ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಚಳಿಯ ಅಬ್ಬರಕ್ಕೆ ಕೊಪ್ಪಳ ಜನ ʼಥಂಡಾʼ !

ತಾಪಮಾನ ಪ್ರಮಾಣ ದಾಖಲೆ ಪ್ರಮಾಣದಲ್ಲಿ ಇಳಿಕೆ ಆಗಿದ್ದು, ಜನ ಜೀವನ ಅಸ್ವಸ್ಥಗೊಂಡಿದೆ. ಬೆಳಗ್ಗೆ ವಾಕಿಂಗ್ ಮಾಡುವವರು ಚಳಿಯಿಂದ ರಕ್ಷಿಸಿಕೊಳ್ಳಲು ವಿಶೇಷ ಧರಿಸುಗಳ ಮೊರೆ ಹೋಗಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಕನಿಷ್ಠ 10 ರಿಂದ 12 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ದಾಖಲಾಗು ತ್ತಿದ್ದು, ಇದು ಸಾಮಾನ್ಯಕ್ಕಿಂತ ತೀರಾ ಕಡಿಮೆ ಆಗಿದೆ. ಇದರಿಂದ ಬೆಳಗ್ಗೆ 6 ರಿಂದ 7 ಗಂಟೆ ವರೆಗೆ ದಟ್ಟ ಮಂಜು ಕವಿದಿರುತ್ತದೆ.

ಚಳಿಯ ಅಬ್ಬರಕ್ಕೆ ಕೊಪ್ಪಳ ಜನ ʼಥಂಡಾʼ !

-

Ashok Nayak
Ashok Nayak Dec 15, 2025 10:38 AM

ಶರಣಬಸವ ಹುಲಿಹೈದರ, ಕೊಪ್ಪಳ

ಬಿಸಿಲು ನಾಡಿನಲ್ಲಿ ಚಳಿಯ ಅಬ್ಬರ

ವೃದ್ಧರು, ಮಕ್ಕಳಲ್ಲಿ ಆತಂಕ

ಚಳಿಗೆ ವಿಶೇಷ ದಿರಿಸುಗೆ ಮೊರೆ

ಬೇಸಿಗೆಯಲ್ಲಿ ಗರಿಷ್ಠ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಕೊಪ್ಪಳದಲ್ಲಿ ಚಳಿಯ ಅಬ್ಬರ ಜೋರಾಗಿದೆ. ಜಿಲ್ಲೆಯಲ್ಲಿ ಕಳೆದ ಡಿ.11ರ ಬೆಳಗ್ಗೆಯಿಂದ ಡಿ. 12ರ ವರೆಗೆ 7.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್‌ಎನ್ ಡಿಎಂಸಿ) ಟ್ವಿಟ್ ಮಾಡಿದೆ.

ತಾಪಮಾನ ಪ್ರಮಾಣ ದಾಖಲೆ ಪ್ರಮಾಣದಲ್ಲಿ ಇಳಿಕೆ ಆಗಿದ್ದು, ಜನ ಜೀವನ ಅಸ್ವಸ್ಥಗೊಂಡಿದೆ. ಬೆಳಗ್ಗೆ ವಾಕಿಂಗ್ ಮಾಡುವವರು ಚಳಿಯಿಂದ ರಕ್ಷಿಸಿಕೊಳ್ಳಲು ವಿಶೇಷ ಧರಿಸುಗಳ ಮೊರೆ ಹೋಗಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಕನಿಷ್ಠ 10 ರಿಂದ 12 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ದಾಖಲಾಗುತ್ತಿದ್ದು, ಇದು ಸಾಮಾನ್ಯಕ್ಕಿಂತ ತೀರಾ ಕಡಿಮೆ ಆಗಿದೆ. ಇದರಿಂದ ಬೆಳಗ್ಗೆ 6 ರಿಂದ 7 ಗಂಟೆ ವರೆಗೆ ದಟ್ಟ ಮಂಜು ಕವಿದಿರುತ್ತದೆ.

