K. N. Ganeshaiah: ʻಪುಣ್ಯಕೋಟಿ ಶತಕರುಣಿʼ ದೃಶ್ಯಕಾವ್ಯ ಲೋಕಾರ್ಪಣೆ; ಸುಧಾಮೂರ್ತಿ, ರಮೇಶ್ ಅರವಿಂದ್ ಶ್ಲಾಘನೆ
ಕನ್ನಡಿಗರ ನೆಚ್ಚಿನ ‘ಧರಣಿ ಮಂಡಲ ಮಧ್ಯದೊಳಗೆ’ ಕಥೆಯನ್ನು ಹೊಸ ದೃಷ್ಟಿಕೋನದೊಂದಿಗೆ ಪರಿಸರ ವಿಜ್ಞಾನ ಮತ್ತು ಇತಿಹಾಸದ ಹಿನ್ನೆಲೆಯಲ್ಲಿ ಕೆ.ಎನ್. ಗಣೇಶಯ್ಯ ಅವರು ಮರುಸೃಷ್ಟಿಸಿದ್ದಾರೆ. ಬಾಲು ಚಂದ್ರಶೇಖರ್ ನಿರ್ದೇಶನದ "ಪುಣ್ಯಕೋಟಿ ಶತಕರುಣಿ" ದೃಶ್ಯಕಾವ್ಯವನ್ನು ಸುಧಾಮೂರ್ತಿ ಹಾಗೂ ರಮೇಶ್ ಅರವಿಂದ್ ಬಿಡುಗಡೆಗೊಳಿಸಿದ್ದಾರೆ.
-
ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿರುವ ‘ಧರಣಿ ಮಂಡಲ ಮಧ್ಯದೊಳಗೆ’ ಪುಣ್ಯಕೋಟಿ ಹಾಡನ್ನು ಕೇಳದವರೇ ಇಲ್ಲ. ಇದೀಗ ಅದೇ ಕಥೆಯನ್ನು ಹೊಸ ದೃಷ್ಟಿಕೋನದೊಂದಿಗೆ ಖ್ಯಾತ ಕಾದಂಬರಿಕಾರ, ಕೃಷಿ ವಿಜ್ಞಾನಿ ಹಾಗೂ ಪ್ರಾಧ್ಯಾಪಕ ಕೆ.ಎನ್. ಗಣೇಶಯ್ಯ ಅವರು "ಪುಣ್ಯಕೋಟಿ ಶತಕರುಣಿ" ಎಂಬ ಹೆಸರಿನಲ್ಲಿ ಪುನರಚಿಸಿದ್ದಾರೆ. ಲಾಫ್ಟಿಲ್ಯಾನ್ಡ್ ಸಂಸ್ಥೆ ಹಾಗೂ ದಿನಿ ಸಿನಿ ಕ್ರಿಯೇಷನ್ಸ್ ಸಹಯೋಗದಲ್ಲಿ ಬಾಲು ಚಂದ್ರಶೇಖರ್ ನಿರ್ದೇಶಿಸಿರುವ ಈ ಅಪೂರ್ವ ದೃಶ್ಯಕಾವ್ಯದ ಹಾಡನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು.
ಜಯನಗರದ ಯಡಿಯೂರಿನಲ್ಲಿರುವ ಅ.ನ.ಕೃ ಸಮುದಾಯ ಭವನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಹಾಗೂ ಬಹುಭಾಷಾ ನಟ ರಮೇಶ್ ಅರವಿಂದ್ ಅವರು ಜಂಟಿಯಾಗಿ ಈ ದೃಶ್ಯಕಾವ್ಯವನ್ನು ಲೋಕಾರ್ಪಣೆ ಮಾಡಿದರು. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಈ ವಿಡಿಯೋ ಮೂಡಿಬಂದಿದ್ದು, ಇಂಗ್ಲಿಷ್ ಅವತರಣಿಕೆಗೆ ನಟ ರಮೇಶ್ ಅರವಿಂದ್ ಅವರೇ ಧ್ವನಿ ನೀಡಿರುವುದು ವಿಶೇಷ.
ಇದು ಹುಲಿಯ ತ್ಯಾಗವನ್ನು ಸಾರುವ ಕಥೆ
ದೃಶ್ಯಕಾವ್ಯ ಬಿಡುಗಡೆ ಮಾಡಿ ಮಾತನಾಡಿದ ಸುಧಾಮೂರ್ತಿ ಅವರು, "ನಾವು ಇದುವರೆಗೆ ಪುಣ್ಯಕೋಟಿ ಹಸುವಿನ ತ್ಯಾಗವನ್ನಷ್ಟೇ ಕೇಳಿ ಬೆಳೆದಿದ್ದೇವೆ. ಆದರೆ ಗಣೇಶಯ್ಯ ಅವರು ಇಲ್ಲಿ ಶತಕರುಣಿ (ಹುಲಿ) ಮಾಡಿದ ತ್ಯಾಗವನ್ನು ಅತ್ಯಂತ ಮಾರ್ಮಿಕವಾಗಿ ಹೇಳಿದ್ದಾರೆ. ಚಿತ್ರದ ಕೊನೆಯಲ್ಲಿ ಬರುವ 'ಲೋಕವೆಲ್ಲವು ಏಕವಾಗಿ ನಾಕವಾಗುವುದಿ ಧರೆ' ಎಂಬ ಸಾಲು ನನ್ನ ಮನಸ್ಸನ್ನು ಮುಟ್ಟಿತು. ಈ ಸುಂದರ ಪ್ರಯತ್ನ ಕೇವಲ ಕರ್ನಾಟಕಕ್ಕೆ ಸೀಮಿತವಾಗದೆ ಜಗತ್ತಿನಾದ್ಯಂತ ತಲುಪಲಿ" ಎಂದು ಇಡೀ ತಂಡಕ್ಕೆ ಶುಭ ಹಾರೈಸಿದರು.
Sudha Murty: "ವಾರಕ್ಕೆ 70 ಗಂಟೆ ಕೆಲಸ" ; ಪತಿ ನಾರಾಯಣ ಮೂರ್ತಿ ಹೇಳಿಕೆಗೆ ಸುಧಾ ಮೂರ್ತಿ ಪ್ರತಿಕ್ರಿಯೆ ನೀಡಿದ್ದೇನು?
ವಿಜ್ಞಾನ, ಇತಿಹಾಸ ಮತ್ತು ತತ್ತ್ವಶಾಸ್ತ್ರದ ಸಂಗಮ
ನಟ ರಮೇಶ್ ಅರವಿಂದ್ ಮಾತನಾಡಿ, "ಸುಧಾಮೂರ್ತಿ ಅವರ ಬರವಣಿಗೆ ಹಾಗೂ ಸಮಾಜಸೇವೆ ಸಮಾಜಕ್ಕೆ ಬೆಳಕನ್ನು ನೀಡುತ್ತಿವೆ, ಅವರು ಈ ಕಾವ್ಯ ಬಿಡುಗಡೆ ಮಾಡಿರುವುದು ಹೆಮ್ಮೆಯ ವಿಷಯ. ಕೆ.ಎನ್. ಗಣೇಶಯ್ಯ ಅವರು ಕಳೆದ ಮೂರು ದಶಕಗಳಿಂದ ವಿಜ್ಞಾನ, ಇತಿಹಾಸ ಹಾಗೂ ತತ್ತ್ವಶಾಸ್ತ್ರವನ್ನು ಒಟ್ಟಿಗೆ ಸೇರಿಸಿ ಅದ್ಭುತ ಕಥೆಗಳನ್ನು ನೀಡುತ್ತಿದ್ದಾರೆ. ಅವರ 'ಕನಕ ಮುಸುಕು' ಮತ್ತು 'ಕರಿಸಿರಿಯಾನ' ಕಾದಂಬರಿಗಳನ್ನು ಆಧರಿಸಿ ಸಿನಿಮಾ ಮಾಡಲು ನಾನು ಕಾಯುತ್ತಿದ್ದೇನೆ" ಎಂದರು. ಜೊತೆಗೆ, ಹಸುವಿನ ಮೇಲೆ ಹುಲಿ ಕುಳಿತು ಬರುವಂತಹ ಅದ್ಭುತ ಅನಿಮೇಷನ್ ಕಲ್ಪನೆಗಾಗಿ ನಿರ್ದೇಶಕ ಬಾಲು ಅವರನ್ನು ಶ್ಲಾಘಿಸಿದರು.
