Ramanand Sharma Column: ಬ್ಯಾಂಕಿಂಗ್ ಉದ್ಯಮದಲ್ಲಿ ಹೀಗೊಂದು ಗ್ರಾಹಕ-ಸ್ನೇಹಿ ಬೆಳವಣಿಗೆ
ಬ್ಯಾಂಕುಗಳು ಸಾಲಮನ್ನಾ ಮತ್ತು ರೈಟ್-ಆಫ್ ನಿಂದ ಆದ ನಷ್ಟವನ್ನು ಈ ರೀತಿ ಸಮತೋಲನ ಗೊಳಿಸುತ್ತವೆ ಎಂದು ವಿಪಕ್ಷದವರು ಭಾರಿ ಟೀಕೆ ಮಾಡಿದ್ದರು. ಈ ದಂಡದ ಬಗ್ಗೆ ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು; ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2020ರಲ್ಲಿಯೇ ಈ ದಂಡವನ್ನು ನಿಲ್ಲಿಸಿದ್ದು, ಈಗ ಕೆನರಾ ಬ್ಯಾಂಕ್ ಈ ತಿಂಗಳ 1ನೇ ತಾರೀಖಿನಿಂದ ಅನ್ವಯವಾಗುವಂತೆ ಇದನ್ನು ನಿಲ್ಲಿಸುವುದಾಗಿ ಹೇಳಿದೆ.


ವಿತ್ತಲೋಕ
ರಮಾನಂದ ಶರ್ಮಾ
ಬ್ಯಾಂಕಿಂಗ್ ಉದ್ಯಮದಲ್ಲಿ ಕಳೆದ ವಾರ ಎರಡು ಗ್ರಾಹಕ-ಸ್ನೇಹಿ ಬೆಳವಣಿಗೆಗಳಾಗಿದ್ದು, ಇದರಿಂ ದಾಗಿ ಬ್ಯಾಂಕ್ ಗ್ರಾಹಕರು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ. ಗ್ರಾಹಕರು ತಮ್ಮ ಉಳಿ ತಾಯ ಖಾತೆಗಳಲ್ಲಿ ನಿಗದಿತ ಕನಿಷ್ಠ ಮೊತ್ತವನ್ನು ಇರಿಸದಿದ್ದರೆ, ಅಂಥವರಿಗೆ ಬ್ಯಾಂಕುಗಳು ದಂಡ ವಿಧಿಸುತ್ತವೆ. ಈ ದಂಡ ಪ್ರಮಾಣವು ಏಕರೂಪವಾಗಿರದೆ ಬ್ಯಾಂಕಿನಿಂದ ಬ್ಯಾಂಕಿಗೆ ಭಿನ್ನವಾಗಿರು ತ್ತದೆ.
ಜತೆಗೆ, ಪಟ್ಟಣ, ನಗರ ಮತ್ತು ಮೆಟ್ರೋಪಾಲಿಟನ್ ಶಾಖೆಗಳ ಖಾತೆಗಳಲ್ಲಿ ಉಳಿಸಬೇಕಿರುವ ಕನಿಷ್ಠ ಮೊತ್ತದ ಪ್ರಮಾಣವನ್ನು ಕಾಯ್ದುಕೊಳ್ಳದಿದ್ದರೆ ವಿಧಿಸಲಾಗುವ ದಂಡಗಳಲ್ಲೂ ವ್ಯತ್ಯಾಸ ಇರುತ್ತದೆ. ಬೇಸಿಕ್ ಉಳಿತಾಯ ಠೇವಣಿ ಖಾತೆಗಳು ಮತ್ತು ಪ್ರಧಾನಮಂತ್ರಿ ಜನಧನ ಯೋಜನೆ ಖಾತೆಗಳಿಗೆ ಈ ದಂಡ ನಿಬಂಧನೆಯಿಂದ ವಿನಾಯಿತಿ ನೀಡಲಾಗಿದೆ. ಈ ದಂಡವನ್ನು ಪ್ರತಿ ತಿಂಗಳೂ ವಿಧಿಸಲಾಗುತ್ತಿದ್ದು, ಇದು ಉಳಿತಾಯ ಖಾತೆಗಳಿಗೆ ರುಪಾಯಿ 25ರಿಂದ 600ರವರೆಗೆ ಮತ್ತು ಚಾಲ್ತಿ ಖಾತೆಗಳಿಗೆ ರುಪಾಯಿ 1000ದಿಂದ 10000ದವರೆಗೆ ಇದೆ ಎಂದು ಹೇಳಲಾಗುತ್ತಿದೆ.
