ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಆಪರೇಷನ್ ಸಿಂದೂರ್‌ ವೇಳೆ ಪಾಕ್‌ ಐಎಸ್ಐಗೆ ರಹಸ್ಯ ಮಾಹಿತಿ ಸೋರಿಕೆ; ಪಂಜಾಬ್ ವ್ಯಕ್ತಿಯ ಬಂಧನ

ಆಪರೇಷನ್ ಸಿಂದೂರ್‌ ಕಾರ್ಯಾಚರಣೆ ವೇಳೆ ಸೇನಾ ಚಲನವಲನಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಕ್ಕಾಗಿ ಪಂಜಾಬ್ ಪೊಲೀಸರು ಮಂಗಳವಾರ ತರ್ನ್‌ ತರನ್‌ನ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿ ಪಾಕಿಸ್ತಾನದ ಐಎಸ್‌ಐ ಜತೆ ಸಂಪರ್ಕದಲ್ಲಿದ್ದ ಮತ್ತು ರಹಸ್ಯ ವಿವರಗಳನ್ನು ಹಂಚಿಕೊಳ್ಳುತ್ತಿದ್ದ ಎಂದು ಪಂಜಾಬ್ ಡಿಜಿಪಿ ಗೌರವ್ ಯಾದವ್ ಹೇಳಿದ್ದಾರೆ.

ಪಾಕ್‌ ಐಎಸ್ಐಗೆ ಆಪರೇಷನ್ ಸಿಂದೂರ್ ಮಾಹಿತಿ ನೀಡಿದ ಪಂಜಾಬ್ ವ್ಯಕ್ತಿ ಅರೆಸ್ಟ್

ಸಾಂಧರ್ಬಿಕ ಚಿತ್ರ.

Profile Sushmitha Jain Jun 3, 2025 8:22 PM

ಚಂಡೀಗಢ: ಆಪರೇಷನ್ ಸಿಂದೂರ್‌ (Operation Sindoor) ಸಮಯದಲ್ಲಿ ಸೇನಾ ಚಲನವಲನಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಕ್ಕಾಗಿ ಪಂಜಾಬ್ ಪೊಲೀಸರು (Punjab Police) ಮಂಗಳವಾರ ತರ್ನ್‌ ತರನ್‌ನ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿ ಪಾಕಿಸ್ತಾನದ (Pakistan) ಐಎಸ್‌ಐ ಜತೆ ನಿರಂತರ ಸಂಪರ್ಕದಲ್ಲಿದ್ದ ಮತ್ತು ರಹಸ್ಯ ವಿವರಗಳನ್ನು ಹಂಚಿಕೊಳ್ಳುತ್ತಿದ್ದ ಎಂದು ಪಂಜಾಬ್ ಡಿಜಿಪಿ ಗೌರವ್ ಯಾದವ್ ಹೇಳಿದ್ದಾರೆ.

“ಕೌಂಟರ್ ಇಂಟೆಲಿಜೆನ್ಸ್-ಪಂಜಾಬ್‌ನಿಂದ ದೊರೆತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ ತರ್ನ್‌ ತರನ್‌ನ ಮೊಹಲ್ಲಾ ರೋಡುಪುರ, ಗಾಲಿ ನಜರ್ ಸಿಂಗ್ ವಾಲಿಯ ನಿವಾಸಿ ಗಗನದೀಪ್ ಸಿಂಗ್‌ನನ್ನು ಬಂಧಿಸಲಾಗಿದೆ” ಎಂದು ಡಿಜಿಪಿ ಯಾದವ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಆರೋಪಿಯು ಪಾಕಿಸ್ತಾನದ ಐಎಸ್‌ಐ ಮತ್ತು ಗೋಪಾಲ್ ಸಿಂಗ್ ಚಾವ್ಲಾ ಜತೆ ಸಂಪರ್ಕದಲ್ಲಿದ್ದು, ಆಪರೇಷನ್ ಸಿಂದೂರ್‌ ಸಂದರ್ಭದ ಸೇನಾ ಚಲನವಲನದ ಸೂಕ್ಷ್ಮ ಮಾಹಿತಿಯನ್ನು ರವಾನಿಸುತ್ತಿದ್ದ” ಎಂದು ಅವರು ತಿಳಿಸಿದ್ದಾರೆ.



