Independence Day 2025:ದೇಶದ ಈ ಎರಡು ಜಿಲ್ಲೆಗಳಲ್ಲಿ ನಾಳೆ ಸ್ವಾತಂತ್ರ್ಯೋತ್ಸವ ಇಲ್ಲ! ಕಾರಣ ಏನು ಗೊತ್ತೇ?
ಬ್ರಿಟಿಷರು ಭಾರತ ಮತ್ತು ಪಾಕಿಸ್ತಾನವನ್ನು ವಿಭಜನೆ ಮಾಡಿ ಸ್ವಾತಂತ್ರ್ಯ ಕೊಟ್ಟ ಮೇಲೆ ದೇಶಾದ್ಯಂತ ಆಗಸ್ಟ್ 15ರಂದು ಮೊದಲ ಸ್ವಾತಂತ್ರ್ಯವನ್ನು ಆಚರಿಸಲಾಯಿತು. ಆ ಬಳಿಕ ಪ್ರತಿ ವರ್ಷವೂ ಇದೇ ದಿನ ದೇಶಾದ್ಯಂತ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಆದರೆ ನಮ್ಮದೇ ದೇಶದ ಒಳಗೆ ಇರುವ ಈ ಎರಡು ಜಿಲ್ಲೆಗಳಲ್ಲಿ ಮಾತ್ರ ಆಗಸ್ಟ್ 18ರಂದು ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಗುತ್ತದೆ. ಇದು ಯಾಕೆ ಎಂಬುದು ಗೊತ್ತಿದೆಯೇ? ಇಲ್ಲಿದೆ ಇದರ ಸಂಪೂರ್ಣ ಮಾಹಿತಿ.


1947 ಆಗಸ್ಟ್ 15ರಂದು ದೇಶಕ್ಕೆ ಸ್ವಾತಂತ್ರ್ಯ ( Independence Day) ದೊರೆಯಿತು ಎಂದು ಎಲ್ಲರಿಗೂ ಗೊತ್ತೇ ಇದೆ. ಹೀಗಾಗಿ ದೇಶಾದ್ಯಂತ ಈ ದಿನ ಅತ್ಯಂತ ಸಂಭ್ರಮದಿಂದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಗುತ್ತದೆ. ಆದರೆ ದೇಶದ ಈ ಎರಡು ಜಿಲ್ಲೆಗಳಲ್ಲಿ ಆಗಸ್ಟ್ 15ರಂದು ತಿರಂಗಾ (National flag) ಮೇಲೇರುವುದಿಲ್ಲ. ಬದಲಾಗಿ ಎರಡು ದಿನ ಬಿಟ್ಟು ಅಂದರೆ ಆಗಸ್ಟ್ 18ರಂದು ಸ್ವಾತಂತ್ರ್ಯೋತ್ಸವವನ್ನು (Independence Day 2025) ಆಚರಿಸಲಾಗುತ್ತದೆ. ನಮ್ಮ ದೇಶದ ಒಳಗೆ ಈ ರೀತಿಯ ಬೇಧಭಾವ ಯಾಕೆ? ಆ ಜಿಲ್ಲೆಗಳು ಯಾವುದು, ಇದರ ಹಿನ್ನಲೆ ಏನು ಎನ್ನುವುದು ಗೊತ್ತಿದೆಯೇ?
ಬ್ರಿಟಿಷ್ ಆಳ್ವಿಕೆಯಿಂದ ಭಾರತ ಅಧಿಕೃತವಾಗಿ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಪಡೆಯಿತು ಎನ್ನುವುದನ್ನು ಘೋಷಿಸಲಾಗಿದೆ. ಅಂದಿನಿಂದ ಈ ದಿನವನ್ನು ದೇಶಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ ಪಶ್ಚಿಮ ಬಂಗಾಳದ ಈ ಎರಡು ಜಿಲ್ಲೆಗಳಲ್ಲಿ ಮುಖ್ಯವಾಗಿ ನಾಡಿಯಾ ಮತ್ತು ಮಾಲ್ಡಾದ ಕೆಲವು ಭಾಗಗಳಲ್ಲಿ ಆಗಸ್ಟ್ 18ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ.
