Prajaseva: ಸ್ಥಳದಲ್ಲೇ ಅರ್ಜಿ ವಿಲೇವಾರಿ; ಫಲಾನುಭವಿಗಳಿಗೆ ಮಂಜೂರಾತಿ ಪತ್ರ, ಕಾರ್ಯಾದೇಶ ವಿತರಣೆ
ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ಲು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಭೆಗೆ ಜಿಲ್ಲಾಧಿಕಾರಿ ಜಿ.ಪ್ರಭು ಚಾಲನೆ ನೀಡಿ, ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿ ವಿಲೇವಾರಿ ಪ್ರಕ್ರಿಯೆ ಪರಿಶೀಲಿಸಿದರು. ಗೌರಿಬಿದನೂರಿನ ಡಿ.ಪಾಳ್ಯದಲ್ಲಿ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ, ಶಿಡ್ಲಘಟ್ಟದ ಬಶೆಟ್ಟಹಳ್ಳಿಯಲ್ಲಿ ಶಾಸಕ ಬಿ.ಎನ್.ರವಿಕುಮಾರ್ ಹಾಗೂ ಚೇಳೂರಿನಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ನೇತೃತ್ವದಲ್ಲಿ ಸಭೆಗಳು ನಡೆದವು
-
ಚಿಕ್ಕಬಳ್ಳಾಪುರ : ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಎಂಟು ತಾಲೂಕುಗಳ ಐದು ಸ್ಥಳಗಳಲ್ಲಿ ನಡೆದ ಪ್ರಜಾ ಸೇವಾ ಆಂದೋಲನದ ಎರಡನೇ ವಾರದ ಸಭೆಗಳಲ್ಲಿ ಸಾರ್ವಜನಿಕರಿಂದ ಒಟ್ಟು 900 ಅರ್ಜಿಗಳನ್ನು ಸ್ವೀಕರಿಸಿ, ಹಲವು ಅರ್ಜಿಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡುವ ಮೂಲಕ ಸರ್ಕಾರಿ ಸೇವೆಗಳನ್ನು ಜನರ ಬಳಿಗೆ ತಲುಪಿಸಲಾಯಿತು.
ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ಲು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಭೆಗೆ ಜಿಲ್ಲಾಧಿಕಾರಿ ಜಿ.ಪ್ರಭು ಚಾಲನೆ ನೀಡಿ, ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿ ವಿಲೇವಾರಿ ಪ್ರಕ್ರಿಯೆ ಪರಿಶೀಲಿಸಿದರು. ಗೌರಿಬಿದನೂರಿನ ಡಿ.ಪಾಳ್ಯದಲ್ಲಿ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ, ಶಿಡ್ಲಘಟ್ಟದ ಬಶೆಟ್ಟಹಳ್ಳಿಯಲ್ಲಿ ಶಾಸಕ ಬಿ.ಎನ್.ರವಿಕುಮಾರ್ ಹಾಗೂ ಚೇಳೂರಿನಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ(MLA S.N. Subbareddy) ನೇತೃತ್ವದಲ್ಲಿ ಸಭೆಗಳು ನಡೆದವು. ಚಿಂತಾಮಣಿ ತಾಲೂಕಿನ ಮುರುಗ ಮಲ್ಲದಲ್ಲಿ ತಹಶೀಲ್ದಾರ್ ಸುದರ್ಶನ್ ಯಾದವ್ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಆನಂದ್ ಅರ್ಜಿಗಳನ್ನು ಸ್ವೀಕರಿಸಿದರು.
ಚಿಕ್ಕಬಳ್ಳಾಪುರ 304, ಚೇಳೂರು 149, ಚಿಂತಾಮಣಿ 146, ಗೌರಿಬಿದನೂರು 116, ಶಿಡ್ಲಘಟ್ಟ 102, ಗುಡಿಬಂಡೆ 50, ಮಂಚೇನಹಳ್ಳಿ 22 ಹಾಗೂ ಬಾಗೇಪಲ್ಲಿ 11 ಅರ್ಜಿಗಳು ಸ್ವೀಕೃತವಾಗಿವೆ.
ಪಿಂಚಣಿ ಅರ್ಜಿಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡಿ ಅರ್ಹರಿಗೆ ಮಂಜೂರಾತಿ ಪತ್ರ, ವಿ.ಬಿ.ಜಿ. ರಾಮ್ಜಿ ಯೋಜನೆಯಡಿ ಜಾಬ್ಕಾರ್ಡ್ ಹಾಗೂ ವೈಯಕ್ತಿಕ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಯಿತು. ಎಸ್ಬಿಎಂ-ಜಿ ಯೋಜನೆಯಡಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಕಾರ್ಯಾದೇಶ ಹಾಗೂ ವಿವಿಧ ಯೋಜನೆಗಳಡಿ ಮೋಟಾರ್ ಬೈಕ್, ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.
ಅರ್ಜಿಯ ಸ್ವೀಕೃತಿ ಪಡೆದ ಬಳಿಕ ಅದರ ಪ್ರಗತಿ ಮತ್ತು ವಿಲೇವಾರಿ ಸ್ಥಿತಿಯನ್ನು ಆನ್ಲೈನ್ನಲ್ಲಿ ತಿಳಿದುಕೊಳ್ಳಬಹುದು. ಸಾರ್ವಜನಿಕರು ಆಂದೋಲನದ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಮನವಿ ಮಾಡಿದರು.
ಜಿಪಂ ಸಿಇಒ ಡಾ.ವೈ.ನವೀನ್ ಭಟ್ ಮಾತನಾಡಿ, ಅರ್ಜಿಗಳ ಸ್ಥಿತಿ ತಿಳಿಯಲು ‘ನಮ್ಮ ಸೇವೆ’ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗುತ್ತಿದೆ. ಬರ ಪರಿಸ್ಥಿತಿಯಲ್ಲಿ ಗ್ರಾಮೀಣರು ವಿ.ಬಿ.ಜಿ. ರಾಮ್ಜಿ ಯೋಜನೆಯ ಉದ್ಯೋಗಾವಕಾಶ ಬಳಸಿಕೊಳ್ಳಬೇಕು ಎಂದರು.
ಬಾಕಿ ಇದ್ದ 2.50 ಲಕ್ಷ ಪೌತಿ ಖಾತೆ ಅರ್ಜಿಗಳ ಪೈಕಿ ಎರಡು ಲಕ್ಷಕ್ಕೂ ಹೆಚ್ಚು ವಿಲೇವಾರಿಯಾಗಿದ್ದು, ಉಳಿದ ಸುಮಾರು 36 ಸಾವಿರ ಅರ್ಜಿಗಳನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.