Gubbi News: ಗುಬ್ಬಿ ಶಾಸಕರಿಗೆ ನೀರಿನ ಶಾಪ-ಮಂತ್ರಿಗಿರಿ ಕೈ ತಪ್ಪಿದೆ..! : ಎಸ್.ಡಿ.ದಿಲೀಪ್ ಕುಮಾರ್
ತಾಲ್ಲೂಕಿನ ರೈತರ ಅಳಲು ಅಜ್ಜಯ್ಯ ಅವರಿಗೆ ತಲುಪಿ ಅವರ ಮುಖಾಂತರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತಲುಪಿ ಸಚಿವ ಸ್ಥಾನ ಸಿಕ್ಕಿಲ್ಲ. ನೀರಿನ ಶಾಪ ತಟ್ಟುವ ಮೊದಲು ರೈತರ ಹೋರಾಟಕ್ಕೆ ಧುಮುಕಬೇಕಿತ್ತು. ಅಂದು ಚಾನಲ್ ಮೇಲೆ ಮಲಗಿ ನೀರು ಬಿಡಿಸಿದ್ದೆ ಎನ್ನುವ ಶಾಸಕರು ಇಂದು ಡಿಕೆಶಿ ಮನೆ ಮುಂದೆ ಮಲಗಿ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಲಿ ನೋಡೋಣ ಎಂದು ಸವಾಲೆಸೆದರು
-
ಗುಬ್ಬಿ: ತಾಲ್ಲೂಕಿನ ರೈತರು ನಿಮ್ಮ ಶಾಸಕ ಸ್ಥಾನಕ್ಕೆ ಬೆಲೆ ಕೊಟ್ಟು ನಂಬಿ ಕೊಟ್ಟ ತೂಬಿನ ಬೀಗದ ಕೀಲಿಯನ್ನು ಸ್ವಾರ್ಥಕ್ಕೆ ಡಿ.ಕೆ.ಶಿವಕುಮಾರ್(DK Shivkumar) ಅವರಿಗೆ ಅಡವಿಟ್ಟು ಅವರು ತಾಲ್ಲೂಕಿಗೆ ಬಂದಾಗ ಪಕ್ಕದಲ್ಲಿಯೇ ಕುಳಿತು ತುಟಿ ಬಿಚ್ಚದೇ ಈಗ ಮಂತ್ರಿಗಿರಿ ಸಿಗಲಿಲ್ಲ ಎಂದು ವಿರೋಧ ಮಾಡುತ್ತಿರುವ ನಿಮ್ಮ ಗೋಸಂಬಿ ಆಟ ತಾಲ್ಲೂಕಿನ ಜನರಿಗೆ ಅರ್ಥವಾಗಿದೆ. ಅಯ್ಯೋ ಎಂದ ರೈತರ ಈ ನೀರಿನ ಶಾಪದಿಂದಲೇ ಮಂತ್ರಿಗಿರಿ ಕೈ ತಪ್ಪಿದೆ ಎಂದು ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಛೇಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ತಾಲ್ಲೂಕಿನ ರೈತರ ಅಳಲು ಅಜ್ಜಯ್ಯ ಅವರಿಗೆ ತಲುಪಿ ಅವರ ಮುಖಾಂತರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತಲುಪಿ ಸಚಿವ ಸ್ಥಾನ ಸಿಕ್ಕಿಲ್ಲ. ನೀರಿನ ಶಾಪ ತಟ್ಟುವ ಮೊದಲು ರೈತರ ಹೋರಾಟಕ್ಕೆ ಧುಮುಕಬೇಕಿತ್ತು. ಅಂದು ಚಾನಲ್ ಮೇಲೆ ಮಲಗಿ ನೀರು ಬಿಡಿಸಿದ್ದೆ ಎನ್ನುವ ಶಾಸಕರು ಇಂದು ಡಿಕೆಶಿ ಮನೆ ಮುಂದೆ ಮಲಗಿ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಲಿ ನೋಡೋಣ ಎಂದು ಸವಾಲೆಸೆದರು.
