನವೆಂಬರ್ 22ರಂದು ಮತ್ತೊಬ್ಬ ಮಾನವ ಹಕ್ಕುಗಳ ಕಾರ್ಯಕರ್ತ ಶ್ರೀ ಶಹರಿಯಾರ್ ಕಬೀರ್ ಅವರನ್ನು ಬಂಧಿಸಿತಲ್ಲದೆ, ಪೊಲೀಸ್ ವಿಚಾರಣೆಗೊಳಪಡಿಸಿ ಸರ್ಕಾರವು ಅವರ ವಿರುದ್ಧ ಬಾಂಗ್ಲಾ ಸಂವಿಧಾನದ ಅಡಿಯಲ್ಲಿ ಬರುವ ದೇಶದ್ರೋಹದ ಸೆಕ್ಷನ್ 54 ಬಳಸಿದ್ದರಿಂದ ತೀವ್ರ ಚಿತ್ರಹಿಂಸೆಗೆ ಒಳಗಾದರು. ಇದೇ ತಂತ್ರವನ್ನು ಪ್ರಯೋಗಿಸಿ, ದೇಶದ್ರೋಹದ ಆರೋಪ ಹೊರಿಸಿ ನಿಮ್ಮನ್ನು ಮುಗಿಸುತ್ತೇವೆ ಎಂದು ಪೊಲೀಸರು ಹೇಳಿದ್ದನ್ನು ಸ್ವತಃ ರವೀಂದ್ರ ಘೋಷ್ ಅವರು ಬಿಚ್ಚಿಟ್ಟರು.

ಇದನ್ನು ಖಂಡಿಸಿ, HRCBM ನೇರವಾಗಿ ಅಂದಿನ ಪ್ರಧಾನಿಯಾಗಿದ್ದ ಬೇಗಂ ಖಲೀದಾ ಜಿಯಾ (ಗಾನೋ ಭಾಬನ್, ಶೇರ್ -ಇ ಬಾಂಗ್ಲಾ ನಗರ, ಢಾಕಾ) ಮತ್ತು ಅಂದಿನ ಐಜಿಪಿಯಾಗಿದ್ದ ನೂರುಲ್ ಹುದಾ ಅವರಿಗೆ ಪತ್ರ ಬರೆದು ಆಗ್ರಹಿಸಿತು. ಕಳೆದ 2024ರಲ್ಲಿ ಜಿಹಾದಿ ಸಂಘಟನೆ, ವಿದೇಶಿ ಶಂಕಿತರ ಕೈವಾಡದಿಂದ ಸ್ಥಳೀಯ ವಿದ್ಯಾರ್ಥಿ ಒಕ್ಕೂಟ ಆರಂಭಿಸಿದ್ದ ಹಿಂಸಾತ್ಮಕ ಪ್ರತಿಭಟನೆಯು ತಿಂಗಳು ಪೂರ್ತಿ ನಡೆದು ವ್ಯವಸ್ಥಿತ, ದಾಂಧಲೆ, ಕೊಲೆ ಅತ್ಯಾಚಾರಗಳು ನಿರಂತವಾದವು.

ಅಲ್ಪಸಂಖ್ಯಾತ ಹಿಂದೂಗಳು ಭೀಕರವಾಗಿ ಹಿಂಸಿಸಲ್ಪಟ್ಟರು. ಇದೇ ಶಕ್ತಿಗಳು 2024ರ ಆಗಸ್ಟ್ 5ರಂದು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರು ರಾಜೀನಾಮೆ ಕೊಟ್ಟು ದೇಶ ತೊರೆಯುವಂತೆ ಮಾಡುವಲ್ಲಿ ಯಶಸ್ವಿಯಾದವು. ಇದಾದ ಬಳಿಕ, ಪಶ್ಚಿಮ ವಿಚಾರಧಾರೆಗಳ ಪ್ರತಿನಿಧಿಯಂತಿರುವ ಯೂನಸ್ ಎಂಬ ವ್ಯಕ್ತಿಯು, ಕೇರ್‌ಟೇಕರ್ ಆಗಿ ಆಯ್ಕೆಗೊಂಡು, ಬಾಂಗ್ಲಾ ಸರಕಾರವನ್ನು ಹಿಡಿತಕ್ಕೆ ತೆಗೆದುಕೊಂಡರು.

