ಮೊಜ್ತಬಾ ಖಮೇನಿ ನಿಜವಾಗಿಯೂ ಬದುಕಿದ್ದಾರಾ? ಎಲ್ಲಿದ್ದಾರೆ, ಹೇಗಿದ್ದಾರೆ? ಇರಾನ್ ಸಚಿವ ಹೇಳಿದ್ದೇನು?
Iran’s Minister Esmaeil Baghaei: ದೇಶದ ನಾಯಕತ್ವವು ಹಾಗೆಯೇ ಉಳಿದಿದೆ ಮತ್ತು ಸುಪ್ರೀಂ ನಾಯಕನ ಬಗ್ಗೆಗಿನ ಊಹಾಪೋಹಗಳನ್ನು ಇರಾನ್ನ ಉಪ ವಿದೇಶಾಂಗ ಸಚಿವ ಎಸ್ಮಾಯಿಲ್ ಬಘೈ ಅವರು ತಳ್ಳಿಹಾಕಿದರು. ಮೊಜ್ತಬಾ ಖಮೇನಿ ಆರೋಗ್ಯವಾಗಿದ್ದಾರೆ ಎಂದು ಬಘೈ ತಿಳಿಸಿದರು. ಇದು ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಹೇರಿದ ಯುದ್ಧ ಎಂಬುದು ಎಲ್ಲರಿಗೂ ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.
ಮೊಜ್ತಬಾ ಖಮೇನಿ (ಸಂಗ್ರಹ ಚಿತ್ರ) -
ನವದೆಹಲಿ, ಮಾ.17: ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧವು (Iran-USA-Israel) ಮೂರನೇ ವಾರಕ್ಕೆ ಕಾಲಿಡುತ್ತಿದ್ದಂತೆ, ಇರಾನ್ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ (Mojtaba Khamenei) ಅವರ ಆರೋಗ್ಯ ಪರಿಸ್ಥಿತಿಯ ಬಗ್ಗೆ ಪ್ರಶ್ನೆಗಳು ಹರಡುತ್ತಲೇ ಇವೆ. ದೇಶದ ನಾಯಕತ್ವವು ಹಾಗೆಯೇ ಉಳಿದಿದೆ ಮತ್ತು ಸುಪ್ರೀಂ ನಾಯಕನ ಬಗ್ಗೆಗಿನ ಊಹಾಪೋಹಗಳನ್ನು ಇರಾನ್ನ ಉಪ ವಿದೇಶಾಂಗ ಸಚಿವ ಎಸ್ಮಾಯಿಲ್ ಬಘೈ (Esmaeil Baghaei) ಅವರು ತಳ್ಳಿಹಾಕಿದರು.
ಮೊಜ್ತಬಾ ಖಮೇನಿ ಆರೋಗ್ಯವಾಗಿದ್ದಾರೆ ಎಂದು ಬಘೈ ತಿಳಿಸಿದರು. ನೀವು ಈಗಾಗಲೇ ಅವರ ಸಂದೇಶದ ಬಗ್ಗೆ ಕೇಳಿದ್ದೀರಿ ಎಂದು ಭಾವಿಸುವೆ. ಶೀಘ್ರದಲ್ಲೇ ಅವರು ಸಾರ್ವಜನಿಕರಿಗೆ ಮತ್ತೊಂದು ಸಂದೇಶವನ್ನು ನೀಡುತ್ತಾರೆ ಎಂದು ಆಶಿಸುತ್ತೇನೆ ಎಂದು ಬಘೈ ತಿಳಿಸಿದರು.
17ನೇ ದಿನಕ್ಕೆ ಕಾಲಿಟ್ಟ ಯುದ್ಧ
ಟೆಹರಾನ್ ಈ ಹೋರಾಟವನ್ನು ವಾಷಿಂಗ್ಟನ್ ಮತ್ತು ಟೆಲ್ ಅವಿವ್ ಪ್ರಾರಂಭಿಸಿದ ಯುದ್ಧ ಎಂದು ನಿರೂಪಿಸುತ್ತಲೇ ಇದೆ. ಇಂದು ಈ ಅಪ್ರಚೋದಿತ, ಅನಗತ್ಯ ಆಕ್ರಮಣಕಾರಿ ಕೃತ್ಯದ 17 ನೇ ದಿನವಾಗಿದೆ ಎಂದು ಬಘೈ ಮಾಧ್ಯಮವೊಂದಕ್ಕೆ ತಿಳಿಸಿದರು. ಇದು ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಹೇರಿದ ಯುದ್ಧ ಎಂಬುದು ಎಲ್ಲರಿಗೂ ಸ್ಪಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.
