Keshav Prasad B Column: ಶ್ರೀಮಂತರಾಗಬೇಕೆಂದರೆ ತಾಳ್ಮೆಯೇ ನಿಮ್ಮ ದಿವ್ಯಮಂತ್ರವಾಗಬೇಕು !
ಕೇವಲ ಹೂಡಿಕೆಗೆ ಮಾತ್ರವಲ್ಲ, ಉದ್ಯೋಗದಲ್ಲಿ ಬೆಳವಣಿಗೆ, ವೈಯಕ್ತಿಕ ವ್ಯಕ್ತಿತ್ವದ ವಿಕಾಸಕ್ಕೂ ಸಹನೆ ಬೇಕು". ಮೋರ್ಗಾನ್ ಹೌಸೆಲ್ ಇದಕ್ಕಾಗಿ ಹಲವಾರು ಚಾರಿತ್ರಿಕ ಉದಾಹರಣೆಗಳನ್ನು ಕೊಟ್ಟು ಸಮರ್ಥಿಸಿ ದ್ದಾರೆ. ಅನೇಕ ಮಂದಿಗೆ ದೀರ್ಘಾವಧಿಯ ಹೂಡಿಕೆಗೆ ಬೇಕಾಗಿರುವ ತಾಳ್ಮೆ ಇರುವುದಿಲ್ಲ


ಮನಿ ಮೈಂಡೆಡ್
keshavaprasadbk@gmail.com
ಭಾರತಕ್ಕೆ ‘ಅರ್ಥಶಾಸ್ತ್ರ’ ಕೃತಿಯನ್ನು ನೀಡಿದ ಆಚಾರ್ಯ ಚಾಣಕ್ಯನಿಂದ ಹಿಡಿದು, ಇತ್ತೀಚಿನ ‘ದಿ ಸೈಕಾಲಜಿ ಆಫ್ ಮನಿ’ ಕೃತಿಯನ್ನು ಬರೆದಿರುವ ಪಾಶ್ಚಿಮಾತ್ಯ ಯುವ ಹಣಕಾಸು ಸಲಹೆಗಾರ ಮೋರ್ಗಾನ್ ಹೌಸೆಲ್ ತನಕ ಎಲ್ಲರೂ ಒಂದು ಮಾತನ್ನು ಸಾರಿ ಹೇಳಿದ್ದಾರೆ.
ಅದೇನೆಂದರೆ: ನೀವು ಸಂಪತ್ತನ್ನು ಸೃಷ್ಟಿಸಲು ಮತ್ತು ಶ್ರೀಮಂತರಾಗಲು ತಾಳ್ಮೆಯಿಂದ ಹೂಡಿಕೆ ಯನ್ನು ಮಾಡಬೇಕು. ಸಹನೆಯೇ ಇಲ್ಲದಿದ್ದರೆ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಅಸಾಧ್ಯ ಎನ್ನುವ ಈ ಸಂದೇಶವನ್ನು ಪ್ರತಿದಿನ ಬೆಳಗ್ಗೆ ಸ್ಮರಿಸಿದರೆ ಮತ್ತು ಬದುಕಿನುದ್ದಕ್ಕೂ ಅನುಸರಿಸಿದರೆ ಒಂದಿಂದು ದಿನ ಶ್ರೀಮಂತಿ ಕೆಯೂ ಒಲಿಯುವುದು ನಿಶ್ಚಿತ.