ತಾಲೂಕಿನ ಎಲ್ಲಾ ರೈತರು ಒಗ್ಗೂಡಿ ಹೋರಾಟ ಮಾಡಿದರೆ ಅವರನ್ನೆಲ್ಲ ಡೋಂಗಿ ಹೋರಾಟ ಗಾರರು ಎನ್ನುವ ನೀವು ಯಾರಾದರೂ ನಾಮಕರಣಕ್ಕೆ ಕರೆದರೆ ಅಲ್ಲಿಗೆ ಹೋಗಿ ಆ ಮಗು ನನ್ನದೇ ಎನ್ನುವ ರೀತಿ ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಮಂಜೂರಾದ ಕುಡಿಯುವ ನೀರಿನ ಯೋಜನೆ ಗಳನ್ನು ನಾನೇ ತಂದಿದ್ದು ಟೇಪ್ ಕತ್ತರಿಸಿ ಉದ್ಘಾಟನೆ ಮಾಡುತ್ತೀರಿ. ಯೋಜನೆಯ ಮಂದಗತಿ ಬಗ್ಗೆ ಇಂದಿಗೂ ಗಮನಹರಿಸಿಲ್ಲ. ಪೂರ್ಣ ಮಾಡಲು ನಿಮ್ಮಿಂದ ಸಾಧ್ಯವಾಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಮಾಗಡಿ ಬಾಲಕೃಷ್ಣ ಹೇಳಿಕೆ ನೀಡಿದ ನಂತರ ಇವರು ಹೇಮಾವತಿ ಬಿಡಲ್ಲ ಎಂದು ಗೋಸಂಬಿ ಆಟ ಆಡುತ್ತಿದ್ದಾರೆ.
ಇದನ್ನೂ ಓದಿ: Gubbi News: ವಿದ್ಯಾರ್ಥಿಗಳು ಸಮಯದ ಸದ್ಬಳಕೆ ಮಾಡಿಕೊಂಡು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಬೇಕು
ಕುಣಿಗಲ್ ರಂಗನಾಥ್ ಹಾಗೂ ಮಾಗಡಿ ಬಾಲಕೃಷ್ಣ ಇಬ್ಬರೂ ನ್ಯಾಯಾಲಯಕ್ಕೆ ಹಾಜರಾಗುತ್ತಾರೆ. ಜವಾಬ್ದಾರಿ ಹೊತ್ತ ನಮ್ಮ ಶಾಸಕರು ನೀರಿನ ಕುರಿತ ನ್ಯಾಯಾಲಯ ಹೋರಾಟ ಬಗ್ಗೆ ಈವರೆವಿಗೂ ಏನಾಗಿದೆ ಎಂಬ ಮಾಹಿತಿ ಸಹ ಪಡೆದಿಲ್ಲ. ಹೋರಾಟಗಾರರ ಬಗ್ಗೆ ಕಿಂಚಿತ್ತೂ ಕಾಳಜಿ ತೋರಿಲ್ಲ. ಈಗ ಎಲ್ಲಿಲ್ಲದ ಆಸಕ್ತಿ ಬಂದಂತೆ ತೋರುತ್ತಾ ಮುಖ್ಯಮಂತ್ರಿಗಳಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಹೇಮಾವತಿ ವಿಚಾರದಲ್ಲಿ ಪಕ್ಷಾತೀತವಾಗಿ ಹೋರಾಟದಲ್ಲಿ ಭಾಗಿಯಾದ ಹೋರಾಟಗಾರರನ್ನು ಡೋಂಗಿಗಳು, ಕಾಂಜಿ ಪೀಂಜಿಗಳು ಎನ್ನುವ ನಿಮ್ಮ ಹೇಳಿಕೆ ಸರಿಯಲ್ಲ. ರಾಜ್ಯದ್ಯಂತ ಹಲವು ಶಾಸಕರಿಗೆ ಮಂತ್ರಿಗಿರಿ ಕೈ ತಪ್ಪಿದ ಹಿನ್ನೆಲೆ ಪೆಟ್ರೋಲ್ ಸುರಿದುಕೊಂಡು ಹಾಗೂ ವಿಷ ಸೇವಿಸಿ ಅತ್ಮಹತ್ಯೆ ಪ್ರಯತ್ನ ಮಾಡಿ ಪ್ರತಿಭಟನೆ ಮಾಡಿದರು. ಆದರೆ ಗುಬ್ಬಿಯಲ್ಲಿ ಯಾರೊಬ್ಬರೂ ಕೂಡ ಪ್ರತಿಭಟನೆಗೆ ಮುಂದಾಗಲಿಲ್ಲ. ಈಗಾಗಲೇ ನಿಮ್ಮ ಚಲಾವಣೆ ನಿಂತಿದೆ. ಈಗ ಶ್ರೀನಿವಾಸ್ ಡ್ರಾಮಾ ಕಂಪೆನಿ ತೆರೆದು ಓರ್ವ ಕಮಿಡಿಯನ್ ಜೊತೆ ಕೆಲ ಕಲಾವಿದರು ಸೇರಿ ನಾಟಕ ಆರಂಭಿಸಿದ್ದೀರಿ.
