ಚೇಳೂರಿನಲ್ಲಿ ಜಿವಿಎಸ್ಗೆ 4ನೇ ವರ್ಷದ ಸ್ಮರಣೆ
ಚೇಳೂರು ತಾಲ್ಲೂಕಾಗಿ ಘೋಷಣೆಯಾಗಿ ವರ್ಷಗಳು ಕಳೆದರೂ ಅಭಿವೃದ್ಧಿ ಮರೀಚಿಕೆಯಾಗಿದೆ. ಆಸ್ಪತ್ರೆಯಲ್ಲಿ ವೈದ್ಯರಿಲ್ಲ, ಪದವಿ ಕಾಲೇಜು ಇಲ್ಲದೆ ಬಡ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಶ್ರೀರಾಮ ರೆಡ್ಡಿ ಅವರ ಕನಸಿನಂತೆ ಈ ಸಮಸ್ಯೆಗಳ ವಿರುದ್ಧ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು
-
ಚೇಳೂರು: ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದಿ.ಜಿ.ವಿ.ಶ್ರೀರಾಮರೆಡ್ಡಿ ಅವರ 4ನೇ ವರ್ಷದ ಸ್ಮರಣೆ ಅಂಗವಾಗಿ ಬುಧವಾರ ಚೇಳೂರು ಪಟ್ಟಣದಲ್ಲಿ ಸಿಪಿಎಂ ಮುಖಂಡರು ಹಾಗೂ ಅಭಿಮಾನಿಗಳು ಶ್ರದ್ಧಾಂಜಲಿ ಅರ್ಪಿಸಿದರು.
ಎಂ.ಜಿ.ವೃತ್ತದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶ್ರೀರಾಮರೆಡ್ಡಿ ಅವರ ಬೃಹತ್ ಬ್ಯಾನರ್ ಹಾಗೂ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಗೊಲ್ಲಪಲ್ಲಿ ಮಂಜುನಾಥ ಮಾತನಾಡಿ, 'ಜಿ.ವಿ. ಶ್ರೀರಾಮರೆಡ್ಡಿ ಈ ಭಾಗದ ಶೋಷಿತರ ಮತ್ತು ರೈತರ ಧ್ವನಿಯಾಗಿದ್ದರು. ಅವರ ಹೋರಾಟದ ಹಾದಿ ನಮಗೆಲ್ಲರಿಗೂ ದಾರಿದೀಪ. ತಾಲ್ಲೂಕಿನ ಬಡವರ ಹಿತ ಕಾಯಲು ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವು ಸಾಗಬೇಕಿದೆ' ಎಂದು ತಿಳಿಸಿದರು.
ಇದನ್ನೂ ಓದಿ: Children's Library: ಮಕ್ಕಳಿಂದ ಮಕ್ಕಳಿಗಾಗಿಯೇ ಸಜ್ಜಾದ ʼಮಕ್ಕಳ ಗ್ರಂಥಾಲಯʼ
ಸಿಪಿಎಂ ತಾಲ್ಲೂಕು ಸಮಿತಿ ಕಾರ್ಯದರ್ಶಿ ಬೈರೆಡ್ಡಿ ಮಾತನಾಡಿ, 'ಚೇಳೂರು ತಾಲ್ಲೂಕಾಗಿ ಘೋಷಣೆಯಾಗಿ ವರ್ಷಗಳು ಕಳೆದರೂ ಅಭಿವೃದ್ಧಿ ಮರೀಚಿಕೆಯಾಗಿದೆ. ಆಸ್ಪತ್ರೆಯಲ್ಲಿ ವೈದ್ಯರಿಲ್ಲ, ಪದವಿ ಕಾಲೇಜು ಇಲ್ಲದೆ ಬಡ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಶ್ರೀರಾಮರೆಡ್ಡಿ ಅವರ ಕನಸಿನಂತೆ ಈ ಸಮಸ್ಯೆಗಳ ವಿರುದ್ಧ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳಲಾಗು ವುದು' ಎಂದರು.
ಹಿರಿಯ ಕಲಾವಿದ ಸಿ.ಜೆ. ಶಿವಣ್ಣ ಮತ್ತು ಗೊಲ್ಲಪಲ್ಲಿ ಮಂಜುನಾಥ ಜಿ.ವಿ. ಶ್ರೀರಾಮರೆಡ್ಡಿ ಅವರ ಹೋರಾಟದ ಬದುಕಿನ ಕುರಿತಾದ ಕ್ರಾಂತಿಗೀತೆ ಹಾಡಿದರು.
ಸಿಪಿಎಂ ತಾಲ್ಲೂಕು ಸಮಿತಿ ಸದಸ್ಯ ಬೈರಾರೆಡ್ಡಿ ಎಂ.ಬಿ., ರಾಮಚಂದ್ರ ಬಿ., ಮುಖಂಡ ಜಹೀರ್ ಬೇಗ್, ಕೃಷ್ಣಪ್ಪ, ಉತ್ತಣ್ಣ, ನಾರಾಯಣಸ್ವಾಮಿ, ಫಾತಿಮಾ ಬಿ, ವೆಂಕಟರಮಣಪ್ಪ ವಿ ಪಾಲ್ಗೊಂಡಿದ್ದರು.