ಆದರೆ ತಾಳ್ಮೆಗೆಟ್ಟವರು ಮಾತ್ರ ನಿರಾಶರಾಗುವುದು ಮಾತ್ರವಲ್ಲದೆ, ಇತರರನ್ನೂ ದಿಕ್ಕೆಡಿಸಬಲ್ಲ ಅಪಾಯ ಇರುತ್ತದೆ. ಮೋರ್ಗಾನ್ ಹೌಸೆಲ್ ಇತ್ತೀಚೆಗೆ Same as Ever ಎಂಬ ಕೃತಿಯನ್ನು ಬಿಡುಗಡೆಗೊಳಿಸಿದ್ದಾರೆ. ಅದರಂದು ಮಾತು ಗಮನ ಸೆಳೆಯುತ್ತದೆ- “ತಾಳ್ಮೆಯಿಂದ ದೀರ್ಘಾವಽಗೆ ಹೂಡಿಕೆ ಮಾಡುತ್ತಾ ಬಂದರೆ, ದುಡ್ಡು ಮಾಡಲು ಹೆಚ್ಚು ಬುದ್ಧಿವಂತಿಕೆಯ ಅಗತ್ಯವಿಲ್ಲ. ಜನರು ಹಣಕಾಸು ಯಶಸ್ಸಿಗೆ ಹೆಚ್ಚು ಕೌಶಲ, ಬುದ್ಧಿವಂತಿಕೆ ಬೇಕು ಎಂದು ಭಾವಿಸಿದ್ದಾರೆ. ಆದರೆ ತಾಳ್ಮೆ ಮತ್ತು ನಿರಂತರ ಹೂಡಿಕೆಯೇ ಹೆಚ್ಚು ನಿರ್ಣಾಯಕವಾಗುತ್ತದೆ.
ಕೇವಲ ಹೂಡಿಕೆಗೆ ಮಾತ್ರವಲ್ಲ, ಉದ್ಯೋಗದಲ್ಲಿ ಬೆಳವಣಿಗೆ, ವೈಯಕ್ತಿಕ ವ್ಯಕ್ತಿತ್ವದ ವಿಕಾಸಕ್ಕೂ ಸಹನೆ ಬೇಕು". ಮೋರ್ಗಾನ್ ಹೌಸೆಲ್ ಇದಕ್ಕಾಗಿ ಹಲವಾರು ಚಾರಿತ್ರಿಕ ಉದಾಹರಣೆಗಳನ್ನು ಕೊಟ್ಟು ಸಮರ್ಥಿಸಿ ದ್ದಾರೆ. ಅನೇಕ ಮಂದಿಗೆ ದೀರ್ಘಾವಧಿಯ ಹೂಡಿಕೆಗೆ ಬೇಕಾಗಿರುವ ತಾಳ್ಮೆ ಇರುವುದಿಲ್ಲ. ಅಮೆರಿಕದ ಖ್ಯಾತ ಹೂಡಿಕೆದಾರ ವಾರೆನ್ ಬಫೆಟ್ ಅವರ ಒಟ್ಟು ಸಂಪತ್ತು 15100 ಕೋಟಿ ಡಾಲರ್. ಇದರಲ್ಲಿ ಶೇಕಡಾ 98ರಷ್ಟನ್ನು ಗಳಿಸಲು ಅವರು 65ನೇ ವಯಸ್ಸಿನ ತನಕ ಕಾದಿದ್ದರು.
ಇದನ್ನೂ ಓದಿ: Keshav Prasad B Column: ವಿಕಸಿತ ಭಾರತಕ್ಕಾಗಿ ಪ್ರತಿ ಹೆಜ್ಜೆಯೂ ಐತಿಹಾಸಿಕ, ಸಂಭ್ರಮ ಸ್ವಾಭಾವಿಕ !
