ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mohan Vishwa Column: ಭಾರತ ಜಪಾನ್‌ ಮೀರಿಸಿದರೆ ಎಡಚರರಿಗೆ ಉರಿ

ಕರೊನಾದಂತಹ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಿ ಕಳೆದ ಹತ್ತು ವರ್ಷದಲ್ಲಿ ಭಾರತದ ಆರ್ಥಿಕತೆ ನಾಲ್ಕನೇ ಸ್ಥಾನಕ್ಕೆ ತಲುಪಿರುವುದು, ಎಡಚರರ ಬುಡಕ್ಕೆ ಬೆಂಕಿ ಇಟ್ಟಂತಾಗಿದೆ. 2014 ರಲ್ಲಿ ಭಾರತದ ತಲಾದಾಯ ಅಂದಾಜು 1100 ಅಮೆರಿಕನ್ ಡಾಲರ್ ನಷ್ಟಿತ್ತು. 2025ರಲ್ಲಿ ತಲಾ ದಾಯ 2800 ಅಮೆರಿಕನ್ ಡಾಲರ್ ನಷ್ಟಿದೆ. ಮೋದಿ ಅವಧಿಯ ತಲಾದಾಯದ ಬಗ್ಗೆ ಮಾತ ನಾಡುವ ಕಾಂಗ್ರೆಸ್ ಮತ್ತು ಎಡಚರ ಪಟಾಲಂ, 1991ರಲ್ಲಿ ಭಾರತದ ತಲಾದಾಯ ಕೇವಲ 300 ಅಮೆರಿಕನ್ ಡಾಲರ್‌ ನಷ್ಟಿದ್ದ ಬಗ್ಗೆ ಮಾತನಾಡುವುದಿಲ್ಲ.

ಭಾರತ ಜಪಾನ್‌ ಮೀರಿಸಿದರೆ ಎಡಚರರಿಗೆ ಉರಿ

ಮೋಹನ್‌ ವಿಶ್ವ ಮೋಹನ್‌ ವಿಶ್ವ May 31, 2025 6:37 AM

ವೀಕೆಂಡ್‌ ವಿತ್‌ ಮೋಹನ್‌

camohanbn@gmail.com

ಒಂದು ಕಾಲದಲ್ಲಿ ಅಭಿವೃದ್ಧಿ ಎಂದರೆ ‘ಜಪಾನ್’ ದೇಶದ ಹೆಸರು ಚರ್ಚೆಗೆ ಬರುತ್ತಿತ್ತು. ಜಗತ್ತಿನ ದೊಡ್ಡ ಆರ್ಥಿಕ ಶಕ್ತಿ,ಬುಲೆಟ್ ರೈಲು, ಶಿಸ್ತು, ಇಲೆಕ್ಟ್ರಾನಿಕ್ ಉಪಕರಣಗಳ ಉತ್ಪಾದನೆ. ಅಭಿವೃದ್ದಿ ಯೆಂದರೆ ಜಪಾನ್ ದೇಶದ ಮಾದರಿಯಂತಿರಬೇಕೆಂಬ ಮಾತುಗಳು ಸರ್ವೇ ಸಾಮಾನ್ಯವಾಗಿತ್ತು. ಶಾಲೆಗಳಲ್ಲಿ ಶಿಕ್ಷಕರು ಜಪಾನ್ ದೇಶದ ಉದಾಹರಣೆ ನೀಡಿ ಪಾಠ ಮಾಡುತ್ತಿದ್ದರು. ಕಾರ್ಖಾನೆಗಳಲ್ಲಿ ಜಪಾನ್ ದೇಶದ ಕೆಲಸಗಾರರ ಉದಾಹರಣೆ ನೀಡಿ ಕೆಲಸ ಮಾಡಿಸಲಾಗುತ್ತಿತ್ತು. ಜಪಾನ್ ದೇಶದಿಂದ ಆಮದು ಮಾಡಿಕೊಳ್ಳುವ ವಸ್ತುಗಳಿಗೆ ಎಲ್ಲಿಲ್ಲದ ಬೇಡಿಕೆ ಇತ್ತು. ಎರಡನೇ ಮಹಾಯುದ್ಧದಲ್ಲಿ ಅಮೆರಿಕ ನಡೆಸಿದ ಅಣುಬಾಂಬ್ ದಾಳಿಗೆ ಸರ್ವನಾಶವಾಗಿದ್ದ ಜಪಾನ್ ದೇಶದ ಆರ್ಥಿಕತೆ ಕೆಲವೇ ದಶಕಗಳಲ್ಲಿ ಜಗತ್ತು ತನ್ನೆಡೆಗೆ ನೋಡುವಂತೆ ಅಭಿವೃದ್ಧಿಯನ್ನು ಕಂಡಿತ್ತು.

