ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Vishweshwar Bhat Column: ವೃತ್ತಿ ಮತ್ತು ವ್ಯಕ್ತಿತ್ವದ ಘನತೆ ಕಾಪಾಡುವುದೇ ಆದರ್ಶವೆಂದು ನಂಬಿ ಬಾಳಿದ ಟಿಜೆಎಸ್‌ ಜಾರ್ಜ್

ವರ್ಷಕ್ಕೆ ಐವತ್ತೆರಡು ವಾರದಂತೆ, ಇಪ್ಪತ್ತೈದು ವರ್ಷಗಳ ಕಾಲ ಅವರು ಬರೆದಿದ್ದು 1300 ಅಂಕಣ ವಾಗಿರಬಹುದು. ’ಕನ್ನಡಪ್ರಭ’ ದಲ್ಲಿ ಆ ಅಂಕಣ ’ನೇರಮಾತು’ ಎಂಬ ಶೀರ್ಷಿಕೆಯಲ್ಲಿ ಪ್ರಕಟ ವಾಗುತ್ತಿತ್ತು. ಅವರಿಗೆ ’ನೇರಮಾತು’ ಬಿಟ್ಟು ಬೇರೇನೂ ಗೊತ್ತಿರಲಿಲ್ಲ. ಹೀಗಾಗಿ ಅದೊಂದನ್ನೇ ಚೆಂದವಾಗಿ, ಆಪ್ತವಾಗಿ ಮಾಡುತ್ತಾ ಬಂದರು. ಈ ದಿನಗಳಲ್ಲಿ ಒಂದು ಪತ್ರಿಕೆಯಲ್ಲಿ ಅಂಕಣವನ್ನು ಅಬಾಧಿತವಾಗಿ ಇಪ್ಪತ್ತೈದು ವರ್ಷ ಬರೆಯುವುದು ಸಣ್ಣ ಮಾತಲ್ಲ.

ಘನತೆ ಕಾಪಾಡುವುದೇ ಆದರ್ಶವೆಂದು ನಂಬಿ ಬಾಳಿದ ಟಿಜೆಎಸ್‌ ಜಾರ್ಜ್

-

ಟಿಜೆಎಸ್ ಜಾರ್ಜ್ 97 ವರ್ಷಗಳ ದೀರ್ಘ ಬಾಳನ್ನು ಬಾಳಿದರು. ಪತ್ರಕರ್ತರಾಗಿ, ಲೇಖಕ ರಾಗಿ, ಅಂಕಣಕಾರರಾಗಿ ‘ಬರೆದು ಬಾಳಿದ’ ಅವರು, ನೇರವಂತಿಕೆಯನ್ನು ಎಲ್ಲೂ ಬಿಟ್ಟು ಕೊಡಲಿಲ್ಲ. ರಾಜಿಯೂ ಆಗಲಿಲ್ಲ. ಪತ್ರಕರ್ತ ಹಾಗೇ ಇರಬೇಕೆಂದುಕೊಂಡವರು ಅವರು. ಪತ್ರಿಕೋದ್ಯಮದ ಈ ಧೀಮಂತ ಸಾಧಕನೊಂದಿಗೆ ಕಾಲ ಕಳೆದು ಕಲಿತ ನೆನಪುಗಳನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಡಾ.ಎಸ್.ಎಲ್.ಭೈರಪ್ಪನವರ ನಿಧನದ‌ ಶೋಕದಲ್ಲಿರುವಾಗಲೇ, ನನ್ನ ವೃತ್ತಿ ಜೀವನದ ಮಹತ್ವದ ಮುರುಕಿಯಲ್ಲಿ ಮಾರ್ಗದರ್ಶಕರಾಗಿದ್ದ ’ಟಿಜೆಎಸ್’ ಎಂದೇ ಪರಿಚಿತರಾದ ತಯ್ಯಿಲ್ ಜೇಕಬ್ ಸೋನಿ ಜಾರ್ಜ್ ಅವರ ಸಾವು ಮತ್ತಷ್ಟು ಆಘಾತವನ್ನುಂಟು ಮಾಡಿದೆ.

ಜಾರ್ಜ್ ಭಾರತೀಯ ಪತ್ರಿಕೋದ್ಯಮಕ್ಕೆ ಪಿತಾಮಹನಂತಿದ್ದರು. ನನ್ನಂಥ ಸಾವಿರಾರು ಪತ್ರಕರ್ತರಿಗೆ ಆಲದಮರದಂತೆ ಆಶ್ರಯ ನೀಡಿ, ಎರಡು-ಮೂರು ತಲೆಮಾರುಗಳನ್ನು ತಿದ್ದಿ, ತೀಡಿ, ಹದಗೊಳಿಸಿ ರೂಪಿಸಿದವರು. ತಮ್ಮ ಪ್ರಖರ ಬರಹಗಳಿಂದಲೇ ಪತ್ರಕರ್ತ ರನ್ನೂ, ಓದುಗರನ್ನೂ ಪ್ರಭಾವಿಸಿ ದವರು.

ನಾನು ಕಳೆದ ಇಪ್ಪತ್ತೈದು ವರ್ಷಗಳಿಂದ ‘ಇಂಡಿಯನ್ ಎಕ್ಸ್‌ ಪ್ರೆಸ್’ನಲ್ಲಿ ಪ್ರತಿ ಭಾನುವಾರ ತಪ್ಪದೇ ಅವರ Point Of View ಅಂಕಣವನ್ನು ಓದಿದವನು. ಆ ಅಂಕಣಕ್ಕಾಗಿ ಭಾನುವಾರದ ಬೆಳಗಿನ ಚುಮುಚುಮು ನಿದ್ದೆ ಬಲಿ ಕೊಟ್ಟು, ಪತ್ರಿಕೆ ಬರುವವರೆಗೆ ಕತ್ತನ್ನು ಚಾಚಿ ಕಾದವನು. ಟಿಜೆಎಸ್ ಯಾವ ನೆಪವನ್ನೂ ಹೇಳದೇ ನಿರಂತರವಾಗಿ ಕಾಲು ಶತಮಾನ ಕಾಲ ಬರೆದವರು.

ವರ್ಷಕ್ಕೆ ಐವತ್ತೆರಡು ವಾರದಂತೆ, ಇಪ್ಪತ್ತೈದು ವರ್ಷಗಳ ಕಾಲ ಅವರು ಬರೆದಿದ್ದು 1300 ಅಂಕಣ ವಾಗಿರಬಹುದು. ’ಕನ್ನಡಪ್ರಭ’ ದಲ್ಲಿ ಆ ಅಂಕಣ ’ನೇರಮಾತು’ ಎಂಬ ಶೀರ್ಷಿಕೆಯಲ್ಲಿ ಪ್ರಕಟ ವಾಗುತ್ತಿತ್ತು. ಅವರಿಗೆ ’ನೇರಮಾತು’ ಬಿಟ್ಟು ಬೇರೇನೂ ಗೊತ್ತಿರಲಿಲ್ಲ. ಹೀಗಾಗಿ ಅದೊಂದನ್ನೇ ಚೆಂದವಾಗಿ, ಆಪ್ತವಾಗಿ ಮಾಡುತ್ತಾ ಬಂದರು. ಈ ದಿನಗಳಲ್ಲಿ ಒಂದು ಪತ್ರಿಕೆಯಲ್ಲಿ ಅಂಕಣವನ್ನು ಅಬಾಧಿತವಾಗಿ ಇಪ್ಪತ್ತೈದು ವರ್ಷ ಬರೆಯುವುದು ಸಣ್ಣ ಮಾತಲ್ಲ.

