"ನಿಮ್ಮ ಹೆಸರಿನಿಂದ ಡಾಕ್ಟರ್ ತೆಗೆದು ಹಾಕಿ"; 4 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಕೇಸ್ನಲ್ಲಿ ಆಸ್ಪತ್ರೆಗಳಿಗೆ ಛೀಮಾರಿ ಹಾಕಿದ ಸುಪ್ರೀಂ
Supreme Court: 4 ವರ್ಷದ ಅತ್ಯಾಚಾರ ಸಂತ್ರಸ್ತೆಗೆ ಸಕಾಲಿಕ ಚಿಕಿತ್ಸೆ ನೀಡಲು ವಿಫಲವಾಗಿ ಆಕೆಯ ಸಾವಿಗೆ ಕಾರಣವಾದ ಆರೋಪದ ಮೇಲೆ ಉತ್ತರ ಪ್ರದೇಶದ ಗಾಜಿಯಾಬಾದ್ನ ಎರಡು ಖಾಸಗಿ ಆಸ್ಪತ್ರೆಗಳು ಮತ್ತು ಅವುಗಳ ವೈದ್ಯರ ವಿರುದ್ಧ ಸುಪ್ರೀಂ ಕೋರ್ಟ್ ಶುಕ್ರವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಸಂಗ್ರಹ ಚಿತ್ರ -
ನವದೆಹಲಿ: 4 ವರ್ಷದ ಅತ್ಯಾಚಾರ ಸಂತ್ರಸ್ತೆಗೆ ಸಕಾಲಿಕ (Physical Assault) ಚಿಕಿತ್ಸೆ ನೀಡಲು ವಿಫಲವಾಗಿ ಆಕೆಯ ಸಾವಿಗೆ ಕಾರಣವಾದ ಆರೋಪದ ಮೇಲೆ ಉತ್ತರ ಪ್ರದೇಶದ ಗಾಜಿಯಾಬಾದ್ನ ಎರಡು ಖಾಸಗಿ ಆಸ್ಪತ್ರೆಗಳು ಮತ್ತು ಅವುಗಳ ವೈದ್ಯರ ವಿರುದ್ಧ ಸುಪ್ರೀಂ ಕೋರ್ಟ್ (Supreme Court) ಶುಕ್ರವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮಾರ್ಚ್ನಲ್ಲಿ ನಡೆದ ಘಟನೆಯ ನಂತರ ತನಿಖೆ ಮತ್ತು ವೈದ್ಯಕೀಯ ಪ್ರತಿಕ್ರಿಯೆಯಲ್ಲಿ ಗಂಭೀರ ಲೋಪಗಳಾಗಿವೆ ಎಂದು ಆರೋಪಿಸಿ ಮಗುವಿನ ತಂದೆ ಸಲ್ಲಿಸಿದ್ದ ಅರ್ಜಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿತು.
ವೈದ್ಯಕೀಯ ವೃತ್ತಿಪರರ ನಡವಳಿಕೆಯ ಬಗ್ಗೆ ದುಃಖ ವ್ಯಕ್ತಪಡಿಸಿದ ಮುಖ್ಯ ನ್ಯಾಯಾಧೀಶರು, ವೈದ್ಯರು ತಮ್ಮ ಮೂಲಭೂತ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲರಾದರೆ ಆ ಬಿರುದನ್ನು ಬಳಸುವ ಹಕ್ಕನ್ನು ಪ್ರಶ್ನಿಸಿದರು. "ನೀವು ನಿಮ್ಮ ಕರ್ತವ್ಯವನ್ನು ನಿರ್ವಹಿಸದಿದ್ದರೆ ನಿಮ್ಮ ಹೆಸರಿನೊಂದಿಗೆ ಡಾಕ್ಟರ್ ಎಂದು ಯಾಕೆ ಹಾಕಿಕೊಳ್ಳುತ್ತೀರಿ ಎಂದು ತರಾಟೆಗೆ ತೆಗೆದುಕೊಂಡಿದೆ. ಮಗುವಿಗೆ ಪ್ರಾಥಮಿಕ ವೈದ್ಯಕೀಯ ಆರೈಕೆ ನೀಡಲು ನಿರಾಕರಿಸಿದ್ದಕ್ಕಾಗಿ ಆಯುರ್ವೇದ ವೈದ್ಯರನ್ನು ನ್ಯಾಯಾಲಯವು ಕಟುವಾಗಿ ಟೀಕಿಸಿದೆ.