ಜಪಾನ್ ದೇಶದ ಜನರ ಸತತ ಪರಿಶ್ರಮದ ಫಲ ದೊಡ್ಡಣ್ಣ ಅಮೆರಿಕಾದ ತಂತ್ರಜ್ಞಾನದೊಂದಿಗೆ ಸ್ಪರ್ಧೆಗೆ ಇಳಿಯುವ ಮಟ್ಟಕ್ಕೆ ಬೆಳೆಯುವಂತೆ ಮಾಡಿತ್ತು. 2014ರಲ್ಲಿ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗುವ ಸಮಯದಲ್ಲಿ ಭಾರತ ಜಗತ್ತಿನ ಆರ್ಥಿಕತೆಯಲ್ಲಿ 10ನೇ ಸ್ಥಾನದಲ್ಲಿತ್ತು, ಭಾರತ ಹೆಚ್ಚಾಗಿ ವಿದೇಶಿ ವಸ್ತುಗಳ ಆಮದಿನ ಮೇಲೆ ಅವಲಂಬಿತವಾಗಿತ್ತು.

ಭಾರತದಲ್ಲಿ ಬಳಸುತ್ತಿದ್ದಂತಹ ಮೊಬೈಲ್ ಫೋನುಗಳು ಹೆಚ್ಚಾಗಿ ವಿದೇಶದಿಂದ ಆಮದಾಗು ತ್ತಿದ್ದವು. ಒಂದು ಜಿ.ಬಿ ಇಂಟರ್ ನೆಟ್ ಬೆಲೆ 300 ರು. ಇತ್ತು. ಕಾರುಗಳನ್ನು ಆಮದು ಮಾಡಿ ಕೊಳ್ಳಲಾಗುತ್ತಿತ್ತು. ಬೆಂಗಳೂರು ಮೈಸೂರಿನ ನಡುವೆ ಪ್ರಯಾಣ ಮಾಡಲು ನಾಲ್ಕು ಗಂಟೆ ಸಮಯ ಬೇಕಿತ್ತು. ಭಾರತೀಯ ರೈಲ್ವೆಯಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿತ್ತು.

ಇದನ್ನೂ ಓದಿ: Mohan Vishwa Column: ಪಾಕ್‌ನ ಆದಾಯ ಮೂಲ: ಉಗ್ರರ ಫೋಷಣೆ

ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುತ್ತಿರಲಿಲ್ಲ. ಭಾರತದ ಆರ್ಥಿಕತೆಯನ್ನು ಜಗತ್ತಿನ ದುರ್ಬಲ ಆರ್ಥಿಕತೆ ಎಂದು ಕರೆಯಲಾಗುತ್ತಿತ್ತು. 2004 ರಿಂದ 2014 ರ ನಡುವೆ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ 56 ಪುಟಗಳ ‘ಬಯೋ ಡೇಟಾ’ಹೊಂದಿದ್ದ ಮನಮೋಹನ್ ಸಿಂಗ್ ಅವಧಿಯಲ್ಲಿ
ಹಗರಣಗಳ ಸರಮಾಲೆಗಳು ನಡೆದವು. ಭಾರತದಲ್ಲಿ ಹೂಡಿಕೆ ಮಾಡಲು ವಿದೇಶಿ ಬಂಡವಾಳಶಾಹಿ ಗಳು ಆಸಕ್ತಿಯನ್ನು ತೋರುತ್ತಿರಲಿಲ್ಲ, ಬಂಡವಾಳ ಹೂಡಲು ಬೇಕಿದ್ದಂತಹ ಉತ್ತಮ ವಾತಾವರಣವನ್ನು ಸೃಷ್ಟಿಸುವಲ್ಲಿ ಕಾಂಗ್ರೆಸ್ ವಿಫಲವಾಗಿತ್ತು.