ಅಷ್ಟು ಶಿಸ್ತಿಗೆ ಒಳಪಡುವುದು ಅಂಕಣಕಾರರಿಗೂ ಕಷ್ಟ. ಅಷ್ಟು ವರ್ಷಗಳ ಕಾಲ ಅಂಕಣಕಾರ ರನ್ನು ಸಹಿಸಿ ಕೊಳ್ಳುವುದು ಪತ್ರಿಕೆ ಆಡಳಿತ ಮಂಡಳಿಗೂ ಕಷ್ಟ. ಇನ್ನು ಓದುಗರಿಗೆ ಅಷ್ಟು ವರ್ಷಗಳ ಕಾಲ ಒಬ್ಬರನ್ನೇ, ಅದೇ ಜಾಗದಲ್ಲಿ ವಾರವಾರವೂ ಸ್ವೀಕರಿಸುವುದು ಇನ್ನೂ ಕಷ್ಟ. ಆದರೆ ಟಿಜೆಎಸ್ ಇದನ್ನು ಒಂದು ವ್ರತದಂತೆ, ತಪಸ್ಸಿನಂತೆ, ಆಪ್ತ ವಾಗಿ ಮಾಡಿದರು.

ಇದನ್ನೂ ಓದಿ: Vishweshwar Bhat Column: ವಿಮಾನದಲ್ಲಿ ಇಂಧನ ವ್ಯವಸ್ಥೆ

ಈ ಸುದೀರ್ಘ ಅವಧಿಯಲ್ಲಿ ಅವರಿಗೆ ತೊಡಕುಗಳು, ಸಮಸ್ಯೆಗಳು ಎದುರಾಗದೇ ಇರಲಿಲ್ಲ. ಆದರೆ ಅವು ಅವರ ಬರವಣಿಗೆಯ ಹರವಿಗೆ ಅಡ್ಡಿ ಮಾಡಲಿಲ್ಲ. ಆದರೆ ಕರ್ತವ್ಯದ ಕರೆ ಯಾವತ್ತೂ ಗೆದ್ದಿತು.

ಪತ್ರಿಕೋದ್ಯಮದಲ್ಲಿ ತಪ್ಪು ಮಾಡುವುದು ಆಯ್ಕೆ ಆಗಿರುವುದಿಲ್ಲ. ಕಾರಣ ಅಂಕಣಕಾರ ಓದುಗರ ಗುಡ್‌ವಿಲ್‌ನಲ್ಲಿ ಬದುಕುತ್ತಾನೆ. ಜಾರ್ಜ್ ಅವರ ಲೇಖನಿ ಸುಸ್ತಾಗಲಿಲ್ಲ, ಬಳಲಲಿಲ್ಲ. ಎರಡು ವರ್ಷಗಳ ಹಿಂದೆ ಅವರು ಅಂಕಣಕ್ಕೆ ವಿದಾಯ ಹೇಳಿದ್ದರು. ಕೊನೆಯ ಅಂಕಣದ ತನಕ, ಅವರು ಓದುಗರನ್ನು ಒಂದು ದೀರ್ಘ ನಿಟ್ಟುಸಿರಿನ ತನಕ ತುದಿಗಾಲಲ್ಲಿ ನಿಲ್ಲಿಸಿದ್ದನ್ನು ಅನುಭವಿಸಿದ್ದೇವೆ.

ನಾವೆಲ್ಲ ಒಂದು ಧಾಟಿಯಲ್ಲಿ ಯೋಚಿಸುತ್ತಿದ್ದರೆ, ಟಿಜೆಎಸ್ ನಮಗೆ ಗೊತ್ತಿಲ್ಲದ ಹೊರಳು ಹಾದಿಗೆ ತಿರುಗಿಸಿ, ಸಂದಿಗೊಂದಲಗಳಲ್ಲಿ ಸುತ್ತಾಡಿಸಿ, ನಾವು ನೋಡಿರದ ಮಗ್ಗುಲನ್ನು ತೋರಿಸುತ್ತಿದ್ದರು. ಹಾಗಂತ ಜಾರ್ಜ್ ಹೇಳುವುದೆಲ್ಲವನ್ನೂ ಒಪ್ಪಿಕೊಳ್ಳುವುದು ಸಾಧ್ಯವಿರಲಿಲ್ಲ. ಅವರ ವಿಚಾರ ಅಷ್ಟೊಂದು ಪ್ರಖರ, ತೀಕ್ಷ್ಣವಾಗಿರುತ್ತಿತ್ತು. ಅವರೂ ಸರಿ, ಇವರೂ ಸರಿ, ಮುಂದೆ ನೋಡೋಣ, ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗೋಣ ಧಾಟಿಯ ಮಾತುಗಳು ಅವರ ಬಾಯಿಂದ ಬರುತ್ತಿರಲಿಲ್ಲ. ಅವರು ಹೇಳಬೇಕಾದುದನ್ನು ಸಣ್ಣ ಮೆಣಸಿನಕಾಯಿಯಲ್ಲಿ ನುರಿದು, ಜಜ್ಜಿ ಕೊಡುತ್ತಿದ್ದರು.

ಒಂಥರದ ‘ಬುಲ್ಡೋಜರ್ ನ್ಯಾಯ’ ಅವರ ವಾದದಲ್ಲಿ ಇರುತ್ತಿತ್ತು. ಅದಕ್ಕೇ ಜಾರ್ಜ್ ಇಷ್ಟ ವಾಗುತ್ತಿದ್ದುದು. ಎಲ್ಲರನ್ನೂ ಸಂಪ್ರೀತಗೊಳಿಸುವ ‘ಪೂರ್ಣಚೂರ್ಣ ಮಂಜರಿ’ ವಾದ ಅವರಿಗೆ ಗೊತ್ತಿರಲಿಲ್ಲ. ಬೇರೆಯವರನ್ನು ಬೇಸರಗೊಳಿಸಲು ಇಷ್ಟವಿಲ್ಲದಿದ್ದರೆ, ಅನಿಸಿದ್ದನ್ನು ನೇರವಾಗಿ ಹೇಳುವ ತಾಕತ್ತಿಲ್ಲದಿದ್ದರೆ, ತಪ್ಪನ್ನು ನೇರಾನೇರ ಖಂಡಿಸುವ ಛಾತಿ ಇಲ್ಲದಿದ್ದರೆ, ಅಂಕಣಕಾರರಾಗಿ ಪತ್ರಿಕೆಯ ಅಮೂಲ್ಯ, ಪವಿತ್ರ ಜಾಗವನ್ನು ನಿರರ್ಥಕಗೊಳಿಸಬಾರದು ಎಂದು ನಂಬಿದ್ದರು. ಅದನ್ನು ಅವರ ಅಂಕಣದಲ್ಲಿ ಢಾಳಾಗಿ ಕಾಣಬಹುದಿತ್ತು.

ನನಗೆ ತಿಳಿದಂತೆ, ಅಮೆರಿಕದ ಸಿಡ್ ಹಾರ್ಟ್‌ಮನ್ 74 ವರ್ಷಗಳ ಕಾಲ ಬರೆದ ಸುದೀರ್ಘ ಅಂಕಣಕಾರ. ಅಮೆರಿಕದ ‘ಸ್ಟಾರ್ ಟ್ರಿಬ್ಯೂನ್’ ಪತ್ರಿಕೆಯಲ್ಲಿ ಆತನ ಅಂಕಣ ಅವೆಷ್ಟೋ ವರ್ಷ ಗಳಿಂದ ಪ್ರಕಟವಾಗುತ್ತಿತ್ತು. ಈತನನ್ನು ಬಿಟ್ಟರೆ, ಆರ್ಟ್ ಬುಕ್‌ವಾಲ್ಡ್ ಸುಮಾರು ನಲವತ್ತೆಂಟು ವರ್ಷಗಳ ಕಾಲ ನಿರಂತರವಾಗಿ ಬರೆದ. ಜನಪ್ರಿಯತೆಯ ಉತ್ತುಂಗದಲ್ಲಿ ಅವರ ಸಿಂಡಿಕೇಟೆಡ್ ಅಂಕಣ ವಿಶ್ವದ ಐನೂರಕ್ಕೂ ಹೆಚ್ಚು ಪತ್ರಿಕೆಗಳಲ್ಲಿ ಏಕಕಾಲಕ್ಕೆ ಪ್ರಕಟವಾಗುತ್ತಿತ್ತು.

