ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CM Siddaramaiah: ರಾಜಣ್ಣ ರಾಜಕೀಯ, ಸಹಕಾರ ಎಂದರೆ ಜನಸೇವೆ ಎಂದು ಭಾವಿಸಿದ್ದಾರೆ: ಸಿದ್ದರಾಮಯ್ಯ

CM Siddaramaiah: ಹಣೆಬರಹ, ಕರ್ಮ ಸಿದ್ಧಾಂತಗಳನ್ನು ಬಸವಾದಿ ಶರಣರು ತ್ಯಜಿಸಿದ್ದರು. ದೇವರು ಯಾರ ನಡುವೆಯೂ ತಾರತಮ್ಯ ಮಾಡುವುದಿಲ್ಲ. ಮೇಲು ಕೀಳು ಎಂಬುದಿಲ್ಲ. ಹುಟ್ಟಿನಿಂದ ಯಾರೂ ದಡ್ಡರೂ ಅಲ್ಲ, ಮೇಧಾವಿಗಳೂ ಅಲ್ಲ. ಅವಕಾಶಗಳು ಸಿಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಜಣ್ಣ ರಾಜಕೀಯ, ಸಹಕಾರ ಎಂದರೆ ಜನಸೇವೆ ಎಂದು ಭಾವಿಸಿದ್ದಾರೆ: ಸಿಎಂ

Profile Siddalinga Swamy Jun 21, 2025 7:52 PM

ತುಮಕೂರು: ಕೆ.ಎನ್. ರಾಜಣ್ಣ ರಾಜಕೀಯ, ಸಹಕಾರ ಎಂದರೆ ಜನಸೇವೆ ಎಂದು ಭಾವಿಸಿದ್ದಾರೆ. ಸಮಾಜದಲ್ಲಿನ ಎಲ್ಲ ಬಡವರ ಬಗೆಗಿನ ಕಾಳಜಿ ಹೊಂದಿದ್ದಾರೆ. ಅವರ ಕಷ್ಟ ಸುಖಗಳಿಗೆ ಸ್ಪಂದಿಸುವುದು ಬಹಳ ದೊಡ್ಡ ಗುಣ. ಜಾತಿ, ಧರ್ಮ ಎಂಬ ಭೇದವಿಲ್ಲದೇ ಬಡ ಮಕ್ಕಳ ಶಾಲಾ ಶಿಕ್ಷಣಕ್ಕೆ ರಾಜಣ್ಣ ನೆರವು ನೀಡುತ್ತಾ ಬಂದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ಕೆ.ಎನ್ ರಾಜಣ್ಣ ಅವರ 75ನೇ ಜನ್ಮ ದಿನಾಚರಣೆ ಮತ್ತು ಅಭಿನಂದನಾ ಗ್ರಂಥ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಅಸಮಾನತೆಯನ್ನು ತೊಲಗಿಸಿ ಎಲ್ಲರೂ ಮುಖ್ಯ ವಾಹಿನಿಗೆ ತರಬೇಕು ಎನ್ನುವುದೇ ನಿಜವಾದ ರಾಜಕೀಯ ಗುರಿ. ಸಂವಿಧಾನ ಕೂಡ ಇದನ್ನೇ ಹೇಳುತ್ತದೆ. ಮನುಷ್ಯತ್ವ ಎನ್ನುವುದು ಪ್ರತಿಯೊಬ್ಬರಲ್ಲಿಯೂ ಇರಬೇಕು. ಅದು ಇದ್ದಾಗ ಮಾತ್ರ ಸಮಸಮಾಜ, ಬದಲಾವಣೆ ತರಲು ಸಾಧ್ಯವಾಗುತ್ತದೆ. ಇದಾಗಬೇಕಾದರೆ ಪ್ರತಿಯೊಬ್ಬರಿಗೂ ಆರ್ಥಿಕ ಹಾಗೂ ಸಮಾಜಿಕ ಶಕ್ತಿಯನ್ನು ತುಂಬಬೇಕು. ದೇಶಕ್ಕೆ ಸಿಕ್ಕಿರುವ ಸ್ವಾತಂತ್ರ್ಯ ಸಾರ್ಥಕವಾಗಬೇಕಾದರೆ ಎಲ್ಲರೂ ಸ್ವಾವಂಬಿಗಳಾಗಬೇಕು ಎಂದು ಅಂಬೇಡ್ಕರ್ ಹೇಳಿದ್ದಾರೆ. ವೈರುಧ್ಯತೆ ಇರುವ ಸಮಾಜದಲ್ಲಿ ಸಮಾನ ಅವಕಾಶಗಳನ್ನು ನೀಡಿ ಸಮಸಮಾಜ ನಿರ್ಮಾಣವಾಗದೇ ಹೋದರೆ ಪ್ರಜಾಪ್ರಭುತ್ವದ ಸೌಧವನ್ನು ಜನರೇ ಧ್ವಂಸ ಮಾಡುತ್ತಾರೆ ಎಂದೂ ಕೂಡ ಹೇಳಿದ್ದರು ಎಂದರು.