ಭಾರತಕ್ಕೆ ಎಲ್ಪಿಜಿ ಹೊತ್ತು ತರುವ ನೌಕೆಗೆ ಮಾತ್ರ ಹೊರ್ಮುಜ್ ಜಲಸಂಧಿಯ ದಾರಿ ಬಿಡಲು ಇರಾನ್ ಒಪ್ಪಿಗೆ
ಸಂಘರ್ಷ ಪ್ರಾರಂಭವಾದಾಗ ಇರಾನ್ ಮಾತುಕತೆಗಳಲ್ಲಿ ತೊಡಗಿತ್ತು ಎಂದು ಅವರು ಹೇಳಿದರು. ನಾವು ಮಾತುಕತೆ ನಡೆಸುತ್ತಿದ್ದೆವು ಎಂದು ಅವರು ಹೇಳಿದರು. ಇರಾನಿಯನ್ನರು ತಮ್ಮ ತಾಯ್ನಾಡನ್ನು ರಕ್ಷಿಸಲು ದೃಢನಿಶ್ಚಯ ಹೊಂದಿದ್ದಾರೆ. ನಾವು ಈಗ ಅದನ್ನೇ ಮಾಡುತ್ತಿದ್ದೇವೆ ಎಂದು ಹೇಳಿದರು. ಇರಾನ್ ಅಧಿಕಾರಿಗಳು ಪದೇ ಪದೇ ಸಂಘರ್ಷವನ್ನು ರಕ್ಷಣಾತ್ಮಕ ಯುದ್ಧವೆಂದು ರೂಪಿಸಿದ್ದಾರೆ. ದೇಶದ ಮಿಲಿಟರಿ ಪ್ರತಿಕ್ರಿಯೆಯು ಅದರ ಸಾರ್ವಭೌಮತ್ವವನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.
ಹೊರ್ಮುಜ್ ಜಲಸಂಧಿ ಮತ್ತು ಭಾರತ
ಇನ್ನು ಈ ಸಂಘರ್ಷದ ಸಂದರ್ಭದಲ್ಲಿ ಹೊರ್ಮುಜ್ ಜಲಸಂಧಿಯ ಭದ್ರತೆ ಪ್ರಮುಖ ಚಿಂತೆಯಾಗಿದೆ. ಇದು ಅತಿ ಸಣ್ಣ ಸಮುದ್ರ ಮಾರ್ಗವಾಗಿದ್ದು, ವಿಶ್ವದ ಬಹುಪಾಲು ತೈಲ ಸರಬರಾಜು ಇದೇ ಮಾರ್ಗದ ಮೂಲಕ ಸಾಗುತ್ತದೆ.
ಭಾರತವು ಈ ಜಲಸಂಧಿಯ ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸುತ್ತಿದೆ. ವಿಶೇಷವಾಗಿ, ಈ ಪ್ರದೇಶದಲ್ಲಿ ಭಾರತೀಯ ಧ್ವಜ ಹೊಂದಿರುವ ಅನೇಕ ಹಡಗುಗಳು ಸಂಚರಿಸುತ್ತಿರುವುದರಿಂದ, ಭದ್ರತೆ ವಿಷಯದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲಾಗುತ್ತಿದೆ. ಬಘೈ ಅವರು, ಜಲಸಂಧಿಯನ್ನು ದಾಟಲು ಅನುಮತಿ ಪಡೆದಿದ್ದ ಕನಿಷ್ಠ ಒಂದು ಭಾರತೀಯ ಹಡಗು ಆ ದಿನದ ಆರಂಭದಲ್ಲೇ ಭಾರತಕ್ಕೆ ತಲುಪಿದೆ ಎಂದು ದೃಢಪಡಿಸಿದರು.
ಹೊರ್ಮುಜ್ ಜಲಸಂಧಿ ರಕ್ಷಣೆಗೆ ಅಮೆರಿಕದ ಜತೆ ನಿಲ್ಲುತ್ತಾ ಚೀನಾ?
ನಾವು ಭಾರತಕ್ಕೆ ಅತ್ಯಂತ ಹತ್ತಿರವಾಗಿದ್ದೇವೆ ಎಂದು ಅವರು ಹೇಳಿದರು. ಭಾರತೀಯರು ಮತ್ತು ಇರಾನಿಯರ ನಡುವೆ ಹಲವು ಸಾಮ್ಯತೆಗಳಿವೆ. ಭಾರತದ ಜತೆ ನಮ್ಮ ಉತ್ತಮ ಸಂಬಂಧಗಳನ್ನು ಬಲಪಡಿಸುವುದು ಹಾಗೂ ಮುಂದುವರಿಸುವುದಕ್ಕೆ ನಾವು ಹೆಚ್ಚಿನ ಮಹತ್ವ ನೀಡುತ್ತೇವೆ ಎಂದು ಅವರು ಹೇಳಿದರು.
ನಡೆಯುತ್ತಿರುವ ಸಂಘರ್ಷ ಮತ್ತು ಉದ್ವಿಗ್ನತೆಯಿಂದ ಹೊರ್ಮುಜ್ ಜಲಸಂಧಿಯ ಭದ್ರತೆ ಹದಗೆಟ್ಟಿದೆ. ಆದರೆ ಅದಕ್ಕೆ ಇರಾನ್ ಕಾರಣವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಂತಾರಾಷ್ಟ್ರೀಯ ಕಾನೂನು ಪ್ರಕಾರ, ಆಕ್ರಮಣಕಾರರ ಹಡಗುಗಳು ಮತ್ತು ನೌಕೆಗಳು ಹೊರ್ಮುಜ್ ಜಲಸಂಧಿಯನ್ನು ದಾಟಲು ಸಾಧ್ಯವಿಲ್ಲ ಎಂದು ನಾವು ಸ್ಪಷ್ಟಪಡಿಸಿದ್ದೇವೆ ಎಂದು ಅವರು ಹೇಳಿದರು. ಇರಾನ್ ವಿರುದ್ಧದ ಯುದ್ಧಕ್ಕೆ ಸಹಾಯ ಮಾಡುವ ದೇಶಗಳ ಹಡಗುಗಳನ್ನು ಜಲಮಾರ್ಗವನ್ನು ದಾಟಲು ಅನುಮತಿಸಲಾಗುವುದಿಲ್ಲ ಎಂದು ಬಘೈ ಹೇಳಿದರು.