ಈಗ 94 ವರ್ಷ ವಯಸ್ಸಿನ ವಾರೆನ್ ಬಫೆಟ್ ಅವರು ತಾಳ್ಮೆಯ ಪ್ರತಿರೂಪ ಎಂದರೆ ತಪ್ಪಲ್ಲ. ಸಹನೆ, ಶಿಸ್ತುಬದ್ಧ ಹೂಡಿಕೆ ಮತ್ತು ಕಂಪೌಂಡಿಂಗ್ ರಿಟರ್ನ್ (ಚಕ್ರಬಡ್ಡಿ) ಮೂಲಕ ತಮ್ಮ ಸುದೀರ್ಘ ಅವಧಿಯ ಹೂಡಿಕೆಯ ಭಾರಿ ಲಾಭವನ್ನೂ ತಮ್ಮದಾಗಿಸಿದರು. ಎಲ್ಲರಿಗೂ ಬಫೆಟ್ ಆಗಲು ಸಾಧ್ಯ ವಿಲ್ಲದಿದ್ದರೂ, ಹಣಕಾಸು ಹೂಡಿಕೆಯಲ್ಲಿ ತಾಳ್ಮೆ ಎಂಬ ದಿವ್ಯಮಂತ್ರಕ್ಕಿರುವ ಶಕ್ತಿಯನ್ನು ಮನನ ಮಾಡಿಕೊಳ್ಳಲು ಉತ್ತಮ ಉದಾಹರಣೆಯಿದು.
ಕಂಪೌಂಡಿಂಗ್ ರಿಟರ್ನ್ ಅನ್ನು ಜಗತ್ತಿನ ಎಂಟನೇ ಅದ್ಭುತ ಎಂದು ಜಗದ್ವಿಖ್ಯಾತ ವಿಜ್ಞಾನಿ ಅಲ್ಬರ್ಟ್ ಐನ್ಸ್ಟೀನ್ ಕೂಡ ಹೇಳಿದ್ದರು ಎಂಬ ಮಾತಿದೆ. ಇರಲಿ, ಇದನ್ನು ಜಗತ್ತಿನ ಎಂಟನೇ ಅದ್ಭುತ ಎಂದು ಯಾರು ಹೇಳಿದರೂ ತಪ್ಪಾಗದು. ಹಾಗಾದರೆ ಏಕೆ ಅದಕ್ಕೆ ಅಷ್ಟೊಂದು ಮಹತ್ವ? ಚಕ್ರಬಡ್ಡಿ ಎಂದರೆ ಬಡ್ಡಿಯ ಮೇಲೆ ಸಿಗುವ ಬಡ್ಡಿ ಎಂಬ ಸರಳ ಉತ್ತರ ಗೊತ್ತಿದೆ. ಆದರೆ ಇಂದು ಸುಲಭವಾದ ಉದಾಹರಣೆಯನ್ನು ನೋಡೋಣ.
ಈಗ ನೋಡಿ, ನೀವು ವಾರ್ಷಿಕ ಶೇಕಡಾ 10ರಷ್ಟು ಬಡ್ಡಿ ನೀಡುವ ಹಣಕಾಸು ಯೋಜನೆಯಲ್ಲಿ ಕೇವಲ 1000 ರುಪಾಯಿ ಹೂಡಿಕೆ ಮಾಡಿದ್ದೀರಿ ಎಂದಿಟ್ಟುಕೊಳ್ಳಿ. ಒಂದು ವರ್ಷದ ಬಳಿಕ 1100 ರುಪಾಯಿ ಆಗಿರುತ್ತದೆ. ಎರಡನೇ ವರ್ಷ ನೀವು 1000 ರುಪಾಯಿಗೆ ಮಾತ್ರವಲ್ಲದೆ 100 ರುಪಾಯಿ ಯ ಬಡ್ಡಿಗೂ ಬಡ್ಡಿ ಸೇರಿ ನಿಮ್ಮ ಹೂಡಿಕೆ 1210 ರುಪಾಯಿಗೆ ಬೆಳೆದಿರುತ್ತದೆ.