ಕೆಲವು ಮಾಧ್ಯಮಗಳ ವರದಿ ಮತ್ತು ರಾಜ್ಯಸಭಾ ಪ್ರಶ್ನೋತ್ತರದಲ್ಲಿ ನೀಡಿದ ಹೇಳಿಕೆ ಪ್ರಕಾರ, 2018ರಿಂದ 2023ರವರೆಗೆ ಬ್ಯಾಂಕುಗಳು 35000 ಕೋಟಿ ರು. ದಂಡವನ್ನು ಸಂಗ್ರಹಿಸಿದ್ದು, ಅದರಲ್ಲಿ ಸಾರ್ವಜನಿಕ ರಂಗದ ಬ್ಯಾಂಕುಗಳ ಪಾಲು 8495 ಕೋಟಿಯಷ್ಟಿದೆ. ಬ್ಯಾಂಕುಗಳು ಸಾಲಮನ್ನಾ ಮತ್ತು ರೈಟ್-ಆಫ್ ನಿಂದ ಆದ ನಷ್ಟವನ್ನು ಈ ರೀತಿ ಸಮತೋಲನಗೊಳಿಸುತ್ತವೆ ಎಂದು ವಿಪಕ್ಷದವರು ಭಾರಿ ಟೀಕೆ ಮಾಡಿದ್ದರು. ಈ ದಂಡದ ಬಗ್ಗೆ ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು; ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2020ರಲ್ಲಿಯೇ ಈ ದಂಡವನ್ನು ನಿಲ್ಲಿಸಿದ್ದು, ಈಗ ಕೆನರಾ ಬ್ಯಾಂಕ್ ಈ ತಿಂಗಳ 1ನೇ ತಾರೀಖಿನಿಂದ ಅನ್ವಯವಾಗುವಂತೆ ಇದನ್ನು ನಿಲ್ಲಿಸುವುದಾಗಿ ಹೇಳಿದೆ.
ಇದನ್ನೂ ಓದಿ: Ramanand Sharma Column: ಅನುಕೂಲಸಿಂಧು ಹೊಂದಾಣಿಕೆ ದಡ ಸೇರಬಹುದೇ ?
ಇದರಿಂದಾಗಿ ವೇತನವರ್ಗ, ಹಿರಿಯ ನಾಗರಿಕರು, ಆರ್ಥಿಕವಾಗಿ ಕೆಳಸ್ತರದಲ್ಲಿರುವವರಿಗೆ, ಮಧ್ಯಮ ವರ್ಗದವರಿಗೆ ಅನುಕೂಲವಾಗುತ್ತಿದೆ. ಮೊತ್ತ ಸಣ್ಣದಿದ್ದರೂ, ಹಣದುಬ್ಬರದ ಕಾಲದಲ್ಲಿ ಆ ಮೊತ್ತ ಎಷ್ಟೇ ಸಣ್ಣದಿರಲಿ ಅದಕ್ಕೆ ತೂಕ ಇರುತ್ತದೆ. ‘ಈ ಗಲ್ಲಿಯ ಕೋಳಿ ಕೂಗಿದರೆ, ಪಕ್ಕದ ಗಲ್ಲಿಯ ಕೋಳಿಯೂ ಕೂಗುತ್ತದೆ’ ಎಂಬ ಜಾಣನುಡಿಯಂತೆ, ಕೆನರಾ ಬ್ಯಾಂಕ್ ರೀತಿಯಲ್ಲಿ ಉಳಿದ ಬ್ಯಾಂಕುಗಳೂ ಈಗಿನ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ವ್ಯವಹಾರವನ್ನು ಉಳಿಸಿ-ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಸ್ವಲ್ಪ ಅನನುಕೂಲವಾದರೂ ಅನಿವಾರ್ಯವಾಗಿ ಈ ಹಾದಿಯನ್ನು ಹಿಡಿಯಲೇ ಬೇಕಾಗಿದೆ.
