ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ದೇಶದ ಅಖಂಡತೆಗೆ ರಾಷ್ಟ್ರೀಯ ಪಕ್ಷಗಳಿಂದಲೇ ಅಪಾಯವಿದೆ: ಜ್ಞಾನಪ್ರಕಾಶ ಸ್ವಾಮೀಜಿ

ಚಿಕ್ಕಬಳ್ಳಾಪುರ ನಗರದ ಕನ್ನಡ ಭವನದಲ್ಲಿ ಬಲಗೈಜಾತಿಗಳ ಒಕ್ಕೂಟ ಏರ್ಪಡಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿದ್ದಾರೆ. ಭಾರತ ದೇಶವು ವಿವಿಧತೆಯಲ್ಲಿ ಏಕತೆಯನ್ನು ಬಯಸುವ ರಾಷ್ಟ್ರವಾಗಿದ್ದು ಇಂತಹ ದೇಶದ ಅಖಂಡತೆಗೆ ರಾಷ್ಟ್ರೀಯ ಪಕ್ಷಗಳಿಂದಲೇ ಅಪಾಯವಿದೆ ಎಂದು ಅವರು ಹೇಳಿದ್ದಾರೆ.

ದೇಶದ ಅಖಂಡತೆಗೆ ರಾಷ್ಟೀಯ ಪಕ್ಷಗಳಿಂದಲೇ ಅಪಾಯವಿದೆ: ಜ್ಞಾನಪ್ರಕಾಶ ಸ್ವಾಮೀಜಿ

ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿದರು. -

Profile
Siddalinga Swamy Dec 15, 2025 10:36 PM

ಚಿಕ್ಕಬಳ್ಳಾಪುರ, ಡಿ.15: ಭಾರತ ದೇಶವು ವಿವಿಧತೆಯಲ್ಲಿ ಏಕತೆಯನ್ನು ಬಯಸುವ ರಾಷ್ಟ್ರವಾಗಿದ್ದು ಇಂತಹ ದೇಶದ ಅಖಂಡತೆಗೆ ರಾಷ್ಟ್ರೀಯ ಪಕ್ಷಗಳಿಂದಲೇ ಅಪಾಯವಿದೆ ಎಂದು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು. ನಗರದ (Chikkaballapur News) ಕನ್ನಡ ಭವನದಲ್ಲಿ ಬಲಗೈಜಾತಿಗಳ ಒಕ್ಕೂಟ ಏರ್ಪಡಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತ್ಯೋತ್ಸವಕ್ಕೆ ಚಾಲನೆ ನೀಡಿ ಸ್ವಾಮೀಜಿ ಅವರು ಮಾತನಾಡಿದರು.

1954ರಲ್ಲಿ ಬಾಬಾ ಸಾಹೇಬರು ಮಾಧ್ಯಮವನ್ನುದ್ದೇಶಿಸಿ ಒಂದು ಮಾತು ಹೇಳಿದ್ದಾರೆ. ನನಗೆ ಕಣ್ಣು ಕಾಣುತ್ತಿಲ್ಲ, ಕಾಲು ಊತ ಬಂದಿದೆ. ಮಧುಮೇಹದಿಂದ ಬಳಲುತ್ತಿದ್ದೇನೆ. ಊರುಗೋಲಿನ ಸಹಾಯದಿಂದ ನಿಮ್ಮ ಮುಂದೆ ನಿಂತಿದ್ದೇನೆ. ಭವಿಷ್ಯದಲ್ಲಿ ನಾನು ಇಲ್ಲದಿರಬಹುದು, ಆದರೆ ನಾನು ಬರೆದ ಸಂವಿಧಾನದ ಪ್ರತಿ ಅಕ್ಷರ ಪುಟದಲ್ಲಿ ಸದಾ ಜೀವಂತ ಇರುತ್ತೇನೆ. ನನ್ನ ಜನ ಸಂವಿಧಾನ ರಕ್ಷಣೆ ಮಾಡಿಕೊಂಡರೆ ಸಾಕು, ಇಂದಲ್ಲ ನಾಳೆ ಈ ದೇಶದ ಪ್ರಧಾನಿ, ಮುಖ್ಯಮಂತ್ರಿ ಕುರ್ಚಿಯಲ್ಲಿ ನನ್ನ ಜನ ಕುಳಿತುಕೊಳ್ಳುತ್ತಾರೆ ಎಂದು ಹೇಳಿದ್ದಾರೆ ಎಂದರು.

