ನಂದಿಗ್ರಾಮವನ್ನು ಬಿಟ್ಟುಕೊಟ್ಟ ಬಂಗಾಳ ಸಿಎಂ ಸುವೇಂದು ಅಧಿಕಾರಿ: ಭವಾನಿಪುರ ಶಾಸಕರಾಗಿ ಪ್ರಮಾಣ ವಚನ
Suvendu Adhikari gives up Nandigram: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಭವಾನಿಪುರ ವಿಧಾನಸಭಾ ಸ್ಥಾನವನ್ನು ಉಳಿಸಿಕೊಳ್ಳುವುದಾಗಿ ಮತ್ತು ನಂದಿಗ್ರಾಮ ಕ್ಷೇತ್ರದ ಪ್ರಾತಿನಿಧ್ಯವನ್ನು ತ್ಯಜಿಸುವುದಾಗಿ ಘೋಷಿಸಿದ್ದಾರೆ. ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ, ಭವಾನಿಪುರ ಮತ್ತು ನಂದಿಗ್ರಾಮದಲ್ಲಿ ಸ್ಪರ್ಧಿಸಿದ್ದ ಅಧಿಕಾರಿ, ಎರಡೂ ಸ್ಥಾನಗಳನ್ನು ಗೆದ್ದಿದ್ದರು.
ಬಂಗಾಳ ಸಿಎಂ ಸುವೇಂದು ಅಧಿಕಾರಿ (ಸಂಗ್ರಹ ಚಿತ್ರ) -
ಕೋಲ್ಕತ್ತಾ, ಮೇ 13: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ಭವಾನಿಪುರ (Bhabanipur) ವಿಧಾನಸಭಾ ಸ್ಥಾನವನ್ನು ಉಳಿಸಿಕೊಳ್ಳುವುದಾಗಿ ಮತ್ತು ನಂದಿಗ್ರಾಮ ಕ್ಷೇತ್ರದ ಪ್ರಾತಿನಿಧ್ಯವನ್ನು ತ್ಯಜಿಸುವುದಾಗಿ ಘೋಷಿಸಿದ್ದಾರೆ. ನಾನು ಎರಡು ವಿಧಾನಸಭಾ ಕ್ಷೇತ್ರಗಳಿಂದ ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವಿಲ್ಲ. ನಾನು ಭವಾನಿಪುರದ ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ನಾನು ನಂದಿಗ್ರಾಮ ವಿಧಾನಸಭಾ ಕ್ಷೇತ್ರವನ್ನು ತೊರೆಯಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಟಿವಿಕೆ ಮುಖ್ಯಸ್ಥ ಮತ್ತು ಮುಖ್ಯಮಂತ್ರಿ ವಿಜಯ್, ತಮಿಳುನಾಡಿನ ಪೆರಂಬೂರು ಮತ್ತು ತಿರುಚಿರಾಪಳ್ಳಿ ಪೂರ್ವ ಎರಡು ಸ್ಥಾನಗಳಿಂದ ಸ್ಪರ್ಧಿಸಿ ಗೆದ್ದರು. ಆದರೆ ನಿಯಮಗಳ ಪ್ರಕಾರ, ಅವರು ತಿರುಚಿ ಪೂರ್ವ (ತಿರುಚಿರಾಪಳ್ಳಿ) ಎಂಬ ಒಂದು ಸ್ಥಾನಕ್ಕೆ ರಾಜೀನಾಮೆ ನೀಡಿ ಪೆರಂಬೂರು ಅನ್ನು ಉಳಿಸಿಕೊಂಡರು.
ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ, ಭವಾನಿಪುರ ಮತ್ತು ನಂದಿಗ್ರಾಮದಲ್ಲಿ ಸ್ಪರ್ಧಿಸಿದ್ದ ಅಧಿಕಾರಿ, ಎರಡೂ ಸ್ಥಾನಗಳನ್ನು ಗೆದ್ದಿದ್ದರು. ಆದರೆ, ಅವರು ರಾಜ್ಯ ವಿಧಾನಸಭೆಯಲ್ಲಿ ಭವಾನಿಪುರದ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಉಪಚುನಾವಣೆಯಲ್ಲಿ ನಂದಿಗ್ರಾಮದಿಂದ ಬೇರೊಬ್ಬರು ಶಾಸಕರಾಗಿ ಆಯ್ಕೆಯಾಗುತ್ತಾರೆ ಎಂದು ಮುಖ್ಯಮಂತ್ರಿ ಇದೇ ವೇಳೆ ಹೇಳಿದರು.
