ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sirsi News: ಶಿರಸಿ ತಾಲೂಕಿನ ಗಡಿಭಾಗಕ್ಕೆ ಹೊಂದಿಕೊಂಡಿರುವ ಮುಷ್ಕಿ ಸಮೀಪದ ಶಿರಗಣಿ ಗ್ರಾಮದ ರಸ್ತೆಯ ಕಣ್ಣೀರ ಕಥೆ

ಸ್ವಾತಂತ್ರ್ಯ ಪಡೆದು 78 ವರ್ಷದ ಹೊಸ್ತಿಲಲ್ಲಿದ್ದರೂ, ಗ್ರಾಮಾಂತರ ಭಾಗದ ಈ ಕುಗ್ರಾಮ ಮೂಲಭೂತ ಅವಶ್ಯಕತೆಗಳಿಂದ ವಂಚಿತಗೊಂಡಿದ್ದು, ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರವಾಗಿದೆ. ಸುಮಾರು ಏಳರಿಂದ ಎಂಟು ಕಿ.ಮೀಗಳಷ್ಟು ದೂರದಿಂದ ತಮ್ಮ ಅವಶ್ಯಕತೆಗಾಗಿ ಜನರು ನಡೆದು ಸಾಗುವ ಪರಿಸ್ಥಿತಿ ಇಂದಿಗೂ ಇದೆಯೆಂದರೂ ಅದು ಆಡಳಿತ ನಡೆಸುವ ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಮುಷ್ಕಿ ಸಮೀಪದ ಶಿರಗಣಿ ಗ್ರಾಮದ ರಸ್ತೆಯ ಕಣ್ಣೀರ ಕಥೆಯಿದು

Profile Ashok Nayak Jun 5, 2025 8:47 AM

ಶಿರಸಿ: ಉತ್ತರ ಕನ್ನಡ ಜಿಲ್ಲೆ ಎಂದರೆ ಒಂದು ರೀತಿಯಲ್ಲಿ ಸೋಜಿಗ ಹುಟ್ಟಿಸುತ್ತದೆ. ಮಳೆಗಾಲ ದಲ್ಲಂತೂ ಅಬ್ಬಾ‌..ಹೌದಾ...ಅಯ್ಯೋ..ಎನ್ನುವ ರೀತಿಯಲ್ಲಿರುತ್ತವೆ ಗ್ರಾಮೀಣ ಭಾಗಗಳು. ಜೀವ ಕೈಯ್ಯಲ್ಲಿಡಿದು ಮಹೀಂದ್ರಾ ಜೀಪಿನಲ್ಲಿ ಸಾಗಿ ಸುದ್ದಿ ಮಾಡಲು ಹೊರಟ ಪತ್ರಕರ್ತರು.. ಈಗಲೋ, ಆಗಲೋ ಎಂದು ಉಸಿರು ಬಿಗಿ ಹಿಡಿದು, ರಸ್ತೆಗಾಗಿ ತಾವೇ ಕಲ್ಲು ಹೊತ್ತಿದ್ದ 97 ರ ವೃದ್ಧಜೀವಗಳು ಇದೀಗ ಹಾಸಿಗೆಯಲ್ಲಿ.. ಸರಕಾರದ ರೇಷನ್ ಏಳೆಂಟು ಕಿಮಿ ತಲೆ ಮೇಲೆ ಹೊತ್ತು ಸಾಗುವ ಊರವರು.. ಅನಾರೋಗ್ಯಕ್ಕೊಳವಾದವರ ಕಂಬ್ಳಿಯಲ್ಲಿ ಹೊತ್ತು ಸಾಗುವ ಸಾರ್ವಜನಿಕರು.. ಹಳ್ಳದಂತಾದ ರಸ್ತೆ ಮಧ್ಯ ನಿಂತು ಕಣ್ಣೀರು ಸುರಿಸಿದ ಊರಿನ ಜನರು.. ಸರಕಾರದ ವಿರುದ್ಧ ಆಕ್ರೋಶ.. ಹೆತ್ತಾಯಿಯ ಬಳಿ ಹಾಲಿಗಾಗಿ ಅತ್ತ ಮಗುವಿನಂತೆ, ಕೈಮುಗಿದು ರಸ್ತೆಗೆ ಆಗ್ರಹಿಸಿದ ಊರ ಹಿರಿಯರು..

