'ಅಗ್ನಿಸಾಕ್ಷಿ' ಧಾರಾವಾಹಿಯ ಕಲರ್ಫುಲ್ ರೋಮ್ಯಾಂಟಿಕ್ ಟೈಟಲ್ ಸಾಂಗ್ ಬಿಡುಗಡೆ ಮಾಡಿದ ಕಲರ್ಸ್ ಕನ್ನಡ
ಕಲರ್ಸ್ ಕನ್ನಡ ವಾಹಿನಿಯು ವಿಶ್ವ ಸಂಗೀತ ದಿನದ ಅಂಗವಾಗಿ ತನ್ನ ಹೊಸ ಧಾರಾವಾಹಿ 'ಅಗ್ನಿಸಾಕ್ಷಿ'ಯ ರೋಮ್ಯಾಂಟಿಕ್ ಶೀರ್ಷಿಕೆ ಗೀತೆಯನ್ನು ಬಿಡುಗಡೆ ಮಾಡಿದೆ. ಸುನಾದ್ ಗೌತಮ್ ಸಂಗೀತ, ವಿಕಾಸ್ ನೆಗಿಲೋಣಿ ಸಾಹಿತ್ಯ ಹಾಗೂ ರಜತ್ ಹೆಗಡೆ ಧ್ವನಿಯಾಗಿರುವ ಈ ಗೀತೆಯಲ್ಲಿ ಬಿಗ್ ಬಾಸ್ ಖ್ಯಾತಿಯ ಶಮಂತ್ ಬ್ರೋ ಗೌಡ ಮತ್ತು ವರ್ಷಿಣಿ ಗೌಡ ಮುಖ್ಯ ಭೂಮಿಕೆಯಲ್ಲಿದ್ದಾರೆ.
-
ವಿಶ್ವ ಸಂಗೀತ ದಿನದ ವಿಶೇಷ ಸಂದರ್ಭದಲ್ಲಿ, ಕರ್ನಾಟಕದ ಹೆಮ್ಮೆಯ ಮತ್ತು ಅತ್ಯಂತ ಜನಪ್ರಿಯ ಮನರಂಜನಾ ವಾಹಿನಿ ‘ಕಲರ್ಸ್ ಕನ್ನಡ’ ತನ್ನ ಯಶಸ್ವಿ ಹೊಸ ಫಿಕ್ಷನ್ ಶೋ ‘ಅಗ್ನಿಸಾಕ್ಷಿ’ಯ ಆಕರ್ಷಕ ರೋಮ್ಯಾಂಟಿಕ್ ಶೀರ್ಷಿಕೆ ಗೀತೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಪ್ರಸಾರ ಆರಂಭವಾಗಿ ಕೇವಲ 13 ದಿನಗಳಲ್ಲೇ ರಾಜ್ಯಾದ್ಯಂತ ‘ಅಗ್ನಿಸಾಕ್ಷಿ’ ಸೀರಿಯಲ್ ಪ್ರೇಕ್ಷಕರ ಮನಗೆದ್ದಿದೆ.
ಅಗ್ನಿಸಾಕ್ಷಿ ಧಾರಾವಾಹಿಯು ಅಗ್ನಿ ಮತ್ತು ಸಾಕ್ಷಿ ಎಂಬ ಇಬ್ಬರು ಹಠಮಾರಿಗಳ ನಡುವಿನ ರೋಚಕ ಪ್ರೇಮಕಾವ್ಯವಾಗಿದೆ. ಕೆಂಡ ಮತ್ತು ಬಿರುಗಾಳಿಯಂತಿರುವ ಇವರಿಬ್ಬರ ಮುಖಾಮುಖಿ ಮುಂದೆ ಹೇಗೆ ಸುಂದರ ಪ್ರೇಮದ ಮಳೆಯಾಗಲಿದೆ ಎಂಬುದನ್ನು ಈ ಹೊಸ ಹಾಡು ಅದ್ಭುತವಾಗಿ ಧ್ವನಿಸುತ್ತದೆ. "ಮಾಯದ ಗಾಯವ ಮಾಡಿರೋ ಒಲವೇ..." ಎಂದು ಆರಂಭವಾಗುವ ಈ ಸುಮಧುರ ಗೀತೆಯನ್ನು ಕನ್ನಡಿಗರಿಗೆ ಉಣಬಡಿಸಲು ಕಲರ್ಸ್ ಕನ್ನಡ ವಾಹಿನಿಯು ಸ್ಯಾಂಡಲ್ವುಡ್ನ ಪ್ರಸಿದ್ಧ ಪ್ರತಿಭೆಗಳನ್ನು ಜೊತೆಗೂಡಿಸಿದೆ.
