ʼʼಹಸುಗಳ ಬರ್ತ್ ಸರ್ಟಿಫಿಕೆಟ್ ತೋರಿಸಿʼʼ: ಪಶ್ಚಿಮ ಬಂಗಾಳ ಬಿಜೆಪಿ ಶಾಸಕಿಯಿಂದ ಹೊಸ ಬೇಡಿಕೆ; ಟಿಎಂಸಿ ಹೇಳಿದ್ದೇನು?
Rekha Patra: ಪಶ್ಚಿಮ ಬಂಗಾಳದಲಲಿ ಬಿಜೆಪಿ ಆಡಳಿತಕ್ಕೆ ಬರುತ್ತಿದ್ದಂತೆ ಗೋ ಅಕ್ರಮ ಸಾಗಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ದನಗಳ ಅಕ್ರಮ ಸಾಗಾಟವನ್ನು ತಡೆದ ಬಿಜೆಪಿ ಶಾಸಕಿ ಬರ್ತ್ ಸರ್ಟಿಫಿಕೆಟ್ ಹಾಜರುಪಡಿಸುವಂತೆ ಹೇಳಿದ್ದು ಸದ್ಯ ಭಾರಿ ಸದ್ದು ಮಾಡುತ್ತಿದೆ.
ಬಿಜೆಪಿ ಶಾಸಕಿ ರೇಖಾ ಪಾತ್ರ -
ಕೋಲ್ಕತ್ತಾ, ಮೇ 17: ಪಶ್ಚಿಮ ಬಂಗಾಳದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ (BJP) ಅಧಿಕಾರಕ್ಕೆ ಬಂದಿದ್ದು, 15 ವರ್ಷಗಳ ತೃಣಮೂಲ ಕಾಂಗ್ರೆಸ್ನ (TMC) ಆಡಳಿತ ಅಂತ್ಯಗೊಂಡಿದೆ. ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ತಪ್ಪುಗಳನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ. ಅದರ ಭಾಗವಾಗಿ ಗೋ ಅಕ್ರಮ ಸಾಗಾಟ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕಾರ್ಯಾಚರಣೆಯ ಭಾಗವಾಗಿ ಬಿಜೆಪಿ ಶಾಸಕಿಯೊಬ್ಬರು ದನಗಳ ಬರ್ತ್ ಸರ್ಟಿಫಿಕೇಟ್ ಕೇಳಿದ್ದು, ಈ ವಿಚಾರ ಸದ್ಯ ಭಾರಿ ಸದ್ದು ಮಾಡುತ್ತಿದೆ. ನೂತನವಾಗಿ ಆಯ್ಕೆಯಾಗಿರುವ ಶಾಸಕಿ ರೇಖಾ ಪಾತ್ರ (Rekha Patra) ಸದ್ಯ ತಮ್ಮ ಈ ಹೇಳಿಕೆಯ ಮೂಲಕ ದೇಶದ ಗಮನ ಸೆಳೆದಿದ್ದಾರೆ.
ಶನಿವಾರ (ಮೇ 16) ಅಕ್ರಮವಾಗಿ ದನಗಳನ್ನು ಸಾಗಿಸಲಾಗುತ್ತಿದೆ ಎನ್ನುವ ಸುದ್ದಿ ತಿಳಿದು ರೇಖಾ ಪಾತ್ರ ಸ್ಥಳಕ್ಕೆ ಆಗಮಿಸಿದರು. ವಾಹನವನ್ನು ತಡೆದ ರೇಖಾ ಪಾತ್ರ ಜಾನುವಾರುಗಳ ಬರ್ತ್ ಸರ್ಟಿಫಿಕೆಟ್ ಹಾಜರುಪಡಿಸುವಂತೆ ಆಗ್ರಹಿಸಿದರು. ʼʼಇದು ನಿಮ್ಮದೇ ದನ ಎನ್ನುವುದನ್ನು ಸಾಬೀತುಪಡಸಲು ಅವುಗಳ ಬರ್ತ್ ಸರ್ಟಿಫಿಕೆಟ್ ತೋರಿಸಿʼʼ ಎಂದು ರೇಖಾ ಚಾಲಕನ ಬಳಿ ಹೇಳಿದರು. ಸದ್ಯ ಅವರ ಈ ಹೇಳಿಕೆಯನ್ನು ಬಳಸಿ ಟಿಎಂಸಿ ಟ್ರೋಲ್ ಮಾಡುತ್ತಿದೆ.
ಪಶ್ಚಿಮ ಬಂಗಾಳದಲ್ಲಿ ಅಕ್ರಮ ಗೋ ಸಾಗಾಟ ತಡೆದ ಬಿಜೆಪಿ ಶಾಸಕಿ:
🚨 BIG! West Bengal BJP MLA Rekha Patra stops illegal cattle transport truck at Dulduli Ferry Ghat, Hingalganj.
