ಪಶ್ಚಿಮ ಬಂಗಾಳದ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಗುಂಪುಗಳ ನಡುವೆ ಘರ್ಷಣೆ; ಹಲವರಿಗೆ ಗಾಯ
ಪಶ್ಚಿಮ ಬಂಗಾಳದ ಜಾದವ್ಪುರ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಗುಂಪುಗಳ ನಡುವೆ ಘರ್ಷಣೆ ಉಂಟಾಗಿದ್ದು, ಹಲವು ಮಂದಿ ಗಾಯಗೊಂಡ ಘಟನೆ ಗುರುವಾರ ನಡೆದಿದೆ. ವಿಶ್ವವಿದ್ಯಾಲಯದ ಸಾಮಾನ್ಯ ಸಭೆಯ ಕುರಿತು ಎಸ್ಎಫ್ಐ ಮತ್ತು ಎಬಿವಿಪಿ ಬೆಂಬಲಿಗರ ನಡುವೆ ಘರ್ಷಣೆ ಉಂಟಾಗಿದೆ. ಈ ಘಟನೆಯಿಂದ ಕ್ಯಾಂಪಸ್ ಆವರಣದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಸಂಗ್ರಹ ಚಿತ್ರ -
ಪಶ್ಚಿಮ ಬಂಗಾಳ: ವಿದ್ಯಾರ್ಥಿ ಗುಂಪುಗಳ ನಡುವೆ ಘರ್ಷಣೆ ಉಂಟಾದ ಘಟನೆ ಪಶ್ಚಿಮ ಬಂಗಾಳದಲ್ಲಿ ಗುರುವಾರ ಮುಂಜಾನೆ ನಡೆದಿದೆ. ಇಲ್ಲಿನ ಜಾದವ್ಪುರ ವಿಶ್ವವಿದ್ಯಾಲಯದಲ್ಲಿ (Jadavpur University) ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (Akhil Bharatiya Vidyarthi Parishad) ಮತ್ತು ಎಡಪಂಥೀಯ ವಿದ್ಯಾರ್ಥಿ ಗುಂಪು ಭಾರತೀಯ ವಿದ್ಯಾರ್ಥಿ ಒಕ್ಕೂಟ (Students' Federation of India) ಸದಸ್ಯರ ನಡುವೆ ಘರ್ಷಣೆ ಉಂಟಾಗಿದ್ದು, ಇದರಿಂದ ಹಲವಾರು ಮಂದಿ ಗಾಯಗೊಂಡರು. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹಲವಾರು ವಿದ್ಯಾರ್ಥಿಗಳು ಸೇರಿ ಕ್ಯಾಂಪಸ್ನಲ್ಲಿ ಪ್ರತಿಭಟನೆ ನಡೆಸಿದರು.
ಈ ಕುರಿತು ಮಾಹಿತಿ ನೀಡಿರುವ ವಿಶ್ವವಿದ್ಯಾಲಯ, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿ ಒಕ್ಕೂಟದ (ಎಫ್ಇಟಿಎಸ್ಯು) ಸಾಮಾನ್ಯ ಸಭೆ ಬುಧವಾರ ನಡೆದಿದ್ದು, ಈ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಪ್ರಾರಂಭವಾಗಿದೆ. ವಿವಾದ ತಡರಾತ್ರಿಯವರೆಗೂ ಮುಂದುವರಿದಿದ್ದು, ಬಳಿಕ ಇದು ಇಡೀ ಕ್ಯಾಂಪಸ್ ಅನ್ನು ಆವರಿಸಿದೆ.
1984ರ ಸಿಖ್ ದಂಗೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ನಿಧನ
ಘರ್ಷಣೆಯಿಂದ ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಕೆಲವರನ್ನು ಚಿಕಿತ್ಸೆಗಾಗಿ ಜಾದವ್ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಯಾಂಪಸ್ ಆವರಣದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದ ಕಾರಣ ವಿಶ್ವವಿದ್ಯಾಲಯದ ಆಡಳಿತ ಕಟ್ಟಡವಾದ ಅರಬಿಂದೋ ಭವನವನ್ನು ಲಾಕ್ ಮಾಡಲಾಗಿದೆ. ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
Clashes broke out between members of the Students’ Federation of India (SFI) and the Akhil Bharatiya Vidyarthi Parishad (ABVP) at Jadavpur University in Kolkata late Wednesday night, with the latter alleging that several of its supporters were injured.
— Hate Detector 🔍 (@HateDetectors) August 20, 2026
University sources said… pic.twitter.com/ageq7tUl12
ಏನಾಯಿತು?