ಇದರಿಂದ ವಾಹನ ಸಂಚಾರಕ್ಕೂ ತೊಂದರೆ ಆಗಿದ್ದು, ಜನರು ಓಡಾಟಕ್ಕೆ ಹಿಂಜರಿಯುತ್ತಿದ್ದಾರೆ. ಮತ್ತೊಂದೆಡೆ ವ್ಯಾಪಾರ, ವಹಿವಾಟುಗಳೂ ಲೂಡ ಬೆಳಗ್ಗೆ ತಡವಾಗಿ ಆರಂಭವಾಗುತ್ತಿವೆ. ಬೆಳಗಿನ ಜಾವ ಸಾರ್ವಜನಿಕ ಸ್ಥಳದಲ್ಲಿ ಜನರ ಓಡಾಟ ಕಡಿಮೆಯಾಗಿದೆ. ವಿದ್ಯಾರ್ಥಿಗಳಿಗೆ ತೊಂದರೆ: ಕೇಂದ್ರೀಯ ವಿದ್ಯಾಲಯ ಸೇರಿ ಕೆಲ ಶಾಲೆ- ಕಾಲೇಜುಗಳು ಬೆಳಗ್ಗೆ 8ಕ್ಕೆ ಆರಂಭ ಆಗುತ್ತವೆ.

ಇದನ್ನೂ ಓದಿ: Karnataka Weather: ತೀವ್ರವಾದ ಚಳಿ, ಉತ್ತರ ಕರ್ನಾಟಕದಲ್ಲಿ ಆರೆಂಜ್‌ ಅಲರ್ಟ್

ವಿದ್ಯಾರ್ಥಿಗಳು ತೀವ್ರ ಚಳಿಯ ಹೊಡೆತಕ್ಕೆ ಕಂಗಾಲಾಗಿದ್ದು, ಬೆಳಗ್ಗೆ ತರಗತಿಗೆ ಹಾಜರಾಗುವುದು ಕಷ್ಟವಾಗಿದೆ. ದಿನಗೂಲಿ ಮತ್ತು ಕೃಷಿ ಕಾರ್ಮಿಕರು ಬೆಳಗಿನ ಜಾವ ಹೊಲಕ್ಕೆ ಮತ್ತು ಕೆಲಸಕ್ಕೆ ತೆರಳಲು ಪರದಾಡುತ್ತಿದ್ದಾರೆ. ರಸ್ತೆ ಬದಿ ಮತ್ತು ವೃತ್ತದಲ್ಲಿ ಜನ ಗುಂಪು ಸೇರಿ ಬೆಂಕಿ ಕಾಯಿಸಿ ಕೊಳ್ಳುವ ದೃಶ್ಯ ಸಾಮಾನ್ಯವಾಗಿವೆ. ಚಳಿಯ ಹೊಡೆತಕ್ಕೆ ಮನುಷ್ಯರಷ್ಟೇ ಅಲ್ಲದೇ ಜಾನುವಾರು ಗಳೂ ತತ್ತರಿಸಿವೆ. ರೈತರು ಜಾನುವಾರು ರಕ್ಷಣೆಗೆ ಮುಂದಾಗಿದ್ದಾರೆ. ಮೇವು ಮತ್ತು ನೀರು ಕೊಡುವುದಕ್ಕೂ ಚಳಿಯಿಂದ ತೊಂದರೆಯಾಗಿದೆ.