ಮಗಳ ಹೆಸರಿನಿಂದ ಪ್ರೇರಿತವಾದ ಕಥೆ
ಕೃತಿಯ ಸೂತ್ರಧಾರಿ ಕೆ.ಎ.ನ್. ಗಣೇಶಯ್ಯ ಅವರು ಕಥೆಯ ಹಿನ್ನೆಲೆ ಹಂಚಿಕೊಳ್ಳುತ್ತಾ, "ನನ್ನ ಮಗಳಿಗೆ ಪುಣ್ಯಕೋಟಿ ಎಂದೇ ಹೆಸರಿಟ್ಟಿದ್ದೇವೆ. ಅವಳು ಚಿಕ್ಕವಳಿದ್ದಾಗ ನಾವು ಕಾಡಿಗೆ ಕರೆದೊಯ್ದಾಗ ಅವಳಿಗಾದ ಗಾಯಗಳನ್ನು ನೋಡಿ ನಮ್ಮ ತಂದೆ ಒಂದು ಹಾಡು ಬರೆದಿದ್ದರು. ಅದರಲ್ಲಿ ಮಗಳು ಪುಣ್ಯಕೋಟಿಯಾದರೆ, ನಾವು ವಿಲನ್ ಆಗಿದ್ದೆವು. ಈಗ ಈ ಹೊಸ ಕಥೆಯಲ್ಲಿ ನಾನು ಪುಣ್ಯಕೋಟಿಯನ್ನು ಸಾಯಿಸಿದ್ದೇನೆ, ತಂದೆ ಬರೆದ ಹಾಡಿನಲ್ಲಿ ನಮ್ಮನ್ನು ವ್ಯಾಘ್ರ (ಹುಲಿ) ಮಾಡಿದಾಗ ಆ ಹುಲಿಯೂ ಒಳ್ಳೆಯವನೇ ಎಂದು ವಾದ ಮಾಡ ಹೊರಟಿದ್ದೇ ಈ 'ಶತಕರುಣಿ' ಕಥೆಯ ಮೂಲ" ಎಂದರು. ಅಲ್ಲದೆ ಅಪರ್ಣ ಎಂಬ ಹುಡುಗಿಯ ಸಲಹೆಯ ಮೇರೆಗೆ ಪರಿಸರ ವಿಜ್ಞಾನದ ಹಿನ್ನೆಲೆಯಲ್ಲಿ ಕಥೆಯನ್ನು ಮತ್ತಷ್ಟು ವಿಸ್ತರಿಸಿದ್ದಾಗಿ ತಿಳಿಸಿದರು.
ಈ ಅಪೂರ್ವ ದೃಶ್ಯಕಾವ್ಯಕ್ಕೆ ಅಜಯ್ ಶ್ರೀನಿವಾಸಮೂರ್ತಿ ಅವರು ಮಧುರವಾದ ಸಂಗೀತ ನೀಡಿದ್ದು, ಮೇಘನ ಹಳಿಯಾಳ್, ಚಿಂತನ್ ವಿಕಾಸ್ ಹಾಗೂ ಆರವ್ ಜೋಶಿ ಧ್ವನಿಯಾಗಿದ್ದಾರೆ. ಮೂಲತಃ ಎಂಜಿನಿಯರ್ ಆಗಿರುವ ನಿರ್ದೇಶಕ ಬಾಲು ಚಂದ್ರಶೇಖರ್ ಹಾಗೂ ದಿನಿ ಸಿನಿ ಕ್ರಿಯೇಷನ್ಸ್ನ ದಿನೇಶ್ ಅವರು ಅಪ್ಪಟ ಕನ್ನಡದ ಪ್ರತಿಭೆಗಳು ಸೇರಿ ಜಗತ್ತೇ ನೋಡುವಂತಹ ಜಾಗತಿಕ ಮಟ್ಟದ ಅನಿಮೇಷನ್ ದೃಶ್ಯಕಾವ್ಯವನ್ನು ಹೆಣೆದಿದ್ದಾರೆ.