ಹೀಗಾಗಿ, ‘ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ಉಳಿಸದಿದ್ದರೆ ದಂಡ ಹಾಕುವಿಕೆ’ಯ ಪರಿಪಾಠವು ಇತಿಹಾಸದ ಪುಟವನ್ನು ಸೇರುವುದು ಖಾತ್ರಿ. ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಯಾವುದೇ ಕಾರಣಕ್ಕೆ ಮುಚ್ಚಿದರೆ, ಸಮಾಪ್ತಿಯಾದರೆ, ದಿವಾಳಿಯಾದರೆ, ವಿಫಲಗೊಂಡರೆ, ಅದರಿಂದಾಗಿ ಠೇವಣಿದಾರರು ಅತಂತ್ರಗೊಳ್ಳುವುದನ್ನು ತಪ್ಪಿಸಲು ಭಾರತೀಯ ರಿಸರ್ವ್ ಬ್ಯಾಂಕ್ ನ ಅಧೀನ ಸಂಸ್ಥೆಯಾದ ‘ಠೇವಣಿ ವಿಮಾ ಮತ್ತು ಸಾಲ ಖಾತ್ರಿ ನಿಗಮವು ( Deposit Insurance and Credit Guarantee Corporation- DICGC) ಠೇವಣಿದಾರರಿಗೆ ಪರಿಹಾರವನ್ನು ನೀಡುತ್ತದೆ.
1962ರಲ್ಲಿ ಆರಂಭವಾಗಿರುವ ಈ ನಿಗಮವು, ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳಲ್ಲಿ ಗ್ರಾಹಕರು ಹೊಂದಿರುವ ಉಳಿತಾಯ ಮತ್ತು ಚಾಲ್ತಿ ಖಾತೆಗಳಲ್ಲಿನ ಠೇವಣಿಗಳಿಗೆ ವಿಮಾ ಭದ್ರತೆಯನ್ನು ಒದಗಿಸುತ್ತದೆ. ಈ ನಿಗಮದಲ್ಲಿ ಪ್ರಸ್ತುತ 140 ವಾಣಿಜ್ಯ ಬ್ಯಾಂಕುಗಳು ಮತ್ತು 1857 ಸಹಕಾರಿ ಬ್ಯಾಂಕುಗಳು ನೋಂದಾಯಿಸಿಕೊಂಡಿವೆ. ಈ ನಿಗಮ ಆರಂಭವಾದಾಗ ಗರಿಷ್ಠ ಪರಿಹಾರ 1500 ರು. ಆಗಿತ್ತು.