ನಿಮ್ಮ ಹೂಡಿಕೆ ಇದ್ದಷ್ಟು ಕಾಲ ಇದೇ ರೀತಿ ಬಡ್ಡಿ ಸೇರುತ್ತದೆ. ಇನ್ನೂ ಸ್ಪಷ್ಟ ಚಿತ್ರಣಕ್ಕೆ ಮತ್ತೊಂದು ಉದಾಹರಣೆಯನ್ನು ನೋಡೋಣ. ನೀವು ವರ್ಷಕ್ಕೆ ಶೇಕಡಾ 12ರಷ್ಟು ಬಡ್ಡಿ ನೀಡುವ ಹಣಕಾಸು ಸಾಧನದಲ್ಲಿ 1 ಲಕ್ಷ ರುಪಾಯಿಗಳನ್ನು ಹೂಡಿಕೆ ಮಾಡಿದರೆ, 30 ವರ್ಷಗಳ ಬಳಿಕ ಚಕ್ರಬಡ್ಡಿ ಸೇರಿದರೆ ನಿಮ್ಮ ಹಣ 29,95,992 ರುಪಾಯಿಗೆ ಬೆಳೆದಿರುತ್ತದೆ!
ನಿಮ್ಮ 1 ಲಕ್ಷ ಹೂಡಿಕೆಗೆ 28 ಲಕ್ಷ 95 ಸಾವಿರ ರುಪಾಯಿಯಷ್ಟು ಬಡ್ಡಿಯೇ ಸೇರುತ್ತದೆ! 40 ವರ್ಷ ಗಳ ಬಳಿಕ 93,05,097 ರುಪಾಯಿಗೆ ವೃದ್ಧಿಸಿರುತ್ತದೆ! ಸರಳ ಬಡ್ಡಿಯಲ್ಲಿ ಅಸಲು ಮೊತ್ತಕ್ಕೆ ಮಾತ್ರ ಬಡ್ಡಿ ಇರುತ್ತದೆ. ಚಕ್ರಬಡ್ಡಿ ಎಂದರೆ ಬಡ್ಡಿಯ ಮೇಲೆ ಕೂಡ ಅನ್ವಯವಾಗುತ್ತದೆ.
ಹಾಗಾದರೆ ಎಲ್ಲಿ ಇನ್ವೆಸ್ಟ್ ಮಾಡಿದರೆ ಚಕ್ರಬಡ್ಡಿಯ ಲಾಭ ಸಿಗುತ್ತದೆ? ನೋಡಿ, ಫಿಕ್ಸೆಡ್ ಡೆಪಾಸಿಟ್, ಮ್ಯೂಚುವಲ್ ಫಂಡ್, ಸರಕಾರಿ ಮತ್ತು ಕಾರ್ಪೊರೇಟ್ ಬಾಂಡ್ಗಳಲ್ಲಿ ಹೂಡಿಕೆ ಮಾಡಿದರೆ ಕಂಪೌಂಡಿಂಗ್ ಇಂಟರೆ ಅಥವಾ ಚಕ್ರಬಡ್ಡಿಯ ಚಮತ್ಕಾರವನ್ನು ನೀವು ಕಾಣಬಲ್ಲಿರಿ. ಆದರೆ ದೀರ್ಘಾವಧಿಗೆ ಇನ್ವೆ ಮಾಡಬೇಕು ಎಂಬುದನ್ನು ಮರೆಯಬಾರದು.