ಲಮ್ ಶನ್ ಮುಕ್ ಎಂಬ ಪತ್ರಕರ್ತ ಮತ್ತು ಪತ್ರಿಕಾ ಮಾಲೀಕ ‘ಹಾಂಗ್ ಕಾಂಗ್ ಎಕನಾಮಿಕ್ ಜರ್ನಲ’ ಪತ್ರಿಕೆಯಲ್ಲಿ ಸುಮಾರು ಐವತ್ತು ವರ್ಷಗಳವರೆಗೆ ಅಂಕಣ ಬರೆದ. ಅದೇ ರೀತಿ ನಲವತ್ತೆ ರಡು ವರ್ಷಗಳ ಕಾಲ ನಿರಂತರವಾಗಿ ಬರೆದವರು, ‘ಡೆಕ್ಕನ್ ಹೆರಾಲ್ಡ್’ ಸೇರಿದಂತೆ ಸುಮಾರು ಮೂವತ್ತು ಪತ್ರಿಕೆಗಳ ಸಂಪಾದಕರಾಗಿದ್ದ‌ ಪೋಥನ್ ಜೋಸೆಫ್. ‌

ಅವರು ಯಾವ ಪತ್ರಿಕೆ ಸೇರಿದರೂ, ‘Over A Cup of Tea’ ಮಾತ್ರ ತಪ್ಪದೇ ಪ್ರಕಟವಾಗುತ್ತಿತ್ತು. ಇವರ ಸಾಲಿನಲ್ಲಿ ಜಾರ್ಜ್ ಕೂಡ ನಿರಂತರ ಬರೆದರು. ಜಾರ್ಜ್ ಬರೆದಿದ್ದೆಲ್ಲವೂ ಗಟ್ಟಿಕಾಳು. ಸಾವಿರದ ಮುನ್ನೂರು ಕಂತುಗಳಲ್ಲಿ ಯಾವುದನ್ನೂ ಬಿಡುವಂತಿಲ್ಲ. ಅವನ್ನೆಲ್ಲ ಸೇರಿಸಿ ಪುಸ್ತಕ ಮಾಡುವವ ರಿಗೆ ಅಷ್ಟು ಸುಲಭ.

ಜೊಳ್ಳನ್ನು ಹೆಕ್ಕುವ ಸಮಸ್ಯೆಯೇ ಇಲ್ಲ. ಜಾರ್ಜ್ ತಮ್ಮ ಅಂಕಣದಲ್ಲೂ ರಾಜಿ ಆಗಲಿಲ್ಲ. ಬರೆದೂ ಬರೆದು ಮೆತ್ತಗಾಗಲಿಲ್ಲ. ಮೊದಲಿಗಿಂತ ಹೆಚ್ಚು ಪ್ರಖರವಾಗುತ್ತಾ ಹೋದರು. ಮತ್ತಷ್ಟು ಪ್ರತಿಗಾಮಿ ಯಾಗುತ್ತಾ ಹೋದರು. ಪ್ರಭುತ್ವದ ಜತೆಗೆ ಹೊಂದಾಣಿಕೆಯನ್ನು ಮಾಡಿಕೊಳ್ಳಲೇ ಇಲ್ಲ.

ಪತ್ರಕರ್ತನಿಗೆ ಮಧ್ಯಪಥ ಸುರಕ್ಷಿತ, ಹೀಗಾಗಿ ಆ ಪಥ ತುಳಿಯಬಾರದು ಎಂಬುದು ಜಾರ್ಜ್ ವಾದ ವಾಗಿತ್ತು. ನಮ್ಮ ವಾದವನ್ನು ಹೇಳುವ ಎದೆಗಾರಿಕೆ, ಪ್ರಾಮಾಣಿಕತೆ ಇಲ್ಲದಿದ್ದರೆ ಬರೆಯಬಾರದು, unpopular ಆದರೂ ಆಗಲಿ, ಒಂಟಿದನಿಯಾದರೂ ಪರವಾಗಿಲ್ಲ ಎಂಬ ದಾಢಸಿತನವಿಲ್ಲದಿದ್ದರೆ, ವ್ಯವಸ್ಥೆ ಬಗ್ಗೆ ಒಂದು ದಿವ್ಯ ಅಗೌರವ (irreverence) ಇಲ್ಲದಿದ್ದರೆ ಅಂಕಣ ಬರೆಯುವ ಗೋಜಿಗೆ ಹೋಗಬಾರದು ಎನ್ನುತ್ತಿದ್ದ ಅವರಿಗೆ ಒಂದು ಅಸಡ್ಡೆ, ನಿರ್ವಿಕಲ್ಪ ಧೋರಣೆ ಇದ್ದಂತಿತ್ತು.

ಈ ಕಾರಣದಿಂದ ಅವರು ಬೇರೆಯವರಿಗೆ ಬೇಸರವಾಗಬಹುದೇನೋ ಎಂಬ ನಾಜೂಕಯ್ಯ ಆಗಲಿಲ್ಲ. ತಮ್ಮ ಬರಹದಿಂದ ಕೆಲವರಿಗಾದರೂ ನೋವು, ಬೇಸರ ಆಗದಿದ್ದರೆ ಹೇಗೆಂದು ಚಿವುಟು ತ್ತಲೇ ಬರೆದರು. ಅದಕ್ಕೆ ಸರಿ ಹೊಂದುವ ಅವರ ಖಾರ ಖಾರ ಭಾಷೆ. ವ್ಯಂಗ್ಯಭರಿತ ಕಹಿ ಕಹಿ ಕಷಾಯ.

ರಾಜಕಾರಣಿಗಳನ್ನಂತೂ ಕೇಳಲೇಬೇಡಿ, ಹಿಂಜಿ ಹಿಪ್ಪಲಿ. This is too much ಎಂದು ಅನಿಸಿದರೂ ಪರವಾಗಿಲ್ಲ, ಜಾರ್ಜ್ ರಾಜಿ ಮಾಡಿಕೊಳ್ಳಲಿಲ್ಲ. ಹೇಳಬೇಕಾದ ಮಾತುಗಳನ್ನು ಕೊನೇ ಕ್ಷಣದಲ್ಲೂ ನುಂಗಲಿಲ್ಲ. ಈ ಕಾರಣಗಳಿಂದ ಜಾರ್ಜ್ ಅವರನ್ನು ಅಂಕಣಕಾರರನ್ನಾಗಿ ಬಹಳ ವರ್ಷ ಇಟ್ಟು ಕೊಳ್ಳುವುದು ಕಷ್ಟವೇ.