ಇದು ಯಾವುದೋ ಇತಿಹಾಸದ ಕಟ್ಟುಕಥೆಯಲ್ಲ.. ಅಕ್ಷರಶಃ ಜೀವ ಕೈಯ್ಯಲ್ಲಿಡಿದು ಸಾಗಿ, ಕುಗ್ರಾಮದ ಕರಾಳ ಕಥೆಗೆ ಸಾಕ್ಷಿಯಾದ ಕಣ್ಣುಗಳ ಅಕ್ಷರ ರೂಪದ ಚಿತ್ರಣವಿದು..

ಇದನ್ನೂ ಓದಿ: Sirsi News: ಶೌಚಾಲಯವನ್ನು ಹೈಟೆಕ್ ಮಾದರಿ ಮಾಡುವವರೆಗೆ ಸದ್ರಿ ಶೌಚಾಲಯ ಬಂದ್

ಶಿರಸಿ ತಾಲೂಕಿನ ಗಡಿಭಾಗಕ್ಕೆ ಹೊಂದಿಕೊಂಡಿರುವ ಮುಷ್ಕಿ ಸಮೀಪದ ಶಿರಗಣಿ ಗ್ರಾಮದ ರಸ್ತೆಯ ಕಣ್ಣೀರ ಕಥೆಯಿದು. ಶಿರಸಿಯಿಂದ 45 ಕಿ.ಮೀ ದೂರದಲ್ಲಿರುವ ಶಿರಗಣಿ ಗ್ರಾಮದ ಅನಾರೋಗ್ಯ ಪೀಡಿತ ವೃದ್ಧೆಯೊಬ್ಬರನ್ನು ಇತ್ತೀಚೆಗೆ ಕಂಬ್ಳಿಯಲ್ಲಿ ಹೊತ್ತೊಯ್ದಿದ್ದ ವಿಷಯ ರಾಜ್ಯಮಟ್ಟದ ಸುದ್ದಿಯಾಗಿತ್ತು. ಸ್ವಾತಂತ್ರ್ಯ ಪಡೆದು 78 ವರ್ಷದ ಹೊಸ್ತಿಲಲ್ಲಿದ್ದರೂ, ಗ್ರಾಮಾಂತರ ಭಾಗದ ಈ ಕುಗ್ರಾಮ ಮೂಲಭೂತ ಅವಶ್ಯಕತೆಗಳಿಂದ ವಂಚಿತಗೊಂಡಿದ್ದು, ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರವಾಗಿದೆ. ಸುಮಾರು ಏಳರಿಂದ ಎಂಟು ಕಿ.ಮೀಗಳಷ್ಟು ದೂರದಿಂದ ತಮ್ಮ ಅವಶ್ಯಕತೆಗಾಗಿ ಜನರು ನಡೆದು ಸಾಗುವ ಪರಿಸ್ಥಿತಿ ಇಂದಿಗೂ ಇದೆಯೆಂದರೂ ಅದು ಆಡಳಿತ ನಡೆಸುವ ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

Sirsi 2

ಪ್ರತಿ ಮಳೆಗಾಲದಲ್ಲಿಯೂ ತಮ್ಮ ನರಕಯಾತನೆಯನ್ನು ಅಧಿಕಾರಿಗಳ, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸಹ ಮತ್ತೆ ಮತ್ತೆ ಸೌಲಭ್ಯದಿಂದ ವಂಚಿತರಾಗುವ ಶಿರಗಣಿ ಗ್ರಾಮದ ಗ್ರಾಮಸ್ಥರ ಅನಿಸಿಕೆ ಯನ್ನು ಅವರಿಂದಲೇ ಕೇಳಬೇಕು. ತಮಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಗ್ರಾಮಸ್ಥರೇ ಎಲ್ಲ ಸೇರಿ ಮಾಡಿಕೊಳ್ಳುವ ಅನಿವಾರ್ಯತೆ ಇಲ್ಲಿನವರದ್ದು. ಎಲ್ಲ ಸಮುದಾಯದ ಜನ ಜೊತೆಗೂಡಿ ತಮ್ಮ ಕೈಲಾಗುವ ಸಹಕಾರವನ್ನು ಪರಸ್ಪರ ಮಾಡಿಕೊಳ್ಳುವುದು ಇವರಿಗೆ ನಿತ್ಯದ ಕಾಯಕ.

