Sheikh Hasina : ಶೇಖ್ ಹಸೀನಾಗೆ ಬಿಗ್ ಶಾಕ್ ; ಬ್ಯಾಂಕ್ ಖಾತೆ, ಆಸ್ತಿ ಜಪ್ತಿ ಮಾಡಲು ಕೋರ್ಟ್ ಆದೇಶ
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಭಾರಿ ಆಘಾತ ಎದುರಾಗಿದೆ. ಢಾಕಾ ನ್ಯಾಯಾಲಯವು ಆಕೆಯ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳು ಸೇರಿದಂತೆ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ನೀಡಿದೆ. ಗಡಿಪಾರಾಗಿ ಭಾರತದಲ್ಲಿರುವ ಹಸೀನಾ ಅವರ ಧನ್ಮೊಂಡಿ ನಿವಾಸ 'ಸುದಾಸಧನ್' ಮತ್ತು ಅವರ ಕುಟುಂಬ ಸದಸ್ಯರು ಹೊಂದಿರುವ ಇತರ ಕೆಲವು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೋರ್ಟ್ ಆದೇಶ ನೀಡಿದೆ.

ಶೇಖ್ ಹಸೀನಾ

ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರಿಗೆ ಭಾರಿ ಆಘಾತ ಎದುರಾಗಿದೆ. ಢಾಕಾ ನ್ಯಾಯಾಲಯವು ಆಕೆಯ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳು ಸೇರಿದಂತೆ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ನೀಡಿದೆ. ಗಡಿಪಾರಾಗಿ ಭಾರತದಲ್ಲಿರುವ ಹಸೀನಾ ಅವರ ಧನ್ಮೊಂಡಿ ನಿವಾಸ 'ಸುದಾಸಧನ್' ಮತ್ತು ಅವರ ಕುಟುಂಬ ಸದಸ್ಯರು ಹೊಂದಿರುವ ಇತರ ಕೆಲವು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೋರ್ಟ್ ಆದೇಶ ನೀಡಿದೆ. ಭ್ರಷ್ಟಾಚಾರ ನಿಗ್ರಹ ಆಯೋಗ (ಎಸಿಸಿ) ಸಲ್ಲಿಸಿದ ಅರ್ಜಿಯ ನಂತರ ಢಾಕಾ ಮೆಟ್ರೋಪಾಲಿಟನ್ ಹಿರಿಯ ವಿಶೇಷ ನ್ಯಾಯಾಧೀಶ ಝಾಕಿರ್ ಹೊಸೇನ್ ಘಾಲಿಬ್ ಮಂಗಳವಾರ ಈ ಆದೇಶ ಹೊರಡಿಸಿದ್ದಾರೆ.
ಶೇಖ್ ಹಸೀನಾ ಅವರ ಪತಿ, ದಿವಂಗತ ಪರಮಾಣು ವಿಜ್ಞಾನಿ ಎಂ.ಎ. ವಾಜೀದ್ ಮಿಯಾ ಅವರಿಗೆ ಸುಧಾ ಮಿಯಾ ಎಂದು ಅಡ್ಡಹೆಸರು ಇಡಲಾಗಿತ್ತು. 'ಸುಧಾಸದನ್' ಎಂಬ ಮನೆಗೆ ಅವರ ಹೆಸರಿಡಲಾಗಿದೆ. ಶೇಖ್ ಹಸೀನಾ ಜೊತೆಗೆ, ಅವರ ಮಗ ಸಾಜಿಬ್ ವಾಜೆದ್ ಜಾಯ್, ಮಗಳು ಸೈಮಾ ವಾಜೆದ್ ಪುತುಲ್, ಸಹೋದರಿ ಶೇಖ್ ರೆಹಾನಾ ಮತ್ತು ಅವರ ಪುತ್ರಿಯರಾದ ತುಲಿಪ್ ಸಿದ್ದಿಕ್ ಮತ್ತು ರದ್ವಾನ್ ಮುಜೀಬ್ ಸಿದ್ದಿಕ್ ಅವರ ಒಡೆತನದ ಇತರ ಕೆಲವು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸೂಚಿಸಲಾಗಿದೆ.
ಕಳೆದ ವರ್ಷ ಆಗಸ್ಟ್ನಲ್ಲಿ ಭುಗಿಲೆದ್ದ ಗಲಭೆಗಳ ನಂತರ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ನಂತರ ಅವರು ಭಾರತಕ್ಕೆ ಪಲಾಯನ ಮಾಡಿದ್ದರು. ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಶೇಖ್ ಹಸೀನಾ ಅವರನ್ನು ಮರಳಿ ಕರೆತರಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಆಕೆಯ ಪಾಸ್ಪೋರ್ಟ್ ಕೂಡ ರದ್ದುಗೊಂಡಿದೆ. ಅವರು ಭಾರತ ಸರ್ಕಾರಕ್ಕೂ ಪತ್ರ ಬರೆದರು. ಭಾರತ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಈ ಸುದ್ದಿಯನ್ನೂ ಓದಿ: Bangladesh Unrest: ಬಾಂಗ್ಲಾದಲ್ಲಿ ಮತ್ತೆ ಕಿಡಿ ಹೊತ್ತಿಸಿದ ಶೇಖ್ ಹಸೀನಾ ಭಾಷಣ; ಉದ್ರಿಕ್ತರಿಂದ ಮುಜಿಬುರ್ ರೆಹಮಾನ್ ನಿವಾಸ ಧ್ವಂಸ
ಫೆ. 6 ರಂದು ಶೇಖ್ ಹಸೀನಾ (Sheikh Hasina) ಭಾಷಣದಿಂದ ಆಕ್ರೋಶಗೊಂಡ ಉದ್ವಿಕ್ತರ ಗುಂಪೊಂದು ಢಾಕಾದಲ್ಲಿರುವ ಅವರ ತಂದೆಯ ನಿವಾಸವನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದೆ. ಶೇಖ್ ಹಸೀನಾ ತಂದೆ, ಬಾಂಗ್ಲಾದೇಶ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ (Sheikh Mujibur Rahma) ಅವರ ಸ್ಮಾರಕ ಮತ್ತು ಅವರ ನಿವಾಸವನ್ನು ಧ್ವಂಸಗೊಳಿಸಿದ್ದರು. ಮನೆಗೆ ಬೆಂಕಿ ಹಚ್ಚಿ, ಜೆಸಿಬಿ, ಮೂಲಕ ಮನೆ ನಾಶಮಾಡಲು ಯತ್ನಿಸಿದ್ದರು.