ವಾರೆನ್ ಬಫೆಟ್ ಹೀಗೆನ್ನುತ್ತಾರೆ- “ಸ್ಟಾಕ್ ಮಾರ್ಕೆಟ್ ಎನ್ನುವುದು ತಾಳ್ಮೆ ಇಲ್ಲದವನ ಕೈಯಲ್ಲಿರುವ ದುಡ್ಡನ್ನು ತಾಳ್ಮೆ ಇರುವವನಿಗೆ ಕೊಡುವ ಸ್ಥಳ".ಮಾರುಕಟ್ಟೆಯ ಏರಿಳಿತಗಳಿಗೆ ಆತಂಕಕ್ಕೀಡಾಗದೆ, ಸಹನೆ ಮತ್ತು ಶಿಸ್ತಿನಿಂದ ಹೂಡಿಕೆ ಮಾಡುವವರಿಗೆ ಲಾಭವಾಗುತ್ತದೆ. ದೀರ್ಘಾವಧಿಯ ಹೂಡಿಕೆ ಎಷ್ಟೊಂದು ಲಾಭ ನೀಡುತ್ತದೆ ಎಂಬುದಕ್ಕೆ ಮೂರು ಷೇರುಗಳ ಉದಾಹರಣೆಯನ್ನು ನೋಡೋಣ. ಬಜಾಜ್ ಫೈನಾನ್ಸ್, ಏಷ್ಯನ್ ಪೇಂಟ್ಸ್ ಮತ್ತು ಎಚ್ಡಿಎಫ್ ಸಿ ಬ್ಯಾಂಕ್ ಷೇರುಗಳ ಇತಿಹಾಸವನ್ನು ಗಮನಿಸಿದರೆ ನೀವು ಮೂಕ ವಿಸ್ಮಿತರಾಗಬಹುದು! ಏಕೆಂದರೆ ಬಜಾಜ್ ಫೈನಾನ್ಸ್ ಸ್ಟಾಕ್ ಆರಂಭ ವಾದಂದಿನಿಂದ ಇಲ್ಲಿಯವರೆಗೆ ಶೇಕಡಾ 163,606ರಷ್ಟು ಲಾಭ ಕೊಟ್ಟಿದೆ.
ಏಷ್ಯನ್ ಪೇಂಟ್ಸ್ ಸ್ಟಾಕ್ 19,144 ಪರ್ಸೆಂಟ್ ರಿಟರ್ನ್ ಕೊಟ್ಟಿದೆ. ಎಚ್ಡಿಎಫ್ ಸಿ ಬ್ಯಾಂಕ್ನ ಷೇರು ಶೇಕಡಾ 26,519 ರಷ್ಟು ಆದಾಯ ನೀಡಿದೆ. ಭಾರತ ಕಳೆದ 10 ವರ್ಷಗಳಿಂದ ವಿಶ್ವದಲ್ಲಿಯೇ ವೇಗವಾಗಿ ಆರ್ಥಿಕ ಬೆಳವಣಿಗೆಯನ್ನು ದಾಖಲಿಸುತ್ತಿರುವ ಪ್ರಮುಖ ರಾಷ್ಟ್ರವಾಗಿ ಹೊರಹೊಮ್ಮಿದೆ. ಕಳೆದ ಹತ್ತು ವರ್ಷದಲ್ಲಿ ಭಾರತವು ಶೇಕಡಾ 105ರಷ್ಟು ಬೆಳವಣಿಗೆ ಕಂಡಿದೆ. ಈಗ ದೇಶದ ಜಿಡಿಪಿ 4.3 ಟ್ರಿಲಿಯನ್ ಡಾಲರ್. ಇದರ ಹಿಂದಿನ ಇತಿಹಾಸ ಕೂಡ ಕುತೂಹಲಕರ. ಅದರಿಂದಲೂ ಪಾಠ ಕಲಿಯಬಹುದು.
ನೋಡಿ, ಭಾರತವು ತನ್ನ ಮೊದಲ ಟ್ರಿಲಿಯನ್ ಡಾಲರ್ (ಲಕ್ಷ ಕೋಟಿ) ಜಿಡಿಪಿ ಮೌಲ್ಯವನ್ನು ಗಳಿಸಲು ಬರೋಬ್ಬರಿ 60 ವರ್ಷವನ್ನು ತೆಗೆದುಕೊಂಡಿತು. 2007ರಲ್ಲಿ ಅದು ಸಾಧ್ಯವಾಯಿತು. ಎರಡನೇ ಟ್ರಿಲಿಯನ್ ಡಾಲರ್ ಗಡಿ ಮುಟ್ಟಲು 7 ವರ್ಷ ಬೇಕಾಯಿತು (2014). ಕೋವಿಡ್-19 ಬಿಕ್ಕಟ್ಟಿನ ನಡುವೆಯೂ 2021ರಲ್ಲಿ 3 ಟ್ರಿಲಿಯನ್ ಡಾಲರ್ಗೆ ಏರಿತ್ತು. ಆದರೆ 3 ರಿಂದ 4 ಟ್ರಿಲಿಯನ್ ಡಾಲರ್ (2025) ಮುಟ್ಟಲು ಕೇವಲ 4 ವರ್ಷ ಸಾಕಾಯಿತು.
ಇದೇ ವೇಗದಲ್ಲಿ ಮುಂದುವರಿದರೆ, ಭಾರತವು ಪ್ರತಿ ಒಂದೂವರೆ ವರ್ಷಗಳಿಗೊಮ್ಮೆ ತನ್ನ ಜಿಡಿಪಿಗೆ 1 ಟ್ರಿಲಿಯನ್ ಡಾಲರ್ಗಳನ್ನು ಸೇರಿಸಲಿದೆ ಹಾಗೂ 2032ರ ಕೊನೆಯ ವೇಳೆಗೆ 10 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಕೇಂದ್ರ ಸರಕಾರದ ದೂರದೃಷ್ಟಿಯ ಪ್ರಕಾರ ಭಾರತವು 2047ರ ವೇಳೆಗೆ ‘ಪೂರ್ಣ ಅಭಿವೃದ್ಧಿ ಹೊಂದಿದ ದೇಶ’ (ವಿಕಸಿತ ಭಾರತ) ಆಗಲಿದೆ. ಯುವಜನತೆ, ಬಡವರು, ಮಹಿಳೆಯರು ಮತ್ತು ಅನ್ನದಾತರಾದ ರೈತರ ಅಭಿವೃದ್ಧಿಯ ಆಶಯವನ್ನು ಈ ದೂರದೃಷ್ಟಿ ಒಳಗೊಂಡಿದೆ.
ಕೆಲವರು ಜಿಡಿಪಿ ಎಷ್ಟಿದ್ದರೇನಂತೆ? ತಲಾ ಆದಾಯದಲ್ಲಿ 143ನೇ ಸ್ಥಾನದಲ್ಲಿ ಹಿಂದುಳಿದಿದ್ದೇವೆ ಯಲ್ಲವೇ ಎಂದು ಪ್ರಶ್ನಿಸುವುದಿದೆ. ಆದರೆ ನಮ್ಮ ದೇಶದ ಜನಸಂಖ್ಯೆ ಜಗತ್ತಿನ ಅತ್ಯಂತ ದೊಡ್ಡದು. ಹೀಗಾಗಿಯೇ ತಲಾ ಆದಾಯ ಕಡಿಮೆಯಾಗಿದೆ. ಹಾಗೂ ತಲಾ ಆದಾಯ ಹೆಚ್ಚಬೇಕಿದ್ದರೂ ಜಿಡಿಪಿ ಏರಿಕೆಯಾಗಲೇಬೇಕು ಎಂಬ ಸಾಮಾನ್ಯ ಸಂಗತಿಯನ್ನಾದರೂ ಮನನ ಮಾಡಿಕೊಂಡರೆ ಇಂಥ ಕ್ಷುಲ್ಲಕ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಬದಲಿಗೆ ದೇಶವು ತಲಾ ಆದಾಯವನ್ನು ಹೆಚ್ಚಿಸಿಕೊಳ್ಳಲು ತಾನು ಏನು ಕೊಡುಗೆ ನೀಡಬಹುದು ಎಂಬುದನ್ನು ಯೋಚಿಸಲು ತೊಡಗಿಕೊಳ್ಳಬಹುದು. ಈ ನಿಟ್ಟಿನಲ್ಲಿ ಜನತೆ ಏನು ಮಾಡಬಹುದು? ದೀರ್ಘಕಾಲೀನ ಹೂಡಿಕೆಯ ಮೂಲಕ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕು.
ಆಚಾರ್ಯ ಚಾಣಕ್ಯ ಅಥವಾ ಕೌಟಿಲ್ಯ ಕೂಡ ವೈಯಕ್ತಿಕ ಹಣಕಾಸು ವಿಚಾರಗಳಿಗೆ ಸಂಬಂಧಿಸಿ ಎಂದೆಂದಿಗೂ ಉಪಯುಕ್ತವೆನ್ನಿಸುವ ಹಿತವಚನಗಳನ್ನು ನೀಡಿದ್ದಾನೆ. ಅಪಾತ್ರರಿಗೆ ಯಾವತ್ತೂ ನಿನ್ನ ಧನವನ್ನು ನೀಡದಿರು. ಯೋಗ್ಯರಿಗೆ ಮಾತ್ರ ಕೊಡು ಎನ್ನುತ್ತಾನೆ ಚಾಣಕ್ಯ. ಸಮುದ್ರದ ಮೇಲೆ ಮಳೆಯ ಸಿಹಿನೀರು ಬಿದ್ದರೂ, ಅದು ಉಪ್ಪಾಗುತ್ತದೆ ಎನ್ನುತ್ತಾನೆ ಚಾಣಕ್ಯ. ಇದನ್ನು ಈಗ ಹೇಗೆ ನಾವು ತಿಳಿದುಕೊಳ್ಳಬಹುದು? ಷೇರು, ಮ್ಯೂಚುವಲ್ ಫಂಡ್, ಬಾಂಡ್, ಚಿನ್ನ, ಎನ್ ಪಿಎಸ್, ಪಿಪಿಎಫ್, ಇಪಿಎಫ್ ಮಾದರಿಯ ನಿಯಂತ್ರಿತ ಮತ್ತು ಉತ್ತಮ ಸಾಧನಗಳಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡಿರಿ. ಅನಿಯಂತ್ರಿತ ಚೀಟಿ ವ್ಯವಹಾರಗಳಲ್ಲಿ, ಅಪರಿಚಿತ ಸ್ಕೀಮ್ಗಳಲ್ಲಿ ಹಾಕಿ ಕಳೆದುಕೊಳ್ಳದಿರಿ ಎಂದು ಅರ್ಥ ಮಾಡಿಕೊಳ್ಳಬಹುದು.
“ಒಂದು ಸಲ ಕೆಲಸ ಆರಂಭಿಸಿದ ಬಳಿಕ ವೈಫಲ್ಯಕ್ಕೆ ಹೆದರದಿರಿ, ಕೈ ಬಿಡದಿರಿ, ಪ್ರಾಮಾಣಿಕವಾಗಿ ಕೆಲಸ ಮಾಡುವ ಜನರು ಸಂತೋಷದಿಂದ ಇರುತ್ತಾರೆ" ಎನ್ನುತ್ತಾನೆ ಚಾಣಕ್ಯ. ಸ್ಟಾಕ್ ಮಾರ್ಕೆಟ್ ಕೂಡ ಸಾಕಷ್ಟು ಏರಿಳಿತಗಳನ್ನು ಕಾಣುತ್ತಿರುತ್ತದೆ. ಅದುವೇ ಅದರ ಜೀವಂತಿಕೆ. ಆದ್ದರಿಂದ ಮಾರ್ಕೆಟ್ ಕುಸಿತಕ್ಕೀಡಾದಾಗ ಹೂಡಿಕೆಗೆ ಸುವರ್ಣಾವಕಾಶ ಎಂದೇ ಭಾವಿಸಬೇಕು. ಹೊರತುಪಡಿಸಿ ಅಧೀರರಾಗಕೂಡದು.
