ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಜಿಲ್ಲೆ ಜನ ಮರೆತಿಲ್ಲ ಆಕ್ಸಿಜನ್ ದುರಂತ, ಕೊಟ್ಟ ಭರವಸೆ ಮರೆಯಿತೆ ಸರಕಾರ?

ಕೊರೊನಾ ಎರಡನೇ ಅಲೆ 201ರ ಮೇ 9 ರ ರಾತ್ರಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಸಿಗದೇ 36 ಮಂದಿ ಅಸುನೀಗಿದ್ದರು. ಅದರಲ್ಲೂ ಎಲ್ಲಾ ಬಡ ಕುಟುಂಬಗಳು, ಕೆಲವರು ಸಂಸಾರದ ಹೊಣೆ ಹೊತ್ತವರು,ಇನ್ನು ಕೆಲವರು ಕುಟುಂಬದ ಆಧಾರಸ್ತಂಭವಾದವರು, ಈ ವೇಳೆ ಮೃತಪಟ್ಟ ಒಂದೊಂದು ಕುಟುಂಬವೂ ಒಂದೊಂದು ದಾರುಣ ಕಥೆಯನ್ನೇ ಹೇಳುತ್ತವೆ.

ಕೊಟ್ಟ ಭರವಸೆ ಮರೆಯಿತೆ ಸರಕಾರ?

Profile Ashok Nayak Jun 12, 2025 3:12 PM

ದೇವನೂರು ಶ್ರೀನಿವಾಸ್, ಚಾಮರಾಜನಗರ

ಚಾಮರಾಜನಗರದಲ್ಲಿ ಕರೋನಾ ಎರಡನೇ ಅಲೆ ವೇಳೆ ಮೃತಪಟ್ಟ ಕುಟುಂಬಗಳಿಗೆ ಅಂದಿನ ಸರಕಾರ ಎರಡರಿಂದ ಮೂರು ಲಕ್ಷ ರು. ಪರಿಹಾರ ನೀಡಿ ಕೈತೊಳೆದುಕೊಂಡಿತು. ಅದೇ ಆರ್‌ಸಿಬಿ ಸಂಭ್ರಮಾಚರಣೆಯ ವೇಳೆ ಕಾಲ್ತುಳಿತದಲ್ಲಿ ಮೃತ ಪಟ್ಟವರಿಗೆ 25 ಲಕ್ಷ ರು.ಪರಿಹಾರ ನೀಡಿದೆ. ಜತೆಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮವನ್ನೂ ತಕ್ಷಣವೇ ಜರುಗಿಸಿದೆ. ಆದರೆ, ಅದೇ ರೀತಿ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಕೋರೋನಾದ ಎರಡನೇ ಅಲೆ ವೇಳೆ ಆಕ್ಸಿಜನ್ ಸಿಗದೇ ಮೃತ ಪಟ್ಟ ಕುಟುಂಬಗಳಿಗೆ ಸೂಕ್ತ ಪರಿಹಾರವೂ ಸಿಗಲಿಲ್ಲ, ಒಬ್ಬ ಸಣ್ಣ ಮಟ್ಟದ ಅಧಿಕಾರಿಯ ಮೇಲೆ ಯಾವ ಕ್ರಮವೂ ಆಗಲಿಲ್ಲ. ಏಕೆ ಈ ತಾರತಮ್ಯ ಎಂಬ ಪ್ರಶ್ನೆ ಜಿಲ್ಲೆಯ ಸಂತ್ರಸ್ತ ಕುಟುಂಬಗಳನ್ನು ಕಾಡುತ್ತಿದೆ.

ಆಕ್ಸಿಜನ್ ದುರಂತ

ಕೊರೊನಾ ಎರಡನೇ ಅಲೆ 201ರ ಮೇ 9 ರ ರಾತ್ರಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಸಿಗದೇ 36 ಮಂದಿ ಅಸುನೀಗಿದ್ದರು. ಅದರಲ್ಲೂ ಎಲ್ಲಾ ಬಡ ಕುಟುಂಬಗಳು, ಕೆಲವರು ಸಂಸಾರದ ಹೊಣೆ ಹೊತ್ತವರು,ಇನ್ನು ಕೆಲವರು ಕುಟುಂಬದ ಆಧಾರಸ್ತಂಭವಾದವರು, ಈ ವೇಳೆ ಮೃತಪಟ್ಟ ಒಂದೊಂದು ಕುಟುಂಬವೂ ಒಂದೊಂದು ದಾರುಣ ಕಥೆಯನ್ನೇ ಹೇಳುತ್ತವೆ. ಈ ದುರಂತಕ್ಕೂ ಮೊದಲು ಕುಟುಂಬಗಳು ನಿರುಮ್ಮಳವಾಗಿದ್ದವು. ಆದರೆ ಆ ಘನಘೋರ ದುರಂತದ ಬಳಿಕ ಕುಟುಂಬ ನಿರ್ವಹಣೆಗೆ ಪರಾದಾಡುವ ಸ್ಥಿತಿಯಲ್ಲಿವೆ.