ಈ ಸುದ್ದಿಯನ್ನೂ ಓದಿ: ಪಾಕಿಸ್ತಾನಕ್ಕೆ ಯುದ್ಧ, ಜಲಾಂತರ್ಗಾಮಿ ನೌಕೆಗಳ ಮಾಹಿತಿ ಸೋರಿಕೆ; ಬೇಹುಗಾರಿಕೆ ಆರೋಪದ ಮೇಲೆ ಥಾಣೆ ಎಂಜಿನಿಯರ್ ಬಂಧನ

ಆರಂಭಿಕ ತನಿಖೆಯಿಂದ, ಗಗನದೀಪ್ ಸಿಂಗ್ ಕಳೆದ ಐದು ವರ್ಷಗಳಿಂದ ಖಾಲಿಸ್ತಾನಿ ಬೆಂಬಲಿಗ ಗೋಪಾಲ್ ಸಿಂಗ್ ಚಾವ್ಲಾ ಮೂಲಕ ಪಾಕಿಸ್ತಾನದ ಗೂಢಚಾರ ಸಂಸ್ಥೆಯ ಅಧಿಕಾರಿಗಳ (PIO) ಸಂಪರ್ಕಕ್ಕೆ ಬಂದಿದ್ದಾನೆ. ಈ PIOಗಳಿಂದ ಆತನಿಗೆ ಭಾರತೀಯ ಚಾನಲ್‌ಗಳ ಮೂಲಕ ಹಣ ಸಂದಾಯವಾಗಿತ್ತು. ಆತನು ಸೇನಾ ಸ್ಥಾಪನೆಗಳು ಮತ್ತು ಕಾರ್ಯತಂತ್ರದ ಸ್ಥಳಗಳ ಕುರಿತ ಗೌಪ್ಯ ಮಾಹಿತಿಯನ್ನು ಹಂಚಿಕೊಂಡಿದ್ದು, ರಾಷ್ಟ್ರೀಯ ಭದ್ರತೆಗೆ ಗಂಭೀರ ಬೆದರಿಕೆಯನ್ನುಂಟು ಮಾಡಿದ್ದಾನೆ ಎನ್ನಲಾಗಿದೆ.

ಶೋಧ ಕಾರ್ಯಾಚರಣೆಯ ವೇಳೆ ಆರೋಪಿಯಿಂದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದ್ದು, ಇದರಲ್ಲಿ PIOಗಳೊಂದಿಗೆ ಹಂಚಿಕೊಂಡ ಗೌಪ್ಯ ಮಾಹಿತಿ ಮತ್ತು 20ಕ್ಕೂ ಹೆಚ್ಚು ISI ಸಂಪರ್ಕಗಳ ವಿವರಗಳು ಪತ್ತೆಯಾಗಿವೆ. ಈಗ ಸಮಗ್ರ ಆರ್ಥಿಕ ಮತ್ತು ತಾಂತ್ರಿಕ ತನಿಖೆಯನ್ನು ಆರಂಭಿಸಲಾಗಿದ್ದು, ಗೂಢಚಾರಿಕೆ ಜಾಲದ ಸಂಪೂರ್ಣ ವ್ಯಾಪ್ತಿಯನ್ನು ಭೇದಿಸಲು ಪ್ರಯತ್ನಗಳು ನಡೆಯುತ್ತಿವೆ.

ಗಗನದೀಪ್ ಸಿಂಗ್‌ನ ಬಂಧನವು ಆಪರೇಷನ್ ಸಿಂದೂರ್‌ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತೆಗೆ ಎದುರಾದ ಬೆದರಿಕೆಯ ಗಂಭೀರತೆಯನ್ನು ಒತ್ತಿ ಹೇಳಿದೆ. ಪಾಕ್ ಐಎಸ್‌ಐ ಜತೆಗಿನ ಆತನ ಸಂಪರ್ಕ ಮತ್ತು ಗೌಪ್ಯ ಮಾಹಿತಿ ರವಾನೆಯು ಗಡಿಭಾಗದ ರಾಜ್ಯಗಳಲ್ಲಿ ಗೂಢಚಾರಿಕೆ ಜಾಲದ ವ್ಯಾಪಕತೆಯನ್ನು ಎತ್ತಿ ತೋರಿಸುತ್ತದೆ. ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದ್ದು, ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಲು ಕಠಿಣ ಕ್ರಮಗಳ ಅಗತ್ಯವನ್ನು ಒತ್ತಿ ಹೇಳಿದೆ