2025 ರಲ್ಲಿ ಭಾರತ, ಜಪಾನ್ ದೇಶವನ್ನು ಹಿಂದಿಕ್ಕಿ ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿ ಯಾಗಿ ಹೊರಹೊಮ್ಮಿದೆ. ಭಾರತದ ಆರ್ಥಿಕತೆ ನಾಲ್ಕು ಟ್ರಿಲಿಯನ್ ಅಮೆರಿಕನ್ ಡಾಲರ್ ದಾಟಿದೆ. ಕಳೆದ ಹತ್ತು ವರ್ಷಗಳಲ್ಲಿ ಬ್ರೆಜಿಲ್, ಬ್ರಿಟನ್, ಫ್ರಾನ್ಸ್, ಜಪಾನ್ ದೇಶಗಳನ್ನು ಹಿಂದಿ ಕ್ಕುವಲ್ಲಿ ಭಾರತ ಯಶಸ್ವಿಯಾಗಿದೆ.

ನೋಟು ಅಮಾನ್ಯೀಕರಣ, ಜಿ.ಎಸ್‌ಟಿ, ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ ರೀತಿಯ ಉಪಕ್ರಮಗಳ ಮೂಲಕ ಭಾರತದ ‘ಜಿ.ಡಿ.ಪಿ’ಯಲ್ಲಿ ಪಾರದರ್ಶಕತೆ ಎದ್ದು ಕಾಣುತ್ತದೆ. 2025ರಲ್ಲಿ ಒಂದು ಜಿ.ಬಿ. ಇಂಟೆರ್ ನೆಟ್ ಬೆಲೆ ಕೇವಲ ಹತ್ತು ರೂಪಾಯಿಗೆ ಇಳಿದಿದೆ. ಭಾರತದೊಳಗೆ 2 ಲಕ್ಷ ಕೋಟಿಗೂ ಅಧಿಕ ಮೌಲ್ಯದ ಮೊಬೈಲ್ ಉತ್ಪಾದನೆಯಾಗುತ್ತಿದೆ.

6 R

ಆಪಲ್ ಮೊಬೈಲ್ ಗಳನ್ನು ಕರ್ನಾಟಕದಲ್ಲಿ ಉತ್ಪಾದಿಸಲಾಗುತ್ತಿದೆ. ಸ್ಯಾಮ್ ಸಂಗ್ ಉತ್ತರ ಪ್ರದೇಶದಲ್ಲಿ ತನ್ನ ದೊಡ್ಡ ಉತ್ಪಾದನಾ ಘಟಕವನ್ನು ಸ್ಥಾಪಿಸಿದೆ. ರೇಂಜ್ ರೋವರ್, ಜಾಗ್ವಾರ್ ಕಾರುಗಳು ಭಾರತದಲ್ಲಿ ಮಾರಾಟವಾಗುತ್ತಿವೆ. ಹುಂಡಾಯ್ ಕಂಪೆನಿ ಆಂಧ್ರಪ್ರದೇಶದ ‌ ಪೆನು ಕೊಂಡದ ಸಮೀಪ ದೊಡ್ಡ ಉತ್ಪಾದನಾ ಘಟಕವನ್ನು ಹೊಂದಿದೆ.

ಗುಜರಾತಿನಲ್ಲಿ ಟಾಟಾ ಸಂಸ್ಥೆಯ ಕಾರುಗಳು ಉತ್ಪಾದನೆಯಾಗುತ್ತಿವೆ. ಮುಂಬೈ ಷೇರು ಮಾರುಕಟ್ಟೆ 85000 ಸೂಚ್ಯಂಕ ಕ್ಕೆ ತಲುಪಿದೆ. ಮೈಕ್ರೋಸಾಫ್ಟ್ ಹೈದರಾ‌ಬಾದಿನಲ್ಲಿ ಅತೀದೊಡ್ಡ ಸಂಶೋಧನಾ ಘಟಕವನ್ನು ನಿರ್ಮಿಸಿದೆ. ಗೂಗಲ್ ಸಂಸ್ಥೆ ಹೈದರಾಬಾದಿನಲ್ಲಿ ತನ್ನ ಎರಡನೇ ಅತೀ ದೊಡ್ಡ ಕ್ಯಾಂಪಸ್ ನಿರ್ಮಿಸುತ್ತಿದೆ. ಬಡ ಮಧ್ಯಮ ವರ್ಗದವರು ಹೆಚ್ಚಾಗಿ ಬಳಸುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉತ್ಪಾದನೆ ಭಾರತದ ಒಳಗೆ ಆಗುತ್ತಿದೆ.