ಇದನ್ನೂ ಓದಿ: Vishweshwar Bhat Column: ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ಜಿಲ್ಲಾಸ್ಪತ್ರೆಯೇ ಸ್ಮಶಾನ

ಅಂದು ಮಧ್ಯೆ ರಾತ್ರಿ ಏಕಾಏಕಿ ಆಮ್ಲಜನಕದ ಕೊರತೆಯಿಂದ ನರಳಾಡಿ ಎಲ್ಲರ ಕಣ್ಮುಂದೇ ಒದ್ದಾಡಿ ಒದ್ದಾಡಿ ಮೃತಪಟ್ಟವರೇ ಹೆಚ್ಚು. ಸುಮಾರು 36 ಮಂದಿ ಮೃತಪಟ್ಟಿದ್ದರು. ಜಿಲ್ಲಾಸ್ಪತ್ರೆಯ ಒಳಗೆ ಹಾಗೂ ಹೊರಗೆ ಮೃತಪಟ್ಟ ಘಟನೆ ಇಡೀ ದೇಶದ ಗಮನ ಸೆಳೆದಿತ್ತು. ಕರ್ನಾಟಕ ರಾಜ್ಯದ ಮಟ್ಟಿಗೆ ಇದೊಂದು ಕರಾಳ ಘಟನೆಯಾಗಿ ಇಂದಿಗೂ ಕಾಡುವ ದುರಂತ ನೆನಪು ಮಾತ್ರ ಜಿಲ್ಲೆಯ ಜನರ ಮನಸಿನಿಂದ ಮಾಸದೇ ಉಳಿದಿದೆ.

ಗಣ್ಯ ನಾಯಕರ ಭೇಟಿ

ಈ ದುರಂತ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಅಂದಿನ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅದ್ಯಕ್ಷ ಡಿ.ಕೆ.ಶಿವಕುಮಾರ್ ಒಳಗೊಂಡ ತಂಡ ಭೇಟಿ ನೀಡಿ ಮೃತ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬುವ ಕೆಲಸ ಮಾಡಿದ್ದರು. ಮೃತ ಕುಟುಂಬಕ್ಕೆ ಒಂದು ಲಕ್ಷ ಪರಿಹಾರ ವನ್ನು ತಕ್ಷಣ ನೀಡುವ ಮೂಲಕ ಉತ್ತಮ ಕೆಲಸ ಮಾಡಿ ಜನ ಮನ ಗೆದ್ದಿತ್ತು. ಅಲ್ಲದೇ ಆಡಳಿತ ವರ್ಗದಿಂದ ಮಾಹಿತಿ ಪಡೆದು ಘಟನೆಯ ಬಗ್ಗೆ ತಮ್ಮದೇ ಯಾದ ತನಿಖಾ ವರದಿಯನ್ನು ಸಿದ್ದಪಡಿಸಿ ಕೊಂಡಿತ್ತು. ಭರವಸೆ ಈಡೇರಲ್ಲಿಲ್ಲ.

ನಮ್ಮ ಸರಕಾರ ಬಂದರೆ 36 ಮೃತ

ಕುಟುಂಬಗಳಿಗೆ ಸೂಕ್ತ ಪರಿಹಾರ ಹಾಗೂ ಉದ್ಯೋಗ ನೀಡಿ, ಇದಕ್ಕೆ ಕಾರಣರಾದ ಅಧಿಕಾರಿಗಳನ್ನ ಕೂಡಲೇ ಬಂಧಿಸಿ ಕ್ರಮ ಜರಗಿಸುವುದಾಗಿ ಹೇಳಿದ್ದರು. ಅಲ್ಲದೇ ಈ ಘಟನೆ ಆರೋಗ್ಯ ಸಚಿವ ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್, ಡಿಸಿ, ಡಿಎಚ್‌ಒ ಸೇರಿದಂತೆ ಎಲ್ಲರ ಮೇಲೂ ಎಫ್‌ ಐಆರ್ ಹಾಕಬೇಕು ಎಂದು ಅಣದು ಪಟ್ಟು ಹಿಡಿದ್ದಿದ್ದರು. ಆದರೆ ತಮ್ಮದೇ ಸರಕಾರ ಬಂದರೂ ಈವರವಿಗೂ ತಪ್ಪಿತಸ್ಥರ ವಿರುದ್ದ ಯಾವ ಕ್ರಮವೂ ಆಗಿಲ್ಲ ಎಂದು ನೊಂದ ಕುಟುಂಬ ಗಳು ಆಕ್ರೋಶ ಹೊರ ಹಾಕುತ್ತಿವೆ.

