400 ಕೋಟಿ ರು. ದರೋಡೆಯಲ್ಲಿ ಬೆಳಗಾವಿ ಪೊಲೀಸರು ಭಾಗಿ ?
ಸಂಭಾಷಣೆ ಪ್ರಕಾರ ದರೋಡೆ ಪ್ರಕರಣ ಗುಜರಾತ್ ಮೂಲದ ರಾಜಕಾರಣಿಗೆ ಗೊತ್ತಾಗಿದೆ. ಇಷ್ಟೊಂದು ಹಣ ನಾಪತ್ತೆ ಆಗಲು ಹೇಗೆ ಸಾಧ್ಯ? ಇದರ ಹಿಂದೆ ಕರ್ನಾಟಕ ಪೊಲೀಸರು ಇದ್ದಾರೆ ಎಂದು ಮಾತನಾಡಿದ್ದಾರೆ. ಚೋರ್ಲಾ ಘಾಟ್ನಲ್ಲಿ ಸಂಭವಿಸಿದ್ದ ದರೋಡೆ ಪ್ರಕರಣದಲ್ಲಿ ಬೆಳಗಾವಿ ಪೊಲೀಸರ ಕೈವಾಡ ಕುರಿತು ಹೊರಬಿದ್ದಿರುವ ಸಂಭಾಷಣೆ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ.
-
ವಿನಾಯಕ ಮಠಪತಿ, ಬೆಳಗಾವಿ
ಮಹಾ ಪೊಲೀಸರಿಂದ ಇನ್ನಿಬ್ಬರ ಬಂಧನ, ಬಂಧಿತರ ಸಂಭಾಷಣೆ ಲೀಕ್
ವಾಟ್ಸಪ್ ಆಡಿಯೋದಲ್ಲಿ ಬೆಳಗಾವಿ ಪೊಲೀಸ್ ಪಾತ್ರದ ಬಗ್ಗೆ ಬೊಟ್ಟು
ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಬೆಳಗಾವಿಯ ಚೋರ್ಲಾ ಘಾಟ್ನಲ್ಲಿ ನಡೆದಿದೆ ಎನ್ನಲಾದ 400 ಕೋಟಿ ರು. ಹಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಸ್ಫೋಟಕ ಅಂಶ ಬೆಳಕಿಗೆ ಬಂದಿದೆ.
ದರೋಡೆಯಲ್ಲಿ ಬೆಳಗಾವಿ ಪೊಲೀಸರ ಕೈವಾಡ ಇತ್ತಾ ಎಂಬ ಅನುಮಾನ ಹುಟ್ಟಿ ಕೊಂಡಿದೆ. ಸಂದೀಪ್ ಪಾಟೀಲ ಎಂಬ ವ್ಯಕ್ತಿಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ನಡುವಿನ ವಾಟ್ಸಪ್ ಸಂಭಾಷಣೆಯೇ ಆಡಿಯೋ ಬಹಿರಂಗ ವಾಗಿದ್ದು, ಸಂಶಯ ತೀವ್ರಗೊಂಡಿದೆ. ಅಪಹರಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಕಿಶೋರ್ ಹಾಗೂ ಜಯೇಶ್ ಮಧ್ಯೆ ನಡೆದ ವಾಟ್ಸಪ್ ಕರೆ ಸಂಭಾಷಣೆ ವೈರಲ್ ಆಗಿದೆ.
ಸಂಭಾಷಣೆ ಪ್ರಕಾರ ದರೋಡೆ ಪ್ರಕರಣ ಗುಜರಾತ್ ಮೂಲದ ರಾಜಕಾರಣಿಗೆ ಗೊತ್ತಾಗಿದೆ. ಇಷ್ಟೊಂದು ಹಣ ನಾಪತ್ತೆ ಆಗಲು ಹೇಗೆ ಸಾಧ್ಯ? ಇದರ ಹಿಂದೆ ಕರ್ನಾಟಕ ಪೊಲೀಸರು ಇದ್ದಾರೆ ಎಂದು ಮಾತನಾಡಿದ್ದಾರೆ. ಚೋರ್ಲಾ ಘಾಟ್ನಲ್ಲಿ ಸಂಭವಿಸಿದ್ದ ದರೋಡೆ ಪ್ರಕರಣದಲ್ಲಿ ಬೆಳಗಾವಿ ಪೊಲೀಸರ ಕೈವಾಡ ಕುರಿತು ಹೊರಬಿದ್ದಿರುವ ಸಂಭಾಷಣೆ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಈ ಮಧ್ಯೆ ರಾಜ್ಯದ ರಾಜಕಾರಣಿಗಳು ಪ್ರಕರಣದ ಕುರಿತು ತಲೆಗೊಂದು ಹೇಳಿಕೆ ನೀಡುತ್ತಿದ್ದು, ಪ್ರಕರಣದ ದಿಕ್ಕು ಬದಲಾಗುತ್ತಿದೆ.
