ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಶ್ರಮವಿದ್ದಲ್ಲಿ ಫಲವಿದೆ, ಕಾಲವೇ ಉತ್ತರ ನೀಡಲಿದೆ ಎಂದ ಡಿ.ಕೆ. ಶಿವಕುಮಾರ್

ದೆಹಲಿ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು, ನಾನು ಪಕ್ಷ ಹೇಳಿದಂತೆ ಕೇಳುತ್ತೇನೆ. ಅದರ ಹೊರತಾಗಿ ಬೇರೆ ಯಾವುದೇ ವಿಚಾರದಲ್ಲಿ ತಲೆ ಹಾಕುವುದಿಲ್ಲ. ಶಾಸಕರು ಏನಾದರೂ ಹೇಳಿದರೆ ಹೈಕಮಾಂಡ್ ನಾಯಕರು ಹಾಗೂ ಸಿಎಂ ನೋಡಿಕೊಳ್ಳುತ್ತಾರೆ. ಅದರಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಶ್ರಮವಿದ್ದಲ್ಲಿ ಫಲವಿದೆ, ಕಾಲವೇ ಉತ್ತರ ನೀಡಲಿದೆ ಎಂದ ಡಿ.ಕೆ. ಶಿವಕುಮಾರ್

ಡಿಸಿಎಂ ಡಿ.ಕೆ. ಶಿವಕುಮಾರ್‌ -

Prabhakara R
Prabhakara R Feb 13, 2026 10:36 PM

ಬೆಂಗಳೂರು: “ನಾನು ಸದಾ ಭರವಸೆ ಮೇಲೆ ಬದುಕುವವನು. ಎಲ್ಲರ ಶ್ರಮಕ್ಕೆ ಫಲ ಇದ್ದೇ ಇರುತ್ತದೆ. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲವಿದೆ. ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತನಿದ್ದಾನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ದೆಹಲಿ ಪ್ರವಾಸದ ಬಳಿಕ ನಿಮ್ಮ ಆತ್ಮ ವಿಶ್ವಾಸ ಹೆಚ್ಚಾಗಿರುವಂತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದ್ದಾರೆ.

ಫೆ.17ರಂದು ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಮಾಡಲು ಹೈಕಮಾಂಡ್ ನಾಯಕರು ನಿಮಗೆ ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ಕರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು ಕೇಳಿದಾಗ, “ನನಗೆ ಗೊತ್ತಿಲ್ಲ, ಈ ಬಗ್ಗೆ ಕಾಲವೇ ಉತ್ತರ ನೀಡಲಿದೆ” ಎಂದು ತಿಳಿಸಿದರು.

ಅಧಿಕಾರ ಹಂಚಿಕೆ ವಿಚಾರವಾಗಿ ಸ್ಪಷ್ಟನೆಗೆ ಹೈಕಮಾಂಡ್ ನಾಯಕರನ್ನು ಸಂಪರ್ಕಿಸುತ್ತೇನೆ ಎಂಬ ಗೃಹ ಸಚಿವ ಪರಮೇಶ್ವರ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರಿಗೆ ನಾನು ಶುಭ ಕೋರುತ್ತೇನೆ” ಎಂದರು.

ಶಾಸಕರ ಪ್ರವಾಸದ ಬಗ್ಗೆ ನನಗೆ ಮಾಹಿತಿ ಇಲ್ಲ

ಶಾಸಕರು ವಿದೇಶ ಪ್ರವಾಸ ಹೋಗುತ್ತಿದ್ದು, ಪಕ್ಷದ ಅಧ್ಯಕ್ಷರಾಗಿ ಈ ಬಗ್ಗೆ ವರದಿ ಪಡೆದಿದ್ದೀರಾ ಎಂದು ಕೇಳಿದಾಗ, “ನಾನು ಈ ವಿಚಾರವಾಗಿ ವರದಿ ಪಡೆದಿಲ್ಲ. ಇದರ ಬಗ್ಗೆ ತಿಳಿಯುವ ಪ್ರಯತ್ನವನ್ನು ಮಾಡಿಲ್ಲ” ಎಂದರು.

ಈ ಅಧ್ಯಯನ ಪ್ರವಾಸವನ್ನು ಹೈಕಮಾಂಡ್ ನಾಯಕರು ತಡೆಯಬಹುದೇ ಎಂದು ಕೇಳಿದಾಗ, “ಈ ಬಗ್ಗೆ ನಾನು ಹೈಕಮಾಂಡ್ ನಾಯಕರ ಜತೆ ಮಾತನಾಡಿಲ್ಲ. ಪ್ರವಾಸ ಹೋಗುವವರು ನನ್ನ ಜತೆ ಈ ಬಗ್ಗೆ ಮಾತನಾಡಿಲ್ಲ, ಪ್ರವಾಸ ಕಳುಹಿಸುತ್ತಿರುವವರು ನನ್ನ ಜತೆ ಚರ್ಚೆ ಮಾಡಿಲ್ಲ” ಎಂದರು.