ಒಲ್ಲದ ಮನಸ್ಸಿನಿಂದ ಬರೆಯುವುದೂ ಅವರಿಗೆ ಕಷ್ಟವೇ. ಈ ಹಿನ್ನೆಲೆಯಲ್ಲಿ ಅವರ ಕಾಲು ಶತಮಾನದ ಆ ಅಂಕಣವನ್ನು ಗಮನಿಸಬೇಕು. ಜಾರ್ಜ್ ಬರೆಯುವುದನ್ನು ಬಿಟ್ಟಿಲ್ಲ. ಅಂಕಣದ ಚೌಕಟ್ಟಿಗೆ, ಡೆಡ್‌ಲೈನ್‌ಗೆ ಕಟ್ಟುಬಿದ್ದು ವಾರವಾರ ಬರೆಯದಿರಬಹುದು. ಆದರೆ ವಿದಾಯದ ಅಂಕಣದ ಕೊನೆಯಲ್ಲಿ ತಮ್ಮ ಹೋರಾಟ ಮಾತ್ರ ಮುಂದುವರಿಯುತ್ತದೆ ಎಂದು ಹೇಳಿದ್ದರು.

ಕಾರಣ ಜಾರ್ಜ್ ಅವರಂಥವರು ಸುಮ್ಮನಿರುವುದಿಲ್ಲ. ಬದುಕಿರುವ ತನಕ ಅವರು ಪ್ರಶ್ನಿಸುತ್ತಲೇ ಇದ್ದರು. ಅವರ ಪ್ರಕಾರ, ಪತ್ರಕರ್ತ ಇರಬೇಕಾದುದೇ ಹಾಗೆ. ಕೊನೆಕೊನೆಯಲ್ಲಿ ಅವರ ದನಿ ಕ್ಷೀಣಸಿತ್ತು. ಆದರೆ ಸಾಕ್ಷಿಪ್ರಜ್ಞೆ ಮಾತ್ರ ಶಿಥಿಲವಾಗಿರಲಿಲ್ಲ. ಜಾರ್ಜ್ ಅವರನ್ನು ಒಬ್ಬ ಬಂಡಾಯ ಗಾರನಾಗಿ, ಪ್ರತಿಗಾಮಿಯಾಗಿ, ಅತೃಪ್ತ ಜೀವಿಯಾಗಿ ನೋಡುವುದೇ ಚೆಂದ. ಈ ವ್ಯವಸ್ಥೆ ಬಗ್ಗೆ ಸದಾ ತಕರಾರು ಇಟ್ಟುಕೊಂಡೇ ತಮ್ಮ ಬರಹದ ಬದುಕನ್ನು ಪೊರೆದುಕೊಂಡು ಬಂದ ಜಾರ್ಜ್ ಯಾರನ್ನೂ ಬಿಟ್ಟವರಲ್ಲ.

ಸ್ನೇಹದಲ್ಲೂ ಕನಿಷ್ಠ ತಮ್ಮ ಸಣ್ಣ ಅಪಸ್ವರವನ್ನಾದರೂ ಹೇಳಲು ಸಾಧ್ಯವಾ ಗುವ ಒಂದು ಸಂಬಂಧವನ್ನು ಅವರು ಎಲ್ಲರೊಂದಿಗೆ ಕಟ್ಟಿಕೊಂಡಿದ್ದರು. ಜಾರ್ಜ್ ಇಷ್ಟವಾಗುತ್ತಿದ್ದುದೇ ಈ ಕಾರಣಕ್ಕೆ. ಇಷ್ಟು ವರ್ಷಗಳ ಕಾಲ ಜಾರ್ಜ್ ಬರೆದಿರಬಹುದು. ಆದರೆ ಅವರ ಅಂಕಣದ ಜತೆಗೆ ಅವರ ಫೋಟೋವನ್ನು ಮಾತ್ರ ಯಾರೂ ನೋಡಿಲ್ಲ.

ಅವರ ಅಂಕಣ ಪ್ರಕಟವಾಗುವ ಪುಟಗಳಲ್ಲಿ ಇನ್ನಿತರ ಅಂಕಣಕಾರರ ಫೋಟೋ ಪ್ರಕಟವಾದರೂ, ಫೋಟೋವಿಲ್ಲದೇ ಪ್ರಕಟವಾಗುತ್ತಿದ್ದುದು ಜಾರ್ಜ್ ಅಂಕಣವೊಂದೇ. ಯಾವ ಕಾರಣಕ್ಕೂ ಪತ್ರಿಕೆಯಲ್ಲಿ ತಮ್ಮ ಫೋಟೋ ಪ್ರಕಟವಾಗಬಾರದು ಎಂಬ ತಾಕೀತಿನೊಂದಿಗೆ ಬರೆಯುತ್ತಿದ್ದರು.

ಮೂಲತಃ ಜಾರ್ಜ್ ಬರೆಯುತ್ತಿದ್ದುದು ಇಂಗ್ಲಿಷಿನಲ್ಲಿ. ಇಂಡಿಯನ್ ಎಕ್ಸ್‌ಪ್ರೆಸ್ ಜೊತೆಗೆ ಅದರ ಅನುವಾದ ‘ಕನ್ನಡಪ್ರಭ’ದಲ್ಲೂ ಪ್ರಕಟವಾಗುತ್ತಿತ್ತು. ಆದರೆ ಫೋಟೋ ಮಾತ್ರ ಇಲ್ಲ. ನಾನು ‘ಕನ್ನಡಪ್ರಭ’ದ ಸಂಪಾದಕನಾದ ಮರು ವಾರ, ಜಾರ್ಜ್ ಅಂಕಣದ ಜತೆ ಅವರ ಫೋಟೋವನ್ನು ಪ್ರಕಟಿಸಿದ್ದೆ.

ಸೋಮವಾರ ನಾನು ಕಚೇರಿಗೆ ಬರುತ್ತಿದ್ದಂತೆ, ನನ್ನ ಟೇಬಲ್ ಮೇಲೆ ಜಾರ್ಜ್ ಲೆಟರ್‌ಹೆಡ್‌ನಲ್ಲಿ ಅವರ ಹಸ್ತಾಕ್ಷರವಿರುವ ಸಣ್ಣ ಟಿಪ್ಪಣಿ ಇತ್ತು- ‘ಯಾವ ಕಾರಣಕ್ಕೂ ನನ್ನ ಅಂಕಣದೊಂದಿಗೆ ನನ್ನ ಫೋಟೋ ಪ್ರಕಟವಾಗಕೂಡದು. ನನ್ನ ಅನುಮತಿ ಇಲ್ಲದೇ ನನ್ನ ಫೋಟೋ ಹಾಕಿದ್ದೇಕೆ?’ ಅದಾಗಿ ಹತ್ತು ನಿಮಿಷಗಳ ಬಳಿಕ... ಇಂಟರ್‌ಕಾಮ್‌ನಲ್ಲಿ ಜಾರ್ಜ್ ಮಾತಾಡುತ್ತಿದ್ದರು.

‘ನನ್ನ ಫೋಟೋ ಹಾಕಿದ್ದೇಕೆ?’ ಎಂದು ಖಡಕ್ ದನಿಯಲ್ಲಿ ಕೇಳಿದರು. ಅವರೊಂದಿಗೆ ನನಗೆ ಸಲುಗೆಯಿತ್ತು. ನಾನು ಸಮಜಾಯಿಷಿ ನೀಡಿದೆ. ‘ಅಂಕಣಕಾರ ಗಂಡಸೋ, ಹೆಂಗಸೋ, ಷಂಡನೋ, ಭಂಡನೋ, ಲಕ್ಷಣವಂತನೋ, ಅನಾಮಧೇಯನೋ, ಮುಖೇಡಿಯೋ ಎಂಬುದಾದರೂ ಓದುಗರಿಗೆ ತಿಳಿಯಬೇಡವೇ, ಅದಕ್ಕಾಗಿ ಪೋಟೋ ಬೇಕಲ್ಲ ಸಾರ್’ ಎಂದು ವಾದಿಸಿದೆ.