ಕೆಎಸ್‌ಎನ್ ಡಿಎಂಸಿ ಮಾಹಿತಿ ನೆಟ್ಟಿಗರ ಕೊಂಕು

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ(ಕೆಎಸ್‌ಎನ್ ಡಿಎಂಸಿ) ತನ್ನ ಎಕ್ಸ್ ಖಾತೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ತಾಪಮಾನದ ಮಾಹಿತಿ ನೀಡಿದೆ. ಕಳೆದ ಡಿ.11ರ ಬೆಳಗ್ಗೆ ೮.೩೦ ರಿಂದ ಡಿ. 12ರ 7.30ರ ವರೆಗೆ ದಾಖಲಾದ ತಾಪಮಾನವನ್ನು ಜಿಲ್ಲಾವಾರು ನೀಡಲಾಗಿದೆ. ಅದರಂತೆ ಬೀದರ್‌ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತೀ ಕನಿಷ್ಠ ಅಂದರೆ 4.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇನ್ನು ಕೊಪ್ಪಳ ಜಿಲ್ಲೆಯಲ್ಲಿ 7.6 ಡಿಗ್ರಿ ಸೆಲ್ಸಿಯ್ ದಾಖಲಾಗಿದೆ ಎಂದು ಎಕ್ಸ್ ಖಾತೆಯಲ್ಲಿ ಕೆಎಸ್‌ಎನ್ ಡಿಎಂಸಿ ಮಾಹಿತಿ ನೀಡಿದೆ. ಈ ಮಾಹಿತಿಗೆ ಸಾಕಷ್ಟು ನೆಟ್ಟಿಗರು ಕೊಂಕು ನುಡಿದಿದ್ದಾರೆ. ಅಂದರೆ 4.1 ಡಿ.ಸೆ. ಎಂದರೆ ಸಾಮಾನ್ಯವಾಗಿ ಬೆಣ್ಣೆಯಂತೆ ಮಂಜು ಬೀಳುವಂತಿರು ತ್ತದೆ. ಈ ಹಿನ್ನೆಲೆ ಕೆಲವರು ಬೀದರ್‌ನಲ್ಲಿ ಸ್ನೋ ಬಿದ್ದಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.

ಹೆಚ್ಚಿದ ಆರೋಗ್ಯ ಸಮಸ್ಯೆ

ತೀವ್ರ ಚಳಿಯಿಂದ ವೃದ್ಧರು ಮತ್ತು ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿವೆ. ನೆಗಡಿ, ಕೆಮ್ಮು--, ಜ್ವರ ಮತ್ತು ಗಂಟಲು ನೋವಿನಂತಹ ವೈರಲ್ ಕಾಯಿಲೆ ಹೆಚ್ಚಾಗಿವೆ. ವೃದ್ಧರು ಮತ್ತು ಚಿಕ್ಕ ಮಕ್ಕಳಲ್ಲಿ ಶೀತ ಸಂಬಂಧಿ ರೋಗ, ಉಸಿರಾಟದ ತೊಂದರೆ ಹೆಚ್ಚಾಗಿದೆ. ಕ್ಷಯ ರೋಗಿಗಳಿಗೆ ಈ ಬಾರಿಯ ಚಳಿ ಮತ್ತಷ್ಟು ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ.

ವೈದ್ಯರ ಸಲಹೆಗಳು

ಬೆಳಗ್ಗೆ ಹೆಚ್ಚು ಚಳಿ ಇರುವುದರಿಂದ ವಯೋವೃದ್ಧರು, ಬಿಪಿ, ಶುಗರ್‌ ಹಾಗೂ ಹೃದಯ ರಕ್ತನಾಳ ಸಂಬಂಧಿ ಕಾಯಿಲೆ ಇದ್ದವರು ಬೆಳಗ್ಗೆ ಹೊರಗೆ ಬರುವುದನ್ನು ಸಂಪೂರ್ಣ ಕೈಬಿಡಬೇಕು

ಅತಿಯಾದ ಚಳಿಯಲ್ಲಿ ವಾಯು ವಿವಾರಕ್ಕೆ ಹೋಗುವುದರಿಂದ ಮೆದುಳು ಹಾಗೂ ಹೃದಯದಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಇರುತ್ತದೆ.

ಅನಿವಾರ್ಯ ಸಂದರ್ಭದಲ್ಲಿ ಹೊರಗೆ ಬರಬೇಕಾದರೆ ಬೆಚ್ಚನೆಯ ಬಟ್ಟೆ ಧರಿಸಬೇಕು.

ಒಳ್ಳೆಯ ಜಾಕೆಟ್, ಮಫ್ಲರ್, ಸ್ವೆಟರ್, ಕಿವಿ ಮುಚ್ಚುವಂತ ಬಟ್ಟೆ ಧರಿಸಬೇಕು. ಬಿಸಿ ನೀರು ಕುಡಿಯಬೇಕು.

ಅನಿವಾರ್ಯ ಅಲ್ಲದಿದ್ದರೆ ಬೆಳಗ್ಗೆ ಓಡಾಡುವುದನ್ನು ನಿಲ್ಲಿಸಿ, ಸೂರ್ಯೋದಯದ ನಂತರ ಹೊರಗೆ ಬರಬೇಕು.