ಮೇ.9ಕ್ಕೆ ಕೈಪು ಲಕ್ಷ್ಮೀನರಸಿಂಹಶಾಸ್ತ್ರೀಗಳಿಗೆ 1 ಲಕ್ಷ ನಗದು ಸಹಿತ ನಾರೇಯಣ ಪ್ರಶಸ್ತಿ : ಧರ್ಮಾಧಿಕಾರಿ ಎಂ.ಆರ್.ಜಯರಾಮ್
ಟ್ರಸ್ಟ್ ಸಮಿತಿಯ ಸದಸ್ಯರ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಕೈವಾರ ತಾತಯ್ಯ ನವರ 300ನೇ ಜಯಂತಿಯನ್ನು ವರ್ಷಪೂರ್ತಿ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಸೂಕ್ತ ವ್ಯಕ್ತಿಗಳಿಗೆ ನಾರೇಯಣ ಪ್ರಶಸ್ತಿ ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ. ಅದರಂತೆ ಕೈಪು ಲಕ್ಷ್ಮೀನರಸಿಂಹ ಶಾಸ್ತ್ರೀಗಳಿಗೆ ಪ್ರಥಮವಾಗಿ ನಾರೇಯಣ ಪ್ರಶಸ್ತಿ ನೀಡಲಾಗುತ್ತಿದೆ
ಮೇ ೯ಕ್ಕೆ ಕೈಪು ರಸಿಂಹಶಾಸ್ತ್ರೀಗಳಿಗೆ 1 ಲಕ್ಷ ನಗದು ಸಹಿತ ನಾರೇಯಣ ಪ್ರಶಸ್ತಿ ಪ್ರಧಾನ ನಡೆಯಲಿದೆ ಎಂದು ಕೈವಾರ ಶ್ರೀಮಠದ ಧರ್ಮಾಧಿಕಾರಿ ಎಂ.ಆರ್.ಜಯರಾಮ್ ತಿಳಿಸಿದರು. -
ಕೈವಾರ : ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರ ತತ್ವಬೋಧನೆಗಳಿಗೆ ಭಾವಾನುವಾದ, ತಾತ್ಪರ್ಯಗಳನ್ನು ರಚಿಸಿ ಅಪಾರ ಕೊಡುಗೆಯನ್ನು ನೀಡಿರುವ ದಿವಂಗತ ಶ್ರೀಕೈಪು ಲಕ್ಷ್ಮೀ ನರಸಿಂಹಶಾಸ್ತ್ರೀಗಳಿಗೆ ಸದ್ಗುರು ಶ್ರೀಯೋಗಿನಾರೇಯಣ ಮಠದಿಂದ ಮರಣೋತ್ತರವಾಗಿ “ನಾರೇ ಯಣ” ಪ್ರಶಸ್ತಿಯನ್ನು ಮೇ 9ರಂದು ಸಂಜೆ 5 ಗಂಟೆಗೆ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ಒಂದು ಲಕ್ಷ ರೂಗಳನ್ನು ಒಳಗೊಂಡಿರುತ್ತದೆ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ತಿಳಿಸಿದ್ದಾರೆ.
ಚಿಂತಾಮಣಿ ತಾಲೂಕು ಕೈವಾರದ ಸದ್ಗುರು ಶ್ರೀಯೋಗಿನಾರೇಯಣ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ಮಾತನಾಡಿದರು.
ಟ್ರಸ್ಟ್ ಸಮಿತಿಯ ಸದಸ್ಯರ ಸಭೆಯಲ್ಲಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಕೈವಾರ ತಾತಯ್ಯನವರ 300ನೇ ಜಯಂತಿಯನ್ನು ವರ್ಷಪೂರ್ತಿ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಸೂಕ್ತ ವ್ಯಕ್ತಿಗಳಿಗೆ ನಾರೇಯಣ ಪ್ರಶಸ್ತಿಯನ್ನು ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ. ಅದರಂತೆ ಕೈಪು ಲಕ್ಷ್ಮೀನರಸಿಂಹ ಶಾಸ್ತ್ರೀಗಳಿಗೆ ಪ್ರಥಮವಾಗಿ ನಾರೇಯಣ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದರು.
