ದೆಹಲಿಯಲ್ಲಿ ಮಣಿಪುರಿ ಗಾಯಕ ಚೋಂಗ್ಥಮ್ ವಿಕ್ರಮ್ ಸಿಂಗ್ ಹತ್ಯೆ; ಯಾರಿವರು? ಏನಿವರ ಹಿನ್ನೆಲೆ?
Chongtham Vikram Singh: ದೆಹಲಿಯ ಕಿಲೋಕಾರಿ ಗ್ರಾಮದಲ್ಲಿರುವ ಅಪಾರ್ಟ್ಮೆಂಟ್ ಬಳಿ ಮಣಿಪುರಿ ಗಾಯಕ ಚೋಂಗ್ಥಮ್ ವಿಕ್ರಮ್ ಸಿಂಗ್ ಅವರನ್ನು ಗುಂಪೊಂದು ಹತ್ಯೆ ಮಾಡಿದೆ. ಚೋಂಗ್ಥಮ್ ವಿಕ್ರಮ್ ಸಿಂಗ್ ಮಣಿಪುರದ ಪ್ರಸಿದ್ಧ ಗಿಟಾರ್ ವಾದಕರಾಗಿದ್ದರು. ಅವರು 17 ವರ್ಷಗಳಿಂದ ದೆಹಲಿಯಲ್ಲಿ ಖಾಸಗಿ ಸಂಗೀತ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು.
ಮಣಿಪುರಿ ಗಾಯಕ ಚೋಂಗ್ಥಮ್ ವಿಕ್ರಮ್ ಸಿಂಗ್ (ಸಂಗ್ರಹ ಚಿತ್ರ) -
ದೆಹಲಿ, ಸೆ. 8: ರಾಷ್ಟ್ರ ರಾಜಧಾನಿ ದೆಹಲಿಯ (Delhi) ಕಿಲೋಕಾರಿ ಗ್ರಾಮದಲ್ಲಿರುವ ಅಪಾರ್ಟ್ಮೆಂಟ್ ಬಳಿ ಮಣಿಪುರಿ ಗಾಯಕ, 54 ವರ್ಷದ ಚೋಂಗ್ಥಮ್ ವಿಕ್ರಮ್ ಸಿಂಗ್ (Chongtham Vikram Singh) ಅವರನ್ನು ಗುಂಪೊಂದು ಹತ್ಯೆ ಮಾಡಿದೆ. ಈ ಘಟನೆಯು ರಾಷ್ಟ್ರ ರಾಜಧಾನಿಯನ್ನು ಬೆಚ್ಚಿ ಬೀಳಿಸಿದೆ. ದೆಹಲಿಯಲ್ಲಿ ಇತ್ತೀಚೆಗೆ ಈಶಾನ್ಯ ಭಾಗದ ಜನರ ಮೇಲೆ ನಡೆಯುತ್ತಿರುವ ದಾಳಿಗಳು ಕಳವಳ ಮೂಡಿಸಿದೆ (Crime News). ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಚೋಂಗ್ಥಮ್ ವಿಕ್ರಮ್ ಸಿಂಗ್ ಮಣಿಪುರದ ಪ್ರಸಿದ್ಧ ಗಿಟಾರ್ ವಾದಕರಾಗಿದ್ದರು. ಅವರು 17 ವರ್ಷಗಳಿಂದ ದೆಹಲಿಯಲ್ಲಿ ಖಾಸಗಿ ಸಂಗೀತ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಪತ್ನಿ ಜೋಶ್ನಾ ಚೋಂಗ್ಥಮ್ (50) ಮತ್ತು ಅವರ 20 ವರ್ಷದ ಪುತ್ರ ಯೈಫಾಬಾ ಚೋಂಗ್ಥಮ್ ಅವರೊಂದಿಗೆ ಕಿಲೋಕಾರಿಯಲ್ಲಿ ಫ್ಲಾಟ್ನಲ್ಲಿ ವಾಸಿಸುತ್ತಿದ್ದರು.