ಇದನ್ನೂ ಓದಿ: IPL 2025: ʻನಾವು ತೀವ್ರ ದುಖಃದಲ್ಲಿದ್ದೇವೆʼ-ಕಾಲ್ತುಳಿತದ ಪ್ರಕರಣದ ಬಗ್ಗೆ ಆರ್‌ಸಿಬಿ ಪ್ರತಿಕ್ರಿಯೆ!

ಊರ ನೋಡದ ಅಧಿಕಾರಿಗಳು, ಶಾಸಕರದ್ದೂ ಸ್ಪಂದನೆಯಿಲ್ಲ: ಪ್ರತಿ ಮಳೆಗಾಲದ ಸಂದರ್ಭ ದಲ್ಲಿಯೂ ಈ ಸಮಸ್ಯೆ ಇದ್ದರೂ ಸಹ ಅಧಿಕಾರಿಗಳ ದಂಡು ಈ ಕಡೆ ಸುಳಿಯಲೂ ಇಲ್ಲ. ಜನಪ್ರತಿನಿಧಿಗಳಾದವರು ನಮ್ಮನ್ನು ಮರೇತೇ ಹೋಗಿದ್ದಾರೆ. ಶಾಸಕರಿಗೆ ನಾವು ಕಳೆದ ಅಕ್ಡೋಬರ್ ನಲ್ಲಿಯೇ ರಸ್ತೆ ಸಮಸ್ಯೆಯನ್ನು ಬಗೆಹರಿಸಿಕೊಡಲು ಮನವಿ ನೀಡಿದ್ದೆವು. ಆದರೆ ಇದುವರೆಗೆ ಯಾವ ಸ್ಪಂದನೆಯೂ ದೊರೆತಿಲ್ಲ. ಈಗೊಂದು ಕೆಲ ಸಮಯದ ಹಿಂದೆ ಇಲ್ಲಿಯೇ ಸಮೀಪ ಬಂದಿದ್ದ ತಹಶೀಲ್ದಾರ್ ಒಮ್ಮೆ ಮಾತ್ರ ಈ ಸ್ಥಳಕ್ಕೆ ಕಾಟಾಚಾರದ ಭೇಟಿ ನೀಡಿ ಹೋಗಿದ್ದಾರೆ ವಿನಃ ಅದರಿಂದಾದ ಪ್ರಯೋಜನ ನಯಾಪೈಸೆಯೂ ಇಲ್ಲ. ಸರಕಾರ ಇದೆಯೋ ಇಲ್ಲವೋ ಎಂಬ ಅನುಮಾನ ನಮಗೆ ಬರುತ್ತಿದೆ ಎಂಬುದು ಪ್ರತಿ ಗ್ರಾಮಸ್ಥನ ಅಂತರಾಳದ ಮಾತಾಗಿದೆ.

*

ಮಹಿಳೆಯರಿಗೆ ಶಕ್ತಿ ಭಾಗ್ಯ ಸರಕಾರ ನೀಡಿದೆ, ಆದರೆ ನಮ್ಮೂರಿಗೆ ಬಸ್ಸೇ ಬರುವುದಿಲ್ಲ. ಬಸ್ಸು ಬರಲು ರಸ್ತೆಯೇ ಇಲ್ಲ. ಉಚಿತವಾಗಿ ಅಕ್ಕಿ ಕೊಡ್ತೇವೆ ಅಂತಾರೆ, ಆದರೆ ಅದನ್ನು ಮನೆಗೆ ತರುವ ಖರ್ಚು, ಒಂದು ಕೆಜಿ ಅಕ್ಕಿಯ ಮಾರುಕಟ್ಟೆ ದರಕ್ಕಿಂತಲೂ ಜಾಸ್ತಿಯಾಗುತ್ತದೆ. ಶಾಲೆಗೆ ಕೊಡುವ ಮೊಟ್ಟೆಗಳು ಹಾಳಾದ ರಸ್ತೆಯಲ್ಲಿ ತರುವಾಗಲೇ ಒಡೆದು ಹೋಗುತ್ತಿದೆ. ಇನ್ನೆಲ್ಲಿ ಮಕ್ಕಳಿಗೆ ಮೊಟ್ಟೆ ಭಾಗ್ಯ. ಇದು ನಮ್ಮ ಗ್ರಾಮದ ಅವಸ್ಥೆ. ಗ್ರಾಮಸ್ಥರ ಪ್ರತಿನಿತ್ಯದ ನರಕ ಯಾತನೆಯಾಗಿದೆ. ಈ ಕೂಡಲೇ ಅಧಿಕಾರಿಗಳು, ಶಾಸಕರು ನಮಗೆ ರಸ್ತೆ ಸೌಲಭ್ಯವನ್ನು ದೊರಕಿಸಿ ಕೊಡಲಿ.

-- ಉಮೇಶ ಭಟ್ಟ, ಗ್ರಾಮ ಪಂಚಾಯತಿ ಸದಸ್ಯ, ವಾನಳ್ಳಿ

ಈ ರಸ್ತೆಯಲ್ಲಿ ಪ್ರತಿದಿನ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದು ನಿಜಕ್ಕೂ ಹೆದರಿಕೆಯಾಗುತ್ತದೆ. ರಸ್ತೆಯ ಅವವ್ಯಸ್ಥೆಯನ್ನು ನೆನೆಸಿಕೊಂಡರೆ ಕಣ್ಣಲ್ಲಿ ನೀರು ಬರುತ್ತದೆ.

- ಅಣ್ಣೇಗೌಡ, ಸ್ಥಳೀಯ ಗ್ರಾಮಸ್ಥರು

ನಮ್ಮ ಸಿದ್ದಿ ಸಮುದಾಯದ 20 ಕ್ಕೂ ಅಧಿಕ ಜನರು, ಅನೇಕ ಕುಟೂಂಬ ಈ ಗ್ರಾಮದಲ್ಲಿದೆ. ಹೀಗಿದ್ದರೂ ಸಹ ನಮ್ಮ ಊರಿಗೆ ರಸ್ತೆ ಸೌಲಭ್ಯ ನೀಡಲಿಲ್ಲ. ಎಸ್ಟಿ ಹಣವನ್ನು ಸರಿಯಾಗಿ ಬಳಸಿ ಕೊಳ್ಳಲು ಅವಕಾಶವಿದ್ದರೂ ಸಹ ನಮಗೆ ಯಾವ ಸೌಲಭ್ಯವೂ ದೊರೆಯುತ್ತಿಲ್ಲ. ನಮ್ಮ ಹಕ್ಕಿನ ಸೌಲಭ್ಯಕ್ಕಾಗಿ ಆಗ್ರಹಿಸುತ್ತಿದ್ದೇವೆ.

- ಸ್ಥಳೀಯ ಸಿದ್ದಿ ಸಮುದಾಯದವರ ಅನಿಸಿಕೆ

ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ಸಹ ನಮ್ಮ ಪಕ್ಕಸಲ್ಲಿಯೇ ಇಂತಹ ಪರಿಸ್ಥಿತಿ ಇರುವ ಊರನ್ನು ನೋಡಿದರೆ ಸರಕಾರದ ಆಡಳುತ ವ್ಯವಸ್ಥೆ ಬದುಕಿದೆಯಾ, ಸತ್ತಿದೆಯಾ ಎಂಬ ಅನುಮಾನ ಮೂಡುತ್ತಿದೆ. ಈ ಕೂಡಲೇ ಶಾಸಕರಾದ ಭೀಮಣ್ಣನವರು ಅಧಿಕಾರಿಗಳ ಜೊತೆಗೆ ಈ ಗ್ರಾಮಕ್ಕೆ ಭೇಟಿ ನೀಡಿ, ರಸ್ತೆಯನ್ನು ಸರಿಪಡಿಸಿಕೊಡಬೇಕು. ಇಲ್ಲವಾದಲ್ಲಿ ಊರಿನ ಗ್ರಾಮಸ್ಥರ ಪರವಾಗಿ, ಅವರ ಜೊತೆಯಾಗಿ ನಿಮ್ಮ ಕಛೇರಿಯೆದುರು ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಲಾಗು ವುದು. ಈ ರಸ್ತೆ ಸಮಸ್ಯೆ ಬಗರಹರಿಯುವವರೆಗೂ ನಾನು ಈ ಊರಿನ ಜೊತೆಗೆ, ಜನರೊಡನೆ ಗಟ್ಟಿಯಾಗಿ ಇರುತ್ತೇನೆ. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ.

-- ಅನಂತಮೂರ್ತಿ ಹೆಗಡೆ, ಸಾಮಾಜಿಕ ಹೋರಾಟಗಾರ, ಬಿಜೆಪಿ ರೈತಮೋರ್ಚಾ ಜಿಲ್ಲಾ ಉಪಾಧ್ಯಕ್ಷ

ರಸ್ತೆಯಿಲ್ಲದೇ ಹಾಲು ಡೇರಿ ಸ್ಥಗಿತ : ಆಕಳು ಮಾರಾಟ ಮಾಡಿದ ಜನ : ಪ್ರತಿದಿನ 50-60 ಲೀಟರ್ ಹಾಲನ್ನು ಪ್ರತಿ ಹೊತ್ತಿಗೆ ಸ್ಥಳೀಯ ಡೇರಿಗೆ ನೀಡುತ್ತಿದ್ದ, ಈ ಶಿರಗಣಿ ಊರಿನ ಜನರು ಇದೀಗ ಪ್ರತಿದಿನ ಡೇರಿಗೆ ಹಾಲು ಒಯ್ಯಲು ರಸ್ತೆಯ ಸೌಲಭ್ಯವಿಲ್ಲದೇ, ಮನೆಯಲ್ಲಿಯೇ ಹಾಲು ಇರುತ್ತಿದ್ದು, ಇದರಿಂದ ಬೇಸತ್ತ ಗ್ರಾಮಸ್ಥರು ಹಾಲು ಹಿಂಡುವ ದನಕರುಗಳನ್ನು ಅನಿವಾರ್ಯವಾಗಿ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.

ಸರಕಾರಕ್ಕೆ 15 ದಿನದ ಗಡುವು ಕೊಟ್ಟ ಜನತೆ : ರಸ್ತೆಗಾಗಿ ಸುಮಾರು ಈವತ್ತಕ್ಕೂ ಹೆಚ್ಚು ಕುಟುಂಬಗಳು ಒಕ್ಕೊರಲಿನಿಂದ ಆಗ್ರಹಿಸಿದ್ದು, ಜೂ.15 ರೊಳಗೆ ಸುಗಮ ಸಂಚಾರಕ್ಕೆ ರಸ್ತೆಯನ್ನು ಮಾಡಿಕೊಡದಿದ್ದಲ್ಲಿ, ಶಾಸಕರ ಕಛೇರಿಯೆದುರು ಅನಿರ್ದಿಷ್ಟಾವಧಿ ಧರಣಿಯನ್ನು ಗ್ರಾಮಸ್ಥ ರೆಲ್ಲರೂ ಕೈಗೊಳ್ಳುವುದಾಗಿ ಇದೇ ವೇಳೆ ಪ್ರತಿಜ್ಞೆಗೈದರು.

ಗ್ರಾಮಸ್ಥರ ರಸ್ತೆ ಸಮಸ್ಯೆಗೆ ಅನಂತಮೂರ್ತಿ ಹೆಗಡೆ ಸ್ಪಂದನೆ : ಇತ್ತೀಚಿಗೆ ಶಿರಸಿ ತಾಲೂಕಿನ ಮತ್ತೀಘಟ್ಟ ರಸ್ತೆ ಸಮಸ್ಯೆಯನ್ನು, ನೀಲೇಕಣಿ ರಸ್ತೆ ಸಮಸ್ಯೆಯನ್ನು ತಮ್ಮ ಹೋರಾಟದ ಮನೋಭಾವದಿಂದ, ಸರಕಾರದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿ, ಕೆಲಸ ಮಾಡುವಲ್ಲಿ ಯಶಸ್ವಿಯಾಗಿದ್ದ ಅನಂತಮೂರ್ತಿ ಹೆಗಡೆ ಅವರ ಬಳಿ ಶಿರಗಣಿ ಗ್ರಾಮಸ್ಥರು ತಮ್ಮ ರಸ್ತೆ ಸಮಸ್ಯೆಯನ್ನು ಹೇಳಿಕೊಂಡಿದ್ದರು.

ಗ್ರಾಮಸ್ಥರ ವಿನಂತಿಯ ಮೇರೆಗೆ ಸ್ಥಳಕ್ಕೆ ಬುಧವಾರ ಮಾಧ್ಯಮದವರೊಂದಿಗೆ ಭೇಟಿ ನೀಡಿದ ಅನಂತಮೂರ್ತಿ ಹೆಗಡೆ, ರಸ್ತೆ ಸೌಲಭ್ಯ ವಂಚಿತ ಗ್ರಾಮಸ್ಥರ ಕಣ್ಣೀರ ಕಥೆಯನ್ನು ಆಲಿಸಿ, ಅವರಿಗೆ ಧೈರ್ಯ ತುಂಬುದ್ದರ ಜೊತೆಗೆ, ರಸ್ತೆ ಸಮಸ್ಯೆ ಬಗೆಹರಿಯುವವರೆಗೂ ನಾನು ನಿನ್ಮ ಜೊತೆಗೆ ಇರುತ್ತೇನೆ. ಯಾವ ಕಾರಣಕ್ಕೂ ಹೋರಾಟವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ರಸ್ತೆ ಸಮಸ್ಯೆ ಪರಿಹಾರಕ್ಕಾಗಿ ಎಲ್ಲರೂ ಒಗ್ಗೂಡಿ ಹೋರಾಡೋಣ ಎಂದು ವಿಶ್ವಾಸ ತುಂಬಿದರು.

ರಸ್ತೆಗಾಗಿ ನಲವತ್ತು ವರ್ಷ ಕಲ್ಲು, ಜಲ್ಲಿ ಹೊತ್ತಿದ್ದವರು ಇಂದು ಹಾಸಿಗೆಯಲ್ಲಿ : ತಮ್ಮೂರಿನ ರಸ್ತೆಯನ್ನು ಸರಿಪಡಿಸಲು ಕಳೆದ ನಲವತ್ತು, ಐವತ್ತು ವರ್ಷಗಳಿಂದ ಕಲ್ಲು, ಜಲ್ಲಿ ಹೊತ್ತಿದ್ದ ಶಿರಗಣಿ ಗ್ರಾಮದ ವೃದ್ಧರು ಇಂದು 97 ರ ಇಳಿ ವಯಸ್ಸಿನಲ್ಲಿ ಹಾಸಿಗೆಯಲ್ಲಿ ಅಂತಿಮ ದಿನವನ್ನು ಎಣಿಸುತ್ತಿದ್ದಾರೆ. ಆದರೆ ಅವರ ಅನಾರೋಗ್ಯದ ಸಮಯದಲ್ಲಿಯೂ ಅವರನ್ನು ಕಂಬ್ಳಿಯಲ್ಲಿ ಹೊತ್ತೊಯ್ಯುವ ಪರಿಸ್ಥಿತಿ ಇಂದಿಗೂ ಇರುವುದು ದುರದೃಷ್ಟಕರವಾಗಿದೆ.

ಸಾಮಾಜಿಕ ಕಳಕಳಿಯ ಮಾಧ್ಯಮ ವರದಿ ಕಡೆಗಣನೆ : ರಸ್ತೆ ಸಮಸ್ಯೆಯಿಂದಾಗಿ ಈ ಗ್ರಾಮದ ಜನರಿಗಾದ ತೊಂದರೆಯನ್ನು ಸ್ಥಳೀಯ ಮಾಧ್ಯಮಗಳು, ರಾಜ್ಯಮಟ್ಟದ ಪತ್ರಿಕೆ, ಟಿವಿಗಳು ಪ್ರಸಾರ ಮಾಡಿದ್ದರೂ ಸಹ ಸಂಬಂಧಪಟ್ಟ ಶಾಸಕರು, ಜಿಲ್ಲಾಧಿಕಾರಿಗಳು, ಸ್ಥಳೀಯ ಅಧಿಕಾರಿಗಳು, ಸ್ತಳಕ್ಕೆ ಭೇಟಿ ನೀಡದ್ದರ ಜೊತೆಗೆ ಆಡಳಿತ ಯಂತ್ರವೂ ಸಹ ಕಡೆಗಣಿಸಿ, ತಾತ್ಸಾರ ಮಾಡಿತ್ತು. ಪ್ರಜಾ ಪ್ರಭುತ್ವದಲ್ಲಿ ನಾಲ್ಕನೇ ಅಂಗವೆಂದು ಕರೆಸಿಕೊಳ್ಳುವ ಸಾಮಾಜಿಕ ಕಳಕಳಿಯಿರುವ ಮಾಧ್ಯಮ ದವರ ವರದಿಗೆ ಆಡಳಿತ ಯಂತ್ರ ಹೀಗೆ ನಿಷ್ಕಾಳಜಿ ತೋರುವುದು ಸರಿಯಲ್ಲ. ತಮ್ಮ ಆಡಳಿತ ವೈಫಲ್ಯವನ್ನು ಜನಪ್ರತಿನಿಧಿಗಳು ಒಪ್ಪಿಕೊಂಡು, ಜನರಿಗೆ ಮೂಲಭೂತ ಸೌಕರ್ಯ ನೀಡುವಂತಾಗ ಬೇಕು.