Operation Sindoor: ಭಾರತ-ಪಾಕ್ ನಡುವೆ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಿಚಾರ; ಶಶಿ ತರೂರ್ ಖಡಕ್ ಪ್ರತಿಕ್ರಿಯೆ
ಭಯೋತ್ಪಾದನೆ ವಿರುದ್ಧ ಭಾರತದ ಶೂನ್ಯ ಸಹಿಷ್ಣುತೆಯ ಸಂದೇಶವನ್ನು ಜಗತ್ತಿಗೆ ಸಾರಲು ಹೊರಟಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ನಿಯೋಗವು ವಾಷಿಂಗ್ಟನ್ ಡಿಸಿಯಲ್ಲಿದ್ದು,ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಹಲವು ವಿಚಾರಗಳನ್ನು ಪ್ರಸ್ತಾವಿಸಿದ್ದಾರೆ. ಭಾರತ- ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ನಡೆಸಿದ್ದೇನೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ತಿರಸ್ಕರಿಸಿರುವ ಅವರು ಭಾರತವು ತನ್ನ ಸಂಘರ್ಷದಲ್ಲಿ ಯಾರಿಂದಲೂ ಮಧ್ಯಸ್ಥಿಕೆಯನ್ನು ಕೋರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


ವಾಷಿಂಗ್ಟನ್: ಭಯೋತ್ಪಾದನೆ ವಿರುದ್ಧ ಭಾರತದ ಶೂನ್ಯ ಸಹಿಷ್ಣುತೆಯ ಸಂದೇಶವನ್ನು ಪ್ರಚಾರ ಮಾಡಲು ವಾಷಿಂಗ್ಟನ್ ಡಿಸಿಯಲ್ಲಿ (Washington DC) ಇರುವ ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor), ಭಾರತ-ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ನಡೆಸಿದ್ದೇನೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿಕೆಯನ್ನು ತಿರಸ್ಕರಿಸಿದ್ದಾರೆ. ʼʼಭಾರತವು ತನ್ನ ಸಂಘರ್ಷದಲ್ಲಿ ಯಾರಿಂದಲೂ ಮಧ್ಯಸ್ಥಿಕೆಯನ್ನು ಕೋರಿಲ್ಲ” ಎಂದು ತರೂರ್ ಗುರುವಾರ ಸ್ಪಷ್ಟಪಡಿಸಿದ್ದು, ಪಾಕಿಸ್ತಾನವು ಮೇ 10ರಂದು ಭಾರತದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯಿಂದ ತೀವ್ರ ಹಾನಿಯನ್ನು ಅನುಭವಿಸಿದ ಬಳಿಕ ಪಾಕಿಸ್ತಾನ ಸಂಘರ್ಷವನ್ನು ನಿಲ್ಲಿಸುವಂತೆ ಭಾರತಕ್ಕೆ ಮನವಿ ಮಾಡಿತು ಎಂದು ತರೂರ್ ತಿಳಿಸಿದ್ದಾರೆ.
ಅಮೆರಿಕ ಅಧ್ಯಕ್ಷರನ್ನು ನಾವು ಗೌರವಿಸುತ್ತೇವೆ. ಆದರೆ ನಾವು ಯಾರಿಂದಲೂ ಮಧ್ಯಸ್ಥಿಕೆ ಕೇಳಿಲ್ಲ ಎಂದು ರಾಹುಲ್ ಗಾಂಧಿಯ ‘ಶರಣಾಗತಿ’ ಟೀಕೆ ಮತ್ತು ಟ್ರಂಪ್ರ ಮಧ್ಯಸ್ಥಿಕೆ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ.
ಆಪರೇಷನ್ ಸಿಂದೂರ್ನ ಕೊನೆಯ ರಾತ್ರಿ, ಭಾರತವು ಪಾಕಿಸ್ತಾನದ 11 ಸೈನಿಕ ವಾಯುನೆಲೆಗಳ ಮೇಲೆ ಯಶಸ್ವಿಯಾಗಿ ದಾಳಿ ನಡೆಸಿತು. ಸಾರ್ವಜನಿಕ ಉಪಗ್ರಹ ಚಿತ್ರಗಳು ರನ್ವೇಗಳಲ್ಲಿನ ಗುಂಡಿಗಳು, ಕಾರ್ಯಾಚರಣಾ ಕೇಂದ್ರಗಳ ಧ್ವಂಸವನ್ನು ತೋರಿಸಿವೆ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಗೌಪ್ಯ ದಾಖಲೆಯೊಂದು, ದಕ್ಷಿಣದ ಹೈದರಾಬಾದ್ನಿಂದ ವಾಯವ್ಯದ ಪೇಶಾವರ್ವರೆಗೆ ವ್ಯಾಪಕ ಹಾನಿಯನ್ನು ಒಪ್ಪಿಕೊಂಡಿರುವುದನ್ನು ಉಲ್ಲೇಖಿಸಿ, ಪಾಕಿಸ್ತಾನಕ್ಕೆ ಭಾರತದ ದಾಳಿಗಳಿಂದ ಅಪಾರ ಹಾನಿಯಾಗಿದೆ. ಆದ್ದರಿಂದ ಅವರು ಯುದ್ಧ ವಿರಾಮಕ್ಕೆ ಮನವಿ ಮಾಡಿದರು. ನಾವು ಸಂತೋಷದಿಂದ ಒಪ್ಪಿದೆವು ಎಂದಿದ್ದಾರೆ.
ಇದನ್ನೂ ಓದಿ: Vaishnavi Gowda: ವೈಷ್ಣವಿ ಗೌಡ ಮನೆಯಲ್ಲಿ ಮದುವೆ ಸಂಭ್ರಮ: ಅದ್ಧೂರಿಯಾಗಿ ನಡೆಯಿತು ರಿಸೆಪ್ಷನ್
ಪಾಕ್ನ ಎಲ್ಲ ಭಾಷೆಗಳನ್ನು ನಾವು ಮಾತನಾಡಬಲ್ಲೆವು. ಆದರೆ ಭಯೋತ್ಪಾದನೆಯನ್ನು ಒಪ್ಪುವುದಿಲ್ಲ ಎಂದು ಹೇಳಿರುವ ತರೂರ್, ಪಾಕಿಸ್ತಾನ ತನ್ನ ಭೂಮಿಯಲ್ಲಿ ಭಯೋತ್ಪಾದಕರನ್ನು ನಿಯಂತ್ರಿಸದಿದ್ದರೆ ಭಾರತ ಮತ್ತೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
"We have enormous respect for the American Presidency and the American President. All we can say for ourselves is that we have never particularly wanted to ask anyone to mediate..," says Congress MP Shashi Tharoor#Trump #US #IndiaPakistanTensions
— WION (@WIONews) June 5, 2025
(Source: ANI) pic.twitter.com/VB8yd5XIGC
ಬ್ರೆಜಿಲ್ ಭೇಟಿಯ ಅನಂತರ ಅಮೆರಿಕಕ್ಕೆ ಆಗಮಿಸಿರುವ ಸರ್ವಪಕ್ಷೀಯ ಸಂಸದೀಯ ತಂಡವನ್ನು ಮುನ್ನಡೆಸುತ್ತಿರುವ ತರೂರ್, ಆಪರೇಷನ್ ಸಿಂದೂರ್ನ ಬಗ್ಗೆ ಅಮೆರಿಕದವರಿಗೆ ವಿವರಿಸುವ ಗುರಿಯನ್ನು ಹೊಂದಿದ್ದಾರೆ.
ಏಪ್ರಿಲ್ 22ರ ಪಹಲ್ಗಾಮ್ ದಾಳಿಯಲ್ಲಿ 27 ಜನ ಸಾವನ್ನಪ್ಪಿದ್ದಕ್ಕೆ ಪ್ರತಿಕ್ರಿಯೆಯಾಗಿ ಮೇ 7ರಂದು ಆರಂಭವಾದ ಈ ಕಾರ್ಯಾಚರಣೆಯಲ್ಲಿ, ಜೈಷ್-ಎ-ಮೊಹಮ್ಮದ್, ಲಷ್ಕರ್-ಎ-ತೊಯ್ಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ನ 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಲ್ಲಲಾಯಿತು. ಮೇ 10ರಂದು ಉಭಯ ದೇಶಗಳು ಕದನ ವಿರಾಮವನ್ನು ಒಪ್ಪಿಕೊಂಡವು.