ಯಕ್ಷಗಾನದ ಹಿರಿಯ ಭಾಗವತ ಕಪ್ಪೆಕರೆ ಸುಬ್ರಾಯ ಹೆಗಡೆ ನಿಧನ
ಯಕ್ಷಗಾನ ಲೋಕದ ದಿಗ್ಗಜ ಕಪ್ಪೆಕೆರೆ ಸುಬ್ರಾಯ ಹೆಗಡೆ (79) ಅವರು ಮೇ 13 ರಂದು ಬುಧವಾರ ನಿಧನರಾದರು. ಲಯಬ್ರಹ್ಮರೆಂದೇ ಖ್ಯಾತರಾಗಿದ್ದ ಇವರು, ಬಡಗುತಿಟ್ಟಿನ ಅಗ್ರಮಾನ್ಯ ಸಾಂಪ್ರದಾಯಿಕ ಭಾಗವತ ಎಂದು ಹೆಸರುವಾಸಿಯಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ.
ಸಂಗ್ರಹ ಚಿತ್ರ -
ಹೊನ್ನಾವರ: ಯಕ್ಷಗಾನ ಲೋಕದ ದಿಗ್ಗಜ ಕಪ್ಪೆಕೆರೆ ಸುಬ್ರಾಯ ಹೆಗಡೆ (79) ಅವರು ಮೇ 13 ರಂದು ಬುಧವಾರ (Kappekare Subraya Hegde) ನಿಧನರಾದರು. ಲಯಬ್ರಹ್ಮರೆಂದೇ ಖ್ಯಾತರಾಗಿದ್ದ ಇವರು, ಬಡಗುತಿಟ್ಟಿನ ಅಗ್ರಮಾನ್ಯ ಸಾಂಪ್ರದಾಯಿಕ ಭಾಗವತ ಎಂದು ಹೆಸರುವಾಸಿಯಾಗಿದ್ದರು. ಅವರ ಅಗಲಿಕೆಯಿಂದ ಬಡಗುತಿಟ್ಟು ಯಕ್ಷಗಾನ ರಂಗದ ಒಂದು ಸುವರ್ಣ ಯುಗ ಅಂತ್ಯಗೊಂಡಂತಾಗಿದೆ. ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ. ಕೆರೆಮನೆ ಶಿವರಾಮ ಹೆಗಡೆ, ಮಹಾಬಲ ಹೆಗಡೆ, ಶಂಭು ಹೆಗಡೆ, ನೆಬ್ಬೂರು ನಾರಾಯಣ ಹೆಗಡೆ ಮುಂತಾದವರ ಒಡನಾಡಿಯಾಗಿದ್ದರು.
1947ರಲ್ಲಿ ಹೊನ್ನಾವರ ತಾಲೂಕಿನ ಹಡಿನಬಾಳದಲ್ಲಿ ಈಶ್ವರ ಹೆಗಡೆ ಮತ್ತು ಗೋಪಿ ಹೆಗಡೆ ದಂಪತಿಗಳ ಪುತ್ರನಾಗಿ ಜನಿಸಿದ ಸುಬ್ರಾಯ ಅವರು, ಮೂಲತಃ ಯಕ್ಷಗಾನದ ಮನೆಯಿಂದಲೇ ಬಂದವರು. ಹಿರಿಯ ಸಹೋದರ ಕಪ್ಪೆಕೆರೆ ಮಹಾದೇವ ಹೆಗಡೆಯವರ ಹಾದಿಯಲ್ಲೇ ಸಾಗಿದ ಇವರು, ಕೆರೆಮನೆ ಮಹಾಬಲ ಹೆಗಡೆ ಮತ್ತು ಗಣಪತಿ ಹೆಗಡೆಯವರಲ್ಲಿ ಕಲೆ ಅಭ್ಯಾಸ ಮಾಡಿದರು. ಯಕ್ಷಗಾನದಲ್ಲಿ ಒಬ್ಬ ಕಲಾವಿದ ಭಾಗವತನೂ ಆಗಿ, ವೇಷಧಾರಿಯೂ ಆಗಿ, ಜೊತೆಗೆ ವಾದಕನೂ ಆಗಿ ಗುರುತಿಸಿಕೊಳ್ಳುವುದು ಬಹಳ ಅಪರೂಪ. ಸುಬ್ರಾಯ ಹೆಗಡೆಯವರು ಈ ಎಲ್ಲಾ ರಂಗಗಳಲ್ಲಿ ಪರಿಣತಿ ಸಾಧಿಸಿದ್ದರು.
ಗುಂಡಬಾಳ, ಇಡಗುಂಜಿ, ಅಮೃತೇಶ್ವರೀ, ಕಮಲಶಿಲೆ, ಸಾಲಿಗ್ರಾಮ, ಬಚ್ಚಗಾರು, ಪಂಚಲಿಂಗ ಮೇಳಗಳಲ್ಲಿ ಐದು ದಶಕಗಳ ಕಾಲ ಕಲಾಸೇವೆ ಮಾಡಿದ್ದಾರೆ. ತಾಳ ಮತ್ತು ಲಯದ ಮೇಲಿನ ಅಪ್ರತಿಮ ಹಿಡಿತಕ್ಕಾಗಿ ಅವರಿಗೆ 'ಲಯ ಬ್ರಹ್ಮ' ಎಂಬ ಬಿರುದು ಒಲಿದುಬಂದಿತ್ತು. ಅರ್ಜುನ, ಬಲರಾಮ, ನಾರದನಂತಹ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ ಮುಮ್ಮೇಳದ ಸಮರ್ಥ ಕಲಾವಿದರಾಗಿದ್ದರು.
ಯಕ್ಷಗಾನ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ, ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದ ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಇತ್ತೀಚೆಗೆ ಯಕ್ಷಮಂಗಲ ಪ್ರಶಸ್ತಿ ನೀಡಿ ಗೌರವಿಸಿತ್ತು.