ಆಪರೇಷನ್ ಸಿಂಧೂರ ಮೂಲಕ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ನಿರ್ಮಾಣವಾಗಿರುವ ಬ್ರಹ್ಮೋಸ್, ಆಕಾಶ್ ಡಿ-4 ಕ್ಷಿಪಣಿಗಳು ಜಗತ್ತಿಗೆ ಪರಿಚಯವಾಗಿವೆ. ಜಗತ್ತಿನ ದೊಡ್ಡ ದೇಶಗಳು ಭಾರತದಲ್ಲಿ ನಿರ್ಮಾಣವಾದ ಡಿಫೆನ್ಸ್ ಉಪಕರಣಗಳ ಖರೀದಿಗೆ ಮುಂದಾಗಿವೆ. ಬೋಯಿಂಗ್ ಮತ್ತು ಏರ್ ಬಸ್ ಸಂಸ್ಥೆಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಕಂಪೆನಿಗಳ ಹೆಸರನ್ನು ಭಾರತದಲ್ಲಿ ಕೇಳುತ್ತೇವೆಂದು ಯಾರೂ ಸಹ ಊಹಿಸಿರಲಿಲ್ಲ.

ಭಾರತದ ‘ಜಿ.ಡಿ.ಪಿ’ ಜಪಾನ್ ದೇಶದ ಜಿ.ಡಿ.ಪಿ ಯನ್ನು ಹಿಂದಿಕ್ಕಿದಾಗ, ಕೊಂಕು ಹುಡುಕುವ ಎಡಚರ ಪಟಾಲಂ ತಮ್ಮ ಕಣ್ಣ ಮುಂದೆ ಇಷ್ಟೆ ಉದಾಹರಣೆಗಳಿದ್ದರೂ ಸಹ ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗದ ರೀತಿ ನಡೆದುಕೊಳ್ಳುತ್ತಾರೆ. ಜಗತ್ತಿನಲ್ಲಿ ಸತ್ತು ಹೋಗಿರುವ ಕಮ್ಯುನಿಸ್ಟ್ ಸಿದ್ದಾಂತವನ್ನು ಮುನ್ನೆಲೆಗೆ ತಂದು ಹಳೆಯ ಪುಂಗಿಯನ್ನು ಇಂದಿಗೂ ಊದುತ್ತಿರುತ್ತಾರೆ.

ವ್ಯವಹಾರದಲ್ಲಿ 10 ರೂಪಾಯಿಯನ್ನು 20 ರೂಪಾಯಿ ಮಾಡುವುದು ಸುಲಭ. 100 ರೂಪಾಯಿ ಯನ್ನು 200 ಮಾಡುವುದು ತುಸು ಕಷ್ಟ, 1000 ರೂಪಾಯಿಯನ್ನು 2000 ರೂಪಾಯಿ ಮಾಡುವುದು ಕಷ್ಟ. ದೇಶಗಳ ಆರ್ಥಿಕ ಬೆಳವಣಿಗೆ ವಿಚಾರದಲ್ಲಿಯೂ ಈ ನಿಯಮ ಚಾಚೂ ತಪ್ಪದೆ ಅನ್ವಯ ವಾಗುತ್ತದೆ. ಭಾರತ ಈಗ ತಲುಪಿರುವ ನಾಲ್ಕು ಟ್ರಿಲಿಯನ್ ಆರ್ಥಿಕತೆಯನ್ನು ಎಂಟು ಟ್ರಿಲಿಯನ್ ಮಾಡಲು ಸ್ವಲ್ಪ ಸಮಯ ಬೇಕು.

