ಭಾರತ–ಬಾಂಗ್ಲಾದೇಶ ಸಂಬಂಧಕ್ಕೆ ಹೊಸ ತಿರುವು; ನವೆಂಬರ್ನಲ್ಲಿ ತಾರಿಕ್ ರೆಹಮಾನ್ ದೆಹಲಿ ಭೇಟಿ ಸಾಧ್ಯತೆ
ಭಾರತ ಮತ್ತು ಬಾಂಗ್ಲಾದೇಶ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮರುಸ್ಥಾಪಿಸುವ ಪ್ರಯತ್ನಗಳ ನಡುವೆ, ಬಾಂಗ್ಲಾದೇಶ ಪ್ರಧಾನಿ ತಾರಿಕ್ ರೆಹಮಾನ್ ಅವರು ನವೆಂಬರ್ ಅಥವಾ ಡಿಸೆಂಬರ್ 2026ರ ಆರಂಭದಲ್ಲಿ ನವದೆಹಲಿಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ. ಭೇಟಿಯ ಕಾರ್ಯಸೂಚಿ ಹಾಗೂ ದಿನಾಂಕ ಅಂತಿಮಗೊಳಿಸಲು ಉಭಯ ದೇಶಗಳ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ.
ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್ -
ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು (Bilateral Relations) ಮರುಸ್ಥಾಪಿಸುವ ಪ್ರಯತ್ನಗಳ ನಡುವೆ, ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್ (Tarique Rahman) ಅವರು ನವೆಂಬರ್ ಅಥವಾ ಡಿಸೆಂಬರ್ 2026ರ ಆರಂಭದಲ್ಲಿ ನವದೆಹಲಿಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ. ಉಭಯ ದೇಶಗಳ ಅಧಿಕಾರಿಗಳು ಈ ಭೇಟಿಯ ದಿನಾಂಕ ಹಾಗೂ ಕಾರ್ಯಸೂಚಿಯನ್ನು ಅಂತಿಮಗೊಳಿಸಲು ಮಾತುಕತೆಗಳನ್ನು ಪುನರಾರಂಭಿಸಿದ್ದಾರೆ ಎಂದು ವರದಿಯಾಗಿದೆ.
ತಾರಿಕ್ ರೆಹಮಾನ್ ಅವರು ಸೆಪ್ಟೆಂಬರ್ 21ರಿಂದ ನ್ಯೂಯಾರ್ಕ್ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 81ನೇ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ಹಲವು ಅಂತಾರಾಷ್ಟ್ರೀಯ ರಾಜತಾಂತ್ರಿಕ ಕಾರ್ಯಕ್ರಮಗಳು ಇರುವ ಹಿನ್ನೆಲೆಯಲ್ಲಿ, ನವೆಂಬರ್ ತಿಂಗಳು ಭಾರತ ಭೇಟಿಗೆ ಸೂಕ್ತ ಸಮಯವಾಗಬಹುದು ಎಂದು ಮೂಲಗಳು ತಿಳಿಸಿವೆ.
ಭಾರತ ಮತ್ತು ಬಾಂಗ್ಲಾದೇಶದ ಅಧಿಕಾರಿಗಳು ಢಾಕಾದಲ್ಲಿ ನಿರಂತರ ಸಭೆಗಳನ್ನು ನಡೆಸುತ್ತಿದ್ದು, ಸಾಧ್ಯವಿರುವ ಭೇಟಿಯ ಕಾರ್ಯಸೂಚಿಯನ್ನು ಸಿದ್ಧಪಡಿಸುತ್ತಿದ್ದಾರೆ. ದ್ವಿಪಕ್ಷೀಯ ವ್ಯಾಪಾರ , ಗಂಗಾ ನೀರು ಹಂಚಿಕೆ ಒಪ್ಪಂದ ಸೇರಿದಂತೆ ಹಲವು ವಿಚಾರಗಳು ಮಾತುಕತೆಯಲ್ಲಿ ಪ್ರಮುಖವಾಗುವ ಸಾಧ್ಯತೆಯಿದೆ.
Thank you, Prime Minister Tarique Rahman, for your warm wishes. I deeply appreciate your kind words.@trahmanbnp https://t.co/oGhLfUk2Ze
— Narendra Modi (@narendramodi) September 17, 2026
ಇತ್ತೀಚೆಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಾರಿಕ್ ರೆಹಮಾನ್ ಅವರಿಗೆ ಭಾರತದಿಂದ ಎರಡು ಪ್ರತ್ಯೇಕ ಆಹ್ವಾನಗಳು ನೀಡಲಾಗಿತ್ತು ಎಂದು ಸ್ಪಷ್ಟಪಡಿಸಿತ್ತು. ಒಂದು ಆಹ್ವಾನವು ದ್ವಿಪಕ್ಷೀಯ ಭೇಟಿಗಾಗಿ ಹಾಗೂ ಮತ್ತೊಂದು BIMSTEC ಅಧ್ಯಕ್ಷರಾಗಿ BRICS ಶೃಂಗಸಭೆಯ ಔಟ್ರೀಚ್ ಅಧಿವೇಶನದಲ್ಲಿ ಭಾಗವಹಿಸಲು ನೀಡಲಾಗಿತ್ತು.
ತಾರಿಕ್ ರೆಹಮಾನ್ ಅವರು ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಜನ್ಮದಿನದ ಶುಭಾಶಯ ಕೋರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಅವರ ಶುಭಾಶಯಗಳಿಗೆ ಧನ್ಯವಾದ ಸಲ್ಲಿಸಿದ್ದರು. ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಪರ್ಕ ಮುಂದುವರಿದಿರುವ ಸಂದರ್ಭದಲ್ಲೇ ಈ ಸಂದೇಶ ವಿನಿಮಯ ನಡೆದಿದೆ.
ಪಾಕಿಸ್ತಾನದ ಮಸೀದಿಯಲ್ಲಿ ಭೀಕರ ಸ್ಫೋಟ; 14 ಸಾವು, 50 ಕ್ಕೂ ಹೆಚ್ಚು ಮಂದಿಗೆ ಗಾಯ
ತಾರಿಕ್ ರೆಹಮಾನ್ ಅವರು ಫೆಬ್ರವರಿ 2026ರಲ್ಲಿ ಬಾಂಗ್ಲಾದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಅಧಿಕಾರಕ್ಕೆ ಬಂದ ನಂತರ ಭಾರತಕ್ಕೆ ಅವರ ಮೊದಲ ದ್ವಿಪಕ್ಷೀಯ ಭೇಟಿಯಾಗುವ ಸಾಧ್ಯತೆ ಇದೆ. ಆದರೆ ಭೇಟಿಯ ದಿನಾಂಕ ಇನ್ನೂ ಅಂತಿಮಗೊಂಡಿಲ್ಲ ಎಂದು ಲಭ್ಯವಿರುವ ವರದಿಗಳು ಸೂಚಿಸುತ್ತವೆ.