ಇದು ಇಲ್ಲಿನ ಹೆಮ್ಮೆಯಲ್ಲ. ಬದಲಿಗೆ ಭಾರತದ ವಿಭಜನೆಯ ವೇಳೆ ನಡೆದ ಒಂದು ತಪ್ಪಿನ ಸ್ಮರಣೆಯಾಗಿದೆ. ಭಾರತದ ವಿಭಜನೆಯ ಸಮಯದಲ್ಲಿ ಗಡಿ ಆಯೋಗವು ನಕ್ಷೆಯ ದೋಷ ಮತ್ತು ಪ್ರಾದೇಶಿಕ ಗಡಿಗಳನ್ನು ಅಂತಿಮಗೊಳಿಸುವಲ್ಲಿ ಮಾಡಿದ ವಿಳಂಬದಿಂದಾಗಿ ನಾಡಿಯಾದ ಕೆಲವು ಪ್ರದೇಶಗಳನ್ನು ತಪ್ಪಾಗಿ ಪೂರ್ವ ಪಾಕಿಸ್ತಾನ ಅಂದರೆ ಈಗಿನ ಬಾಂಗ್ಲಾದೇಶದಲ್ಲಿ ಸೇರಿಸಿತ್ತು. ಬಳಿಕ ಪ್ರತಿಭಟನೆಗಳು ನಡೆದುದರಿಂದ ಒತ್ತಾಯಕ್ಕೆ ಮಣಿದು ಆಗಿನ ವೈಸ್ರಾಯ್ ಲಾರ್ಡ್ ಮೌಂಟ್ಬ್ಯಾಟನ್ ಆದೇಶವನ್ನು ತಿದ್ದುಪಡಿ ಮಾಡಿದರು. ಈ ಪ್ರದೇಶಗಳನ್ನು1947ರ ಆಗಸ್ಟ್ 17ರ ರಾತ್ರಿ ಅಧಿಕೃತವಾಗಿ ಭಾರತದ ಭಾಗವೆಂದು ಗುರುತಿಸಲಾಯಿತು. ಇದರ ಪರಿಣಾಮ ಆಗಸ್ಟ್ 18 ರಂದು ಇಲ್ಲಿ ಭಾರತದ ಧ್ವಜವನ್ನು ಹಾರಿಸಲಾಯಿತು. ಹೀಗಾಗಿ ಈ ದಿನವೇ ಅವರ ನಿಜವಾದ ಸ್ವಾತಂತ್ರ್ಯ ದಿನವಾಗಿ ಗುರುತಿಸಲ್ಪಟ್ಟಿತು.
ಈ ಸುದ್ದಿಯನ್ನೂ ಓದಿ: Shishir Shastry: ಬಿಗ್ ಬಾಸ್ ಶಿಶಿರ್ ಶಾಸ್ತ್ರೀ ಮದುವೆ ಬಗ್ಗೆ ಹೊರಬಿತ್ತು ದೊಡ್ಡ ಸುದ್ದಿ
ಅಂದು ಏನಾಗಿತ್ತು?
ಭಾರತ ವಿಭಜನೆಯ ವೇಳೆ ಭಾರತ ಮತ್ತು ಪಾಕಿಸ್ತಾನದ ನಡುವೆ ಗಡಿ ರೇಖೆಯನ್ನು ಎಳೆಯುವಾಗ ಹಿಂದೂ ಜನಸಂಖ್ಯೆಯನ್ನು ಹೊಂದಿರುವ ಪ್ರದೇಶಗಳು ಸೇರಿದಂತೆ ನಾಡಿಯಾ ಜಿಲ್ಲೆಯ ಕೆಲವು ಭಾಗಗಳನ್ನು ಪೂರ್ವ ಪಾಕಿಸ್ತಾನಕ್ಕೆ ಸೇರಿಸಿತ್ತು. ಇದು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿತ್ತು. ಇದನ್ನು ನಾಯಕರು ಸೇರಿದಂತೆ ನಾಡಿಯಾದ ಜನರು ತೀವ್ರವಾಗಿ ಪ್ರತಿಭಟಿಸಿದರು. ಈ ಸುದ್ದಿ ತಿಳಿದ ಬ್ರಿಟಿಷ್ ವೈಸ್ರಾಯ್ ಲಾರ್ಡ್ ಮೌಂಟ್ಬ್ಯಾಟನ್ ಅವರು ಕೂಡಲೇ ಗಡಿ ದೋಷವನ್ನು ಸರಿಪಡಿಸಲು ಸೂಚಿಸಿದರು. ಹೀಗಾಗಿ 1947ರ ಆಗಸ್ಟ್ 17ರಂದು ರಾತ್ರಿ ಮತ್ತೆ ಪರಿಷ್ಕ್ರತ ನಕ್ಷೆಯನ್ನು ಸರಿಪಡಿಸಿ ಘೋಷಿಸಲಾಯಿತು. ಗಡಿ ಪರಿಷ್ಕರಣೆಯ ಬಳಿಕ ನಾಡಿಯಾದ ಕೆಲವು ಭಾಗಗಳಲ್ಲಿ ಹಾರಿಸಲಾಗಿದ್ದ ಪಾಕಿಸ್ತಾನಿ ಧ್ವಜವನ್ನು ತೆಗೆದುಹಾಕಿ 1947ರ ಆಗಸ್ಟ್ 18ರಂದು ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ಅಂದಿನಿಂದ ಇಲ್ಲಿ ಆಗಸ್ಟ್ 18 ಅನ್ನು ಸ್ವಾತಂತ್ರ್ಯ ದಿನವಾಗಿ ಆಚರಿಸಲಾಗುತ್ತಿದೆ.