ಮನಮೋಹನ್ ಸಿಂಗ್ ಅವಧಿಯಲ್ಲಿ ಕರೋನ ಇರಲಿಲ್ಲ. ರಷ್ಯಾ ಉಕ್ರೇನ್ ಯುದ್ಧ ಇರಲಿಲ್ಲ. ಆದರೂ ಸಹ ಭಾರತದ ಆರ್ಥಿಕತೆ 10ನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಮಾತೆತ್ತಿದ್ದರೆ 1991ರ ಆರ್ಥಿಕ ಬಿಕ್ಕಟ್ಟನ್ನು ಸರಿಪಡಿಸಿದ್ದು ಕಾಂಗ್ರೆಸ್ ಪಕ್ಷದ ಮನಮೋಹನ್ ಸಿಂಗ್ ಎಂದು ಹೇಳುವವರು, 1947 ರಿಂದ 1991ರ ವರೆಗಿನ 40 ವರ್ಷಗಳಲ್ಲಿ ಆರ್ಥಿಕ ಬಿಕ್ಕಟ್ಟನ್ನು ಸೃಷ್ಟಿ ಮಾಡಿದ್ದು ಕಾಂಗ್ರೆಸ್ ಪಕ್ಷ ವೆಂದು ಹೇಳುವುದಿಲ್ಲ.

ದೇಶದ ಜೊತೆಗೆ ರಾಜ್ಯಗಳಿಗೂ ಸರಿಯಾದ ಸೂಚನೆಗಳಿಲ್ಲದೆ ಹಲವು ರಾಜ್ಯಗಳೂ ಸಹ ದೂರ ದೃಷ್ಟಿಯ ಅಭಿವೃದ್ಧಿ ಪೂರಕ ನೀತಿಗಳನ್ನು ರೂಪಿಸುವಲ್ಲಿ ಕಾಂಗ್ರೆಸ್ ವಿಫಲವಾಗಿತ್ತು. 1991ರಲ್ಲಿ ಭಾರತದ ಆರ್ಥಿಕ ವ್ಯವಸ್ಥೆ ಯಾವ ಮಟ್ಟಕ್ಕೆ ಹದಗೆಟ್ಟಿತ್ತೆಂದರೆ, ದೇಶದ ವಿದೇಶಿ ವಿನಿಮಯ ಮೀಸಲು ಕೇವಲ ಎರಡು ವಾರಗಳಿಗೆ ಸಾಕಾಗುವಷ್ಟಿತ್ತು.

ಪಂಜರದೊಳಗಿನ ಗಿಳಿಯಂತೆ ಭಾರತದ ಆರ್ಥಿಕತೆಯನ್ನು ಒಂದೆಡೆ ಬಂಧಿಸಿ ಹೊರ ಜಗತ್ತಿನ ಜೊತೆಗೆ ಅನಾಯಾಸವಾಗಿ ವ್ಯಾಪಾರ ವಿನಿಮಯ ಮಾಡುವ ನೀತಿಗಳ ಬಗ್ಗೆ ಚಿಂತಿಸದೆ, ಸುಮಾರು 40 ವರ್ಷಗಳ ಕಾಲ ಕಾಂಗ್ರೆಸ್ ಆಡಳಿತ ನಡೆಸಿತ್ತು. ಸ್ವಾತಂತ್ರ್ಯ ನಂತರ ಅಧಿಕಾರ ವಹಿಸಿಕೊಂಡ ಕಾಂಗ್ರೆಸ್ ಪಕ್ಷ ದೂರದೃಷ್ಟಿಯ ಕೊರತೆಯಿಂದ ದೇಶದ ಭವಿಷ್ಯಕ್ಕೆ ಭದ್ರ ಬುನಾದಿ ಹಾಕದೆ ಸ್ವಾರ್ಥ ರಾಜಕೀಯಕ್ಕಿಳಿದು ಕೇವಲ ತನ್ನ ಸ್ವಂತ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಗಮನ ಹರಿಸಿತ್ತು.