ಆದರೆ ಆಸಾಮಿ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ‘ಅಂಕಣಕಾರನ ಫೋಟೋ ಪ್ರಕಟಿಸುವುದು ನಿಮ್ಮ ಬ್ರಾಂಡ್ ಆಫ್ ಜರ್ನಲಿಸಂ ಆದರೆ, ನನ್ನ ಅಂಕಣವನ್ನು ಮುಂದಿನ ವಾರದಿಂದ‌ ತೆಗೆದುಕೊಳ್ಳಬೇಡಿ. ಈ ವಿಷಯದಲ್ಲಿ ಚರ್ಚೆ ಬೇಡ’ ಎಂದು ಫೋನಿಟ್ಟು ಬಿಟ್ಟರು.

ಈ ವಿಷಯದಲ್ಲಿ ನಾನೇ ಮಣಿದೆ. ತಕ್ಷಣ ‘ಇಂಡಿಯನ್ ಎಕ್ಸ್ ಪ್ರೆಸ್’ ಕಟ್ಟಡದಲ್ಲಿದ್ದ ಜಾರ್ಜ್ ಚೇಂಬರಿಗೆ ಹೋದೆ. ನಾನು ಆ ವಿಷಯ ಕುರಿತು ಪ್ರಸ್ತಾಪಿಸುತ್ತಿದ್ದಂತೆ, ‘ಭಟ್, ಬೇರೆ ವಿಷಯ ಮಾತಾಡಿ, ಸಾಯಂಕಾಲ ಫ್ರೀ ಇದ್ದೀರಾ? Lets have Gundu’ ಎಂದುಬಿಟ್ಟರು. ಲೇಖಕನಿಗೆ ಅನಾಮಿಕತ್ವ ಎಷ್ಟು ಮುಖ್ಯ ಎಂದು ಆ ಸಂಜೆ ಜಾರ್ಜ್ ವಿವರಿಸಿದರು.

ಬರಹಗಾರ ಅಜ್ಞಾತನಾಗಿರಬೇಕು, ಆತ ತನ್ನ ವೈಯಕ್ತಿಕತೆ, ಖಾಸಗಿತನವನ್ನು ಪ್ರದರ್ಶಿಸಿಕೊಳ್ಳ ಕೂಡದು, ಆತನಿಗೆ ಪ್ರೈವಸಿ ಬಹಳ ಮುಖ್ಯ, ಕಾರಣ ಆತ ರಾಜಕಾರಣಿಯಲ್ಲ, ಬರಹಗಾರ. ಹೀಗಿರುವಾಗ ಅಂಕಣಕಾರನಿಗೇಕೆ ಬೇಕು ಫೋಟೋ ಎಂಬುದು ಅವರ ವಾದವಾಗಿತ್ತು. ನಂತರ ನಾನು ಅವರ ಫೋಟೋವನ್ನು ಪತ್ರಿಕೆಯಲ್ಲಿ ಪ್ರಕಟಿಸುವ ‘ಎದೆಗಾರಿಕೆ’ ತೋರಲಿಲ್ಲ. ಎರಡು ವರ್ಷಗಳ ಹಿಂದೆ, ಕೊನೆಯ ಅಂಕಣದೊಂದಿಗೆ ’ಕನ್ನಡಪ್ರಭ’ದಲ್ಲಿ ಅವರ ಫೋಟೋ ಪ್ರಕಟವಾಗಿತ್ತು!

ಆ ವಿಷಯದಲ್ಲಿ ಜಾರ್ಜ್ ಅಷ್ಟು ಕಠೋರ, ಜಿಗುಟು. ಜಾರ್ಜ್ ಯಾವ ವೇದಿಕೆಯಲ್ಲೂ ಕಾಣಿಸಿ ಕೊಂಡವರಲ್ಲ. ಎಲ್ಲೂ ಭಾಷಣ ಮಾಡಿದವರಲ್ಲ. ಅಪ್ಪಿತಪ್ಪಿ ಮಾತಾಡಲೇಬೇಕಾದ ಅನಿವಾರ್ಯ ಬಂದಾಗ, ತಮ್ಮ ಫೋಟೋ ಪತ್ರಿಕೆಗಳಲ್ಲಿ ಪ್ರಕಟವಾಗದಂತೆ ನೋಡಿಕೊಂಡರು. ಹಾಗೆ ವರದಿಯೂ. ಹಿಂದೊಮ್ಮೆ ನಾನು ಅವರನ್ನು ನನ್ನ ಪುಸ್ತಕ ಬಿಡುಗಡೆಗೆ ಆಹ್ವಾನಿಸಿದಾಗಲೂ, ‘ಭಾಷಣ ಮಾಡುವುದಾದರೆ ಬೇರೆಯವರನ್ನು ಕರೆಯಿರಿ. ನಾನು ಬರ್ತೇನೆ, ಆದರೆ ಭಾಷಣ ಮಾಡುವುದಿಲ್ಲ.

ನಾನು ಪತ್ರಕರ್ತ, ಭಾಷಣಕಾರನಲ್ಲ. ನಾನು ಅಕ್ಷರಗಳ ಮೂಲಕವೇ ಮಾತಾಡುವವನು’ ಎಂದಿದ್ದರು. ಜಾರ್ಜ್ ಭಾಷಣ ಮಾಡಿದ್ದನ್ನು ಕೇಳಿಸಿಕೊಂಡವರಿಲ್ಲ (ಮಾತಾಡಿದರೆ ತಾನೇ ಕೇಳಿಸಿಕೊಳ್ಳುವುದು?). ಹಾಗಂತ ಅವರು ಒಳ್ಳೆಯ ಮಾತುಗಾರರು, ಒಳ್ಳೆಯ ಹರಟೆಕೋರರು. ಅವರ ಬರಹ ‘ಕನ್ನಡಪ್ರಭ’ದಲ್ಲಿ ಪ್ರಕಟವಾಗುತ್ತಿದ್ದುದರಿಂದ ಜಾರ್ಜ್ ಕನ್ನಡದಲ್ಲೂ ಚೆನ್ನಾಗಿ ಬರೆಯುತ್ತಾರೆ ಎಂದು ಭಾವಿಸಿದವರಿದ್ದರು. ಆದರೆ ಅವರನ್ನು ನೋಡಿದ್ದೇವೆ ಎಂದು ಹೇಳುವವರು ವಿರಳ.

ಪಕ್ಕದಲ್ಲಿಯೇ ಹಾದು ಹೋದರೂ, ಅವರೇ ಜಾರ್ಜ್ ಎಂದು ಗುರುತಿಸಿಕೊಳ್ಳದಷ್ಟು ಖಾಸಗಿತನ, ಸಂಕೋಚವನ್ನು ಕಾಪಾಡಿಕೊಂಡಿದ್ದರು. ‘ಇಂಡಿಯನ್ ಎಕ್ಸ್‌ಪ್ರೆಸ್’ ಕಚೇರಿಯಲ್ಲಿ ಜಾರ್ಜ್ ಅವರನ್ನು ನೋಡದ ಪತ್ರಕರ್ತರೂ ಇದ್ದರು. ಅವರು ಯಾವಾಗ ಬರುತ್ತಾರೆ, ಹೋಗುತ್ತಾರೆ, ಇರುತ್ತಾರೆ ಎಂಬುದು ಗೊತ್ತಾಗುತ್ತಿರಲಿಲ್ಲ. ಆದರೆ ಜಾರ್ಜ್ ಆಫೀಸಿನಲ್ಲಿ ಕಾಲಿಟ್ಟರೆ ಸಾಕು, ಮೋದಿ ಯವರನ್ನು ಕಂಡ ಬಿಜೆಪಿ ನಾಯಕರ ಥರ, ಇಡೀ ಕಚೇರಿ ಬಾಲಮುದುರಿಕೊಂಡು ಸುಮ್ಮನಾಗು ತ್ತಿತ್ತು.