ಆರ್‌ಸಿಬಿ ಸಾವಿಗೆ 25 ಲಕ್ಷ ಪರಿಹಾರ

ಬೆಂಗಳೂರಲ್ಲಿ ಆರ್‌ಸಿಬಿ ಸಂಭ್ರಮಾಚರಣೆ ಕಾಲ್ತುಳಿತದಲ್ಲಿ ಮೃತಪಟ್ಟ ಕೂಡಲೇ ಸರಕಾರ ಪೊಲೀಸ್ ಅಧಿಕಾರಿಗಳನ್ನ ಅಮಾನತು ಮಾಡಿ, ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಿದೆ. ಆದರೆ ಅದೇ ಕಾನೂನು ಚಾಮರಾಜನಗರ ಜಿಲ್ಲೆಯ ಆಕ್ಸಿಜನ್ ದುರಂತದ ಕುಟುಂಬ ಪರಿಹಾರ ಹಾಗೂ ಸಂಬಂಧಪಟ್ಟವರಿಗೆ ಕ್ರಮ ಏಕೆ ಇಲ್ಲ ಎನ್ನುವ ಪ್ರಶ್ನೆಯನ್ನ ಕುಟುಂಬದವರ ಜೊತೆ ಸಂಘ ಸಂಸ್ಥೆಗಳು ಸಹ ಧ್ವನಿ ಎತ್ತಿವೆ. ಕುಟುಂಬದ ಸದಸ್ಯರಿಗೆ ಸಮರ್ಪಕ ಪರಿಹಾರ ನೀಡದೇ ಇರುವುದಕ್ಕೆ ಸಂಘ ಸಂಸ್ಥೆಗಳು ಹೋರಾಡುವುದಕ್ಕೆ ನಿರ್ಧರಿಸಿದೆ.

ಆಮ್ಲಜನಕ ದುರಂತಕ್ಕೆ ಹೊಣೆ ಹೊರಬೇಕಾದ ಸರಕಾರ ಪರಿಹಾರ, ಉದ್ಯೋಗ ನೀಡದೇ ಅನ್ಯಾಯ ಎಸಗಿದೆ ಎಂದು ರೈತ ಸಂಘಟನೆ, ದಲಿತ ಸಂಘಟನೆ, ಕನ್ನಡಪರ ಹೋರಾಟಗಾರರು, ಎಸ್ಡಿಪಿಐ ಸಂಘಟನೆಗಳು ಸಂತ್ರಸ್ತರ ಜೊತೆ ಸಭೆ ಸೇರಿ ಚರ್ಚಿಸಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಒಟ್ಟಿನಲ್ಲಿ, ದುರಂತ ನಡೆದು ವರ್ಷಗಳು ಉರುಳುತ್ತಿದ್ದರೂ ಈವರವಿಗೂ ಸರಕಾರ ಮಾತ್ರ ಆಕ್ಸಿಜನ್ ದುರಂತದ ಸಂತ್ರಸ್ತರ ನೋವಿಗೆ ಸ್ಪಂದಿಸದೇ ಇರುವುದು ಮಾತ್ರ ಆಡಳಿತ ವ್ಯವಸ್ಥೆಯ ದುರಂತವೇ ಸರಿ..

*

ಕಾಲ್ತುಳಿತದ ಘಟನೆ ಪರಿಹಾರದ ಬೆನ್ನಲ್ಲೇ ಅಪಸ್ವರ

ಚಾ.ನಗರದಲ್ಲಿ ಸತ್ತರೆ ಬರೀ 3 ಲಕ್ಷ ರು. ಪರಿಹಾರ

ಆಕ್ಸಿಜನ್ ದುರಂತದ ಕುಟುಂಬಸ್ಥರಿಂದ ಆಕ್ರೋಶ

ಎಲ್ಲ ಜೀವಕ್ಕೂ ಒಂದೇ ಬೆಲೆ ಅಲ್ವಾ ಸಂತ್ರಸ್ತ ನೊಂದವರ ಪ್ರಶ್ನೆ

*

ಘೋಷಿಸಿದ ಎರಡು ಲಕ್ಷ ರೂ. ಪರಿಹಾರವನ್ನು ತಮಗೆ ಸರಿಯಾಗಿ ನೀಡಿಲ್ಲ, ಯಾವ ನೌಕರರ ವಿರುದ್ಧವು ಕ್ರಮ ಆಗಲಿಲ್ಲ, ಬೆಂಗಳೂರಿಗೆ ಒಂದು ಕಾನೂನು ಚಾಮರಾಜನಗರಕ್ಕೆ ಮತ್ತೊಂದು ಕಾನೂನಾ? ಸರಕಾರಿ ಕೆಲಸ ಕೂಡ ಕೊಟ್ಟಿಲ್ಲ. ಕಾಂಗ್ರೆಸ್ ಸರಕಾರ ನೌಕರಿ ಭರವಸೆ ಕೊಟ್ಟಿತ್ತು. ರಾಹುಲ್ ಗಾಂಧಿ ಅವರು ಕೂಡ ಉದ್ಯೋಗದ ಭರವಸೆ ನೀಡಿದ್ದರು. ಭರವಸೆ ಇದುವರೆವಿಗೂ ಈಡೇರಿಲ್ಲ.

-ನಾಗರತ್ನ, ಸಂತ್ರಸ್ತ ಕುಟುಂಬದ ಸದಸ್ಯೆ