40 ವರ್ಷಗಳ ಆಡಳಿತಾವಧಿಯಲ್ಲಿ ದೇಶದ ಮೂಲಭೂತ ಸೌಕರ್ಯಗಳ ಬಗ್ಗೆ ಗಮನ ಹರಿಸಿರ ಲಿಲ್ಲ. ನಗರ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ನೀಡಿರಲಿಲ್ಲ. ಹಳ್ಳಿ ಗಾಡಿನ ಜನರ ಪರಿಸ್ಥಿಯನ್ನು ಹೇಳಬೇಕಿಲ್ಲ, ಒಂದು ವರದಿಯ ಪ್ರಕಾರ 1997ರ ಹೊತ್ತಿಗೆ ಭಾರತ ದಲ್ಲಿ ಕೇವಲ 337 ಕಿಲೋಮೀಟರು ಚತುಷ್ಪಥ ಹೆzರಿಗಳಿದ್ದವಂತೆ. 1971ರಲ್ಲಿ ಚುನಾವಣೆ ಎದುರಿಸಿದ ಇಂದಿರಾಗಾಂಧಿ ‘ಗರೀಭಿ ಹಠಾವೋ’ ಎನ್ನುವ ಮೂಲಕ ಜನರಿಂದ ಮತ ಕೇಳಿದ್ದರು.

ತನ್ನ ತಂದೆ ನೆಹರು ಸುಮಾರು 20 ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿದ್ದರೂ ಸಹ ಬಡತನ ನಿರ್ಮೂಲನೆ ಮಾಡಲು ವಿಫಲರಾಗಿರುವುದನ್ನು ಅಂದು ಅವರು ಒಪ್ಪಿಕೊಂಡಂತಾಗಿತ್ತು. ತದನಂತರ ಸರ್ವಾಧಿಕಾರ ಧೋರಣೆಯಿಂದ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಲಾಗಿತ್ತು. ಇಂದಿರಾ ಗಾಂಧಿ ನಿಧನದ ನಂತರ ಅವರ ಮಗ ರಾಜೀವ್ ಗಾಂಧಿ ದೇಶದ ಪ್ರಧಾನಮಂತ್ರಿ ಯಾದರು.

ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೆಹಲಿಯಿಯಿಂದ ನೂರು ರೂಪಾಯಿ ಹಣವನ್ನು ಜನರಿಗೆ ತಲುಪಿಸಲು ಹೇಳಿದರೆ, ಕೇವಲ 15 ರೂಪಾಯಿ ಮಾತ್ರ ಸಿಗುತ್ತಿದೆಯೆಂದು ತಮ್ಮ ವಂಶಪಾರಂಪರಿಕ ಆಡಳಿತದಲ್ಲಿ ದಶಕಗಳಿಂದ ನಡೆದುಕೊಂಡು ಬರುತ್ತಿದ್ದಂತಹ ಭ್ರಷ್ಟಾಚಾರದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದರು.

ಮಿತಿಮೀರಿದ ಭ್ರಷ್ಟಾಚಾರ, ಅತಿಯಾದ ಮುಸಲ್ಮಾನರ ಓಲೈಕೆ, ಭಾರತದ ಭವಿಷ್ಯದ ಚಿಂತನೆಯಿಲ್ಲದ ನೀತಿಗಳು,ಬಡವರನ್ನು ಬಡವರನ್ನಾಗಿಸಿ ಆಳುವ ನೀತಿಗಳು,ಅಂತಾರಾಷ್ಟ್ರೀಯ ಮಟ್ಟದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾದದ್ದು, ಭಾರತದ ಮೇಲಿನ ರಷ್ಯಾ ಅಮೇರಿಕಾ ನಡುವಣ ಶೀತಲ ಸಮರದ ಪರಿಣಾಮವನ್ನು ಎದುರಿಸುವಲ್ಲಿ ವಿಫಲರಾದದ್ದು, ಜಾಗತಿಕ ಮಟ್ಟದಲ್ಲಿ ಭಾರತ ವ್ಯವಹರಿಸಲು ಇದ್ದಂತಹ ನಿರ್ಬಂಧಗಳು, ಒಟ್ಟಾರೆ ತಪ್ಪುಗಳ ಪರಿಣಾಮ ಭಾರತದ ಆರ್ಥಿಕತೆಯನ್ನು 1991ರ ಹೊತ್ತಿಗೆ ಹದೆಗೆಡಿಸಿತ್ತು. ಅಂದು ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿದ್ದ ಚಿನ್ನವನ್ನು ಲಂಡನ್ನಿನಲ್ಲಿ ಅಡವಿಟ್ಟು ಸಾಲ ತಂದು ದೇಶ ನಡೆಸುವ ಪರಿಸ್ಥಿತಿ ಎದುರಾಗಿತ್ತು.