ಎಡೆ ಮೌನ. ಹಾಗಂತ ಅವರು ಅದ್ಯಾವುದನ್ನೂ ನಿರೀಕ್ಷಿಸುತ್ತಿರಲಿಲ್ಲ. ನಾನು ಏಷ್ಯನ್ ಕಾಲೇಜ್ ನಲ್ಲಿ ಅಸಿಸ್ಟಂಟ್ ಪ್ರೊಫೆಸರ್ ಆಗಿ ಸೇರಲು ಕಾರಣರಾದವರು ವೈಎನ್‌ಕೆ ಅವರಂತೆ, ಜಾರ್ಜ್ ಕೂಡ. ಏಷ್ಯನ್ ಕಾಲೇಜ್ ಜಾರ್ಜ್ ಅವರ ಕೂಸು. ಪತ್ರಿಕಾ ಸಂಸ್ಥೆ ಮತ್ತು ಪತ್ರಕರ್ತರೇ, ಪತ್ರಿಕೋದ್ಯಮ ಶಿಕ್ಷಣ ನೀಡಬೇಕೆಂಬ ಅವರ ಒತ್ತಾಸೆಯ ಫಲವಾಗಿ ಹುಟ್ಟಿಕೊಂಡಿದ್ದು ಆ ಕಾಲೇಜ್.

ನನ್ನ ಹೆಸರನ್ನು ವೈಎನ್‌ಕೆ ಸೂಚಿಸಿದಾಗ, ಜಾರ್ಜ್ ನನ್ನನ್ನು ಸುಮಾರು ಎರಡು ಗಂಟೆ ಸಂದರ್ಶನದ ನೆಪದಲ್ಲಿ ಚೆನ್ನಾಗಿ ರುಬ್ಬಿ, ಅರೆದಿದ್ದರು. ಇಂಥ ಘಾಟಿ ಮನುಷ್ಯನ ಜತೆ ನಿತ್ಯ ಏಗುವುದು ಸಾಧ್ಯವಾ ಎಂದು ನಾನು ಆತಂಕಪಟ್ಟಿದ್ದೆ. ಒಂದು ವೇಳೆ, ಇದೇ ಕಾರಣಕ್ಕೆ ಒಲ್ಲೆ ಎಂದಿದ್ದರೆ, ನನ್ನ ಪತ್ರಿಕೋದ್ಯಮ ವೃತ್ತಿಗೆ ನಾನೇ ಚಪ್ಪಡಿಕಲ್ಲು ಎಳೆದುಕೊಳ್ಳುತ್ತಿದ್ದೆ.

ಜಾರ್ಜ್ ಗರಡಿಯಲ್ಲಿ ಪಳಗಿದವರು ಎಂದು ಕರೆದುಕೊಳ್ಳುವುದೇ ಒಂದು ಹೆಮ್ಮೆ. ಈ ವಿಷಯದಲ್ಲಿ ನಾನು, ಪಬ್ಲಿಕ್ ಟಿವಿ ರಂಗನಾಥ್, ‘ಕನ್ನಡಪ್ರಭ’ದ ಈಗಿನ ಸಂಪಾದಕ ರವಿ ಹೆಗಡೆ, ‘ಎಕನಾಮಿಕ್ ಟೈಮ್ಸ್’ ಪತ್ರಿಕೆಯ ಕೆ.ಆರ್.ಬಾಲಸುಬ್ರಮಣ್ಯ ನಿಜಕ್ಕೂ ಪುಣ್ಯವಂತರು. ಕನ್ನಡಿಗರಿಗೆ ಜಾರ್ಜ್ ಅವರನ್ನು ಪರಿಚಯಿಸಿದವರು‌ ವೈಎನ್‌ಕೆ ಹಾಗೆ ವೈಎನ್‌ಕೆಯವರನ್ನು ಇಂಗ್ಲಿಷ್ ಸಮೂಹಕ್ಕೆ ಪರಿಚಯಿಸಿದವರು ಜಾರ್ಜ್.

ಅವರಿಬ್ಬರೂ ಒಟ್ಟಿಗೆ ಹೊರಟರೆ ಕನ್ನಡ-ಇಂಗ್ಲಿಷ್ ಕೈಹಿಡಿದು ಹೊರಟಂತೆ ಭಾಸವಾಗುತ್ತಿತ್ತು. ನಾನು ಬ್ರಿಟನ್‌ಗೆ ಉನ್ನತ ವ್ಯಾಸಂಗಕ್ಕೆ ಹೋಗಲು ಪ್ರೇರೇಪಿಸಿದವರೂ ಜಾರ್ಜ್ ಅವರೇ. ಜೀನ್ ರಿಚ್ ಫೌಂಡೇಶನ್ ಫೆಲೋಶಿಪ್‌ಗೆ ಅರ್ಜಿ ಹಾಕುವಂತೆ ಒತ್ತಾಯಿಸಿದವರು ಅವರೇ. ಆ ದಿನಗಳಲ್ಲಿ ಅವರು ನೀಡಿದ ಬೆಂಬಲ ನನ್ನನ್ನು ಈ ಹಂತದವರೆಗೆ ಕೈಹಿಡಿದು ಕರೆದುಕೊಂಡು ಬಂದಿದೆ.

ನಾನು ‘ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂ’ನಲ್ಲಿ ಅಸಿಸ್ಟಂಟ್‌ ಪ್ರೊಫೆಸರ್ ಆಗಿದ್ದಾಗ, ಕೇಂದ್ರ ಸಚಿವ ನಂತಕುಮಾರ್ ಅವರು ತಮ್ಮ ವಿಶೇಷ ಕರ್ತವ್ಯಾಧಿಕಾರಿಯಾಗಿ ಬರುವಂತೆ ಆಹ್ವಾನ ವಿತ್ತಾಗ, ಈ ವಿಷಯವನ್ನು ನಾನು ಮೊದಲು ಚರ್ಚಿಸಿದ್ದು ಜಾರ್ಜ್ ಬಳಿ. ‘ಈ ಆಹ್ವಾನವನ್ನು ಒಪ್ಪಿಕೊಳ್ಳಿ. ಕೇಂದ್ರ ಸಚಿವರ ಜತೆ ಸರಕಾರಿ ಅಧಿಕಾರಿಯಾಗಿ ಕೆಲಸ ಮಾಡುವುದು ಒಬ್ಬ ಪತ್ರಕರ್ತ ನಿಗೆ ಸಿಗಬಹುದಾದ ಅತ್ಯುತ್ತಮ ಅವಕಾಶ. ಆದರೆ ಯಾವುದೇ ಕಾರಣಕ್ಕೂ ಮೂರು ವರ್ಷಕ್ಕಿಂತ ಹೆಚ್ಚು ಕಾಲ ಅಲ್ಲಿರಬೇಡಿ. ಯಾಕೆಂದರೆ, ನಂತರ ಬಂದರೆ ನೀವು ಪತ್ರಕರ್ತರಾಗಿ ಇರುವುದಿಲ್ಲ’ ಎಂದು ಜಾರ್ಜ್ ಹೇಳಿದ್ದರು.

