ಆಪರೇಷನ್​ ಸಿಂಧೂರ ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr N Someshwara Column: ಥೀಬ್ಸ್‌ ನಿಂದ ಹಸ್ತಿನಾವತಿಯವರೆಗೆ ಕಾಮ, ಪ್ರೇಮ ಮತ್ತು ಪ್ರೀತಿ !

ಮನುಕುಲದಲ್ಲಿ ಒಳಸಂತಾನ ವರ್ಧನೆಯ ಪ್ರಮುಖ ಪ್ರಸ್ತಾಪವು, ಋಗ್ವೇದದ 10ನೆಯ ಮಂಡಲದ 10ನೆಯ ಮಂತ್ರದಲ್ಲಿ ಬರುತ್ತದೆ. ಸೂರ್ಯ ಮತ್ತು ಸಂಜ್ಞಾದೇವಿಗೆ ‘ಯಮ’ ಮತ್ತು ‘ಯಮಿ’ ಎಂಬ ಅವಳಿ ಮಕ್ಕಳು. ಇವರಿಬ್ಬರೂ ಭೂಮಿಯ ಮೇಲೆ ಹುಟ್ಟಿದ ಮೊದಲ ಮಾನವ ಜೋಡಿಗಳು. ಇಬ್ಬರೂ ವಯಸ್ಸಿಗೆ ಬಂದರು. ಆಗ ಅವರಿಬ್ಬರ ನಡುವೆ ನಡೆಯುವ ಸಂಭಾಷಣೆಯ ಸಾರವು ಹೀಗಿದೆ: “ಸೋದರನೆ! ನಾವಿಬ್ಬರೂ ವಯಸ್ಸಿಗೆ ಬಂದಿದ್ದೇವೆ. ನನಗೆ ಸಂತಾನವರ್ಧನೆಯಲ್ಲಿ ತೊಡಗಿಕೊಳ್ಳುವ ಬಯಕೆ ಉಂಟಾಗಿದೆ. ಬಾ ನಾವಿಬ್ಬರೂ ಸಂಭೋಗಿಸೋಣ. ಮಕ್ಕಳನ್ನು ಪಡೆಯೋಣ" ಎನ್ನುತ್ತಾಳೆ.

ಥೀಬ್ಸ್‌ ನಿಂದ ಹಸ್ತಿನಾವತಿಯವರೆಗೆ ಕಾಮ, ಪ್ರೇಮ ಮತ್ತು ಪ್ರೀತಿ !

ಹಿಂದಿರುಗಿ ನೋಡಿದಾಗ

ಜೀವಜಗತ್ತಿನಲ್ಲಿ ಕಾಮ-ಪ್ರೇಮ-ಪ್ರೀತಿಯ ಲೀಲೆಗಳು ನಮಗೆ ಇನ್ನೂ ಪರಿಪೂರ್ಣವಾಗಿ ಅರ್ಥ ವಾಗಿಲ್ಲ. ಜಗತ್ತಿನಲ್ಲಿ ಜೀವಿಯು ಏಕಕಣರೂಪದಲ್ಲಿ ಹುಟ್ಟಿತು. ಅಲೈಂಗಿಕವಾಗಿ ಸಂತಾನ ವರ್ಧನೆ ಯನ್ನು ನಡೆಸಿತು. ಅಲೈಂಗಿಕ ಸಂತಾನ ವರ್ಧನೆಯಿಂದ ‘ಜೀವ ವೈವಿಧ್ಯತೆ’ಯು ಅಸಾಧ್ಯ ಎಂದು ಮನವರಿಕೆಯಾದಾಗ, ಲೈಂಗಿಕ ಸಂತಾನವರ್ಧನೆಯನ್ನು ಆರಂಭಿಸಿತು.

ಅದು ಸಸ್ತನಿಗಳಲ್ಲಿ (ಮ್ಯಾಮಲ್ಸ್) ಅದ್ಭುತವಾಗಿ ಅಭಿವರ್ಧನೆಯಾಗಿ, ಮನುಷ್ಯರಲ್ಲಿ ಉತ್ತುಂಗ ಸ್ಥಿತಿಯನ್ನು ತಲುಪಿತು. ಪ್ರಕೃತಿಯ ಮೂಲ ಉದ್ದೇಶ ಉತ್ಕೃಷ್ಟ ಸಂತಾನ ವರ್ಧನೆ. ಉತ್ಕೃಷ್ಟ ಸಂತಾನ ವರ್ಧನೆಗಾಗಿ, ಯಾವಾಗಲೂ ‘ಸೋದರೇತರ’ ಸಂಬಂಧಗಳಲ್ಲಿ ವಿವಾಹವಾಗಬೇಕು. ‘ಸೋದರಿಕೆ’ ಯಲ್ಲಿ ಆಗಬಾರದು.