ಶ್ರೀಕೈಪು ಲಕ್ಷ್ಮೀನರಸಿಂಹಶಾಸ್ತ್ರೀಗಳು ಕೈವಾರ ಶ್ರೀಯೋಗಿನಾರೇಯಣ ತಾತಯ್ಯನವರ ಸಾಹಿತ್ಯ ವನ್ನು ಆಳವಾಗಿ ಅಧ್ಯಯನ ಮಾಡಿ, ತಾತಯ್ಯನವರು ರಚಿಸಿರುವ ಎಲ್ಲಾ ಗ್ರಂಥಗಳಿಗೆ ವ್ಯಾಖ್ಯಾನ ತಾತ್ಪರ್ಯ ರಚಿಸಿ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಇದು ಅವರ ಜೀವಮಾನದ ಸಾಧನೆ ಯಾಗಿದೆ ಎಂದರು.
ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕರಾದ ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್ ರವರು ಮಾತನಾಡುತ್ತಾ 1978ರಲ್ಲಿ ಕೀರ್ತಿಶೇಷ ಪೂಜ್ಯ ಡಾ.ಎಂ.ಎಸ್. ರಾಮಯ್ಯನವರು ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದರು. ಅವರು ತಾತಯ್ಯನವರ ತತ್ವ ಬೋಧನೆಗಳಿಗೆ ಮಾರುಹೋಗಿ ಅವರ ಸಾಹಿತ್ಯವನ್ನು ಪ್ರಚಾರ ಮಾಡುವ ನಿಟ್ಟಿನಲ್ಲಿ ಕಾರ್ಯೋ ರ್ಮುಖರಾದರು. ಅಲ್ಲಿಯವರೆಗೂ ತಾತಯ್ಯನವರ ಎಲ್ಲಾ ಬೋಧನೆ,ಕೀರ್ತನೆ, ಶತಕಗಳು, ಕಾಲ ಜ್ಞಾನ ಎಲ್ಲವೂ ಒಂದೇ ಪುಸ್ತಕದಲ್ಲಿ ಅಡಕವಾಗಿತ್ತು.
ಈ ಸಂದರ್ಭದಲ್ಲಿ ತಾತಯ್ಯನವರ ಸಾಹಿತ್ಯ ವನ್ನು ಪುನರ್ವಿಂಗಡಿಸುವ ಕಾರ್ಯ ಆರಂಭ ವಾಯಿತು. ಆದರೆ ಈ ಕಾರ್ಯಕ್ಕೆ ಸೂಕ್ತವಾದ ವ್ಯಕ್ತಿಯ ಆಯ್ಕೆಗೆ ಮುಂದಾದರು. ಆಗ ಟ್ರಸ್ಟ್ನ ಸದಸ್ಯರೆಲ್ಲರೂ ಒಮ್ಮತದಿಂದ ಆರಿಸಿದ ವ್ಯಕ್ತಿಯೇ ಶ್ರೀಕೈಪು ಲಕ್ಷ್ಮೀನರಸಿಂಹಶಾಸ್ತ್ರೀಗಳು ಎಂದರು.
ಕೈಪು ಲಕ್ಷ್ಮೀನರಸಿಂಹಶಾಸ್ತ್ರೀಗಳು ಕನ್ನಡ ಪಂಡಿತರು, ಹಿಂದೀ ರಾಷ್ಟ್ರಭಾಷೆ ಪ್ರವೀಣರಾಗಿದ್ದ ಇವರು ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆ, ಮೃದಂಗ, ಕೊಳಲು, ಹಾರ್ಮೋನಿಯಂ ವಾದನ, ಗಮಕಕಲೆ, ಹರಿಕಥಾ ಕೀರ್ತನೆ ಹೀಗೆ ನಾನಾ ರಂಗಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದರು.