ಸಾಲ ಮನ್ನಾ ಕಾರ್ಯಕ್ರಮದ ಶ್ರೇಯಸ್ಸು ರಾಜಣ್ಣನವರಿಗೆ ಸಲ್ಲಬೇಕು

ರೈತರು ಸಾಲ ಮನ್ನಾ ಮಾಡಬೇಕೆಂದು ಒತ್ತಡ ತಂದಿದ್ದ ಸಂದರ್ಭದಲ್ಲಿ 50,000 ರೂ.ಗಳ ವರೆಗೆ ಅಪೆಕ್ಸ್ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕುಗಳಲ್ಲಿ ರೈತರ ಸಾಲದ ಸಂಪೂರ್ಣ ವಿವರಗಳನ್ನು ನೀಡಿದವರು ರಾಜಣ್ಣ. ಅವರಿಲ್ಲದೇ ಹೋಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದರು.

ಎಲ್ಲರಿಗೂ ಸಮಾನ ಅವಕಾಶಗಳು ದೊರೆಯಬೇಕು

ಹಣೆಬರಹ, ಕರ್ಮ ಸಿದ್ಧಾಂತಗಳನ್ನು ಬಸವಾದಿ ಶರಣರು ತ್ಯಜಿಸಿದ್ದರು. ದೇವರು ಯಾರ ನಡುವೆಯೂ ತಾರತಮ್ಯ ಮಾಡುವುದಿಲ್ಲ. ಮೇಲು ಕೀಳು ಎಂಬುದಿಲ್ಲ. ಹುಟ್ಟಿನಿಂದ ಯಾರೂ ದಡ್ಡರೂ ಅಲ್ಲ, ಮೇಧಾವಿಗಳೂ ಅಲ್ಲ. ಅವಕಾಶಗಳು ಸಿಗಬೇಕು ಎಂದರು. ರಾಜಣ್ಣ ಅವರು ದಲಿತ ಜನಾಂಗದಲ್ಲಿ ಹುಟ್ಟಿ ಸಮರ್ಥ ಸಹಕಾರಿಯಾಗುವುದು ಸುಲಭವಲ್ಲ. ಸಂವಿಧಾನ ಇರದೇ ಹೋಗಿದ್ದರೆ ನಾವ್ಯಾರೂ ಮುಖ್ಯವಾಹಿನಿಗೆ ಬರಲು ಸಾಧ್ಯವಿರಲಿಲ್ಲ ಎಂದ ಮುಖ್ಯಮಂತ್ರಿಗಳು, ನಮ್ಮ ಸರ್ಕಾರ ಬಂದ ನಂತರ ಸಮಾಜದಲ್ಲಿ ಬಡತನ ತೊಡೆದುಹಾಕಲು ಸಾಮಾಜಿಕ, ಆರ್ಥಿಕ ಶಕ್ತಿಯನ್ನು ತುಂಬುವ ಪ್ರಯತ್ನವನ್ನು ಮಾಡಿದ್ದೇವೆ ಎಂದರು.

ಈ ಸುದ್ದಿಯನ್ನೂ ಓದಿ | International Yoga Day: ಜಿಲ್ಲಾಸ್ಪತ್ರೆ, ಆರೋಗ್ಯ ಕೇಂದ್ರಗಳಲ್ಲಿ ʼಯೋಗ ಮಂದಿರʼ ಸ್ಥಾಪನೆ: ದಿನೇಶ್ ಗುಂಡೂರಾವ್

ಜನರಲ್ಲಿ ಆರ್ಥಿಕ ಶಕ್ತಿ ತುಂಬಿದ ಗ್ಯಾರಂಟಿ ಯೋಜನೆಗಳು

ಗ್ಯಾರಂಟಿ ಯೋಜನೆಗಳು ಎಲ್ಲ ಜಾತಿ ಧರ್ಮದವರಿಗೆ ಒದಗಿಸಲಾಗಿದೆ. 1.64 ಕೋಟಿ ಜನರಿಗೆ ಗೃಹಜ್ಯೋತಿ, 1.22 ಕೋಟಿ ಜನರಿಗೆ ಗೃಹಲಕ್ಷ್ಮೀ, ಎಲ್ಲ ಮಹಿಳೆಯರಿಗೆ ಉಚಿತವಾಗಿ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ, ಅನ್ನ ಭಾಗ್ಯ ಹಾಗೂ ಯುವನಿಧಿ ಯೋಜನೆಗಳು ಜನರನ್ನು ತಲುಪಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.