ಒಂದು ನಾಯಿಯು ಐದು ಹೆಣ್ಣು, ಮೂರು ಗಂಡುಗಳಿಗೆ ಜನ್ಮವನ್ನು ನೀಡಿತು. ಈ ಸೋದರ- ಸೋದರಿ ನಾಯಿಮರಿಗಳ ನಡುವೆ ಸಂತಾನ ವರ್ಧನೆಯಾದರೆ, ಉತ್ಕೃಷ್ಟ ಸಂತಾನವನ್ನು ಬಿಡಿ, ಸಂತಾನವು ಗರ್ಭದಲ್ಲಿಯೇ ಮರಣಿಸೀತು ಅಥವಾ ನಾನಾ ರೋಗಗಳ ಜತೆಯಲ್ಲಿ ಹುಟ್ಟೀತು. ‘ಕಾಮಾತುರಾಣಾಂ ನ ಭಯಂ ನ ಲಜ್ಜಾ’ ಎಂಬ ನಿಯಮವು ಮನುಷ್ಯ ಲೋಕಕ್ಕೆ ಹೆಚ್ಚು ಅನ್ವಯಿಸುತ್ತದೆ, ಪ್ರಾಣಿಲೋಕಕ್ಕೆ ಅಲ್ಲ. ಪ್ರಾಣಿಗಳಲ್ಲಿ ಒಳಸಂತಾನ ವರ್ಧನೆಯನ್ನು ತಡೆಗಟ್ಟಲು ಫೆರಮೋನುಗಳೆಂಬ ವಿಶೇಷ ರಾಸಾಯ ನಿಕಗಳು ನೆರವಾಗುತ್ತವೆ. ನಾಯಿಗಳ ಒಡಲಿನಲ್ಲಿ ಒಂದು ಎಚ್ಚರಿಕೆಯ ವ್ಯಸ್ಥೆಯಿರುತ್ತದೆ.

61 R

‘ನಾವು ಸೋದರರು; ನಮ್ಮ ನಡುವೆ ಸಂತಾನ ವರ್ಧನೆಯು ನಡೆಯಬಾರದು’ ಎಂದು ಅವುಗಳ ಒಡಲಿನಲ್ಲಿರುವ ‘ಮೇಜರ್ ಹಿಸ್ಟೋಕಂಪ್ಯಾಟಬಿಲಿಟಿ ಜೀನ್ಸ್’ ಅಥವಾ ‘ಎಂಎಚ್‌ಸಿ ಜೀನುಗಳು’ ಫೆರಮೋನುಗಳ ಮೂಲಕ ಎಚ್ಚರಿಕೆಯನ್ನು ನೀಡುತ್ತವೆ. ಒಳಸಂತಾನ ವರ್ಧನೆಯು ನಡೆಯದಂತೆ ತಡೆಯುತ್ತವೆ. ಆನೆಗಳನ್ನು ಗಮನಿಸಿ. ಒಂದು ಗುಂಪಿನಲ್ಲಿರುವ ಗಂಡು ಆನೆ ಮರಿಯು, ವಯಸ್ಸಿಗೆ ಬರುತ್ತಿದ್ದ ಹಾಗೆ, ಹಿಂಡಿನ ಅಜ್ಜಿ ಆನೆಯು, ಈ ವಯಸ್ಸಿಗೆ ಬಂದ ಗಂಡನ್ನು ಗುಂಪಿನಿಂದ ಹೊರ ಹೋಗುವಂತೆ ಆಜ್ಞಾಪಿಸುತ್ತದೆ.

ಆ ಗಂಡು ಬೇರೊಂದು ಆನೆಯ ಗುಂಪನ್ನು ಸೇರಿಕೊಂಡು, ಅಲ್ಲಿರುವ ಹೆಣ್ಣು ಆನೆಯ ಜತೆಯಲ್ಲಿ ಸಂತಾನವರ್ಧನೆಯನ್ನು ನಡೆಸುತ್ತದೆ. ಅಜ್ಜಿ ಆನೆಯು ಪುಂಡು ಗಂಡುಗಳನ್ನು ಹೊರ ಅಟ್ಟದಿದ್ದರೆ, ಒಳಸಂತಾನ ವರ್ಧನೆಯು ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಇದೇ ವರ್ತನೆಯು, ಮನುಷ್ಯರಲ್ಲಿ ‘ಅಳಿಯ ಸಂತಾನ’ ಆಚರಣೆಯ ರೂಪದಲ್ಲಿ ಇಂದಿಗೂ ಅಸ್ತಿತ್ವ ದಲ್ಲಿದೆ. ಮನುಷ್ಯನು ತನ್ನ ಮನಸ್ಸು, ಬುದ್ಧಿ ಹಾಗೂ ವಿವೇಕವನ್ನು ಮೀರಿ ನಡೆದಾಗ, ಸಂಕೀರ್ಣ ಸಂಬಂಧಗಳ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಮುಖ್ಯವಾದ ಕೆಲವು ಉದಾಹರಣೆಗಳನ್ನು ಗಮನಿಸೋಣ.

ಮನುಕುಲದಲ್ಲಿ ಒಳಸಂತಾನ ವರ್ಧನೆಯ ಪ್ರಮುಖ ಪ್ರಸ್ತಾಪವು, ಋಗ್ವೇದದ 10ನೆಯ ಮಂಡಲದ 10ನೆಯ ಮಂತ್ರದಲ್ಲಿ ಬರುತ್ತದೆ. ಸೂರ್ಯ ಮತ್ತು ಸಂಜ್ಞಾದೇವಿಗೆ ‘ಯಮ’ ಮತ್ತು ‘ಯಮಿ’ ಎಂಬ ಅವಳಿ ಮಕ್ಕಳು. ಇವರಿಬ್ಬರೂ ಭೂಮಿಯ ಮೇಲೆ ಹುಟ್ಟಿದ ಮೊದಲ ಮಾನವ ಜೋಡಿಗಳು. ಇಬ್ಬರೂ ವಯಸ್ಸಿಗೆ ಬಂದರು. ಆಗ ಅವರಿಬ್ಬರ ನಡುವೆ ನಡೆಯುವ ಸಂಭಾಷಣೆಯ ಸಾರವು ಹೀಗಿದೆ: “ಸೋದರನೆ! ನಾವಿಬ್ಬರೂ ವಯಸ್ಸಿಗೆ ಬಂದಿದ್ದೇವೆ. ನನಗೆ ಸಂತಾನವರ್ಧನೆಯಲ್ಲಿ ತೊಡಗಿಕೊಳ್ಳುವ ಬಯಕೆ ಉಂಟಾಗಿದೆ. ಬಾ ನಾವಿಬ್ಬರೂ ಸಂಭೋಗಿಸೋಣ. ಮಕ್ಕಳನ್ನು ಪಡೆಯೋಣ" ಎನ್ನುತ್ತಾಳೆ.

ಇದನ್ನೂ ಓದಿ: Dr N Someshwara Column: ಬದುಕಿರುವವರನ್ನು ಝೂಂಬಿಗಳನ್ನಾಗಿಸುವ ಡೆವಿಲ್ಸ್‌ ಬ್ರೆತ್‌ !

“ಗಂಡು ಮತ್ತು ಹೆಣ್ಣು ಮಿಲನವಾಗುವುದು ಪ್ರಕೃತಿಯ ನಿಯಮ. ಅಲ್ಲಿ ನೋಡು ಬಾನು ಭುವಿ ಯೊಡನೆ ಮಿಲನವಾಗುತ್ತಿದೆ. ಹಾಗಾಗಿ ನಾವಿಬ್ಬರು ಸೇರಿ ಮಕ್ಕಳನ್ನು ಪಡೆಯೋಣ. ಇದರಲ್ಲಿ ತಪ್ಪಿಲ್ಲ" ಎನ್ನುತ್ತಾಳೆ. ಯಮಿಯ ಪ್ರಸ್ತಾವನೆಯನ್ನು ಯಮನು ಒಪ್ಪುವುದಿಲ್ಲ. ಆತ “ಈ ಭೂಮಿ ಯ ಮೇಲೆ ಇರುವ ಪ್ರತಿಯೊಂದು ಜೀವಿಗೆ-ವಸ್ತುವಿಗೆ ಸ್ವಭಾವ ಸಿದ್ಧವಾದ ‘ಋತ’ ಎನ್ನುವುದು ಇರುತ್ತದೆ. ಆ ಋತವನ್ನು ಮೀರಬಾರದು.

ಸೋದರ- ಸೋದರಿಯರ ನಡುವೆ ಸಂತಾನ ವರ್ಧನೆಯಾಗಬಾರದು ಎಂದು ದೇವತೆಗಳು ನಿಯಮ ಗಳನ್ನು ರೂಪಿಸಿದ್ದಾರೆ. ಹಾಗಾಗಿ ನಾವು ಋತವನ್ನು ಉಲ್ಲಂಘಿಸುವುದು ಬೇಡ" ಎನ್ನುತ್ತಾನೆ. “ನಾವು ಮಾಡುವ ಪ್ರತಿಯೊಂದು ಕೆಲಸಗಳಿಗೂ ಸಾಕ್ಷಿಗಳಿರುತ್ತವೆ. ಸಾಕ್ಷಿಗಳ ಕಣ್ಣನ್ನು ತಪ್ಪಿಸಿ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಅದಕ್ಕೆ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.

ಹಾಗಾಗಿ ನಾನು ನನ್ನ ಋತದಿಂದ ವಿಚಲಿಸಲಾರೆ" ಎಂದು ಸ್ಪಷ್ಟವಾಗಿ ಯಮಿಯ ಆಹ್ವಾನವನ್ನು ತಿರಸ್ಕರಿಸುತ್ತಾನೆ. ಅನಾದಿ ಕಾಲದ ನಮ್ಮ ಪೂರ್ವಜರಲ್ಲಿ ಸೋದರ ಸಂತಾನ ವರ್ಧನೆಯು ನಡೆಯುತ್ತಿತ್ತೋ ಏನೋ... ಅಂಥದನ್ನು ತಡೆಗಟ್ಟಲು ಈ ಕಥೆಯನ್ನು ಕಟ್ಟಿರಬಹುದು ಎಂದು ನಾವು ಭಾವಿಸಬಹುದು.

“ಬ್ರಹ್ಮನು ತನ್ನ ಮಗಳಾದ ಸರಸ್ವತಿಯನ್ನು ಮದುವೆಯಾದ" ಎನ್ನುವ ಪ್ರಸ್ತಾಪವು ಪುರಾಣಗಳಲ್ಲಿ ಬರುತ್ತದೆ. ತಂದೆಯು ಮಗಳನ್ನೇ ಮದುವೆಯಾಗಬಹುದೆ? ಇದು ಋತದ ಉಲ್ಲಂಘನೆಯಲ್ಲವೆ? ಎಂಬ ಪ್ರಶ್ನೆಯು ಉದ್ಭವಿಸುತ್ತದೆ. ಮತ್ಸ್ಯ ಪುರಾಣ, ಬ್ರಹ್ಮ ಪುರಾಣ ಹಾಗೂ ಶಿವಪುರಾಣಗಳಲ್ಲಿ ಈ ಪ್ರಸಂಗದ ಉಲ್ಲೇಖವಿದೆ.

ಬ್ರಹ್ಮನು ವಿಷ್ಣುವಿನ ಹೊಕ್ಕಳಿನಿಂದ ಹುಟ್ಟಿದ. ಬ್ರಹ್ಮಾಂಡ ಸೃಷ್ಟಿಯ ಕೆಲಸವನ್ನು ಹೊತ್ತುಕೊಂಡ. ಸೃಷ್ಟಿಕಾರ್ಯವನ್ನು ನಡೆಸಲು ಜ್ಞಾನವಿರಬೇಕು, ಬುದ್ಧಿಯಿರಬೇಕು, ಸೃಜನಶೀಲತೆಯಿರಬೇಕು ಹಾಗೂ ಮಾತು ತಿಳಿದಿರಬೇಕು. ಬ್ರಹ್ಮನು ಇವೆಲ್ಲವನ್ನೂ ಒಳಗೊಂಡ ಒಂದು ಸ್ತ್ರೀರೂಪವನ್ನು ಮಾನಸಿಕವಾಗಿ ಸೃಜಿಸಿದ. ಆಕೆಯೇ ಸರಸ್ವತಿ. ಸರ್ವಾಂಗ ಸುಂದರಿ. ಆಕೆಯನ್ನು ನೋಡುತ್ತಿರು ವಂತೆಯೇ ಬ್ರಹ್ಮನ ಮನಸ್ಸಿನಲ್ಲಿ ಮೋಹವು ಆವರಿಸಿತು.

ಬ್ರಹ್ಮವೈವರ್ತ ಪುರಾಣದ ಅನ್ವಯ, ಬ್ರಹ್ಮ-ಸರಸ್ವತಿಯರ ‘ವಿವಾಹ’ವು ನಡೆಯಿತು. ಇವರಿಬ್ಬರ ಸಂತಾನವಾಗಿ ವೇದ, ಸಂಗೀತ, ಸಾಹಿತ್ಯ, ನೃತ್ಯ ಇತ್ಯಾದಿಗಳು ಹುಟ್ಟಿದವು. ಇದು ಕಥೆ. ಯಮ-ಯಮಿಯರ ಕಥೆಗೂ, ಬ್ರಹ್ಮ-ಸರಸ್ವತಿಯರ ಕಥೆಗೂ ವ್ಯತ್ಯಾಸಗಳಿವೆ. ಯಮ-ಯಮಿಯರು ಸಂಜ್ಞಾ ದೇವಿಯ ಹೊಟ್ಟೆಯಲ್ಲಿ ಹುಟ್ಟಿದ ಅವಳಿ ಸಂತಾನ.

ಸರಸ್ವತಿ ಎನ್ನುವ ಸ್ತ್ರೀ ರೂಪಕ್ಕೆ ಭೌತಿಕ ದೇಹವಿಲ್ಲ. ಬೌದ್ಧಿಕ ದೇಹವಿದೆ. ಹಾಗಾಗಿ ಈ ಕಥೆಯನ್ನು ಸಾಂಕೇತಿಕವಾಗಿ ಸ್ವೀಕರಿಸಬೇಕು. ಅಕ್ಷರಶಃ ಅಲ್ಲ. ಸೃಷ್ಟಿ ಜ್ಞಾನವು, ಸೃಷ್ಟಿ ಕರ್ತನ ಬಳಿಯೇ ಉಳಿಯಬೇಕಾದದ್ದು ನ್ಯಾಯ. ಇಂಥ ಕಥೆಗಳು ಗ್ರೀಕ್ ಸಂಸ್ಕೃತಿ (ಯೂರನಸ್ ಮತ್ತು ಜಿಯಾ), ಈಜಿಪ್ಷಿಯನ್ ಸಂಸ್ಕೃತಿ (ಆತುಮ್ ತನ್ನಿಂದ ಶೂ ಮತ್ತು ತೆಫ್ನುತ್ ಸೃಜನೆ) ಹಾಗೂ ನೋಸ್ಟಿಕ್ ಸಂಸ್ಕೃತಿಯಲ್ಲಿ (ಸೋಫಿಯ ಜನನ) ಇವೆ.

ಸಿಗ್ಮಂಡ್ ಫ್ರಾಯ್ಡ್ (1856-1939) ಆಧುನಿಕ ಮನೋವೈದ್ಯಕೀಯದ ಸ್ಥಾಪಕರಲ್ಲಿ ಒಬ್ಬ. ಈತನ ‘ಮನೋವಿಶ್ಲೇಷಣೆ’ ಅಥವಾ ‘ಸೈಕೋ-ಅನಾಲಿಸಿಸ್’ ಇಂದಿಗೂ ಪ್ರಚಲಿತದಲ್ಲಿದೆ. “ಪ್ರತಿಯೋರ್ವ ಗಂಡು ಮಗುವಿನ ಮನಸ್ಸಿನಲ್ಲಿ, ತನ್ನ ತಾಯಿಯ ಬಗ್ಗೆ ಅಜ್ಞಾತ ಕಾಮವಿರುತ್ತದೆ. ತನ್ನ ತಂದೆ ಯನ್ನು ಪ್ರತಿಸ್ಪರ್ಧಿ ಎಂದು ಆ ಮಗು ಭಾವಿಸುತ್ತದೆ. ಈ ಭಾವವು 3-6 ವರ್ಷಗಳ ನಡುವೆ ಬಲವಾಗಿ ರುತ್ತದೆ" ಎನ್ನುವುದು ಆತನ ಅಭಿಪ್ರಾಯ.

ಸಿಗ್ಮಂಡ್ ಫ್ರಾಯ್ಡ್ ಈ ಬಗ್ಗೆ ತನ್ನ ‘ಇಂಟರ್‌ಪ್ರಿಟೇಷನ್ ಆಫ್ ಡ್ರೀಮ್ಸ್’ ಎನ್ನುವ ಪುಸ್ತಕದಲ್ಲಿ ವಿವರವಾಗಿ ಬರೆದ. ಇದನ್ನು ‘ಈಡಿಪಸ್ ತೊಡಕು’ ಅಥವಾ ‘ಈಡಿಪಸ್ ಕಾಂಪ್ಲೆಕ್ಸ್’ ಎಂದು ಕರೆದ. ಈಡಿಪಸ್, ಗ್ರೀಕ್ ಪುರಾಣಗಳಲ್ಲಿ ಬರುವ ಪಾತ್ರ. ಥೀಬ್ಸ್ ನಗರದ ಅರಸು ಲಾಯಿಸ್ ಮತ್ತು ಅರಸಿ ಯೋಕಾಸ್ತ. ಒಂದು ದೇವವಾಣಿಯು “ಲಾಯಿಸ್ ಹಾಗೂ ಯೋಕಾಸ್ತಳ ಗಂಡು ಮಗನು, ತಂದೆ ಯನ್ನು ಕೊಂದು, ತಾಯಿಯನ್ನು ಮದುವೆಯಾಗುತ್ತಾನೆ" ಎಂದು ಭವಿಷ್ಯವನ್ನು ನುಡಿಯುತ್ತದೆ.

ಲಾಯಿಸ್ ಮತ್ತು ಯೋಕಾಸ್ತಳ ಮಗ ಈಡಿಪಸ್. ಲಾಯಿಸ್, ಈಡಿಪಸ್‌ನನ್ನು ಕೊಲ್ಲುವಂತೆ ಸೇವಕರಿಗೆ ಹೇಳಿದರೆ, ಅವರು ಮಗುವನ್ನು ಕೊಲ್ಲದೆ ಕಾಡಿನಲ್ಲಿ ಬಿಡುತ್ತಾರೆ. ಆ ಮಗುವು ಕಾರಿಂತ್ ನಗರದ ಅರಸರಾದ ಪಾಲಿಬಸ್ ಹಾಗೂ ಮೆರೋಪೆಯರ ಕೈಗೆ ದೊರೆತು ಬೆಳೆಯುತ್ತದೆ.

ಒಂದು ಪಾನಗೃಹದಲ್ಲಿ “ನೀನು, ನಿನ್ನ ತಂದೆಯ ಮಗನಲ್ಲ" ಎಂದು ಕುಡುಕನೊಬ್ಬ ಮತ್ತಿನಲ್ಲಿ ಒರಲಿದಾಗ, ಈಡಿಪಸ್ ತನ್ನ ನಿಜ ತಂದೆ ತಾಯಿಯರನ್ನು ಹುಡುಕಿಕೊಂಡು ಹೊರಟ. ಒಂದು ಕಿರಿದಾದ ಹಾದಿ. ಈಡಿಪಸ್ ಹಾಗೂ ಮುದುಕನೊಬ್ಬ ಎದುರು ಬದುರಾದರು. ಯಾರು ಯಾರಿಗೆ ದಾರಿಯನ್ನು ಬಿಡಬೇಕು, ಎನ್ನುವ ವಾಗ್ಯುದ್ಧದಲ್ಲಿ ಈಡಿಪಸ್ ಆ ಮುದುಕನನ್ನು ಕೊಂದ. ಅವನೇ, ಈಡಿಪಸ್ಸನ ತಂದೆಯಾದ ಲಾಯಿಸ್.

ಈಡಿಪಸ್ ಥೀಬ್ಸ್ ನಗರವನ್ನು ಸಮೀಪಿಸಿದ. ಅಲ್ಲಿ ‘ಸಿಂಕ್ಸ್’ ಎನ್ನುವ ರಕ್ಕಸಿ. ದಾರಿಹೋಕರಿಗೆ ಪ್ರಶ್ನೆಯನ್ನು ಕೇಳಿ, ಉತ್ತರ ನೀಡದವರನ್ನು ತಿಂದು ಹಾಕುತ್ತಿರುತ್ತದೆ. ಹಾಗಾಗಿ ಯೋಕಾಸ್ತೆಯು “ಯಾರು ಸಿಂಕ್ಸ್ ಮಾರಿಯನ್ನು ಕೊಲ್ಲುವರೋ, ಅವರನ್ನು ತಾನು ಮದುವೆಯಾಗುತ್ತೇನೆ" ಎಂದು ಡಂಗುರ ಹೊಡೆಸಿರುತ್ತಾಳೆ.

ಈಡಿಪಸ್, ಸಿಂಕ್ಸ್ ಪ್ರಶ್ನೆಗಳಿಗೆ ಸರಿಯುತ್ತರವನ್ನು ನೀಡಿದ. ಸಿಂಕ್ಸ್ ಸತ್ತಿತು. ಯೋಕಾಸ್ತೆ ಈಡಿಪಸ್‌ ನನ್ನು ಮದುವೆಯಾದಳು. ಅವರಿಗೆ ಅಂತಿಗೊನೆ, ಇಸ್ಮೇನೆ, ಈಟಿಯೋಕ್ಲೆಸ್ ಮತ್ತು ಪಾಲಿನೈಸೀಸ್ ಎಂಬ ನಾಲ್ವರು ಮಕ್ಕಳಾದರು. ಕೊನೆಗೆ ಅವರಿಗೆ ಸತ್ಯ ಗೊತ್ತಾಗುತ್ತದೆ. ಯೋಕಾಸ್ತ ನೇಣು ಹಾಕಿಕೊಂಡಳು. ಈಡಿಪಸ್ ತನ್ನ ಕಣ್ಣುಗಳೆರಡನ್ನು ಚುಚ್ಚಿಕೊಂಡ. ಮಗಳು ಅಂತಿಗೊನೆಯ ಆಶ್ರಯದಲ್ಲಿ ಬದುಕಿ ಮರಣಿಸಿದ.

ತಾಯಿ-ಮಗನ ಕಾಮಕಥೆಯ ಈ ನಾಟಕವನ್ನು ನೋಡಿದ ಫ್ರಾಯ್ಡ್, ತನ್ನ ಸಿದ್ಧಾಂತಕ್ಕೆ ‘ಈಡಿಪಸ್ ಕಾಂಪ್ಲೆಕ್ಸ್’ ಎಂದು ಹೆಸರಿಟ್ಟ. ಕೆಲವರು “ಮಗಳು ಹಾಗೂ ತಂದೆಯ ನಡುವೆ ಕಾಮವಿರುವು ದಿಲ್ಲವೆ?" ಎಂದು ಪ್ರಶ್ನಿಸಿದರು. ಅದಕ್ಕೆ ಫ್ರಾಯ್ಡ್ ‘ಫೈಮಿನೈನ್ ಈಡಿಪಸ್ ಕಾಂಪ್ಲೆಕ್ಸ್’ ಎಂಬ ಹೆಸರನ್ನು ಸೂಚಿಸಿದ.

ಆದರೆ ಕಾರ್ಲ್ ಯೂಂಗ್ (1875-1961) ‘ಎಲೆಕ್ಟ್ರಾ ಕಾಂಪ್ಲೆಕ್ಸ್’ ಎಂಬ ಪದವನ್ನು ಬಳಕೆಗೆ ತಂದ. ಇದು ಸಹ ಗ್ರೀಕ್ ಪುರಾಣದ ಕಥೆ. ಅಗೆಮೆಮ್ನಾನ್ ರಾಜ. ಕ್ಲೈತಮೆನೆಸ ರಾಣಿ. ಎಲೆಕ್ಟ್ರಾ ಇವರ ಮಗಳು. ಈಕೆಗೆ ತಂದೆಯ ಮೇಲೆ ಪ್ರೀತಿ. ತಾಯಿಯ ಮೇಲೆ ದ್ವೇಷ. ಕ್ಲೈತ ಮೆನೆಸ ತನ್ನ ಪ್ರಿಯಕರ ಏಜಿಸ್ತಸ್‌ನನ್ನು ಸೇರಲು ಗಂಡನನ್ನು ಕೊಂದಳು. ಇದನ್ನು ಕಂಡ ಎಲೆಕ್ಟ್ರಾ ತನ್ನ ಸೋದರ ಒರೆಸ್ಟಸ್ ನನ್ನು ಪ್ರಚೋದಿಸಿ, ಅವನ ಮೂಲಕ ತಾಯಿಯನ್ನು ಕೊಲ್ಲಿಸಿದಳು. ಇದುವೇ ‘ಎಲೆಕ್ಟ್ರಾ ತೊಡಕು’ ಅಥವಾ ‘ಎಲೆಕ್ಟ್ರಾ ಕಾಂಪ್ಲೆಕ್ಸ್’. ಈ ಎರಡೂ ಕಥೆಗಳಲ್ಲಿ, ಹೆತ್ತವರು ಮತ್ತು ಮಕ್ಕಳ ನಡುವೆ ‘ಕಾಮ’ದ ಪಾತ್ರವಿದೆ ಎನ್ನುವುದು ಫ್ರಾಯ್ಡನ ನಿಲುವು. ಅದರ ಬದಲು, ‘ಅನುಬಂಧ’ ಎಂಬ ಪದವು ಹೆಚ್ಚು ಸೂಕ್ತವಾಗಬಹುದು.

ಸುಧೀರ್ ಕಕ್ಕರ್ (1938-2024) ಭಾರತೀಯ ಕಾದಂಬರಿಕಾರ. 1978ರಲ್ಲಿ ‘ದಿ ಇನ್ನರ್ ವರ್ಲ್ಡ್: ಎ ಸೈಕೋ-ಅನಲಿಟಿಕಲ್ ಸ್ಟಡಿ ಆಫ್ ಚೈಲ್ಡ್‌ಹುಡ್ ಸೊಸೈಟಿ ಆಫ್ ಇಂಡಿಯ’ ಎಂಬ ಪುಸ್ತಕವನ್ನು ಹಾಗೂ 1987ರಲ್ಲಿ ‘ಇಂಟಿಮೇಟ್ ರಿಲೇಶನ್ಸ್: ಎಕ್ಸ್‌ಪ್ಲೋರಿಂಗ್ ಇಂಡಿಯನ್ ಸೆಕ್ಷುವಾಲಿಟಿ’ ಎಂಬ ಪುಸ್ತಕವನ್ನು ಬರೆದ. ಈ ಪುಸ್ತಕಗಳಲ್ಲಿ ಹೆತ್ತವರ ಮತ್ತು ಮಕ್ಕಳ ನಡುವೆ ಇರುವ ಲೈಂಗಿಕ-ಲೈಂಗಿಕೇ ತರ ಅನುಬಂಧಗಳ ಬಗ್ಗೆ ಚರ್ಚಿಸಿ, ‘ಯಯಾತಿ ತೊಡಕು’ ಅಥವಾ ‘ಯಯಾತಿ ಕಾಂಪ್ಲೆಕ್ಸ್’ ಎಂಬ ಹೊಸ ಪರಿಕಲ್ಪನೆಯನ್ನು ಮುಂದಿಟ್ಟ. ಫ್ರಾಯ್ಡ್ ಸಿದ್ಧಾಂತದ ಅನ್ವಯ “ಮಗನಿಗೆ ತಾಯಿಯ ಮೇಲೆ ಕಾಮವಾಂಛೆಯಿರುವ ಕಾರಣ, ತಂದೆಯನ್ನು ಪ್ರತಿಸ್ಪರ್ಧಿಯಂತೆ ಕಾಣುತ್ತಾನೆ". ಹಾಗೆಯೇ “ಮಗಳಿಗೆ ತಂದೆಯ ಮೇಲೆ ಕಾಮವಾಂಛೆಯಿದ್ದು, ತಾಯಿಯನ್ನು ಪ್ರತಿಸ್ಪರ್ಧಿಯಂತೆ ಕಾಣುತ್ತಾಳೆ" ಎನ್ನಬಹುದು.

ಸುಧೀರ್ ಕಕ್ಕರ್ ಈ ಪರಿಕಲ್ಪನೆಯನ್ನು ವಿಭಿನ್ನ ಮಟ್ಟಕ್ಕೆ ಏರಿಸಿದರು. ತಂದೆಯಾದವನು, ಸಕಾಲ ದಲ್ಲಿ ಕೌಟುಂಬಿಕ ಜವಾಬ್ದಾರಿಯನ್ನು ಮಗನಿಗೆ ವಹಿಸದಿದ್ದರೆ, ಅವನು ತಂದೆಯನ್ನು ದ್ವೇಷಿಸು ತ್ತಾನೆ ಎನ್ನುವುದು ಅವರ ವಾದದ ತಿರುಳು. ಮಗನು ಕಾಮವಾಂಛೆಗಾಗಿ ತಂದೆಯನ್ನು ದ್ವೇಷಿಸು ತ್ತಿಲ್ಲ; ಬದಲಿಗೆ ಅಧಿಕಾರ-ಅವಕಾಶವನ್ನು ಬಿಟ್ಟುಕೊಡದಿರುವ ಹಿನ್ನೆಲೆಯಲ್ಲಿ ದ್ವೇಷಿಸುತ್ತಾನೆ ಎನ್ನುತ್ತಾರೆ.

ಯಯಾತಿಯು ಸಹಜ ವೃದ್ಧಾಪ್ಯವನ್ನು ತಲುಪಿದ. ಆಗ ಅವನು ಹಸ್ತಿನಾವತಿಯ ಸಿಂಹಾಸನವನ್ನು ಮಕ್ಕಳಿಗೆ ಬಿಟ್ಟುಕೊಡಬೇಕಾಗಿತ್ತು. ಆದರೆ ಯಯಾತಿಗೆ ತನ್ನ ಮಕ್ಕಳಿಂದ ಯೌವನವನ್ನು ಪಡೆದು, ಮತ್ತಷ್ಟು ದಶಕಗಳ ಕಾಲ (ಸಿಂಹಾಸನದಲ್ಲಿ ರಾಜನಾಗಿ ಕುಳಿತುಕೊಂಡು) ಸುಖ ಸಂತೋಷಗಳನ್ನು ಅನುಭವಿಸುವ ಆಸೆ. ಯಯಾತಿಗೆ ಐವರು ಮಕ್ಕಳು. ಯದು, ತುರ್ವಸು, ದ್ರಹ್ಯು, ಅನು ಮತ್ತು ಪುರು. ಈ ಐದು ಮಕ್ಕಳಲ್ಲಿ ಮೊದಲ ನಾಲ್ವರು ತಮ್ಮ ಯೌವನದ ವಿನಿಮಯಕ್ಕೆ ಒಪ್ಪುವುದಿಲ್ಲ.

ಹಾಗಾಗಿ ಅವರಿಗೆ “ಕುರು ಸಾಮ್ರಾಜ್ಯದಲ್ಲಿ ಪಾಲಿಲ್ಲ; ಅವರು ರಾಜರಾಗಲು ಅನರ್ಹರು" ಎಂದು ಶಪಿಸುತ್ತಾನೆ ಯಯಾತಿ. ಯೌವನ ವಿನಿಮಯಕ್ಕೆ ಒಪ್ಪಿದ ಪುರು ಅಥವ ಪುರೂರವನನ್ನು (ಪುರೂರವನ ಯೌವನವನ್ನು ಅನುಭವಿಸಿದ ನಂತರ) ಹಸ್ತಿನಾಪುರದ ಅರಸನನ್ನಾಗಿಸುತ್ತಾನೆ. ಆಗ “ಯಯಾತಿಯ ನಾಲ್ವರು ಮಕ್ಕಳಿಗೆ, ತಮ್ಮ ತಂದೆಯನ್ನು ಕೊಲ್ಲಬೇಕೆಂಬ ಭಾವನೆಯು ಬಂದಿದ್ದರೆ ಆಶ್ಚರ್ಯ ಪಡಬೇಕಿಲ್ಲ" ಎನ್ನುತ್ತಾರೆ ಸುಧೀರ್ ಕಕ್ಕರ್.

ಇದು ಯಯಾತಿ ತೊಡಕಿನ ತಿರುಳು. ಮನುಷ್ಯರ ನಡುವಿನ ಕಾಮ-ಪ್ರೇಮ-ಪ್ರೀತಿಯು, ಪ್ರಾಣಿ ಜಗತ್ತಿನಷ್ಟು ಸರಳವಲ್ಲ. ಮನುಷ್ಯನು ಮನಸ್ಸನ್ನು ಕಾಮದ ವಶಕ್ಕೆ ನೀಡದೆ, ಬುದ್ಧಿ ಹಾಗೂ ವಿವೇಕಗಳಿಗೆ ಮನಸ್ಸನ್ನು ಒಪ್ಪಿಸಿದರೆ, ಹೆಚ್ಚಿನ ಲೈಂಗಿಕ ಸಮಸ್ಯೆಗಳು ಹುಟ್ಟಿಕೊಳ್ಳುವುದಿಲ್ಲ.