ದೇಶ ರಕ್ಷಣೆಗೆ ಅಂಬೇಡ್ಕರ್ ಕೊಟ್ಟ ಸಂವಿಧಾನವೇ ಆಧಾರ. ಇದೇ ದೊಡ್ಡದು. ಇದರ ಅಡಿಯಲ್ಲಿ ಸುಪ್ರಿಂಕೋರ್ಟ್ ಸೇರಿ ಉಳಿದೆಲ್ಲಾ ವ್ಯವಸ್ಥೆ ಬರಲಿದೆ. ಈ ಬಗ್ಗೆ ನಾವು ನೀವೆಲ್ಲಾ ಎಚ್ಚರ ವಹಿಸಬೇಕು. ಹೀಗಾಗಿಯೇ ಬರಾಕ್ ಒಬಾಮ ಭಾರತಕ್ಕೆ ಬಂದಿದ್ದಾಗ ಹೇಳಿದ್ದು ಭಾರತವನ್ನು ಕಾಪಾಡಲು ಅಂಬೇಡ್ಕರ್ ಬರೆದ ಸಂವಿಧಾನವೇ ಸಾಕು ಎಂದಿದ್ದರು ಇದಕ್ಕೆ ದಾಖಲೆಯಿದೆ. ಇದು ಭೀಮಶಕ್ತಿಯ ಮಹತ್ವ. ನಮ್ಮ ಸಮುದಾಯ ನಿದ್ದೆಯಿಂದ ಎಚ್ಚೆತ್ತರೆ ಸಾಕು, ದೇಶದ ಚಿತ್ರಣವೇ ಬದಲಾಗಲಿದೆ ಎಂದರು.

ವೋಟ್‌ ಚೋರಿ ನೆಪದಲ್ಲಿ ಸುಳ್ಳು ಸಂಕಥನ ಸೃಷ್ಟಿ; ಕಾಂಗ್ರೆಸ್‌ ವಿರುದ್ಧ ಗುಡುಗಿದ ಎಚ್.ಡಿ. ದೇವೇಗೌಡ

ರಾಷ್ಟ್ರೀಯ ಪಕ್ಷಗಳೆಲ್ಲಾ ಮತಚೋರರೇ

ಇತ್ತೀಚೆಗೆ ಮತಚೋರಿ ಜೋರಾಗಿ ಸದ್ದು ಮಾಡುತ್ತಿದೆ. ನನ್ನ ಪ್ರಕಾರ ರಾಷ್ಟ್ರೀಯ ಪಕ್ಷಗಳೆಲ್ಲಾ ಮತಚೋರರೇ ಆಗಿದ್ದಾರೆ. ಅಧಿಕಾರ ಇಲ್ಲದಿದ್ದಾಗ ಇವರ ಮೇಲೆ ಅವರು ದೂರುತ್ತಾರೆ. ಅವರ ಮೇಲೆ ಇವರು ದೂರುತ್ತಾರೆ. ಆದ್ದರಿಂದ ಡಾ. ವೆಂಕಟಸ್ವಾಮಿ ಹೇಳುವಂತೆ ಕಾಂಗ್ರೆಸ್ ಪಕ್ಷವು ಕಾಶ್ಮೀರಿ ಬ್ರಾಹ್ಮಣರ ಕೈಗೊಂಬೆ, ಬಿಜೆಪಿ ಆರ್‌ಎಸ್‌ಎಸ್ ಜನಸಂಘಗಳು ಚಿತ್ಪಾವನ ಬ್ರಾಹ್ಮಣರ ಕೈಗೊಂಬೆ, ಸಿಪಿಐಎಂ, ಸಿಪಿಐ ಪಶ್ಚಿಮ ಬಂಗಾಳದ ಬ್ರಾಹ್ಮಣರಿಂದ ಕಂಟ್ರೋಲ್ ಆಗಿವೆ ಎನ್ನುತ್ತಾರೆ. ಇದು ತಮಾಷೆ ಮಾತಾದಾರೂ ಇದೇ ಸತ್ಯ. ಇವರು ಶೋಷಿತರನ್ನು, ದಲಿತರನ್ನು, ನೊಂದವರನ್ನು ಎಂದಿಗೂ ಕಾಪಾಡುವುದಿಲ್ಲ. ಕಾಪಾಡುವವರು ಯಾರೆಂದರೆ ಬಾಬಾ ಸಾಹೇಬರು ಬರೆದ ಸಂವಿಧಾನ ಮಾತ್ರ ಎಂದು ಹೇಳಿದರು.