ವೇದ, ಶಾಸ್ತ್ರ, ಪುರಾಣಗಳ ಆಳವಾದ ಅಧ್ಯಯನವನ್ನು ಮಾಡಿದ್ದರು. ನಾಡಿನಾದ್ಯಂತ ಹಲವಾರು ಸಂಗೀತ, ಗಮಕ, ಉಪನ್ಯಾಸ, ಕಥಾಕೀರ್ತನೆ ಹೀಗೆ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕ್ರಿ.ಶ.1960 ಎಂಬ ಪುಸ್ತಕವನ್ನು ಪ್ರಕಟಿಸಿದ್ದರು. ಈ ಹಿನ್ನಲೆಯಲ್ಲಿ ಕೈವಾರ ತಾತಯ್ಯನವರ ಜೀವನ-ಸಾಧನೆ-ಕೃತಿಗಳನ್ನು ಕುರಿತು ಪ್ರಥಮವಾಗಿ ಸಾಹಿತ್ಯಲೋಕಕ್ಕೆ ಪರಿಚಯಿಸಿದ ಕೀರ್ತಿಯೂ ಕೈಪುಸ್ವಾಮಿಗಳಿಗೆ ಸಲ್ಲುತ್ತದೆ ಎಂದರು.
ಇವರು ಮೊದಲಿಗೆ ತಾತಯ್ಯನವರಿಂದ ರಚಿತವಾಗಿದ್ದ ತಾಳೆಗರಿಗಳನ್ನು ಸಂಗ್ರಹಿಸುವ ಕಾರ್ಯ ದಲ್ಲಿ ಮಗ್ನರಾದರು. ನಂತರ ಆ ತಾಳೆಗರಿಯಲ್ಲಿರುವಂತೆ ಪುಸ್ತಕಗಳನ್ನು ವಿಂಗಡಿಸಿದರು. ನಂತರ ಈ ಎಲ್ಲಾ ಸಾಹಿತ್ಯಕ್ಕೆ ವ್ಯಾಖ್ಯಾನವನ್ನು ಬರೆದು ಪ್ರಸಿದ್ಧಿಗೊಳಿಸಿದರು. ಕಾಲಾಂತರದಲ್ಲಿ ಸ್ಪಷ್ಟ ವಾದ ವ್ಯಾಖ್ಯಾನ-ತಾತ್ಪರ್ಯಗಳನ್ನೊಳಗೊಂಡ ಹಲವಾರು ಪುಸ್ತಕಗಳನ್ನು ಶ್ರೀಯುತರಿಂದ ರಚನೆಯಾಯಿತು.
ನಾದಬ್ರಹ್ಮಾನಂದ ನಾರೇಯಣ ಕವಿಶತಕ, ಶ್ರೀಕೃಷ್ಣಚರಿತ ತತ್ವಾಮೃತ ಯೋಗಸಾರಮು, ತಾರಕ ಬ್ರಹ್ಮಾನಂದ ದ್ವಯಕಂದ ಶತಕ, ಬ್ರಹ್ಮಾಂಡಪುರಿ ಶತಕ, ಅಮರನಾರೇಯಣ ಶತಕ, ಕಾಲಜ್ಞಾನ-ಭವಿಷ್ಯವಾಣಿ. ಇವು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಪ್ರಕಟವಾಗಿದೆ.
ಶ್ರೀಯುತರು 2012ರಲ್ಲಿ ನಡೆದ ಚಿಕ್ಕಬಳ್ಳಾಪುರ ಜಿಲ್ಲೆಯ ಎರಡನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಶ್ರೀಕ್ಷೇತ್ರ ಕೈವಾರದಿಂದ ಪ್ರಕಟವಾಗುವ ಮಲ್ಲಾರ ಮಾಸಪತ್ರಿಕೆಗೆ ಸಂಪಾದಕರಾಗಿ ಹಲವಾರು ವರ್ಷಗಳು ಕೆಲಸಮಾಡಿದ್ದಾರೆ. ಇವರು ಮಾಡಿರುವ ಸೇವೆಯನ್ನು ಗುರುತಿಸಿ ಮರಣೋತ್ತರವಾಗಿ ಪ್ರಪಥಮವಾಗಿ ನಾರೇಯಣ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೈವಾರ ಮಠ ಟ್ರಸ್ಟ್ʼನ ಉಪಾಧ್ಯಕ್ಷರಾದ ಜೆ.ವಿಭಾಕರ ರೆಡ್ಡಿ ಹಾಗೂ ವ್ಯವಸ್ಥಾಪಕ ಕೆ.ಲಕ್ಷ್ಮೀನಾರಾಯಣ್ ಉಪಸ್ಥಿತರಿದ್ದರು.