Digital Arrest: ಇಡಿ, ಎನ್ಐಎ ಹೆಸರಿನಲ್ಲಿ ನಿವೃತ್ತ ಪ್ರಾಧ್ಯಾಪಕರಿಗೆ ವಂಚನೆ: ಡಿಜಿಟಲ್ ಅರೆಸ್ಟ್ ಮಾಡಿ ₹1.79 ಕೋಟಿ ಸೈಬರ್ ವಂಚನೆ
ನಗರದ ಎನ್ಜಿಒ ಕಾಲನಿ ನಿವಾಸಿ ಹಾಗೂ ಎಚ್ಕೆಇ ಹೋಮಿಯೋಪಥಿಕ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಅಶೋಕ ಪಾಟೀಲ್ ವಂಚನೆಗೊಳಗಾದವರು. ಜು.14ರಂದು ಅವರ ಪತ್ನಿ ಅನ್ನಪೂರ್ಣ ಅವರಿಗೆ ಕರೆ ಮಾಡಿದ ವಂಚಕ, ಬಳಿಕ ಪೊಲೀಸ್ ಇನ್ಸ್ಪೆಕ್ಟರ್ ಎಂದು ಪರಿಚಯಿಸಿ ಕೊಂಡ ಮತ್ತೊಬ್ಬ ವ್ಯಕ್ತಿ, ಮುಂಬೈನ ಕೆನರಾ ಬ್ಯಾಂಕ್ನಲ್ಲಿರುವ ಅಶೋಕ ಪಾಟೀಲ್ ಅವರ ಖಾತೆಯನ್ನು ಅಕ್ರಮ ಹಣ ವರ್ಗಾವಣೆ ಹಾಗೂ ಉಗ್ರಗಾಮಿಗಳಿಗೆ ಹಣಕಾಸು ನೆರವು ನೀಡಲು ಬಳಸಲಾಗಿದೆ ಎಂದು ಆರೋಪಿಸಿದ್ದಾನೆ.
-
ಕಲಬುರಗಿ: ಜಾರಿ ನಿರ್ದೇಶನಾಲಯ (ಇಡಿ), ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳ ಅಧಿಕಾರಿಗಳೆಂದು ಪರಿಚಯಿಸಿಕೊಂಡ ಸೈಬರ್ ವಂಚಕರು ನಿವೃತ್ತ ಪ್ರಾಧ್ಯಾಪಕರೊಬ್ಬರನ್ನು ಡಿಜಿಟಲ್ ಅರೆಸ್ಟ್ ಮಾಡಿ ₹1.79 ಕೋಟಿ ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.
ನಿವೃತ್ತ ಪ್ರಾಧ್ಯಾಪಕರೇ ಟಾರ್ಗೆಟ್
ನಗರದ ಎನ್ಜಿಒ ಕಾಲನಿ ನಿವಾಸಿ ಹಾಗೂ ಎಚ್ಕೆಇ ಹೋಮಿಯೋಪಥಿಕ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಅಶೋಕ ಪಾಟೀಲ್ ವಂಚನೆಗೊಳಗಾದವರು. ಜು.14ರಂದು ಅವರ ಪತ್ನಿ ಅನ್ನಪೂರ್ಣ ಅವರಿಗೆ ಕರೆ ಮಾಡಿದ ವಂಚಕ, ಬಳಿಕ ಪೊಲೀಸ್ ಇನ್ಸ್ಪೆಕ್ಟರ್ ಎಂದು ಪರಿಚಯಿಸಿ ಕೊಂಡ ಮತ್ತೊಬ್ಬ ವ್ಯಕ್ತಿ, ಮುಂಬೈನ ಕೆನರಾ ಬ್ಯಾಂಕ್ನಲ್ಲಿರುವ ಅಶೋಕ ಪಾಟೀಲ್ ಅವರ ಖಾತೆಯನ್ನು ಅಕ್ರಮ ಹಣ ವರ್ಗಾವಣೆ ಹಾಗೂ ಉಗ್ರಗಾಮಿಗಳಿಗೆ ಹಣಕಾಸು ನೆರವು ನೀಡಲು ಬಳಸಲಾಗಿದೆ ಎಂದು ಆರೋಪಿಸಿದ್ದಾನೆ.
ನಕಲಿ ದಾಖಲೆ ಕಳುಹಿಸಿ ಬೆದರಿಕೆ
ನಂತರ ವಾಟ್ಸ್ಆ್ಯಪ್ ಮೂಲಕ ಇಡಿ, ಎನ್ಐಎ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳ ಹೆಸರಿನ ನಕಲಿ ದಾಖಲೆಗಳನ್ನು ಕಳುಹಿಸಿ, ತನಿಖೆಗೆ ಸಹಕರಿಸುವಂತೆ ಸೂಚಿಸಿದ್ದಾರೆ. ಅಲ್ಲದೆ, ಈ ವಿಷಯ ವನ್ನು ಕುಟುಂಬದ ಸದಸ್ಯರಿಗೆ ತಿಳಿಸದಂತೆ ಎಚ್ಚರಿಸಿ, ದಂಪತಿಯನ್ನು ಡಿಜಿಟಲ್ ಅರೆಸ್ಟ್ ನಲ್ಲಿರು ವಂತೆ ಭಯಭೀತಗೊಳಿಸಿದ್ದಾರೆ.
ಹಂತ ಹಂತವಾಗಿ ₹1.79 ಕೋಟಿ ವರ್ಗಾವಣೆ
ವಂಚಕರ ಮಾತು ನಂಬಿದ ದಂಪತಿ ಮನೆಯಲ್ಲಿದ್ದ ಹಣ, ಎಲ್ಐಸಿ ಬಾಂಡ್ಗಳು ಹಾಗೂ ಚಿನ್ನಾಭರಣಗಳನ್ನು ಬಳಸಿಕೊಂಡಿದ್ದಾರೆ. ಅಲ್ಲದೆ, ಆಸ್ತಿ ಮಾರಾಟ ಮತ್ತು ಅಡಮಾನದಿಂದ ಹಣ ಸಂಗ್ರಹಿಸಿ, ವಂಚಕರು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ₹1.79 ಕೋಟಿ ವರ್ಗಾಯಿಸಿದ್ದಾರೆ.
ಪುತ್ರನಿಗೆ ಅನುಮಾನ; ಪ್ರಕರಣ ಬೆಳಕಿಗೆ
ತಾಯಿ ಖಾತೆಯಿಂದ ನಿರಂತರವಾಗಿ ಹಣ ವರ್ಗಾವಣೆಯಾಗುತ್ತಿರುವುದನ್ನು ಗಮನಿಸಿದ ಪುತ್ರ ವಿನೋದ್ ಪಾಟೀಲ್ಗೆ ಅನುಮಾನ ಮೂಡಿದೆ. ವಿಚಾರಿಸಿದಾಗ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಆ.28ರಂದು ಕಲಬುರಗಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಂಚಕರ ಪತ್ತೆಗೆ ತನಿಖೆ ಕೈಗೊಂಡಿ ದ್ದಾರೆ.