ಕಾಮಿಡಿ ಮಾಡುವ ನಟನೊಬ್ಬನ ಗುಳ್ಳೆನರಿ ಪಾತ್ರಕ್ಕೆ ಹೊಂದುವ ಹಾಸ್ಯನಟ ಮಾದ್ಯಮದ ಮುಂದೆ ಬಂದು ಏನೇನೋ ಕಾಮಿಡಿ ಮಾಡಿ ಹೋಗುತ್ತೆ. ಇಂತಹ ಗುಳ್ಳೆ ನರಿಗಳಿಂದ ಹೇಳಿಕೆ ಕೊಡಿಸುವುದನ್ನು ಬಿಟ್ಟು ನಿಜಕ್ಕೂ ತಾಕತ್ತು ಇದ್ರೆ ಡಿಕೆಶಿ ಅವರ ಮುಂದೆ ತೋರಿಸಿ ಮುಂದಿನ ದಿನಗಳಲ್ಲಿ ರೈತ ಹೋರಾಟಗಾರರ ಜೊತೆ ಪ್ರತಿಭಟನೆಗೆ ಬಂದು ನೀರಿನ ಶಾಪ ವಿಮೋಚನೆ ಮಾಡಿಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಸಿದ್ದರಾಮಯ್ಯ, ಲಕ್ಷ್ಮೀರಂಗಯ್ಯ, ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವಿದ್ಯಾಸಾಗರ್, ಶ್ರೀಧರ್, ಮಂಜುನಾಥ್, ಲೋಕೇಶ್ ಮತ್ತು ತಿರುಮಲೇಶ್ ಇನ್ನಿತರರು ಉಪಸ್ಥಿತರಿದ್ದರು.
![]()
22 ವರ್ಷದ ಹಿಂದೆ ವೈ.ಕೆ.ರಾಮಯ್ಯ ಅವರ ನೇತೃತ್ವದಲ್ಲಿ ಹೇಮಾವತಿ ಹೋರಾಟ ನಡೆದು 17 ದಿನಗಳ ಜೈಲು ವಾಸ ಮಾಡಿದ ತಾಲ್ಲೂಕಿನ ಹಲವು ಮುಖಂಡರು ಇದ್ದಾರೆ. ಈ ಪೈಕಿ ನಾನು ಕೂಡ ಹೇಮಾವತಿ ಹೋರಾಟ ಅಂದಿನಿಂದಲೂ ಮಾಡಿದ್ದೇವೆ. ರಸ್ತೆಗೆ ಮಣ್ಣು ಸುರಿದು ತಿಂಗಳು ಪ್ರತಿಭಟನೆ ಮಾಡಿದ ಇತಿಹಾಸ ನಮ್ಮಲ್ಲಿದೆ. 63 ಮಂದಿ ನ್ಯಾಯಾಲಯಕ್ಕೆ ವರ್ಷಗಟ್ಟಲೆ ಅಲೆದಿ ದ್ದಾರೆ. ಈಗ ಅವೈಜ್ಞಾನಿಕ ಪೈಪ್ ಲೈನ್ ವಿರೋಧಿಸಿ ಒಂದೂವರೆ ವರ್ಷದ ಹೋರಾಟ ಕೂಡಾ ನೀರಿಗಾಗಿ ನಡೆದಿದೆ. ಈ ಹೋರಾಟವನ್ನು ಡೋಂಗಿ ಎನ್ನುವ ಶಾಸಕರು ದ್ವಂದ್ವ ನೀತಿ ಬಿಟ್ಟು ರೈತರೊಟ್ಟಿಗೆ ಹೋರಾಟಕ್ಕೆ ಧುಮುಕಿ.
-ಸಿ.ಆರ್.ಶಂಕರ್ ಕುಮಾರ್, ನೀರಾವರಿ ಹೋರಾಟಗಾರ, ಗುಬ್ಬಿ.