ಅತ್ಯಾಚಾರಕ್ಕೊಳಗಾದ ಮಗುವವನ್ನು ಕರೆದುಕೊಂಡು ಬಂದರೆ ನೀವು ಕರುಣೆಯೇ ಇಲ್ಲದವರಂತೆ ಆಕೆಗೆ ಚಿಕಿತ್ಸೆ ನೀಡಿಲ್ಲ. ನಿಮಗೆ ಸಹಾನುಭೂತಿ ಇದ್ದಿದ್ದರೆ, ನೀವೇ ಅವಳನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಿರಿ ಎಂದು ವೈದ್ಯರಿಗೆ ನ್ಯಾಯಾಲಯ ಹೇಳಿದೆ. ಖಾಸಗಿ ನ್ಯಾಯಾಲಯವನ್ನೂ ತರಾಟೆಗೆ ತೆಗೆದುಕೊಂಡ ನ್ಯಾಯಾಲಯ ಅಲ್ಲಿನ ಸಿಬ್ಬಂದಿಗಳ ವರ್ತನೆ ವಿರುದ್ಧ ಕಿಡಿ ಕಾರಿದೆ.
ಈ ಪ್ರಕರಣವು ಮಾರ್ಚ್ 16 ರಂದು ಗಾಜಿಯಾಬಾದ್ನಲ್ಲಿ ನಾಲ್ಕು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದೆ. ಆರೋಪಗಳ ಪ್ರಕಾರ, ಮಗುವನ್ನು ನೆರೆಹೊರೆಯವರು ಚಾಕೊಲೇಟ್ ಖರೀದಿಸುವ ನೆಪದಲ್ಲಿ ಕರೆದುಕೊಂಡು ಹೋಗಿದ್ದಾರೆ. ಆಕೆ ಮನೆಗೆ ಹಿಂದಿರುಗದ ಕಾರಣ ಆಕೆಯ ಕುಟುಂಬವು ಆಕೆಯನ್ನು ಹುಡುಕಲು ಪ್ರಾರಂಭಿಸಿತು ಮತ್ತು ನಂತರ ಆಕೆ ಪ್ರಜ್ಞಾಹೀನಳಾಗಿ ಮತ್ತು ರಕ್ತಸಿಕ್ತಳಾಗಿ ಬಿದ್ದಿರುವುದು ಕಂಡು ಬಂದಿದೆ.
ತಕ್ಷಣವೇ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಎರಡು ಖಾಸಗಿ ಆಸ್ಪತ್ರೆಗಳು ಮಗುವನ್ನು ಆಸ್ಪತ್ರೆಗೆ ಸೇರಿಸಿಕೊಳ್ಳಲು ನಿರಾಕರಿಸಿದವು, ಅಂತಿಮವಾಗಿ ಗಾಜಿಯಾಬಾದ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಮಗುವನ್ನು ಮೃತಪಟ್ಟಿರುವುದಾಗಿ ಘೋಷಿಸಿದರು. ಬಾಲಕಿ ಪತ್ತೆಯಾದ ಎರಡು ಗಂಟೆಗಳ ಕಾಲ ಜೀವಂತವಾಗಿದ್ದಳು ಮತ್ತು ಸಕಾಲಿಕ ಚಿಕಿತ್ಸೆ ನೀಡಿದ್ದರೆ ಆಕೆಯ ಜೀವ ಉಳಿಸಬಹುದಿತ್ತು ಎಂದು ತಂದೆ ಹೇಳಿಕೊಂಡಿದ್ದರು.