Agnisakshi Serial : ಅವನು ಸುಡುವ ಜ್ವಾಲೆ, ಅವಳು ಸುರಿವ ಮಳೆ! ‘ಅಗ್ನಿಸಾಕ್ಷಿ’ಈ ದಿನದಿಂದ ಶುರು
ಈ ಹಾಡಿಗೆ ಸಂಗೀತ ನೀಡಿರುವುದು ಯಾರು?
ಈ ಹಾಡಿನ ತಾಂತ್ರಿಕ ವರ್ಗದಲ್ಲಿ ಹೆಸರಾಂತ ಕಲಾವಿದರು ಕೈಜೋಡಿಸಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಸುನಾದ್ ಗೌತಮ್ ಈ ಹಾಡಿಗೆ ಅದ್ಭುತವಾಗಿ ಸಂಗೀತ ಸಂಯೋಜಿಸಿದ್ದಾರೆ. ಕಲರ್ಸ್ ಕನ್ನಡದ ಐಕಾನಿಕ್ ಮತ್ತು ಹೆಮ್ಮೆಯ ಧಾರಾವಾಹಿ ‘ಕನ್ನಡತಿ’ಯ ಮೂಲಕ ಕಥೆ-ಸಂಭಾಷಣೆ ಬರೆದು ಮನೆಮಾತಾಗಿದ್ದ ಪ್ರಸಿದ್ಧ ಬರಹಗಾರ ವಿಕಾಸ್ ನೆಗಿಲೋಣಿ ಅವರು ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಇನ್ನು ಸಂಗೀತ ರಿಯಾಲಿಟಿ ಶೋ ಮೂಲಕ ಕನ್ನಡಿಗರ ಹೃದಯ ಗೆದ್ದು, ಹಿನ್ನೆಲೆ ಗಾಯಕರಾಗಿ ಗುರುತಿಸಿಕೊಂಡಿರುವ ರಜತ್ ಹೆಗಡೆ ಈ ಹಾಡನ್ನು ಹಾಡಿದ್ದಾರೆ.
Agnisakshi Serial: ‘ಅಗ್ನಿಸಾಕ್ಷಿ’ ಧಾರಾವಾಹಿ ಪ್ರೋಮೋ ಔಟ್! ಹೊಸ ಲುಕ್ನಲ್ಲಿ ಶಮಂತ್ ಬ್ರೋ ಗೌಡ
ಸಖತ್ ವೈರಲ್ ಆಗಿರುವ ಟೈಟಲ್ ಟ್ರ್ಯಾಕ್
ಭಾವನೆಗಳ ತೀವ್ರತೆ ಮತ್ತು ಕಥೆಯ ಆಳವನ್ನು ಹಿಡಿದಿಡುವ ಈ ಶೀರ್ಷಿಕೆ ಗೀತೆ, ಕಲರ್ಸ್ ಕನ್ನಡದ ಅಧಿಕೃತ ಸೋಷಿಯಲ್ ಮೀಡಿಯಾ ಪೇಜ್ಗಳಲ್ಲಿ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಭಾರಿ ವೈರಲ್ ಆಗಿದೆ. ಹ್ಯಾರಿಸ್ ನಿರ್ಮಾಣದ ಹಾಗೂ ಪ್ರಶಾಂತ್ ಡಿ.ಪಿ ನಿರ್ದೇಶನದ ಈ ಮೆಗಾ ಫಿಕ್ಷನ್ ಶೋನಲ್ಲಿ ಬಿಗ್ ಬಾಸ್ ಖ್ಯಾತಿಯ ಶಮಂತ್ 'ಬ್ರೋ' ಗೌಡ (ಅಗ್ನಿ) ಹಾಗೂ ಪ್ರತಿಭಾವಂತ ನಟಿ ವರ್ಷಿಣಿ ಗೌಡ (ಸಾಕ್ಷಿ) ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಪ್ರತಿ ದಿನ ಸಂಜೆ 7 ಗಂಟೆಗೆ ನಿಮ್ಮ ನೆಚ್ಚಿನ ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ಅಗ್ನಿಸಾಕ್ಷಿ’ ಪ್ರಸಾರವಾಗಲಿದ್ದು, ಪ್ರೇಕ್ಷಕರು ಈ ರೋಮಾಂಚಕ ಕಥೆಯನ್ನು ವೀಕ್ಷಿಸಬಹುದಾಗಿದೆ.