'ದಿ 1979 ಅನ್ ಟೋಲ್ಡ್ ಸ್ಟೋರಿ': ಸ್ಯಾಂಡಲ್ವುಡ್ನಲ್ಲಿ ಸಿನಿಮಾವಾಯ್ತು 47 ವರ್ಷಗಳ ಹಿಂದೆ ಬಂಗಾಳದಲ್ಲಿ ನಡೆದ ರಿಯಲ್ ಘಟನೆ!
'ದಿ 1979 ಅನ್ ಟೋಲ್ಡ್ ಸ್ಟೋರಿ' ಸಿನಿಮಾವು 1979ರಲ್ಲಿ ಬಂಗಾಳದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ರೋಚಕ ಕಥಾಹಂದರ ಹೊಂದಿದೆ. ಪುಷ್ಪರಾಜ್ ನಿರ್ದೇಶನದ ಈ ಚಿತ್ರವು ರಾಜಕೀಯ ದ್ವೇಷ, ಅಧಿಕಾರದ ದಾಹ ಮತ್ತು ನೋವಿನ ಕಥೆಯನ್ನು ನೈಜವಾಗಿ ಕಟ್ಟಿಕೊಡಲಿದೆಯಂತೆ. ಬಂಗಾಳದ ಹಿನ್ನೆಲೆಯಿದ್ದರೂ ಈ ಸಿನಿಮಾದ ಕೋಲಾರದಲ್ಲಿ ಚಿತ್ರೀಕರಣ ನಡೆಸಿರುವುದು ವಿಶೇಷ.
-
ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಅನೇಕ ಹೊಸ ಪ್ರಯೋಗಗಳು ನಡೆಯುತ್ತಿವೆ. ಅದು ಕಥೆಯಲ್ಲಾಗಿರಬಹುದು ಅಥವಾ ಪಾತ್ರಗಳ ಆಯ್ಕೆಯಲ್ಲಿ ಆಗಿರಬಹುದು. ಉದಯೋನ್ಮುಖ ಪ್ರತಿಭೆಗಳು ಹೊಸ ರೀತಿಯಲ್ಲಿ ಯೋಚಿಸುತ್ತಿದ್ದಾರೆ. ಕನ್ನಡಕ್ಕೆ ಹೊಸ ಮಾದರಿಯ ಸಿನಿಮಾಗಳನ್ನು ನೀಡಬೇಕು ಎಂದು ಆಲೋಚಿಸುತ್ತಿದ್ದಾರೆ. ಇದೀಗ ಇದೇ ರೀತಿ ಹೊಸ ಕಥೆಯ ಮೂಲಕ ಉದಯೋನ್ಮುಖ ತಂಡವೊಂದು ಸ್ಯಾಂಡಲ್ವುಡ್ಗೆ ಕಾಲಿಟ್ಟಿದೆ. ಈ ತಂಡವು 'ದಿ 1979 ಅನ್ ಟೋಲ್ಡ್ ಸ್ಟೋರಿ' ಎಂಬ ಸಿನಿಮಾ ಮಾಡಿದೆ.
ಬಂಗಾಳದಲ್ಲಿ ನಡೆದ ನೈಜ ಘಟನೆಯೇ ಸ್ಪೂರ್ತಿ
'ದಿ 1979 ಅನ್ ಟೋಲ್ಡ್ ಸ್ಟೋರಿ' ಸಿನಿಮಾವನ್ನು 'ಮನಂ ಮೂವಿ ಮೇಕರ್ಸ್ ' ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ಈ ಸಿನಿಮಾ ಸದ್ಯ ತೆರೆಗೆ ಸಜ್ಜಾಗಿದೆ. ಈ ಸಿನಿಮಾಕ್ಕೆ ಪುಷ್ಪರಾಜ್ ಅವರು ನಿರ್ದೇಶನ ಮಾಡಿದ್ದು, ಬೀರಮಾನಹಳ್ಳಿ ಎಂ. ಶ್ರೀನಿವಾಸ್ ಅವರು ಬಂಡವಾಳ ಹೂಡಿದ್ದಾರೆ. 1979ರಲ್ಲಿ ಬಂಗಾಳದಲ್ಲಿ ನಡೆದಿದ್ದ ನೈಜ ಘಟನೆಯನ್ನು ಆಧರಿಸಿರುವ ಈ ಸಿನಿಮಾಗೆ ಕಾಲ್ಪನಿಕ ಕಥೆಯನ್ನು ಜೋಡಿಸಲಾಗಿದೆಯಂತೆ. ಸಂಪೂರ್ಣ ಕಥೆಯು ಬಂಗಾಳದ ಹಿನ್ನೆಲೆಯನ್ನು ಹೊಂದಿದ್ದರೂ, ಈ ಚಿತ್ರದ ಚಿತ್ರೀಕರಣವನ್ನು ಮಾತ್ರ ಕೋಲಾರದಲ್ಲಿ ಮಾಡಿರುವುದು ವಿಶೇಷ. ಹಾಗಾಗಿಯೇ ಈ ಚಿತ್ರದ ಬಗ್ಗೆ ಕುತೂಹಲದ ಜೊತೆಗೆ ನೀರಿಕ್ಷೆ ಹೆಚ್ಚಿದೆ.
