Kaneri Swamiji: ಡಿಸಿ ನೋಟಿಸ್ ಬಳಿಕ ಬಾಗಲಕೋಟೆ ತೊರೆದ ಕನೇರಿ ಸ್ವಾಮೀಜಿ; ಮೂಲ ಮಠಕ್ಕೆ ವಾಪಸ್
Adrushya Kadhsiddheshwar Swamiji : ವಿಜಯಪುರ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರಿಂದ, ಕನೇರಿ ಶ್ರೀಗಳು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಚಿಕ್ಕಾಲಗುಂಡಿ ಗ್ರಾಮದ ಮಲ್ಲಿಕಾರ್ಜುನ ಮಠದಲ್ಲಿ (ಕನೇರಿ ಶಾಖಾ ಮಠ) ಕಳೆದ ಎರಡು ದಿನಗಳಿಂದ ವಾಸ್ತವ್ಯ ಹೂಡಿದ್ದರು. ಆದರೆ, ಆದರೆ, ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗಬಹುದು ಎಂದು ಜಿಲ್ಲಾಧಿಕಾರಿ ನೋಟಿಸ್ ಜಾರಿಗೊಳಿಸಿದ್ದಹಿನ್ನೆಲೆ ಸ್ವಾಮೀಜಿ ಜಿಲ್ಲೆಯನ್ನು ತೊರೆದಿದ್ದಾರೆ.

-

ಬಾಗಲಕೋಟೆ: ಲಿಂಗಾಯತ ಸ್ವಾಮೀಜಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದ ಮಹಾರಾಷ್ಟ್ರದ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ (Kaneri Swamiji), ಜಿಲ್ಲಾಡಳಿತದ ನೋಟಿಸ್ ಹಿನ್ನೆಲೆಯಲ್ಲಿ ಶನಿವಾರ ಬಾಗಲಕೋಟೆ ಜಿಲ್ಲೆಯನ್ನು ತೊರೆದಿದ್ದಾರೆ. ಕಾನೂನು ಸವ್ಯವಸ್ಥೆ ಹದಗೆಡುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇರಬಾರದು ಎಂದು ಡಿಸಿ ನೋಟಿಸ್ ನೀಡಿದ್ದರಿಂದ ಮೂಲ ಮಠಕ್ಕೆ ಸ್ವಾಮೀಜಿ ವಾಪಸ್ ತೆರಳಿದ್ದಾರೆ.
ವಿಜಯಪುರ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರಿಂದ, ಕನೇರಿ ಶ್ರೀಗಳು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಚಿಕ್ಕಾಲಗುಂಡಿ ಗ್ರಾಮದ ಮಲ್ಲಿಕಾರ್ಜುನ ಮಠದಲ್ಲಿ (ಕನೇರಿ ಶಾಖಾ ಮಠ) ಕಳೆದ ಎರಡು ದಿನಗಳಿಂದ ವಾಸ್ತವ್ಯ ಹೂಡಿದ್ದರು. ಆದರೆ, ಆದರೆ, ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗಬಹುದು ಎಂದು ಪರಿಗಣಿಸಿದ ಜಿಲ್ಲಾಧಿಕಾರಿ ಸಂಗಪ್ಪ ಎಂ. ಅವರು ಶುಕ್ರವಾರ ರಾತ್ರಿ ಮಠ ಖಾಲಿ ಮಾಡುವಂತೆ ನೋಟಿಸ್ ಜಾರಿಗೊಳಿಸಿದ್ದರು. ಈ ಹಿನ್ನೆಲೆ ಸ್ವಾಮೀಜಿ ಜಿಲ್ಲೆ ತೊರೆದಿದ್ದಾರೆ.
ಇದಕ್ಕೂ ಮೊದಲು ನೋಟಿಸ್ ಸ್ವೀಕರಿಸಿದ್ದ ಸ್ವಾಮೀಜಿ, ತಕ್ಷಣವೇ ಮಠದಿಂದ ತೆರಳಲು ನಿರಾಕರಿಸಿದ್ದರು. "ನನ್ನನ್ನು ಬಂಧಿಸುವುದಾದರೆ ಬಂಧಿಸಿ, ಎಷ್ಟು ದಿನ ಬೇಕಾದರೂ ಜೈಲಿನಲ್ಲಿಡಿ. ನಾನು ಜಾಮೀನಿಗೂ ಅರ್ಜಿ ಸಲ್ಲಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದರು. ಅವರ ಈ ನಿಲುವಿನಿಂದಾಗಿ ಅಧಿಕಾರಿಗಳು ಸ್ಥಳದಿಂದ ವಾಪಸಾಗಿದ್ದರು. ಆದರೆ, ಈ ಬೆಳವಣಿಗೆಯ ನಂತರ ಶನಿವಾರ ಬೆಳಗ್ಗೆ ಸ್ವಾಮೀಜಿಗಳು ಮಠವನ್ನು ತೊರೆದು ಮಹಾರಾಷ್ಟ್ರದ ಕಡೆಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.