CM oath ceremony: ನಾಳೆ ಸಿಎಂ ಆಗಿ ಡಿಕೆಶಿ ಪ್ರಮಾಣ ವಚನ ಹಿನ್ನೆಲೆ ನೆಲಮಂಗಲದಲ್ಲಿ 10 ಲಕ್ಷ ಲಾಡು ತಯಾರಿ!
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಿರುವ ಸಂತಸದಲ್ಲಿ ತಾಲೂಕಿನ ಪ್ರತಿ ಮನೆಗೂ ಸಿಹಿ ಹಂಚಲು ಉದ್ದೇಶಿಸಲಾಗಿದೆ. ನೆಲಮಂಗಲದಲ್ಲಿ ಲಾಡುಗಳ ತಯಾರಿಕೆಯನ್ನು ಶಾಸಕ ಶ್ರೀನಿವಾಸ್ ಮಂಗಳವಾರ ಪರಿಶೀಲನೆ ನಡೆಸಿದರು. ಪ್ರತಿ ಮನೆಗೆ ಮುಕ್ಕಾಲು ಕೆಜಿ ಸಿಹಿ ಬಾಕ್ಸ್ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ನೆಲಮಂಗಲದಲ್ಲಿ ಲಾಡುಗಳ ತಯಾರಿ ವೀಕ್ಷಿಸಿದ ಶಾಸಕ ಎನ್.ಶ್ರೀನಿವಾಸ್. -
ನೆಲಮಂಗಲ: ನಾಳೆ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಿ ಪ್ರಮಾಣ ವಚನ (CM oath ceremony) ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಈ ಐತಿಹಾಸಿಕ ಕ್ಷಣವನ್ನು ಸ್ಮರಣೀಯವಾಗಿಸಲು ತಾಲೂಕಿನಲ್ಲಿ 80 ರಿಂದ 90 ಸಾವಿರ ಮನೆಗಳಿಗೆ ಸಿಹಿ ಹಂಚಲು ಸಿದ್ಧತೆ ನಡೆಯುತ್ತಿದೆ. ಇದರ ಅಂಗವಾಗಿ ಸುಮಾರು 10 ಲಕ್ಷ ಲಾಡುಗಳ (laddus) ತಯಾರಿ ಮಾಡಲಾಗುತ್ತಿದೆ.
ನೆಲಮಂಗಲ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಲಾಡು ತಯಾರಿ ಕಾರ್ಯ ನಡೆಯುತ್ತಿದೆ. ಸುಮಾರು 250 ರಿಂದ 300 ಮಂದಿ ಬಾಣಸಿಗರಿಂದ ಲಾಡುಗಳನ್ನು ಸಿದ್ಧಪಡಿಸಲಾಗುತ್ತಿದೆ.
ಲಾಡುಗಳ ತಯಾರಿಕೆಯನ್ನು ಶಾಸಕ ಶ್ರೀನಿವಾಸ್ ಪರಿಶೀಲನೆ ನಡೆಸಿದ್ದು, ಯಾವುದೇ ಕೊರತೆಯಾಗದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಿರುವ ಸಂತಸದಲ್ಲಿ ತಾಲೂಕಿನ ಪ್ರತಿ ಮನೆಗೂ ಸಿಹಿ ಹಂಚಲು ಉದ್ದೇಶಿಸಲಾಗಿದೆ. ಪ್ರತಿ ಮನೆಗೆ ಮುಕ್ಕಾಲು ಕೆಜಿ ಸಿಹಿ ಬಾಕ್ಸ್ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಜೂನ್ 3ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬೆಂಗಳೂರಿನ ಲೋಕಭವನದ ಗ್ಲಾಸ್ಹೌಸ್ನಲ್ಲಿ ಸಂಜೆ 4:10ಕ್ಕೆ ಅವರು ಪದಗ್ರಹಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ.
ನಾಳೆ ಸಂಜೆ 4 ಗಂಟೆಗೆ ನೂತನ ಸಿಎಂ ಪ್ರಮಾಣ ವಚನ
ಬೆಂಗಳೂರಿನ ಲೋಕಭವನದ ಗಾಜಿನ ಮನೆಯಲ್ಲಿ ನಾಳೆ ಸಂಜೆ 4 ಗಂಟೆಗೆ ನೂತನ ಸಿಎಂ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ಭರ್ಜರಿ ಸಿದ್ಧತೆಗಳು ನಡೆದಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ಪೂರ್ವ ತಯಾರಿಯನ್ನು ಪರಿಶೀಲನೆ ನಡೆಸಿದ್ದಾರೆ.
ನೂತನ ಸಿಎಂ ಪ್ರಮಾಣ ವಚನ ಹಿನ್ನೆಲೆಯಲ್ಲಿ ವಿಧಾನಸೌಧದಿಂದ ರಾಜಭವನದವರೆಗೆ ಬೃಹತ್ ಬ್ಯಾನರ್, ಕಟೌಟ್ಗಳು ಹಾಗೂ ಕಾಂಗ್ರೆಸ್ ಧ್ವಜಗಳು ರಾರಾಜಿಸುತ್ತಿದ್ದು, ರಾಜಧಾನಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಇನ್ನು ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದ್ದು, ಲೋಕಭವನದ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದೆ.
ಸರ್ವ ಧರ್ಮ, ಸರ್ವ ಸಮುದಾಯದ ಸ್ವಾಮೀಜಿಗಳ ಸಮ್ಮುಖದಲ್ಲಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದು, 55 ಸ್ವಾಮೀಜಿಗಳು, ಫಾದರ್ , ಮಠಾಧಿಪತಿಗಳು ಹಾಗೂ ಮೌಲ್ವಿಗಳಿಗೆ ಸರ್ಕಾರದಿಂದಲೇ ಅಧಿಕೃತ ಆಹ್ವಾನ ಕಳುಹಿಸಲಾಗಿದೆ.
ನಾಳಿನ ಕಾರ್ಯಕ್ರಮಕ್ಕೆ ರೈತರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಸೇರಿ ಸಾಮಾನ್ಯರಿಂದ ಹಿಡಿದು ಹೈಕಮಾಂಡ್ ಮಟ್ಟದ ನಾಯಕರವರೆಗೆ ಆಹ್ವಾನ ನೀಡಿರುವುದು ವಿಶೇಷವಾಗಿದೆ.