ಈಗಾಗಲೇ 'ದಿ 1979 ಅನ್ ಟೋಲ್ಡ್ ಸ್ಟೋರಿ' ಸಿನಿಮಾದ ಟೀಸರ್ ಅನ್ನು ಚಿತ್ರತಂಡ ಜನವರಿ 23ರಂದೇ 'ಮ್ಯೂಸಿಕ್ ಬಜಾರ್ ' ಯೌಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಿದ್ದು, ಟೀಸರ್ ನೋಡಿದವರು ಇದು ನಮ್ಮ ಮಣ್ಣಿನ ಕಥೆ ಎನಿಸುತ್ತದೆ ಎಂದಿದ್ದಾರೆ. ಕಾರಣ, ಅಷ್ಟೊಂದು ನೈಜವಾಗಿ ಈ ಸಿನಿಮಾವನ್ನು ಸೆರೆ ಹಿಡಿದಿದ್ದಾರೆ ನಿರ್ದೇಶಕ ಪುಷ್ಪರಾಜ್. ರಾಜಕೀಯ, ಅಧಿಕಾರ, ಆಡಳಿತ, ಸ್ವಾಭಿಮಾನ, ನೋವು, ಹಿಂಸೆ ಇದರ ಸುತ್ತವೇ ಈ ಚಿತ್ರದ ಕಥೆ ಸುತ್ತುತದೆ. ಇದರ ಜೊತೆಗೆ ಸಿನಿಮಾದ ಹಿನ್ನೆಲೆ ಸಂಗೀತ ಎಲ್ಲರನ್ನು ಸೆಳೆದಿದೆ. ಒಟ್ಟಿನಲ್ಲಿ ಸಿನಿಪ್ರಿಯರಲ್ಲಿ 'ದಿ 1979 ಅನ್ ಟೋಲ್ಡ್ ಸ್ಟೋರಿ' ಚಿತ್ರದ ಬಗ್ಗೆ ಒಂದು ಕುತೂಹಲವಂತೂ ಇದ್ದೇ ಇದೆ.
ಇನ್ನು ಸಿನಿಮಾದ ಟ್ರೈಲರ್ ಹಾಗೂ ಹಾಡುಗಳು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಮಾಹಿತಿ ನೀಡಿದೆ. ಸಿನಿಮಾದ ರಿಲೀಸ್ ಡೇಟ್ ಅಧಿಕೃತವಾಗಿ ಘೋಷಣೆಯಾಗದಿದ್ದರೂ, ಫೆಬ್ರವರಿ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ಟೀಮ್ ತಿಳಿಸಿದೆ. ಈ ಸಿನಿಮಾವು ಹೊಸ ಪ್ರತಿಭೆಗಳಿಂದ ಕೂಡಿದ್ದು, ಅಜ್ಜು, ಸುಜಿತ್, ಪ್ರಾನ್ವಿ ಗೌಡ ಹಾಗೂ ಅಮೃತ ಗೌಡ ಅವರು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ತಾಂತ್ರಿಕ ವರ್ಗವು ಬಲಿಷ್ಠವಾಗಿದ್ದು, ಚಲಾಕಿ ಚರಣ್ ಅವರ ಛಾಯಾಗ್ರಾಹಣದಲ್ಲಿ ಚಿತ್ರ ಮೂಡಿಬಂದಿದೆ. ಜಶ್ವಂತ್ ವಸುವುಲೇಟಿ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ.