ಒಂದಲ್ಲ ಎರಡಲ್ಲ ಬರೋಬ್ಬರಿ 50 ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್
Lokayukta Raid: ಬರೋಬ್ಬರಿ 1 ಕೋಟಿ ರೂಪಾಯಿ ಲಂಚಕಕೆ ಬೇಡಿಕೆ ಇಟ್ಟು, 50 ಲಕ್ಷ ರೂಪಾಯಿ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಧಾರವಾಡ ತಹಸೀಲ್ದಾರ್ ಸಚ್ಚಿದಾನಂದ ಕುಚನೂರ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಲಂಚದ ಹಣ ಪಡೆಯುತ್ತಿದ್ದಾಗಲೇ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಬಲೆಗೆ ಬಿದ್ದ ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರ -
ಧಾರವಾಡ, ಸೆ. 17: ರಾಜ್ಯದಲ್ಲಿ ಲಂಚ ಹಾವಳಿ ಮಿತಿ ಮೀರಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಒಂದಲ್ಲ ಎರಡಲ್ಲ ಬರೋಬ್ಬರಿ 50 ಲಕ್ಷ ರೂಪಾಯಿ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಧಾರವಾಡ ತಹಸೀಲ್ದಾರ್ ಸಚ್ಚಿದಾನಂದ ಕುಚನೂರ (Sachidananda Kuchanur) ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ (Lokayukta Raid). ಲಂಚದ ಹಣ ಪಡೆಯುತ್ತಿದ್ದಾಗಲೇ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೊಟ್ಯಂತರ ರೂಪಾಯಿ ಬೆಲೆ ಬಾಳುವ ಖರಾಬು ಜಮೀನಿನ ದಾಖಲೆ ತಿದ್ದುಪಡಿ ಮಾಡಿ ಕೊಡಲು ಬರೊಬ್ಬರಿ 1 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ಬಲೆಗೆ ಕೆಡವಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ಮೂಲದ ಪರಮೇಶ್ವರ್ ಅಂಗಡಿ ಧಾರವಾಡ ತಾಲೂಕಿನ ಯರಿಕೊಪ್ಪ ಬಳಿ ಜಮೀನು ಖರೀದಿಸಿದ್ದರು. ಈ ಜಮೀನಿನಲ್ಲಿರುವ ಎ ಖರಾಬ್ ಜಾಗವನ್ನು ತೆರವುಗೊಳಿಸಿ ಅಭಿವೃದ್ಧಿಪಡಿಸಲು ಅನುಮತಿ ಪತ್ರ ನೀಡಬೇಕಿದ್ದರೆ 1 ಕೋಟಿ ರೂಪಾಯಿ ಲಂಚ ನೀಡಬೇಕು ಎಂದು ತಹಸೀಲ್ದಾರ್ ಸಚ್ಚಿದಾನಂದ ಬೇಡಿಕೆ ಇಟ್ಟಿದ್ದರೆನ್ನಲಾಗಿದೆ. ಈ ಪೈಕಿ ಮೊದಲ ಕಂತಾಗಿ 50 ಲಕ್ಷ ರೂಪಾಯಿಗೆ ಮಾತುಕತೆಯಾಗಿತ್ತು.
ಒಂಬತ್ತು ತಿಂಗಳಲ್ಲಿ ಲೋಕಾಯುಕ್ತ ಕಚೇರಿ ಕಟ್ಟಡ ನಿರ್ಮಾಣ: ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್
ಧಾರವಾಡ-ಕಲಘಟಗಿ ಮಧ್ಯೆ ಇರುವ ಯರಿಕೊಪ್ಪ ಗ್ರಾಮದ ವ್ಯಾಪ್ತಿಯಲ್ಲಿರುವ 33 ಎಕರೆ ಪೈಕಿ 13 ಎಕರೆಯನ್ನು ಮಾರ್ಪಾಟು ಮಾಡಿಕೊಡಲು 1 ಕೋಟಿ ರೂಪಾಯಿ ಮತ್ತು ಅದೇ ಭೂಮಿಯ ಪೈಕಿ 2 ಎಕರೆ ಜಮೀನು ನುಂಗಲು ತಹಶೀಲ್ದಾರ್ ಹೊಂಚು ಹಾಕಿದ್ದರು ಎನ್ನಲಾಗಿದೆ.
ಪರಮೇಶ್ವರ್ ಅಂಗಡಿ ನೀಡಿದ ದೂರಿನ ಬಳಿಕ ಎಚ್ಚೆತ್ತುಕೊಂಡ ಲೋಕಾಯುಕ್ತ ಎಸ್.ಪಿ. ಸಿದ್ದಲಿಂಗಪ್ಪ ನೇತೃತ್ವದ ತಂಡ ದಾಳಿ ಮಾಡಿತು. ನಗರದ ಕರ್ನಾಟಕ ಕಾಲೇಜು ಮೈದಾನದಲ್ಲಿ ಮುಂಗಡ ಹಣ ಸ್ವೀಕರಿಸುತ್ತಿದ್ದಂತೆಯೇ ಸಚ್ಚಿದಾನಂದ ಕುಚನೂರ ಅವರನ್ನು ವಶಕ್ಕೆ ಪಡೆದುಕೊಂಡಿತು. ಈ ವೇಳೆ ದೂರುದಾರರ ಜತೆಗೆ ಡಿಎಸ್ಪಿ ರವೀಂದ್ರ ಕುರುಬಗಟ್ಟಿ, ಇನ್ಸ್ಪೆಕ್ಟರ್ ಪ್ರಸಾದ್, ಕರುಣೇಶಗೌಡ, ಪ್ರಸಾದ ಪಾನೇಕರ್ ಮತ್ತಿತರ ಅಧಿಕಾರಿಗಳಿದ್ದರು. ಸದ್ಯ ಲೋಕಾಯುಕ್ತ ನ್ಯಾಯಾಲಯ ಸಚ್ಚಿದಾನಂದ ಕುಚನೂರ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಲೋಕಾಯುಕ್ತ ಬಲೆಗೆ ಬಿದ್ದ ಪರಶುರಾಮ; ಪರಾರಿಯಾಗಿದ್ದ ವೀರೇಶನ ವಿರುದ್ಧವೂ ಇಲಾಖಾ ಕ್ರಮ
8 ಲಕ್ಷ ರೂ. ಲಂಚ ಪಡೆಯುವಾಗಲೇ ಬಲೆಗೆ ಬಿದ್ದ ಜಿಎಸ್ಟಿ ಸೂಪರಿಂಟೆಂಡೆಂಟ್
ಇತ್ತ ಬೆಂಗಳೂರಿನಲ್ಲೂ ಲೋಕಾಯುಕ್ತ ಭರ್ಜರಿ ಬೇಟೆ ನಡೆಸಿದೆ. ಕಬ್ಬಿಣ ಅಂಗಡಿ ಮಾಲಕನಿಂದ 8 ಲಕ್ಷ ರೂಪಾಯಿ ಲಂಚ ಪಡೆಯುವಾಗ ಜಿಎಸ್ಟಿ ಸೂಪರಿಂಟೆಂಡೆಂಟ್ ಮೋಹಿತ್ ಪ್ರತಾಪ್ ಸಿಂಗ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಬ್ಬಿಣದ ಅಂಗಡಿ ಜಿಎಸ್ಟಿ ವಿಚಾರವಾಗಿ 20 ಲಕ್ಷ ರೂಪಾಯಿ ಲಂಚ ಕೊಡುವಂತೆ ವ್ಯಾಪಾರಿ ಜಮೀರ್ ಬಳಿ ಬಳಿ ಬೇಡಿಕೆ ಇಟ್ಟಿದ್ದರು. ಈ ಸಂಬಂಧ 8 ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ದಾಳಿ ನಡೆಸಿದೆ. ಸದ್ಯ ಈ 2 ಘಟನೆಗಳು ರಾಜ್ಯಾದ್ಯಂತ ತೀವ್ರ ಆಕ್ರೋಶ ಹುಟ್ಟು ಹಾಕಿವೆ.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.