ಇಲ್ಲಿಂದ ಬಹಿರಂಗವಾಗಿಯೇ ಆರಂಭವಾದ ಹಿಂದೂಗಳ ಮೇಳಿನ ನಿರಂತರ ದಾಳಿ, ಶೋಷಣೆಗಳು ಬಹಿರಂಗಗೊಂಡು ಜಿಹಾದಿ ಬಾಂಗ್ಲಾದ ಕ್ರೂರ ಮುಖವನ್ನು ಜಗತ್ತಿಗೆ ಅನಾವರಣಗೊಳಿಸಿತೆನ್ನ ಬಹುದು. ಇಂತಹ ಒಂದು ವಾಸ್ತವವನ್ನು ತೆರೆದಿಡುತ್ತ ಜಾಗತಿಕ ಮಟ್ಟದ ಸಹಾಯಕ್ಕೆ ನಾನು ಮತ್ತೆ ಮತ್ತೆ ಮನವಿ ಮಾಡುತ್ತಿದ್ದೇನೆ ಎನ್ನುತ್ತಾರೆ ರವೀಂದ್ರ ಘೋಷ್.

ಇದೇ ಸಂದರ್ಭದಲ್ಲಿ ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯವನ್ನು ಬಹಿರಂಗವಾಗಿ ಖಂಡಿಸಿದ್ದ ಇಸ್ಕಾನ್ ಪರಿವಾರದ ಸನ್ಯಾಸಿ ಚಿನ್ಮೋಯೀ ಕೃಷ್ಣದಾಸ್ ಅವರನ್ನೂ 2024ರ ನವೆಂಬರ್ ನಲ್ಲಿ ಬಾಂಗ್ಲಾ ಸರಕಾರ ಬಲವಂತವಾಗಿ ಬಂಧಿಸಿದೆ. ಇವರ ಪರವಾಗಿ, ಕಾನೂನು ಹೋರಾಟ ಕೈಗೊಂಡಿದ್ದು ಇದೇ ರವೀಂದ್ರ ಘೋಷ್ ಎಂಬುದು ಹೆಮ್ಮೆಯ ಸಂಗತಿ.

ಚಿನ್ಮೋಯಿ ಅವರ ಬಂಧನವನ್ನು ಖಂಡಿಸಿ, ಭಾರತದ ವಿದೇಶಾಂಗ ಇಲಾಖೆ ತನ್ನ ಪ್ರತಿಭಟನೆ ವ್ಯಕ್ತಪಡಿಸಿತು. ಪ್ರಧಾನಿ ಮೋದಿಯವರು ಸಹ ಬಂಧಿಸಿರುವ ಹಿಂದೂಗಳ ಜೀವರಕ್ಷಣೆಯು ಅಲ್ಲಿನ ಆಡಳಿತದ ಹೊಣೆ ಎಂದು ಎಚ್ಚರಿಸಿದ್ದನ್ನು ನಾವು ಗಮನಿಸಬಹುದು.

ಇಂತಹ ಒಬ್ಬ ದಿಟ್ಟ ಹೋರಾಟಗಾರನಿಗೆ ಭಾರತದಿಂದಲೂ ಬೆಂಬಲ ಬೇಕಾಗಿದೆ. ಹಿಂದೂಗಳ, ಬಾಂಗ್ಲಾ ಅಲ್ಪಸಂಖ್ಯಾತರ ರಕ್ಷಣೆಗಾಗಿ ಜಗತ್ತಿನ ಯಾವುದೇ ಸ್ಥಳದಲ್ಲಿ ಸಮ್ಮೇಳನಗಳು ನಡೆದರೆ, ಅಲ್ಲಿ ಹಾಜರಾಗಿ ಅಲ್ಲಿನ ಜನರ ಬೆಂಬಲ ಕೋರುತ್ತಿದ್ದಾರೆ ಶ್ರೀಯುತ ಘೋಷ್.