ಇಲ್ಲಿದೆ ವಿಡಿಯೊ:
#WATCH | Kolkata: West Bengal CM Suvendu Adhikari says, "I cannot take oath as an MLA from two Assembly Constituencies. I have taken oath as the MLA from Bhabanipur. I will have to leave the Nandigram Assembly Constituency..." pic.twitter.com/RHkqAu3Ld1
— ANI (@ANI) May 13, 2026
ಸ್ಥಾನವನ್ನು ಬಿಟ್ಟುಕೊಡುವ ನಿರ್ಧಾರವನ್ನು ಘೋಷಿಸುವಾಗ, ನಂದಿಗ್ರಾಮದ ಜನರಿಗೆ ತಾನು ನೀಡಿದ ಎಲ್ಲಾ ಅಭಿವೃದ್ಧಿ ಸಂಬಂಧಿತ ಭರವಸೆಗಳನ್ನು ಈಡೇರಿಸುವುದಾಗಿ ಅಧಿಕಾರಿ ಭರವಸೆ ನೀಡಿದರು. ಮುಂದಿನ ಐದು ವರ್ಷಗಳ ಕಾಲ ಅಲ್ಲಿನ ಜನರಿಗೆ ನನ್ನ ಅನುಪಸ್ಥಿತಿಯನ್ನು ಅನುಭವಿಸಲು ನಾನು ಬಿಡುವುದಿಲ್ಲ ಎಂದು ಅವರು ಹೇಳಿದರು. ರಾಜ್ಯದ ಉಳಿದ ಭಾಗಗಳ ಜೊತೆಗೆ ನಂದಿಗ್ರಾಮದ ಜನರಿಗೆ ನಾನು ನೀಡಿದ ಎಲ್ಲಾ ಅಭಿವೃದ್ಧಿ ಭರವಸೆಗಳನ್ನು ಈಡೇರಿಸುತ್ತೇನೆ ಎಂದು ಅಧಿಕಾರಿ ತಿಳಿಸಿದರು.
ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ ಸಹಾಯಕನ ಕೊಲೆ ಪ್ರಕರಣ ಸಿಬಿಐಗೆ ಹಸ್ತಾಂತರ
ಭವಾನಿಪುರದಲ್ಲಿ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಸುವೇಂದು ಅಧಿಕಾರಿ 15,105 ಮತಗಳ ಅಂತರದಿಂದ ಸೋಲಿಸಿದರು. ನಂದಿಗ್ರಾಮದಲ್ಲೂ ಟಿಎಂಸಿಯ ಪಬಿತ್ರ ಕರ್ ವಿರುದ್ಧ 9,665 ಮತಗಳ ಅಂತರದಿಂದ ಗೆದ್ದರು.
ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಸುವೇಂದು ಅಧಿಕಾರಿ ಅವರಿಗೆ ಗಾರ್ಡ್ ಆಫ್ ಆನರ್ ಗೌರವದೊಂದಿಗೆ ಸ್ವಾಗತ ಕೋರಲಾಯಿತು. ಸದನವನ್ನು ಪ್ರವೇಶಿಸುವ ಮೊದಲು, ಸುವೇಂದು ಅಧಿಕಾರಿ ವಿಧಾನಸಭೆಯ ಮೆಟ್ಟಿಲುಗಳಿಗೆ ನಮಸ್ಕರಿಸಿ ಗೌರವಿಸಿದರು.
ಪಶ್ಚಿಮ ಬಂಗಾಳದಲ್ಲಿ 2026 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಸರ್ಕಾರ ರಚಿಸಿತು. ಇದು ಹಿಂದಿನದಕ್ಕಿಂತ ನಿರ್ಣಾಯಕ ಬದಲಾವಣೆಯನ್ನು ಸೂಚಿಸುತ್ತದೆ. 294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಪಕ್ಷವು 206 ಸ್ಥಾನಗಳನ್ನು ಗೆದ್ದು ಬೀಗಿತು.