— Megh Updates 🚨™ (@MeghUpdates) May 16, 2026
She personally intervened, got the cattle unloaded, provided water & fodder on spot, and alerted police & administration.pic.twitter.com/UQk9Qtflfp
ಹಿಂಗಲ್ಗಂಜ್ನ ಲೆಬುಖಾಲಿ ಪ್ರದೇಶದ ಮೂಲಕ ದನಗಳನ್ನು ಹೊತ್ತ ವಾಹನವು ಹೋಗುತ್ತಿದ್ದಾಗ ಹಿಂಗಲ್ಗಂಜ್ ಶಾಸಕಿ ರೇಖಾ ಪಾತ್ರಾ ಅದನ್ನು ತಡೆದರು. ನಂತರ ಅವರು ದನಗಳನ್ನು ಕೆಳಗಿಳಿಸಿ, ರಸ್ತೆಬದಿಯ ಮರದ ಕೆಳಗೆ ಕಟ್ಟಿಹಾಕಿ ಹುಲ್ಲು ಮತ್ತು ನೀರನ್ನು ವ್ಯವಸ್ಥೆ ಮಾಡಿದರು ಎಂದು ಮೂಲಗಳು ತಿಳಿಸಿವೆ. ಈ ವೇಳೆ ಅವರು ವಾಹನದಲ್ಲಿದ್ದವರನ್ನು ತರಾಟೆಗೆ ತೆಗೆದುಕೊಂಡರು.
ಬೆಂಗಳೂರಿನಿಂದ 272 ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರು
ದನಗಳ ಅಕ್ರಮ ಸಾಗಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಖಡಕ್ ಸೂಚನೆಯನ್ನು ಪ್ರಸ್ತಾವಿಸಿದ ರೇಖಾ ಪಾತ್ರಾ, ಹೊಸ ಮಾರ್ಗಸೂಚಿಯ ಪ್ರಕಾರ 14 ವರ್ಷಕ್ಕಿಂತ ಕೆಳಗಿನ ದನಗಳನ್ನು ಹತ್ಯೆ ಮಾಡುವಂತಿಲ್ಲ ಎಂದು ತಿಳಿಸಿದರು. ʼʼ14 ವರ್ಷ ತುಂಬದ ಜಾನುವಾರುಗಳ ಹತ್ಯೆ ಮಾಡದಂತೆ ಈಗಾಗಲೇ ನಮ್ಮ ಸರ್ಕಾರ ನಿರ್ದೇಶನ ನೀಡಿದೆ. ಯಾರಾದರೂ ದನಗಳನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಗೊತ್ತಾದರೆ ಅಂತಹವರನ್ನು ತಡೆದು ದನಗಳ ಬರ್ತ್ ಸರ್ಟಿಫಿಕೆಟ್ ಕೇಳಲಿದ್ದೇವೆ. ಬರ್ತ್ ಸರ್ಟಿಫಿಕೆಟ್ ಹಾಜರುಪಡಿಸಲು ವಿಫರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದುʼʼ ಎಂದು ಎಚ್ಚರಿಸಿದರು.
ಭಟ್ಕಳ ಅರಣ್ಯದಲ್ಲಿ ಜಾನುವಾರು ಮೂಳೆ ಪತ್ತೆ ಪ್ರಕರಣ; ಇಬ್ಬರು ಆರೋಪಿಗಳ ಬಂಧನ
ಟೀಕಿಸಿದ ಟಿಎಂಸಿ
ರೇಖಾ ಅವರ ಹೇಳಿಕೆಯನ್ನು ಟಿಎಂಸಿ ತೀವ್ರವಾಗಿ ಟೀಕಿಸಿದೆ. ಬಿಜೆಪಿ ಆಡಳಿತವಿರುವ ಬೇರೆ ಯಾವುದಾದರೂ ರಾಜ್ಯದಲ್ಲಿ ಹಸುವಿಗೆ ನೀಡಲಾಗುವ ಜನನ ಪ್ರಮಾಣ ಪತ್ರವನ್ನು ಶಾಸಕರು ತೋರಿಸಬೇಕು ಎಂದು ವ್ಯಂಗ್ಯವಾಡಿದೆ. "ಶಾಸಕರು ಬಿಜೆಪಿ ಆಡಳಿತವಿರುವ ಯಾವುದೇ ರಾಜ್ಯದಲ್ಲಿ ಹಸುವಿಗೆ ನೀಡಲಾದ ಅಂತಹ ಜನನ ಪ್ರಮಾಣಪತ್ರವನ್ನು ಒಮ್ಮೆ ತರಬೇಕೆಂದು ನಾವು ವಿನಂತಿಸುತ್ತೇವೆ. ಬಿಜೆಪಿ ಅಂತಹ ಜನನ ಪ್ರಮಾಣ ಪತ್ರ ಹಾಜರುಪಡಿಸಿದರೆ, ಆ ಸರ್ಟಿಫಿಕೆಟ್ ಯಾರು ಅಧಿಕೃತಗೊಳಿಸಿದ್ದಾರೆ ಎಂಬುದನ್ನು ನಾವು ಪರಿಶೀಲಿಸುತ್ತೇವೆ" ಎಂದು ಟಿಎಂಸಿ ಶಾಸಕ ಕುನಾಲ್ ಘೋಷ್ ಹೇಳಿದ್ದಾರೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.