ಮೂಲತಃ ಇಂಫಾಲ ಪಶ್ಚಿಮದ ಥಾಂಗ್ಮೈಬಾಂಡ್ ಲೌರುಂಗ್ ಪುರೆಲ್ ಲೈಕೈ ನಿವಾಸಿಯಾದ ಚೋಂಗ್ಥಾಮ್ ದೆಹಲಿಗೆ ಸ್ಥಳಾಂತರಗೊಳ್ಳುವ ಮೊದಲು ಮಣಿಪುರದ ಪ್ರಸಿದ್ಧ ಮ್ಯೂಸಿಕ್ ಬ್ಯಾಂಡ್ಗಳಾದ ಫೀನಿಕ್ಸ್ ಮತ್ತು ಅಲ್ಟ್ರಾ ವೈರಸ್ ಸೇರಿ ಹಲವು ಜನಪ್ರಿಯ ತಂಡಗಳಲ್ಲಿ ಕಾರ್ಯನಿರ್ವಹಿಸಿದ್ದರು. ಈ ಮೂಲಕ ಮಣಿಪುರದ ಸಂಗೀತ ಲೋಕದಲ್ಲಿ ತಮ್ಮದೇ ಆದ ಹೆಸರು ಮಾಡಿದ್ದರು.
ದೆಹಲಿಯಲ್ಲಿಯೂ ಅವರು ತಮ್ಮ ಸಂಗೀತ ವೃತ್ತಿಜೀವನವನ್ನು ಮುಂದುವರಿಸಿದರು. ಸಂಗೀತ ಶಾಲೆಯೊಂದನ್ನು ಸ್ಥಾಪಿಸಿ ತಮ್ಮ ಮನೆಯಿಂದಲೇ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದರು. ಇದರೊಂದಿಗೆ ಅವರು ದೆಹಲಿ ಸ್ಕೂಲ್ ಆಫ್ ಮ್ಯೂಸಿಕ್ನಲ್ಲೂ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಭಾನುವಾರ (ಸೆ. 6) ರಾತ್ರಿ 11.30ರ ಸುಮಾರಿಗೆ ಕಸ ವಿಲೇವಾರಿ ಮಾಡಲು ಚೋಂಗ್ಥಮ್ ಮನೆಯಿಂದ ಕೆಳಗಡೆ ಹೋದಾಗ ಹತ್ತಿರದ ಎರಡು ಡಾಬಾಗಳ ಕಾರ್ಮಿಕರ ಗುಂಪೊಂದು ಕೂಗುತ್ತಾ ಗದ್ದಲ ಸೃಷ್ಟಿಸುತ್ತಿರುವುದನ್ನು ನೋಡಿದರು. ಈ ವೇಳೆ ಅವರನ್ನು ಚೋಂಗ್ಥಮ್ ಪ್ರಶ್ನಿಸಿದ್ದಾರೆ. ಈ ವೇಳೆ ವಾಗ್ವಾದ ನಡೆದಿದೆ. ನಂತರ ಚೋಂಗ್ಥಮ್ ತನ್ನ ಮನೆಯ ಕಡೆಗೆ ಓಡುತ್ತಿದ್ದಂತೆ, ಆ ಗುಂಪು ಅವರನ್ನು ಹಿಂಬಾಲಿಸಿ ಹಲ್ಲೆ ಮಾಡಿದೆ.
ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಚೋಂಗ್ಥಮ್ ಅವರನ್ನು ಕುಟುಂಬಸ್ಥರು ಓಖ್ಲಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬೆಳಗ್ಗಿನ ಜಾವ ಮೃತಪಟ್ಟರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಏಳು ಮಂದಿ ವಯಸ್ಕರು ಹಾಗೂ 15 ವರ್ಷದ ಬಾಲಕನನ್ನು ಬಂಧಿಸಿದ್ದಾರೆ. ಬಂಧಿತರನ್ನು ಭರತ್ ಕುಮಾರ್ (19), ಪ್ರಮೋದ್ (26), ರಂಜಾನ್ ಖಾನ್ (22), ವಿಜಯ್ (36), ದೀಪಾಂಶು (21), ಮೋಹನ್ ವಿಶ್ವಕರ್ಮ (32) ಮತ್ತು ಮನ್ನು (26) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಅವರಲ್ಲಿ ನಾಲ್ವರು ಡಾಬಾಗಳಲ್ಲಿ ಡೆಲಿವರಿ ಬಾಯ್ಗಳಾಗಿ ಮತ್ತು ಇಬ್ಬರು ಪ್ಯಾಕೇಜಿಂಗ್ ಕೆಲಸಗಾರರಾಗಿ ಕೆಲಸ ಮಾಡುತ್ತಿದ್ದರು.