ಇದು 1976ರಲ್ಲಿ 20000 ರು., 1980ರಲ್ಲಿ 30000 ರು.ಗೆ ಏರಿತು. ಹಣದುಬ್ಬರ, ಕುಸಿಯುತ್ತಿರುವ ರುಪಾಯಿ ಮೌಲ್ಯ ಮತ್ತು ವಿದೇಶಗಳಲ್ಲಿ ಈ ನಿಟ್ಟಿನಲ್ಲಿ ನೀಡುವ ಪರಿಹಾರದ ಮೊತ್ತವನ್ನು ಪರಿಗಣಿಸಿ, ಗರಿಷ್ಠ ವಿಮಾ ಪರಿಹಾರ ಮೊತ್ತವನ್ನು 1993ರಲ್ಲಿ 1 ಲಕ್ಷ ರುಪಾಯಿಗೆ ಏರಿಸಲಾಯಿತು. ಇತ್ತೀಚಿನ ವರ್ಷಗಳಲ್ಲಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ವೈಫಲ್ಯ ಹೆಚ್ಚುತ್ತಿದ್ದು, ಠೇವಣಿದಾರರು ಬೀದಿಗೆ ಬೀಳುವುದನ್ನು ತಪ್ಪಿಸಲು ವಿಮಾ ಪರಿಹಾರದ ಮೊತ್ತವನ್ನು ಹೆಚ್ಚಿಸ ಬೇಕೆಂದು ದೇಶಾದ್ಯಂತ ಆಗ್ರಹ ಹೊಮ್ಮಿತ್ತು.
ಆಗ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020-21ರ ಬಜೆಟ್ನಲ್ಲಿ ಠೇವಣಿ ವಿಮಾ ಪರಿಹಾರ ಮೊತ್ತವನ್ನು 1 ರಿಂದ 5 ಲಕ್ಷ ರುಪಾಯಿಗೆ ಏರಿಸಿದ್ದರು. ಇದು ಒಟ್ಟೂ ಠೇವಣಿ ಖಾತೆಗಳ ಶೇ.92ರಷ್ಟು ಮತ್ತು ಒಟ್ಟು ಠೇವಣಿಯ ಶೇ.28ರಷ್ಟು ಭಾಗಕ್ಕೆ ವಿಮಾ ರಕ್ಷಣೆ ನೀಡುತ್ತಿದೆ. ಹಣದು ಬ್ಬರ ಮತ್ತು ಬ್ಯಾಂಕುಗಳ ವೈಫಲ್ಯ ನಿರಂತರವಾಗಿ ಹೆಚ್ಚುತ್ತಿರುವುದನ್ನು ನೋಡಿ ಬ್ಯಾಂಕುಗಳ ಗ್ರಾಹಕರು ಠೇವಣಿ ವಿಮಾ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕೆಂದು ಸರಕಾರವನ್ನು ಆಗ್ರಹಿಸು ತ್ತಿದ್ದಾರೆ.
ಹೀಗಾಗಿ, ಸರಕಾರವು ಪ್ರಸ್ತುತ ಇರುವ 5 ಲಕ್ಷ ರು. ಪರಿಹಾರದ ಗರಿಷ್ಠ ಮಿತಿಯನ್ನು ಇನ್ನು ಆರು ತಿಂಗಳಿನಲ್ಲಿ ಹೆಚ್ಚಿಸುವ ಚಿಂತನೆಯಲ್ಲಿದೆ ಎಂಬ ಹಣಕಾಸು ಸಚಿವಾಲಯದ ಮಾಹಿತಿಯನ್ನು ಉಲ್ಲೇಖಿಸಿ ಹಣಕಾಸು ಮಾಧ್ಯಮಗಳು ವರದಿ ಮಾಡಿವೆ. ಈ ವಿಷಯದಲ್ಲಿ ಹಣಕಾಸು ಸಚಿವಾಲ ಯವು ಅಂತಿಮ ನಿರ್ಣಯ ಕೈಗೊಳ್ಳುವುದು ಇನ್ನೂ ಬಾಕಿಯಿದ್ದು, ಐದು ವರ್ಷಗಳ ಹಿಂದೆ ನಿಗದಿ ಯಾಗಿದ್ದ 5 ಲಕ್ಷ ರು. ಗರಿಷ್ಠ ಮಿತಿಯು 10 ಲಕ್ಷ ರು. ವರೆಗೆ ಏರುವ ಸಾಧ್ಯತೆ ದಟ್ಟವಾಗಿದೆ.