ಸಮಾಜವಾದದಡಿಯಲ್ಲಿ ಸಂಪತ್ತನ್ನು ಹಂಚಬೇಕಾದರೆ ಸಂಪತ್ತು ಸೃಷ್ಟಿಯಾಗಬೇಕು,ಇರುವ ಸಂಪತ್ತನ್ನು ಸಂಪೂರ್ಣವಾಗಿ ಹಂಚಿ, ಜೊತೆಗೆ ಸಂಪತ್ತನ್ನು ಸೃಷ್ಟಿ ಮಾಡದೆ ಹೋದರೆ ದೀವಾಳಿ ಯಾಗುವುದು ಖಚಿತ. ಬಂಡವಾಳವಿಲ್ಲದೆ ಸಮಾಜವಾದವಿಲ್ಲವೆಂಬ ಆರ್ಥಿಕ ಚಿಂತನೆಯನ್ನು ಮುಂದುವರೆದ ದೇಶಗಳು ಅಳವಡಿಸಿಕೊಂಡಿವೆ.‘ವೆನೆಜುವೆಲಾ’ ದೇಶ ಜಗತ್ತಿನಲ್ಲಿ ಅತೀ ಹೆಚ್ಚು ಕಚ್ಚಾ ತೈಲ ನಿಕ್ಷೇಪ ಹೊಂದಿದ್ದ ಶ್ರೀಮಂತ ರಾಷ್ಟ್ರ. ಆದರೆ ಕಮ್ಯುನಿಸ್ಟರ ಆಡಳಿತಕ್ಕೆ ಸಿಕ್ಕ ನಂತರ, ತೈಲ ಮಾರಾಟದಿಂದ ಬರುತ್ತಿದ್ದಂತಹ ಹಣವನ್ನು ಬೇಕಾಬಿಟ್ಟಿ ಬಳಸಿದ್ದರ ಪರಿಣಾಮ ಕೊನೆಗೆ ದೀವಾಳಿ ಆಯಿತು.

ಭಾರತದ ಕೆಲವು ರಾಜ್ಯಗಳ ಆರ್ಥಿಕ ಪರಿಸ್ಥಿತಿಯೂ ಇದಕ್ಕೆ ಹೊರತಲ್ಲ. ಪಶ್ಚಿಮ ಬಂಗಾಳವನ್ನು 30 ವರ್ಷಗಳ ಕಾಲ ಆಳಿದ ಜ್ಯೋತಿ ಬಸು ನೇತೃತ್ವದ ಕಮ್ಯುನಿಸ್ಟ್ ಸರ್ಕಾರ ಇಡೀ ರಾಜ್ಯವನ್ನೇ ಗುಡಿಸಿ ಗುಂಡಾಂತರ ಮಾಡಿತ್ತು. ಇಂದಿಗೂ ಪಶ್ಚಿಮ ಬಂಗಾಳದಲ್ಲಿ ಬಂಡವಾಳ ಹೂಡಲು ನೂತನ ಕಂಪೆನಿಗಳು ಹೆದರುತ್ತವೆ. ಅಲ್ಲಿನ ಸಾರ್ವಜನಿಕ ಸಾರಿಗೆಯಲ್ಲಿ ಕೂರಲು ಸಾಧ್ಯವಿಲ್ಲ. ಮತ್ತೊಂದೆಡೆ ಕೇರಳವನ್ನು ದಶಕಗಳ ಕಾಲ ಆಳಿದ ಕಮ್ಯುನಿಸ್ಟರು ರಾಜ್ಯದ ಸಾಲವನ್ನು ಉತ್ತುಂಗಕ್ಕೇರಿಸಿದ್ದಾರೆ. ಕೇರಳ ರಾಜ್ಯ ಸರ್ಕಾರ ’ಬಾಂಡ್’ಗಳನ್ನು ನೀಡಿ ಜನರಿಂದ ಹಣ ಸಂಗ್ರಹಿಸಿ ಸಾಲದ ಹೊರೆಯನ್ನು ಇಳಿಸಬೇಕೆಂಬ ಪರಿಸ್ಥಿತಿ ಎದುರಾಗಿತ್ತು.