ಮೂರು ವರ್ಷ ಮುಗಿಯಲು ಇನ್ನೂ ಎರಡು ತಿಂಗಳಿರುವಾಗ, ‘ವಿಜಯ ಕರ್ನಾಟಕ’ ಸೇರಿದೆ. ಸೇರುವ ಮುನ್ನಾ ದಿನ ಜಾರ್ಜ್ ಆಶೀರ್ವಾದ ಪಡೆಯಲು ಹೋದಾಗ, ಒಂದು ಗಂಟೆ ಕಾಲ, ಸಂಪಾದಕನ ಹೊಣೆಗಾರಿಕೆ ಬಗ್ಗೆ ಹೇಳಿದ್ದು ಈಗಲೂ ಕಿವಿಯಲ್ಲಿದೆ. ಒಮ್ಮೆ ಅನಂತಕುಮಾರ್ ಅವರ ಜತೆ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರನ್ನು ಭೇಟಿ ಮಾಡಿದಾಗ, ನನ್ನನ್ನು ಪರಿಚಯಿಸಿಕೊಳ್ಳುತ್ತಾ, ‘ಇದಕ್ಕೂ ಮೊದಲು ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿದ್ದೆ’ ಎಂದು ಹೇಳಿದಾಗ ನಾರಾಯಣನ್, ‘ಅದು ನನ್ನ ಸ್ನೇಹಿತರಾದ ಟಿಜೆಎಸ್ ಜಾರ್ಜ್ ಸ್ಥಾಪಿಸಿದ್ದಲ್ಲವೇ?’ ಎಂದು ಕೇಳಿದ್ದರು.

ಜಾರ್ಜ್‌ಗೆ ನಾರಾಯಣನ್ ಜತೆಗೆ ನಿಕಟ ಸಂಪರ್ಕವಿತ್ತು ಎಂದು ಆಗಲೇ ನನಗೆ ಗೊತ್ತಾಗಿದ್ದು. ಯಾವ ಮಾನದಂಡ ಹಿಡಿದರೂ ಜಾರ್ಜ್ ಒಬ್ಬ ಅಪರೂಪದ, ಪಕ್ಕಾ ಕಸುಬಿ. ಮಹಾನ್ ಕರ್ಮಯೋಗಿ. ಅವರು ಪತ್ರಿಕೋದ್ಯಮವನ್ನು preach ಮತ್ತು practice ಮಾಡಿದ ಕೆಲವೇ ಕೆಲವು ಪತ್ರಕರ್ತರಲ್ಲಿ ಪ್ರಮುಖರು. ಅವರಿಗೆ ಪತ್ರಿಕೋದ್ಯಮದ ಶಾಸ್ತ್ರೀಯ ಕಲಿಕೆಯಲ್ಲಿ ವಿಶ್ವಾಸವಿತ್ತು.

ಹೀಗಾಗಿ ‘ಎಕ್ಸ್‌ಪ್ರೆಸ್’ ಮಾಲೀಕರನ್ನು ಮನವೊಲಿಸಿ, ಅವರು ಏಷ್ಯನ್ ಕಾಲೇಜ್ ಜರ್ನಲಿಸಂ ಆರಂಭಿಸಿದ್ದು. ಟೈಪ್, ಫ್ರಂಟ್, ಫ್ರಂಟ್ ಸೈಜ್, ಗಟರ್ ಸ್ಪೇಸ್, ವೈಟ್ ಸ್ಪೇಸ್... ಎಲ್ಲವೂ ಶಾಸ್ತ್ರೀಯ ವಾಗಿ ಇರಬೇಕಾಗಿತ್ತು. ಅವರ ಟೇಬಲ್ ಮೇಲೆ ಇಂಚುಪಟ್ಟಿ ಮತ್ತು ಭೂತಗನ್ನಡಿ ಇದ್ದೇ ಇರುತ್ತಿತ್ತು.

ವಿಶ್ವದ ಅಗ್ರಗಣ್ಯ ಪತ್ರಕರ್ತರೆಲ್ಲರ ಜತೆ ಒಡನಾಟವಿದ್ದ ಜಾರ್ಜ್ ಜತೆ ಮಾತುಕತೆಗೆ ಕುಳಿತು ಕೊಂಡರೆ ನಮ್ಮ ನಮ್ಮ ಸಾಮರ್ಥ್ಯಕ್ಕನುಗುಣವಾಗಿ ವಿಷಯವನ್ನು ಬಾಚಿಕೊಳ್ಳಬಹುದಿತ್ತು. ‘ಎಡಿಟಿಂಗ್’ ಕುರಿತು ಅವರು ಬರೆದ ಪುಸ್ತಕವೊಂದನ್ನೇ ಓದಿಕೊಂಡರೂ ಸಾಕು, ಅತ್ಯುತ್ತಮ ಡೆಸ್ಕ್ ಪತ್ರಕರ್ತರಾಗಬಹುದು.

ಜಾರ್ಜ್ ಅವರನ್ನು ಭೇಟಿಯಾಗಲೇಬೇಕೆಂದಿಲ್ಲ, ಅವರು ಎಲ್ಲೇ ಇದ್ದರೂ ಪ್ರಭಾವಲಯ ಸೃಷ್ಟಿಸುವವರು. ಅವರ ಜತೆ ಗುರುತಿಸಿಕೊಳ್ಳುವುದು, ಅವರ ಶಿಷ್ಯ ಎಂದು ಕರೆಯಿಸಿಕೊಳ್ಳುವುದು ಯಾವ ಪತ್ರಕರ್ತನಿಗಾದರೂ ದೊಡ್ಡ ಗೌರವ, ಅರ್ಹತೆ. ವೃತ್ತಿಯಲ್ಲಿ ಅವರು ಅಂಥ ಎತ್ತರ ವನ್ನೇರಿದವರು.

‘ಫ್ರೀ ಪ್ರೆಸ್ ಜರ್ನಲ್’ ಪತ್ರಿಕೆಯಲ್ಲಿ ತಮ್ಮ‌ ವೃತ್ತಿ ಸೊಬಗಿನ ದಿನಗಳನ್ನು ಕಂಡ ಜಾರ್ಜ್, ಕೊನೇ ತನಕವೂ ಮೌಲ್ಯ, ವೃತ್ತಿಪರತೆಯನ್ನೇ ನಂಬಿ, ಬಾಳಿದ ಅಪರೂಪದ ಜೀವಿ. ತಮ್ಮ ಮುಂದೆ ಎಷ್ಟೇ ದುಬಾರಿ ಗುಂಡನ್ನು ಇಟ್ಟರೂ, ‘ಖೋಡೇಸ್ ತ್ರಿಬಲ್ ಎಕ್ಸ್ ರಮ್’ ಮಾತ್ರ ಹೀರುತ್ತಿದ್ದ ಜಾರ್ಜ್‌ ಅವರನ್ನು ಬೆಂಗಳೂರಿನ ಸಾಂಸ್ಕೃತಿಕ ಲೋಕಕ್ಕೆ ಪರಿಚಯಿಸಿದವರು ವೈಎನ್‌ಕೆ.

ಇಬ್ಬರಿಗೂ ಪರಸ್ಪರರ ಮೇಲೆ ಅತೀವ ಪ್ರೀತಿ, ವಿಶ್ವಾಸ. ವೈಎನ್‌ಕೆ ಅವರು ‘ GOK ಅಂದ್ರೆ ಏನು ಗೊತ್ತಾ?’ ಎಂದು ಕೇಳಿದಾಗ, ‘God Only Knows ’ ಎಂದು ಹೇಳಿದರೆ, ’ನೋ.. ನೋ.. George Only Knows ’ ಇಂದು ಚಟಾಕಿ ಹಾರಿಸುತ್ತಿದ್ದರು. ಅವರಿಬ್ಬರೂ ಸೇರಿ ABC (Arts, Books Cinema) ಎಂಬ ಸಂಸ್ಥೆ ಹುಟ್ಟು ಹಾಕಬೇಕು ಎಂದು ಕನಸು ಕಂಡಿದ್ದರು. ಆದರೆ ಅದು ಕೊನೆಗೂ ಈಡೇರಲಿಲ್ಲ. ೇಟಿಯಾದಾಗಲೆಲ್ಲ ವೈಎನ್‌ಕೆ ಅವರನ್ನು ಸ್ಮರಿಸದೇ ಹೋಗುತ್ತಿರಲಿಲ್ಲ. ರಾತ್ರಿ ಹೊತ್ತು ಫೋನ್ ಮಾಡಿದರೆ, ’ನಾನು ವೈಎನ್‌ಕೆ ಸ್ಮರಣೆಯಲ್ಲಿ (ಗುಂಡು ಹಾಕುತ್ತಿದ್ದೇನೆ) ಇದ್ದೇನೆ’ ಎಂದು ಹೇಳುತ್ತಿದ್ದರು.