ಕಾರ್ಯಕ್ರಮ ಮುಗಿಸಿ, ಹೊರಡುವ ಸಮಯದಲ್ಲಿ ನಮಗನಿಸಿದ್ದು, ಮಕ್ಕಳು-ಮೊಮ್ಮಕ್ಕಳೊಂದಿಗೆ ಇಳಿವಯಸ್ಸಿನಲ್ಲಿ ಆಟವಾಡಿಕೊಂಡು ಇರಬೇಕಿದ್ದ ಹಿರಿಯ ಜೀವವೊಂದು, ಹಿಂದೂ ಧರ್ಮದ ಶೋಷಿತರ ಪರವಾಗಿ ಜೀವವನ್ನೇ ಪಣಕ್ಕಿಟ್ಟು ಹೋರಾಡುತ್ತಿದೆ ಎಂದೆನಿಸಿತು. ಮುಂದಿನ ದಿನ ಗಳಲ್ಲಿ ಅವರಿನ್ನೂ ಬದುಕಿರಬೇಕು. ಈ ಹೋರಾಟದಲ್ಲಿ ಗೆದ್ದು ತೋರಿಸುವಂತಾಗಬೇಕು. ಇವರನ್ನು ಯಾವಕ್ಷಣದಲ್ಲಿ ಏನು ಮಾಡಿಬಿಡ್ತಾರೋ ಎಂಬ ಭಯದ ರವೀಂದ್ರ ಘೋಷ್ ಅವರನ್ನು ಬೀಳ್ಕೊಟ್ಟೆವು.

ಇಂತಹ ಪ್ರಯತ್ನಕ್ಕೆ ಇನ್ನೂ ಹೆಚ್ಚಿನ ಬಲ ಸಿಗಲಿ, ಇವರ ಹೋರಾಟ ರಾಷ್ಟ್ರವ್ಯಾಪಿ ಬೆಂಬಲ ಗಳಿಸುತ್ತ, ಬಾಂಗ್ಲಾದೇಶದ ಹಿಂದೂಗಳ ಸಂಕಷ್ಟ ಶಾಶ್ವತ ಪರಿಹಾರ ಕಾಣುವಂತಾಗಲಿ ಎಂದು ನಾವೆಲ್ಲ ಹಾರೈಸೋಣ. ಜಗತ್ತಿನ ಯಾವುದೇ ಮೂಲೆಯಲ್ಲಿ ಇರುವ, ಹಿಂದೂ ದಂಪತಿಗಳಿಗೆ ಹುಟ್ಟುವ ಮಗು, ಜನನವಾದ ಕೂಡಲೇ ಭಾರತ ದೇಶದ ನಾಗರಿಕನಾಗುತ್ತಾನೆ, ಹಿಂದೂ ಎಂದು ಪರಿಗಣಿಸಲ್ಪಡುತ್ತಾನೆ ಎಂಬ ಕಾನೂನು ತರಬೇಕು. ಇದು ಇಂದಿನ ಗೃಹಮಂತ್ರಿ ಅಮಿತ್ ಶಾ ಅಂಥವರಿಂದ ಮಾತ್ರ ಸಾಧ್ಯ ಎಂದು ಅವರು ಹೇಳಿದ್ದು, ನನ್ನ ಕಿವಿಯಲ್ಲಿ ಇನ್ನೂ ರಿಂಗಣಿಸುತ್ತಿದೆ. ನಿಜವಲ್ಲವೇ!?