ಸಂವಿಧಾನವನ್ನು ಈ ದೇಶವು ಒಪ್ಪಿಕೊಳ್ಳುವ ಸಂದರ್ಭದಲ್ಲಿ ಅಂಬೇಡ್ಕರ್ ಬರೆದ ಸಂವಿಧಾನಕ್ಕೆ 2734 ತಿದ್ದುಪಡಿಗಳ ಸಲಹೆ ಬರುತ್ತದೆ. ಸರಿ ಸುಮಾರು 3600 ಪ್ರಶ್ನೆಗಳನ್ನು ಮುಂದಿಡುತ್ತಾರೆ. ಇವಕ್ಕೆಲ್ಲಾ ದಾಖಲೆ ಸಹಿತವಾಗಿ ಉತ್ತರ ನೀಡಿ ಹೊರ ಬಂದ ಅಂಬೇಡ್ಕರ್ ಅವರನ್ನು ಮಾಧ್ಯಮದವರು ಕೇಳುತ್ತಾರೆ. ಇಷ್ಟು ಪ್ರಶ್ನೆಗಳಿಗೆ ದಾಖಲೆ ಸಹಿತವಾಗಿ ಉತ್ತರ ಕೊಟ್ಟಿದ್ದೀರಿ ನಿಮ್ಮ ವಂಶ ಯಾವುದು ಎಂದು ಕೇಳುತ್ತಾರೆ. ಅದಕ್ಕೆ ಅಂಬೇಡ್ಕರ್ ಹೇಳುತ್ತಾರೆ 3600 ಅಲ್ಲ 36000 ಪ್ರಶ್ನೆಗಳು ಕೇಳಿದರೂ ಉತ್ತರ ಕೊಡುತ್ತಿದ್ದೆ. ಏಕೆಂದರೆ ಈ ದೇಶವನ್ನು ಆಳಿದ ನಾಗವಂಶಕ್ಕೆ ಸೇರಿದವರು ನಾವು ಎನ್ನುತ್ತಾರೆ. ಎಲ್ಲರಿಗೂ ಉದ್ಯೋಗ ಇದೆ. ಛಲವಾದಿಗಳ ಉದ್ಯೋಗ ಯಾವುದು ಎಂದು ಪಿಎಚ್‌ಡಿ ಆಗಿದೆ. ಈ ದೇಶವನ್ನು ಕಟ್ಟಿ ಆಳಿದ ಮಹರಾಜರ ವಂಶ ನಮ್ಮದು. 18 ಪಂಗಡಗಳ ಮುಖ್ಯಸ್ಥರೇ ಛಲವಾದಿಗಳು. ಇದು ಬ್ರಿಟೀಷ್ ಗೆಜೆಟಿಯರ್‌ನಲ್ಲಿ ಕೂಡ ಉಲ್ಲೇಖವಿದೆ ಎಂದು ಹೇಳಿದರು.

ಹಸಿದವರ ಹಕ್ಕುಗಳನ್ನು ಕಸಿಯುವ ಸರ್ಕಾರಗಳು ನಮ್ಮ ಮುಂದಿವೆ

ರಾಜ್ಯವಿರಲಿ‌, ಕೇಂದ್ರವಿರಲಿ ಹಸಿದವರ ಹಕ್ಕುಗಳನ್ನು ಕಸಿಯುವ ಸರ್ಕಾರಗಳು ನಮ್ಮ ಮುಂದಿವೆ. ನಮ್ಮ ರಾಜ್ಯದಲ್ಲಿ 7029 ಹಳ್ಳಿಗಳಲ್ಲಿ ದಲಿತರಿಗೆ ಸ್ಮಶಾನಕ್ಕೆ ಭೂಮಿಯೇ ಇಲ್ಲ. ನಮ್ಮ ಸ್ಥೀತಿ ಹೇಗಿದೆ ನೋಡಿ. ಒಂದು ಒನಕೆ ಏಳು ಸುತ್ತಿನ ಕೋಟೆ ಕಾದಿದೆ ಎನ್ನುವುದಾದರೆ, ರಾಜ್ಯದ ಉದ್ದಗಲಕ್ಕೂ ಇರುವ ಛಲವಾದಿ ಹೆಣ್ಣು ಮಕ್ಕಳು ಕೈಯಲ್ಲಿ ಒಂದೊಂದು ಒನಕೆ ಹಿಡಿದು ಬೀದಿಗಿಳಿದರೆ ಏನಾಗಬಹುದು ನೀವೇ ಊಹಿಸಿ ಎಂದ ಸ್ವಾಮೀಜಿ ಅವರು, ಮುಖ್ಯಮಂತ್ರಿ ಹುದ್ದೆಯನ್ನು ದಲಿತರಿಗೆ ನೀಡಲಿಲ್ಲ ಎಂದರೆ, ಇದನ್ನೇ ನಾನು ಮಾಡುತ್ತೇನೆ. ದಲಿತರು ಕೇವಲ ಓಟು ಹಾಕಲು ಮಾತ್ರ ಹುಟ್ಟಿಲ್ಲ ಎಂದು ಎಚ್ಚರಿಕೆ ನೀಡಿದರು.

ನಿಮ್ಮ ಅಧಿಕಾರ ನಮ್ಮ ಭಿಕ್ಷೆ

ಮಲಗಿರುವ ನನ್ ಜನ ಇನ್ನು ಮಲಗುವುದಿಲ್ಲ. ಮಿಂಚಿನಂತೆ ಮಿಂಚುತ್ತಾರೆ, ಗುಡುಗಿನಂತೆ ಗುಡುಗುತ್ತಾರೆ. ಸಿಡಿಲಿನಂತೆ ಅಬ್ಬರಿಸುತ್ತಾರೆ. ಮತದಾನ ಶಕ್ತಿಯ ಮೂಲಕ ಒಂದೊಂದು ಬೂತಲ್ಲಿ ಒಬ್ಬೊಬ್ಬ ಅಂಬೇಡ್ಕರ್ ಉದಯಿಸುತ್ತಾರೆ ಎಂದು ಹೇಳಿರುವ ಅವರ ಮಾತು ನಿಜವಾಗಿಸೋಣ. ರಾಜ್ಯದ ಕಾಂಗ್ರೆಸ್ ಸರ್ಕಾರದ ಅಧಿಕಾರ ನಮ್ಮ ಭಿಕ್ಷೆ. ಹೀಗಾಗಿ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಿಲ್ಲ ಎಂದರೆ 136 ಸ್ಥಾನ ಕೊಟ್ಟವರಿಗೆ ಅದನ್ನು ಹೇಗೆ ಕಳೆಯಬೇಕು ಎಂಬುದು ಗೊತ್ತಿದೆ ಎಂದು ಗುಡುಗಿದರು.

ಸಂವಿಧಾನದ ಪೀಠಿಕೆಯಲ್ಲಿ ಇರುವ ಭಾರತದ ಪ್ರಜೆಗಳಾದ ನಾವು ಎಂಬ ಶಬ್ದಗಳೇ ದೇಶವಾಸಿಗಳನ್ನು 78 ವರ್ಷಗಳಿಂದ ಒಂದಾಗಿ ಹಿಡಿದಿಟ್ಟಿವೆ. ದೇಶಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್, ಏಳು ಸುತ್ತಿನ ಕೋಟೆ ರಕ್ಷಣೆ ಮೂಲಕ ಮದಕರಿ ನಾಯಕರ ಕೀರ್ತಿ ಬೆಳಗುವಂತೆ ಮಾಡಿದ ಒನಕೆ ಓಬವ್ವ ಇಬ್ಬರೂ ಕೂಡ ಛಲವಾದಿ ಸಮುದಾಯದವರು ಎನ್ನುವುದೇ ಹೆಮ್ಮೆಯ ವಿಚಾರವಾಗಿದೆ ಎಂದರು.

ಈ ದೇಶದ ರಕ್ಷಣೆ ಮಾಡುತ್ತಿರುವವರು ರಾಷ್ಟ್ರಪತಿಯಾಗಲಿ, ಪ್ರಧಾನಿ ನರೇಂದ್ರ ಮೋದಿಯಾಗಲಿ, ರಾಜ್ಯಪಾಲರಾಗಲಿ, ಸೋನಿಯಾ ಗಾಂಧಿಯಾಗಲಿ, ಮುಖ್ಯಮಂತ್ರಿಯಾಗಲಿ ಅಲ್ಲ. ಬದಲಿಗೆ ದೇಶದ ವಿಷಯ ಬಂದಾಗ ದೇಶವೇ ಮೊದಲು ಎಂದು ಹೇಳಿದ ಏಕೈಕ ರಾಷ್ಟ್ರಪ್ರೇಮಿ ಬಾಬಾ ಸಾಹೇಬ ಅಂಬೇಡ್ಕರ್ ಮತ್ತು ಅವರು ಬರೆದ ಸಂವಿಧಾನವಾಗಿದೆ ಎಂದು ಉರಿಲಿಂಗಪೆದ್ದಿ ಮಠದ ಶ್ರೀಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿದರು. ಛಲವಾದಿ ಗುರು ಪೀಠದ ಬಸವನಾಗಿದೇವ ಸ್ವಾಮೀಜಿ ಆಶೀರ್ವಚನ ನೀಡಿದರೆ, ಎಸ್‌ಎಸ್‌ಡಿ ರಾಷ್ಟ್ರೀಯ ಅಧ್ಯಕ್ಷ, ಹಿರಿಯ ಹೋರಾಟಗಾರ ಡಾ.ಎಂ. ವೆಂಕಟಸ್ವಾಮಿ ದಿಕ್ಸೂಚಿ ಭಾಷಣ ಮಾಡಿದರು.

ಎಂಟನೇ ವೇತನ ಆಯೋಗ ಜಾರಿ ಹಿನ್ನೆಲೆ; ವೇತನ, ಪಿಂಚಣಿ ಹೊರೆ ನಿರ್ವಹಿಸಲು ರೈಲ್ವೆ ಇಲಾಖೆಯ ವೆಚ್ಚ ಕಡಿತ

ಮುಖಂಡರಾದ ಎಸ್‌ಎಸ್‌ಡಿ ರಾಷ್ಟ್ರೀಯ ಅಧ್ಯಕ್ಷ, ಹಿರಿಯ ಹೋರಾಟಗಾರ ಡಾ.ಎಂ.ವೆಂಕಟಸ್ವಾಮಿ, ಬಸವನಾಗಿದೇವ ಸ್ವಾಮೀಜಿ, ಓಬವ್ವ ವಂಶಸ್ಥ ನಿರಂಜನಮೂರ್ತಿ, ಉದ್ಯಮಿ ಸುರೇಶ್‌ರಾಜ್, ಶಶಿಕುಮಾರ್, ಶ್ರೀನಿವಾಸ್, ಮುನಿಆಂಜಿನಪ್ಪ, ಕೈವಾರ ಮಂಜಣ್ಣ, ಎಸ್‌ಎಸ್‌ಡಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ವೆಂಕಟರೋಣಪ್ಪ, ಮೇಲೂರು ಮಂಜುನಾಥ್, ತ್ಯಾಗರಾಜ್, ಇತರರು ಇದ್ದರು. 50ಕ್ಕೂ ಹೆಚ್ಚು ಪಲ್ಲಕ್ಕಿಗಳು, 300 ಮಂದಿ ಒನಕೆ ಹಿಡಿದ ಸುಮಂಗಲಿಯರು, 300 ಮಂದಿ ಕಲಶಹೊತ್ತ ಮಹಿಳೆಯರು 20ಕ್ಕು ಹೆಚ್ಚು ಕೊಂಬುಕಹಳೆ ಸಹಿತ ಜಾನಪದ ಕಲಾತಂಡಗಳ ಮೆರವಣಿಗೆ ಜನತೆಯನ್ನು ಬೆರಗುಗೊಳಿಸಿತು.