ಈ ನಿಟ್ಟಿನಲ್ಲಿ ಸಚಿವಾಲಯವು ಕಾರ್ಯೋನ್ಮುಖವಾಗಿದ್ದು, ಇದಕ್ಕೆಷ್ಟು ಠೇವಣಿದಾರರನ್ನು ಒಳಪಡಿಸಬಹುದು, ಒಳಪಡುವ ಒಟ್ಟು ಠೇವಣಿ, ಎಷ್ಟು ಠೇವಣಿಗೆ ಸರಕಾರ ಗ್ಯಾರಂಟಿ ಕೊಡ ಬಹುದು ಮತ್ತು ಸದ್ಯ ವಿಮಾ ರಕ್ಷಣೆಗೆ ಒಳಪಟ್ಟ ಠೇವಣಿ ಮುಂತಾದ ಮಾಹಿತಿಗಳನ್ನು ಅದು ಕಲೆಹಾಕುತ್ತಿದೆ.
ಪರಿಹಾರದ ಲೆಕ್ಕಾಚಾರ ಹೇಗೆ?: ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯು ದಿವಾಳಿಯಾದಾಗ, ವಿಫಲಗೊಂಡಾಗ, ಸಮಾಪ್ತಿಯಾದಾಗ ಅಥವಾ ಲಿಕ್ವಿಡೇಟ್ ಆದಾಗ, ಠೇವಣಿ ವಿಮಾ ನಿಗಮವು ಠೇವಣಿದಾರರಿಗೆ, ಅವರು ಬ್ಯಾಂಕ್ನಲ್ಲಿ ಇರಿಸಿದ ಠೇವಣಿ (ಬಡ್ಡಿಯೂ ಸೇರಿ) ಅಥವಾ ಗರಿಷ್ಠ ಐದು ಲಕ್ಷ ರುಪಾಯಿಗಳ ಪರಿಹಾರವನ್ನು, ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ಸ್ಥಗಿತವಾದ ದಿನ ಖಾತೆ ಯಾರ ಹೆಸರಿನಲ್ಲಿ ಇರುತ್ತದೆಯೋ ಅವರಿಗೆ ನೀಡಲಾಗುತ್ತದೆ. ಈ ಪರಿಹಾರದ ಮೊತ್ತವು ಗ್ರಾಹಕನು ಒಂದು ಬ್ಯಾಂಕಿನ ಎಲ್ಲಾ ಶಾಖೆಗಳಲ್ಲಿ ಹೊಂದಿರುವ ಎಲ್ಲಾ ರೀತಿಯ (ಉಳಿತಾಯ, ಚಾಲ್ತಿ, ರೆಕರಿಂಗ್ ಮತ್ತು ನಿಶ್ಚಿತ ಠೇವಣಿ) ಖಾತೆಗಳಿಗೆ ಅನ್ವಯವಾಗುತ್ತದೆ.
ಈ ಪರಿಹಾರವನ್ನು ನೀಡುವಾಗ ಒಂದು ಬ್ಯಾಂಕ್ ಹೆಸರಿನಲ್ಲಿ ಲೆಕ್ಕ ಹಾಕಲಾಗುತ್ತದೆಯೇ ವಿನಾ, ಶಾಖೆಗಳಲ್ಲಿ ಇರುವ ಠೇವಣಿಗಳನ್ನು ಪ್ರತ್ಯೇಕವಾಗಿ ಪರಿಗಣಿಸುವುದಿಲ್ಲ. ಉದಾಹರಣೆಗೆ, ಗ್ರಾಹಕ ನೊಬ್ಬನು ಕೆನರಾ ಬ್ಯಾಂಕ್ನ ನಾಲ್ಕು ಶಾಖೆಗಳಲ್ಲಿ ಠೇವಣಿ ಇಟ್ಟಿದ್ದರೆ, ವಿಮಾ ಪರಿಹಾರ ನೀಡು ವಾಗ ಠೇವಣಿ ವಿಮಾ ನಿಗಮವು, ನಾಲ್ಕೂ ಶಾಖೆಗಳಲ್ಲಿರುವ ಠೇವಣಿಗಳನ್ನು ಪ್ರತ್ಯೇಕವಾಗಿ ಪರಿಗಣಿಸದೇ ಎಲ್ಲವನ್ನೂ ಒಟ್ಟಿಗೆ ಸೇರಿಸಿ ಲೆಕ್ಕ ಹಾಕಿ ಪರಿಹಾರವನ್ನು ನೀಡುತ್ತದೆ.