ದೀರ್ಘಾವಧಿಗೆ ಷೇರು ಸೂಚ್ಯಂಕಗಳು ಕುಸಿಯುತ್ತಲೇ ಹೋಗಿರುವ ಉದಾಹರಣೆಯೇ ಇಲ್ಲ. ಬದಲಿಗೆ ಏರಿಕೆಯಾಗಿರುವುದಕ್ಕೆ ಅದರ ಹಲವಾರು ವರ್ಷಗಳ ಇತಿಹಾಸವೇ ಸಾಕ್ಷಿಯಾಗಿದೆ. ಉದಾಹರಣೆಗೆ ಕಳೆದ 30 ವರ್ಷಗಳಲ್ಲಿ ಸೆನ್ಸೆಕ್ಸ್ 21 ತಿಂಗಳುಗಳ ಕಾಲ ಶೇಕಡಾ 10ಕ್ಕಿಂತಲೂ ಹೆಚ್ಚು ಕುಸಿತವನ್ನು ದಾಖಲಿಸಿದೆ. ಹೀಗಿದ್ದರೂ, ದೀರ್ಘಾವಧಿಗೆ ಹೂಡಿಕೆ ಮಾಡಿದವರಿಗೆ ಲಾಭ ವಾಗಿದೆ. “ಬೇರೆಯವರು ಮಾಡುವ ತಪ್ಪುಗಳಿಂದ ನೀವು ಪಾಠ ಕಲಿಯಿರಿ, ಎಲ್ಲ ತಪ್ಪುಗಳನ್ನೂ ಮಾಡಿ ಕಲಿಯುವಷ್ಟು ಜೀವನ ದೀರ್ಘವಲ್ಲ" ಎನ್ನುತ್ತಾನೆ ಚಾಣಕ್ಯ. ಸ್ಟಾಕ್ ಮಾರ್ಕೆಟ್ನಲ್ಲಿ ಹೂಡಿಕೆ ಮಾಡುವ ವಿಧಾನಗಳಲ್ಲಿ ಮುಖ್ಯವಾಗಿ ಈಕ್ವಿಟಿ ಅಥವಾ ಷೇರುಗಳಲ್ಲಿ ಹೂಡಿಕೆ ಮಾಡಬಹುದು. ಇಲ್ಲಿ ಷೇರಿನ ಫಂಡಮೆಂಟಲ್ ಅಂಶಗಳನ್ನು ತಿಳಿದು ದರ ಕಡಿಮೆಯಾಗಿದ್ದಾಗ ಹೂಡಿಕೆ ಮಾಡಿ, ದರ ಏರಿದಾಗ ಮಾರಿ ಲಾಭ ಗಳಿಸುವಂಥದ್ದು.
ಎರಡನೆಯದ್ದು ಫ್ಯೂಚರ್ ಆಂಡ್ ಆಪ್ಷನ್ ಟ್ರೇಡಿಂಗ್. ಇದು ಅತ್ಯಂತ ಅಪಾಯಕಾರಿ. ಸರಿಯಾಗಿ ಕಲಿಯದಿದ್ದರೆ ಇಲ್ಲಿ ನಷ್ಟ ಕಟ್ಟಿಟ್ಟ ಬುತ್ತಿ. ಸೆಬಿಯ ವರದಿಯ ಪ್ರಕಾರ 2022-24ರ ಅವಧಿಯಲ್ಲಿ 100ಕ್ಕೆ 93 ಮಂದಿ ರಿಟೇಲ್ ಟ್ರೇಡರ್ಸ್ ಫ್ಯೂಚರ್ಸ್ ಆಂಡ್ ಆಪ್ಷ ವಹಿವಾಟಿನಲ್ಲಿ ನಷ್ಟಕ್ಕೀ ಡಾಗಿದ್ದಾರೆ. ಆದ್ದರಿಂದ ಟ್ರೇಡಿಂಗ್ ನಲ್ಲಿ ದುಡ್ಡು ಕಳೆದುಕೊಳ್ಳುವವರನ್ನು ನೋಡಿಯೂ ಜನ ಪಾಠ ಕಲಿತುಕೊಳ್ಳಬೇಕಾದ ಅವಶ್ಯಕತೆ ಇದೆ. ಒಟ್ಟಿನಲ್ಲಿ ಕಲಿಕೆ-ಹೂಡಿಕೆ-ಗಳಿಕೆಗೆ ತಾಳ್ಮೆಯೇ ರಕ್ಷಾಕವಚ!