ಜಾರ್ಜ್ ಒಳ್ಳೆಯ ಬಯೋಗ್ರಾಫರ್ ಆಗಿದ್ದರು. ಕೃಷ್ಣ ಮೆನನ್, ಎಂ.ಎಸ್.ಸುಬ್ಬುಲಕ್ಷ್ಮಿ, ಪೋಥನ್ ಜೋಸೆಫ್, ಲೀ ಕ್ಯಾನ್ ಹ್ಯೂ, ನರ್ಗಿಸ್, ಜಯಲಲಿತಾ ಮುಂತಾದವರ ಕುರಿತು ಅವರು ಅಥೆಂಟಿಕ್ ಎನ್ನಬಹುದಾದ ಬಯೋಗ್ರಫಿಗಳನ್ನು ಬರೆದರು.‌

‘ಇಂಡಿಯನ್ ಎಕ್ಸ್‌ಪ್ರೆಸ್’ ಸಾಮ್ರಾಜ್ಯ ಕಟ್ಟಿದ ರಾಮನಾಥ ಗೋಯೆಂಕಾ ಅವರನ್ನು ಅವರು ಬರೆದ ಪತ್ರಗಳ ಮೂಲಕ ‘ಗೋಯೆಂಕಾ ಲೆಟರ್ಸ್’ ಎನ್ನುವ ಕೃತಿಯಲ್ಲಿ ಮನೋಜ್ಞವಾಗಿ ಕಟ್ಟಿಕೊಟ್ಟಿ ದ್ದಾರೆ. ನನಗೆ ಖ್ಯಾತ ಸಂಪಾದಕ ದಿವಂಗತ ಪೋಥನ್ ಜೋಸೆಫ್ ಅವರ ದರ್ಶನವಾಗಿದ್ದರೆ ಅದು ಜಾರ್ಜ್ ಬರೆದ‌ Lessons in Journalism - The Story of Pothan Joseph ಕೃತಿ ಮೂಲಕ. ಜಾರ್ಜ್ ಅವರ ಬಹುಶ್ರುತ ಪ್ರತಿಭೆ ಮತ್ತು ಆಸಕ್ತಿಗೆ ಅವರ The Enquire Dictionary: Ideas, Issues, Innovations ಹಾಗೂ Askew: A Short Biography of Bangalore ಕೃತಿಗಳೇ ನಿದರ್ಶನ.

1950ರಲ್ಲಿ ಮುಂಬಯಿಯ ‘ದಿ ಫ್ರೀ ಪ್ರೆಸ್ ಜರ್ನಲ್’ ಮೂಲಕ ಪತ್ರಿಕೋದ್ಯಮ ಪ್ರವೇಶಿಸಿದ ಜಾರ್ಜ್, ಖ್ಯಾತನಾಮ‌ ಸಂಪಾದಕರಾದ ಸದಾನಂದ, ಸ್ಟಾಲಿನ್ ಶ್ರೀನಿವಾಸ, ಚಲಪತಿರಾವ್ ಜತೆ ಕೆಲಸ ಮಾಡಿದವರು. ನಂತರ ಅವರು ಇಂಟರ್‌ನ್ಯಾಷನಲ್ ಪ್ರೆಸ್ ಇನ್‌ಸ್ಟಿಟ್ಯೂಟ್, ದಿ ಸರ್ಚ್‌ಲೈಟ್, ಫಾರ್ ಈಸ್ಟರ್ನ್ ಎಕನಾಮಿಕ್ ರಿವ್ಯೂ ಮುಂತಾದ ಪತ್ರಿಕೆಗಳಲ್ಲಿ ಉನ್ನತ ಸ್ಥಾನದಲ್ಲಿ ಕೆಲಸ ಮಾಡಿ, ನಂತರ ಹಾಂಕಾಂಗ್‌ನಲ್ಲಿ ತಮ್ಮದೇ ‘ಏಷ್ಯಾವೀಕ್’ ವಾರಪತ್ರಿಕೆಯ ಸಂಸ್ಥಾಪಕ ಸಂಪಾದಕರಾದರು.

ಅಲ್ಲಿ ತನಕ ಅಂತಾರಾಷ್ಟ್ರೀಯ ಪತ್ರಿಕೋದ್ಯಮದಲ್ಲಿ ಬಿಜಿಯಾಗಿದ್ದ ಜಾರ್ಜ್ ಅವರನ್ನು ಎಂಬತ್ತರ ದಶಕದ ಮಧ್ಯಭಾಗದಲ್ಲಿ ಬೆಂಗಳೂರಿನಲ್ಲಿ ಆರಂಭವಾದ ‘ಟೈಮ್ಸ್ ಆಫ್ ಡೆಕ್ಕನ್’ ಕೈಬೀಸಿ ಕರೆಯಿತು. ಅದಾದ ಬಳಿಕ ಅವರು ‘ಇಂಡಿಯನ್ ಎಕ್ಸ್‌ಪ್ರೆಸ್’ ಜತೆಗೆ ಕೊನೆ ತನಕವೂ ಸಂಪಾದಕೀಯ ಸಲಹೆಗಾರರಾಗಿ ಗುರುತಿಸಿಕೊಂಡರು.‌

ಹೋತನ ಗಡ್ಡವಿಲ್ಲದ ಜಾರ್ಜ್ ಅವರನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಅಷ್ಟರ ಮಟ್ಟಿಗೆ ಅದು ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಪತಿಯ ಆಸಕ್ತಿ ಮತ್ತು ವೃತ್ತಿಯನ್ನು ಅರಿತ ಪತ್ನಿ ಅಮ್ಮು, ಮಗಳು (ಪತ್ರಕರ್ತೆ) ಶೀಬಾ ಮತ್ತು ಮಗ (ಕವಿ) ಜೀತ್ ತಾಯಿಲ್ - ಇದು ಜಾರ್ಜ್ ಅವರ ಅಚ್ಚು ಕಟ್ಟಾದ ಕುಟುಂಬ. ಇದರಾಚೆ ಓದು, ಬರಹ, ಪತ್ರಿಕೆಗಳೇ ಅವರ ಜಗತ್ತು.

ಸುದ್ದಿಮನೆಯ ‘ಹಾಲ್ ಆಫ್‌ ಫೇಮ್’ನಲ್ಲಿ ಜಾರ್ಜ್ ಯಾವತ್ತೂ ಮಿನುಗುತಾರೆ, ತೋರುದೀಪ. ವೃತ್ತಿ‌ ಮತ್ತು ವ್ಯಕ್ತಿತ್ವ ಘನತೆಯನ್ನು ಕಾಪಾಡುವುದೇ ಆದರ್ಶವೆಂದು ನಂಬಿ ಬಾಳಿದ ಜಾರ್ಜ್ ಅವರ ಕಾಲಘಟ್ಟದಲ್ಲಿದ್ದೇವೆ ಎಂದು ಭಾವಿಸುವುದೇ ಒಂದು ಧನ್ಯತೆ. I miss you, Sir !