ಘಟನೆ ಕುರಿತು ಮಾಹಿತಿ ನೀಡಿದ ಎಬಿವಿಪಿ ಕಾರ್ಯಕಾರಿಣಿ ಶುಭಬ್ರತ ಅಧಿಕಾರಿ, ಭಾರತೀಯ ವಿದ್ಯಾರ್ಥಿ ಒಕ್ಕೂಟ ಸೇರಿದಂತೆ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ಸದಸ್ಯರು ಸಭೆಯ ವೇಳೆ ಎಬಿವಿಪಿ ತಂಡದ ಮೇಲೆ ದಾಳಿ ನಡೆಸಿದ್ದಾರೆ. ಸುಮಾರು 70 ರಿಂದ 80 ಮಂದಿ ಎಬಿವಿಪಿ ಬೆಂಬಲಿಗರ ಮೇಲೆ ದಾಳಿ ನಡೆಸಿದ್ದು, ಇದರಲ್ಲಿ ಕ್ಯಾಂಪಸ್ ಹೊರಗಿನವರು ಕೂಡ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದು, ಈ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಯಾವುದೇ ಸಕ್ರಿಯ ವಿದ್ಯಾರ್ಥಿ ಸಂಘವಿಲ್ಲ. ರಾಜ್ಯ ಸರ್ಕಾರ ಅಥವಾ ವಿಶ್ವವಿದ್ಯಾಲಯವು ವಿದ್ಯಾರ್ಥಿ ಚುನಾವಣೆಗಳ ಕುರಿತು ಯಾವುದೇ ಅಧಿಸೂಚನೆಯನ್ನು ಕೂಡ ಹೊರಡಿಸಿಲ್ಲ. ಆದರೂ ಸಭೆ ಕರೆದಿರುವುದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಎಬಿವಿಯ ಆರೋಪವನ್ನು ತಿರಸ್ಕರಿಸಿರುವ ಭಾರತೀಯ ವಿದ್ಯಾರ್ಥಿ ಒಕ್ಕೂಟದ ನಾಯಕರು, ಎಬಿವಿಪಿಯವರು ಹೊರಗಿನವರನ್ನು ಕ್ಯಾಂಪಸ್ಗೆ ಕರೆತಂದಿದ್ದಾರೆ. ಅವರ ಬೆಂಬಲಿಗರು ವಿಶ್ವವಿದ್ಯಾಲಯದ ಹಲವು ಸ್ಥಳಗಳನ್ನು ಪ್ರವೇಶಿಸಿದ್ದರು. ವಿದ್ಯಾರ್ಥಿ ಗುಂಪುಗಳ ನಡುವೆ ಘರ್ಷಣೆ ನಡೆದಾಗ ಅವರು ವಿಧ್ವಂಸಕ ಕೃತ್ಯ ನಡೆಸಿದರು ಎಂದು ಆರೋಪಿಸಿದರು.
ಕ್ಯಾಂಪಸ್ನ ಕೆಲವು ಸ್ಥಳಗಳಲ್ಲಿ ಧ್ವಜಗಳನ್ನು ಕಿತ್ತುಹಾಕಿ ಬೆಂಕಿ ಹಚ್ಚಲಾಯಿತು. ಗುರುವಾರ ಬೆಳಗಿನ ಜಾವ ಕೂಡ ಕೆಲವು ಸ್ಥಳಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿದ್ಯಾರ್ಥಿಗಳ ತಂಡ ಘೋಷಣೆಗಳನ್ನು ಕೂಗುತ್ತಾ ಬೀಗ ಹಾಕಿದ ವಿಶ್ವವಿದ್ಯಾಲಯದ ಕಟ್ಟಡಗಳಿಗೆ ಪ್ರವೇಶಿಸಲು ಪ್ರಯತ್ನಿಸಿದರೂ ಎಂದು ವಿಶ್ವವಿದ್ಯಾಲಯ ಮೂಲಗಳು ತಿಳಿಸಿವೆ.
ವಿದ್ಯಾರ್ಥಿ ಗುಂಪುಗಳ ನಡುವೆ ನಡೆದ ಘರ್ಷಣೆಯಿಂದಾಗಿ ವಿಶ್ವವಿದ್ಯಾಲಯದ ಚಟುವಟಿಕೆಗಳಿಗೆ ಅಡ್ಡಿಯಾಗಿದೆ. ಎರಡು ವಿದ್ಯಾರ್ಥಿ ಗುಂಪುಗಳು ಪ್ರತಿಭಟನೆ ನಡೆಸುವುದಾಗಿ ಘೋಷಿಸಿಕೊಂಡಿದೆ. ಎಬಿವಿಪಿ ವಿಶ್ವವಿದ್ಯಾಲಯದ ಆವರಣದಲ್ಲಿ ಹಾಗೂ ಎಸ್ಎಫ್ಐ ಜಾದವ್ಪುರ ವಿಶ್ವವಿದ್ಯಾಲಯದ ಬಳಿಯ 8 ಬಿ ಬಸ್ ನಿಲ್ದಾಣದಲ್ಲಿ ರಾಲಿ ನಡೆಸುವುದಾಗಿ ತಿಳಿಸಿದೆ.