ಇದನ್ನೂ ಓದಿ: Vinayaka Mathapathy Column: ಬದಲಾಗುವುದೇ ಮಹಾರಾಷ್ಟ್ರ ರಾಜಕೀಯ ಸಮೀಕರಣ ?
ಬಂಧಿತರ ಸಂಖ್ಯೆ 7ಕ್ಕೆ ಏರಿಕೆ: 400 ಕೋಟಿ ದರೋಡೆ ಹಾಗೂ ಸಂದೀಪ್ ಪಾಟೀಲ್ ಅಪಹರಣಕ್ಕೆ ಸಂಬಂಧಿಸಿದಂತೆ ಈವರೆಗೂ ಒಟ್ಟು ಏಳು ಜನರ ಬಂಧನವಾಗಿದೆ. ಅಪಹರಣಕ್ಕೆ ಬಳಸಿದ್ದ ಕಾರು ಚಾಲಕನನ್ನು ಮಹಾರಾಷ್ಟ್ರದ ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿzರೆ. ಸದ್ಯ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ 7 ಜನರ ಬಂಧನವಾಗಿದೆ.
ಐದು ರಾಜ್ಯಕ್ಕೆ ವ್ಯಾಪಿಸಿದ ದರೋಡೆ ಕೇಸ್: 400 ಕೋಟಿ ರು. ದರೋಡೆ ಪ್ರಕರಣ ಮೊದಲಿಗೆ ಮಹಾರಾಷ್ಟ್ರ ಹಾಗೂ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಈ ಪ್ರಕರಣದ ಗೋವಾ, ಗುಜರಾತ್ ಹಾಗೂ ಆಂದ್ರಪ್ರದೇಶಕ್ಕೂ ವ್ಯಾಪಿಸಿದೆ. ಪಂಚ ರಾಜ್ಯಗಳ ವ್ಯಾಪ್ತಿಗೆ ಸದ್ಯ ದರೋಡೆ ಪ್ರಕರಣದ ವಿಸ್ತರಿಸಿದ್ದು ಇದರಿಂದ ಮಹಾರಾಷ್ಟ್ರ ಸರಕಾರ ರಚಿಸಿದ ಎಸ್ಐಟಿ ಅಧಿಕಾರಿಗಳ ಜವಾಬ್ದಾರಿ ಹೆಚ್ಚಿಸಿದೆ.
2 ಸಾವಿರ ರು. ನೋಟುಗಳಿದ್ದ 400 ಕೋಟಿ ರು. ಹಣವನ್ನು ವರ್ಗಾಯಿಸುವ ಜವಾಬ್ದಾರಿ ಯನ್ನು ಮಹಾರಾಷ್ಟ್ರದ ವ್ಯಕ್ತಿ ಹೊತ್ತಿದ್ದರು. ಆದರೆ ಈ ಹಣ ಹೊರಟಿದ್ದು ಗೋವಾ ರಾಜ್ಯದಿಂದ. ಇನ್ನೂ ಕರ್ನಾಟಕ ಮಾರ್ಗವಾಗಿ ಸಾಗಿಸುವ ವೇಳೆ ಚೋರ್ಲಾ ಘಾಟ್ ಬಳಿ ದರೋಡೆ ಆಗಿದ್ದರೆ ಈ ಹಣ ಆಂದ್ರಪ್ರದೇಶದ ತಿರುಪತಿ ಟ್ರಸ್ಟ್ಗೆ ಹೋಗುವುದಿತ್ತು ಎನ್ನಲಾಗುತ್ತಿದೆ.
ಇನ್ನು ಹಣದ ಮೂಲ ಗುಜರಾತ್ನ ಉದ್ಯಮಿಯದ್ದು ಎಂದು ಕೆಲ ಸಾಕ್ಷಿಗಳಿಂದ ತಿಳಿದು ಬಂದಿದೆ. ಹಾಗಾಗಿಯೇ ದರೋಡೆ ಪ್ರಕರಣ ಐದು ರಾಜ್ಯಕ್ಕೆ ವ್ಯಾಪಿಸಿದೆ.