ಪಕ್ಷ ಹೇಳಿದಂತೆ ಕೇಳುವೆ:

"ನಾನು ಪಕ್ಷ ಹೇಳಿದಂತೆ ಕೇಳುತ್ತೇನೆ. ಅದರ ಹೊರತಾಗಿ ಬೇರೆ ಯಾವುದೇ ವಿಚಾರದಲ್ಲಿ ತಲೆ ಹಾಕುವುದಿಲ್ಲ. ಶಾಸಕರು ಏನಾದರೂ ಹೇಳಿದರೆ ಹೈಕಮಾಂಡ್ ನಾಯಕರು ಹಾಗೂ ಸಿಎಂ ನೋಡಿಕೊಳ್ಳುತ್ತಾರೆ. ಅದರಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಪಕ್ಷದ ಹಾಗೂ ಸರ್ಕಾರದ ಶಿಸ್ತಿನ ಸಿಪಾಯಿಯಾಗಿ ಇರುವುದು ನನ್ನ ಕರ್ತವ್ಯ" ಎಂದು ಸ್ಪಷ್ಟಪಡಿಸಿದರು.

ಸಾವಿರ ದಿನಗಳು ಪೂರ್ಣಗೊಂಡಿದ್ದು, ಹಾವೇರಿ ಕಾರ್ಯಕ್ರಮದ ಬಗ್ಗೆ ಕೇಳಿದಾಗ, “ನಾಳೆ ಹಾವೇರಿ ಕಾರ್ಯಕ್ರಮದಲ್ಲಿ ಭೂಮಿ ಗ್ಯಾರಂಟಿ ಯೋಜನೆ ಹಮ್ಮಿಕೊಂಡಿದ್ದೇವೆ” ಎಂದರು.

ಅಜ್ಜಯ್ಯ ಅವರ ಮಠಕ್ಕೆ ಭೇಟಿ ನೀಡುತ್ತಿರುವ ಬಗ್ಗೆ ಕೇಳಿದಾಗ, “ಅಜ್ಜಯ್ಯ ಅವರ ಜಾತ್ರೆ ಇದೆ. ಪ್ರತಿ ವರ್ಷ ಹೋಗುತ್ತೇನೆ. ಇವತ್ತು ಕೂಡ ಹೋಗಿ ಬರುತ್ತೇನೆ. ಇಂದು ಸಂಜೆ ಸಮ್ಮೇಳನಕ್ಕೆ ಆಗಮಿಸಿರುವ ಅತಿಥಿಗಳಿಗೆ ಭೋಜನ ಕೂಟ ಇಟ್ಟುಕೊಂಡಿದ್ದು, ಅವರಿಗೆ ವಿಧಾನಸೌಧ ವೀಕ್ಷಣೆ ಮಾಡುವ ಅವಕಾಶ ಕಲ್ಪಿಸಲಾಗಿದೆ” ಎಂದು ತಿಳಿಸಿದರು.

ಪ್ರಸ್ತಾವನೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ

ಇಂದು ವಿಶ್ವಬ್ಯಾಂಕ್ ಅಧಿಕಾರಿಗಳ ಜತೆ ಸಭೆ ಮಾಡಿದ್ದೇನೆ. ಅವರು ಹಳ್ಳಿಗಳಿಗೆ ಭೇಟಿ ನೀಡಿ ನೀರು ಸರಬರಾಜು ವ್ಯವಸ್ಥೆ ಪರಿಶೀಲಿಸಿದ್ದಾರೆ. ಕೆಆರ್ ಎಸ್ ಅಣೆಕಟ್ಟಿಗೆ ಹೋಗಿ ಅಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ನೀರು ಸರಬರಾಜು, ಮಳೆನೀರುಗಾಲುವೆ ಸೇರಿದಂತೆ ಇತರೆ ಯೋಜನೆಗಳ ಪ್ರಸ್ತಾವನೆ ಇದ್ದರೆ ನೀಡಿ ನಾವು ಬೆಂಬಲ ನೀಡಲು ಸಿದ್ಧವಿದ್ದೇವೆ ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರಸ್ತಾವನೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಎರಡು ದಿನಗಳ ಸಮ್ಮೇಳನದಲ್ಲಿ ಅಣೆಕಟ್ಟು ಸುರಕ್ಷತೆ ಬಗ್ಗೆ ಚರ್ಚೆ ಮಾಡಲಿದ್ದು, ನಂತರ ಸಂಶೋಧನಾ ಪತ್ರ ಹಾಗೂ ಮಾರ್ಗಸೂಚಿಗಳು ಪ್ರಕಟವಾಗಲಿವೆ.

ನಿನ್ನೆ ರಾತ್ರಿ ಬಿಜೆಪಿ ಶಾಸಕ ಬೈರತಿ ಬಸವರಾಜು ಅವರು ಬಂಧನವಾಗಿದ್ದಾರೆ ಎಂದು ಕೇಳಿದಾಗ, “ಈ ವಿಚಾರವಾಗಿ ಗೃಹ ಸಚಿವರನ್ನು ಕೇಳಿ. ಅವರ ಬಂಧನದ ಬಗ್ಗೆ ಪತ್ರಿಕೆಯಲ್ಲಿ ಓದಿದ್ದೇನೆ. ಅದರ ಹೊರತಾಗಿ ನನಗೆ ಬೇರೆ ವಿಚಾರ ಗೊತ್ತಿಲ್ಲ” ಎಂದರು.