ಗ್ರಾಹಕನೊಬ್ಬ ಒಂದು ಶಾಖೆಯಲ್ಲಿ ನಿಶ್ಚಿತ ಠೇವಣಿಯಾಗಿ 4 ಲಕ್ಷ ರು., ರೆಕರಿಂಗ್ ಡಿಪಾಸಿಟ್ ಆಗಿ 25000 ರು., ಉಳಿತಾಯ ಖಾತೆಯಲ್ಲಿ 75000 ರು., ಚಾಲ್ತಿ ಖಾತೆಯಲ್ಲಿ 50000 ರು. ಮತ್ತು ಸಂಚಿತ ಖಾತೆಯಲ್ಲಿ 25000 ರು. ಇರಿಸಿದ್ದು, ಅಕಸ್ಮಾತ್ತಾಗಿ ಬ್ಯಾಂಕ್ ಸ್ಥಗಿತಗೊಂಡರೆ/ದಿವಾಳಿಯಾದರೆ, ಆ ಗ್ರಾಹಕನಿಗೆ ಆತನ ಒಟ್ಟೂ 575000 ರು. ಠೇವಣಿಗೆ ಬದಲಾಗಿ 500000 ರು. ಪರಿಹಾರ ದೊರಕುತ್ತದೆ. ಇದೇ ಬ್ಯಾಂಕಿನ ಇನ್ನೊಂದು ಶಾಖೆಯಲ್ಲಿ ಬೇರೆ ಡಿಪಾಸಿಟ್ ಇದ್ದರೆ, ಈಗಾಗಲೇ ಈ ಬ್ಯಾಂಕಿನಲ್ಲಿ ಈ ಗ್ರಾಹಕನ ಕೋಟಾ ಮುಗಿದಿದ್ದು ಬೇರೆ ಪರಿಹಾರ ದೊರಕುವುದಿಲ್ಲ.
ಡಿಪಾಸಿಟರ್ ಅಪ್ರಾಪ್ತನ ಪೋಷಕರಾಗಿದ್ದರೆ, ಆ ಗ್ರಾಹಕನಿಗೆ ಐದು ಲಕ್ಷದವರೆಗೆ ಪರಿಹಾರ ದೊರಕುತ್ತದೆ. ಹಾಗೆಯೇ ಠೇವಣಿ ಇರಿಸಿದ ಪ್ರತಿ ಬ್ಯಾಂಕ್ನಲ್ಲೂ ಐದು ಲಕ್ಷ ರುಪಾಯಿವರೆಗೆ ಪರಿಹಾರ ಸಿಗುತ್ತದೆ. ಈ 5 ಲಕ್ಷ ರುಪಾಯಿಯ ಗರಿಷ್ಠ ಮಿತಿಯು ಸದ್ಯದಲ್ಲೇ ಗಮನಾರ್ಹವಾಗಿ ಏರುವ ಸೂಚನೆಯು ಹಣಕಾಸು ಸಚಿವಾಲಯದಿಂದ ಬಂದಿದ್ದು, ಬ್ಯಾಂಕ್ ಠೇವಣಿದಾರರು ಸ್ವಲ್ಪ ನೆಮ್ಮದಿಯನ್ನು ಎದುರುನೋಡುತ್ತಿದ್ದಾರೆ.
ಈ ಹೊಸ ವ್ಯವಸ್ಥೆ ಜಾರಿಗೆ ಬಂದರೆ, ಠೇವಣಿದಾರರು ತಮ್ಮ ಠೇವಣಿಯನ್ನು ವಿಭಜಿಸಿ, ಬೇರೆ ಬೇರೆ ಬ್ಯಾಂಕುಗಳಲ್ಲಿ ಇರಿಸುವ ತಂತ್ರಗಾರಿಕೆಯು ಸ್ವಲ್ಪ ನಿಯಂತ್ರಣಕ್ಕೆ ಬರಬಹುದು, ಬ್ಯಾಂಕ್ ಶಾಖೆ ಗಳಲ್ಲಿ ಠೇವಣಿ ಸ್ವಲ್ಪ ಹೆಚ್ಚಬಹುದು. ಯಾವುದೇ ಒಂದು ಬ್ಯಾಂಕಿನಲ್ಲಿ (ಎಲ್ಲ ಶಾಖೆಗಳು ಸೇರಿ) ತಮ್ಮ ಠೇವಣಿಯು 5 ಲಕ್ಷ ರುಪಾಯಿಯನ್ನು ಮೀರದಂತೆ ಎಚ್ಚರ ವಹಿಸುವವರು, ಈ ಮೊತ್ತವನ್ನು ಸ್ವಲ್ಪ ಏರಿಸಬಹುದು.
ಒಟ್ಟಾರೆ ಹೇಳುವುದಾದರೆ, ಬ್ಯಾಂಕಿಂಗ್ ಉದ್ಯಮದ ಈ ಎರಡು ಬೆಳವಣಿಗೆಗಳಿಂದಾಗಿ ಗ್ರಾಹಕರು ಕೊಂಚ ನಿರಾಳರಾಗುವಂತಾಗಿದೆ. ‘ಗ್ರಾಹಕರ ಠೇವಣಿ ಮೇಲಿನ ಬಡ್ಡಿ ಇಳಿತ’ ಮತ್ತು ‘ಸಾಲದ ಮೇಲಿನ ಬಡ್ಡಿ ಏರಿಕೆ’ ಎಂಬ ಮಾತುಗಳನ್ನಷ್ಟೇ ಬ್ಯಾಂಕುಗಳಿಂದ ಕೇಳುತ್ತಿದ್ದ ಗ್ರಾಹಕರಿಗೆ ಈ ಎರಡು ಬೆಳವಣಿಗೆಗಳು ಅಚ್ಚರಿ ಮೂಡಿಸಿವೆ. ಬ್ಯಾಂಕುಗಳ ವೈಫಲ್ಯದ ಪ್ರಮಾಣ ಇತ್ತೀಚೆಗೆ ಹೆಚ್ಚಿರುವುದು ಠೇವಣಿದಾರರಲ್ಲಿ ಚಿಂತೆಗೆ ಕಾರಣವಾಗಿತ್ತು.
ಠೇವಣಿದಾರರಲ್ಲಿ ಹಿರಿಯ ನಾಗರಿಕರು ಮತ್ತು ನಿವೃತ್ತರು ಹೆಚ್ಚಿನ ಪ್ರಮಾಣದಲ್ಲಿದ್ದು, ತಾವು ಜತನದಿಂದ ಕೂಡಿಟ್ಟ ಹಣವು ತಮ್ಮ ಕೊನೆಗಾಲದಲ್ಲಿ ತಮಗೇ ಸಿಗುವಂತಾಗಲಿ ಎಂದು ಅವರು ಆಶಿಸುತ್ತಿದ್ದರು. ಸರಕಾರದ ಈ ಕ್ರಮದಿಂದಾಗಿ ಅವರ ಆತಂಕ ಪೂರ್ಣವಾಗಿ ದೂರವಾಗದಿದ್ದರೂ, ಅವರ ನೆಮ್ಮದಿಯನ್ನು ಅದು ಸ್ವಲ್ಪ ಹೆಚ್ಚಿಸಲಿದೆ ಎಂದು ತೋರುತ್ತದೆ.
(ಲೇಖಕರು ಆರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)