ಮೋದಿಯವರು ತಮ್ಮ ಅವಧಿಯಲ್ಲಿ ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ಕರೋನ ಸಂದರ್ಭದಲ್ಲಿ ಭಾರತದ ಆರ್ಥಿಕತೆ ಎರಡು ವರ್ಷಗಳ ಕಾಲ ಸಂಕಷ್ಟದಲ್ಲಿತ್ತು. ತಿಂಗಳುಗಳ ಕಾಲ ಇಡೀ ದೇಶದ ವ್ಯವಹಾರವನ್ನು ಬಂದ್ ಮಾಡಿ 140 ಕೋಟಿ ಭಾರತೀಯರನ್ನು ಸಾಕುವುದು ಸುಲಭವಾಗಿರಲಿಲ್ಲ.

ಜಗತ್ತಿನ ದೊಡ್ಡಣ್ಣ ಅಮೆರಿಕಾದ ಆರ್ಥಿಕತೆ ಇಂದಿಗೂ ಸಂಪೂರ್ಣವಾಗಿ ಸರಿಹೋಗಿಲ್ಲ. ಕರೊನಾ ದಂತಹ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಿ ಕಳೆದ ಹತ್ತು ವರ್ಷದಲ್ಲಿ ಭಾರತದ ಆರ್ಥಿಕತೆ ನಾಲ್ಕನೇ ಸ್ಥಾನಕ್ಕೆ ತಲುಪಿರುವುದು, ಎಡಚರರ ಬುಡಕ್ಕೆ ಬೆಂಕಿ ಇಟ್ಟಂತಾಗಿದೆ. 2014ರಲ್ಲಿ ಭಾರತದ ತಲಾದಾಯ ಅಂದಾಜು 1100 ಅಮೆರಿಕನ್ ಡಾಲರ್ ನಷ್ಟಿತ್ತು. 2025ರಲ್ಲಿ ತಲಾದಾಯ 2800 ಅಮೆರಿಕನ್ ಡಾಲರ್ ನಷ್ಟಿದೆ. ಮೋದಿ ಅವಧಿಯ ತಲಾದಾಯದ ಬಗ್ಗೆ ಮಾತನಾಡುವ ಕಾಂಗ್ರೆಸ್ ಮತ್ತು ಎಡಚರ ಪಟಾಲಂ, 1991ರಲ್ಲಿ ಭಾರತದ ತಲಾದಾಯ ಕೇವಲ 300 ಅಮೆರಿಕನ್ ಡಾಲರ್‌ನಷ್ಟಿದ್ದ ಬಗ್ಗೆ ಮಾತನಾಡುವುದಿಲ್ಲ.

ಭಾರತ ಆರ್ಥಿಕತೆಯಲ್ಲಿ ಜಪಾನ್ ದೇಶವನ್ನು ಹಿಂದಿಕ್ಕಿ ಮುಂದುವರಿದರೆ ಕಮ್ಯುನಿಸ್ಟರ ಬುಡಕ್ಕೆ ಬೆಂಕಿ ಬಿದ್ದಿದೆ. ಆದರೆ ಕಣ್ಣ ಮುಂದಿರುವ ಅಭಿವೃದ್ಧಿಯ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ. ಸೀಮೆಎಣ್ಣೆಗಾಗಿ ಬಡವರು ಬೆಳಗಿನ ಜಾವ ಕ್ಯೂನಲ್ಲಿ ನಿಲ್ಲುವ ಕಾಲ ಈಗಿಲ್ಲ. ನೀರಿಗಾಗಿ ರಸ್ತೆಯ ಕೊನೆಯ ನಲ್ಲಿಯ ಮುಂದೆ ಕ್ಯೂ ನಿಲ್ಲುವ ಕಾಲ ಈಗಿಲ್ಲ. ಕರೆಂಟ್ ಬಿಲ್ ಪಾವತಿಸಲು ಸಾಲಿನಲ್ಲಿ ನಿಲ್ಲುವ ಕಾಲ ಈಗಿಲ್ಲ. ಹಳ್ಳಿ ಹಳ್ಳಿಗೂ ತಲುಪಿರುವ ಇಂಟೆರ್ ನೆಟ್ ಎಡಚರರ ಸುಳ್ಳು ನಿರೂಪಣೆ ಗಳನ್ನು ಅನಾಯಾಸವಾಗಿ ಬೆತ್ತಲು ಮಾಡುತ್ತದೆ.