ಬೀದಿಯಲ್ಲಿ ನಮಾಜ್ ನಿಷೇಧ, ಕಲ್ಲೆಸೆಯುವವರಿಗೆ ಕಠಿಣ ಶಿಕ್ಷೆ : ಪಶ್ಚಿಮ ಬಂಗಾಳ ಬಿಜೆಪಿ ಸರ್ಕಾರದಿಂದ ನೂತನ ಕ್ರಮ
Ban on street Namaz: ಪಶ್ಚಿಮ ಬಂಗಾಳದಲ್ಲಿ ಇನ್ಮುಂದೆ ರಸ್ತೆಬದಿಯಲ್ಲಿ ನಮಾಜ್ ಮಾಡುವಂತಿಲ್ಲ ಹಾಗೂ ಬೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವಂತಿಲ್ಲ ಎಂದು ರಾಜ್ಯ ಬಿಜೆಪಿ ಶಾಸಕ ಅರ್ಜುನ್ ಸಿಂಗ್ ಹೇಳಿದ್ದಾರೆ. ಹಾಗೆಯೇ ಕಲ್ಲೆಸೆಯುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಇದು ರಾಜಕೀಯ ವಿವಾದಕ್ಕೆ ಕಾರಣವಾಗಬಹುದು.
ಪಶ್ಚಿಮ ಬಂಗಾಳ ಸರ್ಕಾರದಿಂದ ನೂತನ ಕ್ರಮ -
ಕೋಲ್ಕತ್ತಾ, ಮೇ 12: ಪಶ್ಚಿಮ ಬಂಗಾಳದಲ್ಲಿ (West Bengal) ಬಿಜೆಪಿ ನೇತೃತ್ವದ ಸರ್ಕಾರ ಜಾರಿಗೆ ಬರುತ್ತಿದ್ದಂತೆ ತಾನು ನೀಡಿದ್ದ ಭರವಸೆಯೊಂದನ್ನು ಜಾರಿಗೆ ತಂದಿದೆ. ಇನ್ಮುಂದೆ ರಾಜ್ಯದ ರಸ್ತೆಬದಿಯಲ್ಲಿ ನಮಾಜ್ (Namaz) ಮಾಡುವಂತಿಲ್ಲ ಹಾಗೂ ಬೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವಂತಿಲ್ಲ ಎಂದುರಾಜ್ಯ ಬಿಜೆಪಿ ಶಾಸಕ ಅರ್ಜುನ್ ಸಿಂಗ್ ಹೇಳಿದ್ದಾರೆ. ಈ ನಿರ್ಧಾರವು ರಾಜ್ಯದಲ್ಲಿ ರಾಜಕೀಯ ವಿವಾದವನ್ನು ಹುಟ್ಟುಹಾಕುವ ನಿರೀಕ್ಷೆಯಿದೆ. ಹಾಗೆಯೇ ಕಲ್ಲೆಸೆಯುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕ ಸುವ್ಯವಸ್ಥೆ, ಕಾನೂನುಬಾಹಿರ ಚಟುವಟಿಕೆಗಳು ಮತ್ತು ರಸ್ತೆಗಳಲ್ಲಿ ಧಾರ್ಮಿಕ ಸಭೆಗಳು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಆಡಳಿತವು ಈಗಾಗಲೇ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದೆ ಎಂದು ಅರ್ಜುನ್ ಸಿಂಗ್ ತಿಳಿಸಿದ್ದಾರೆ. ಸಂಪುಟ ಸಭೆಯಲ್ಲಿ ಸಚಿವರು ಹಲವು ಆದೇಶಗಳನ್ನು ನೀಡಿದ್ದಾರೆ. ಬೀದಿಗಳಲ್ಲಿ ನಮಾಜ್ ಮಾಡಲು ಅವಕಾಶ ನೀಡಲಾಗುವುದಿಲ್ಲ. ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಿ, ಆದರೆ ಬೀದಿಗಳಲ್ಲಿ ಮಾಡುವುದನ್ನು ಸಹಿಸಲಾಗುವುದಿಲ್ಲ ಎಂದು ಅರ್ಜುನ್ ಸಿಂಗ್ ಹೇಳಿದರು.
ಗಡಿ ಬೇಲಿಯ ಸಂಪೂರ್ಣ ನಿಯಂತ್ರಣ ಬಿಎಸ್ಎಫ್ಗೆ: ಮೊದಲ ಸಂಪುಟ ಸಭೆಯಲ್ಲೇ ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ ಘೋಷಣೆ
ಕಳೆದ ವರ್ಷ ರಕ್ಷಣಾ ಸಚಿವಾಲಯದ ಒಡೆತನದ ರೆಡ್ ರೋಡ್ನಲ್ಲಿ (Red Road) ಈದ್ ನಮಾಜ್ ಆಯೋಜಿಸುವುದು ವಿವಾದಕ್ಕೆ ಕಾರಣವಾಗಿತ್ತು. ಭದ್ರತಾ ಕಾರಣಗಳು ಮತ್ತು ಆ ಪ್ರದೇಶದ ಮಿಲಿಟರಿ ಬಳಕೆಯನ್ನು ಮುಂದಿಟ್ಟುಕೊಂಡು ಸೇನೆಯು ಆರಂಭದಲ್ಲಿ ಪ್ರಾರ್ಥನೆಗೆ ಅನುಮತಿ ನಿರಾಕರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.
ಕೆಲವು ದಿನಗಳ ನಂತರ, ಸೇನೆಯು ತನ್ನ ತರಬೇತಿ ವೇಳಾಪಟ್ಟಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಪ್ರಾರ್ಥನೆಗೆ ಅವಕಾಶ ಮಾಡಿಕೊಡಲು ನಿರ್ಧರಿಸಿತು. ನೇತಾಜಿ ಪ್ರತಿಮೆಯಿಂದ ಈಸ್ಟರ್ನ್ ಕಮಾಂಡ್ ಪ್ರಧಾನ ಕಚೇರಿಯಾದ ಫೋರ್ಟ್ ವಿಲಿಯಂ ಪ್ರವೇಶದ್ವಾರದವರೆಗೆ ವಿಸ್ತರಿಸಿರುವ ರಸ್ತೆಯಲ್ಲಿ ಈ ಪ್ರಾರ್ಥನೆ ಸಲ್ಲಿಕೆಗೆ ವ್ಯವಸ್ಥೆ ಮಾಡಲಾಯಿತು.
ಜಾನುವಾರು ಕಳ್ಳಸಾಗಣೆ ವಿರುದ್ಧ ಕಠಿಣ ಕ್ರಮ
ತಮ್ಮ ಸರ್ಕಾರ ಜಾರಿಗೆ ಬಂದರೆ ಜಾನುವಾರುಗಳ ಕಳ್ಳಸಾಗಣೆ ಮತ್ತು ಕಲ್ಲು ತೂರಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಈ ಹಿಂದೆ ಬಿಜೆಪಿ ಹೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಸಿಂಗ್, ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಜಾನುವಾರ ಕಳ್ಳಸಾಗಣೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕಲ್ಲು ತೂರಾಟಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿದರು.