Vishwavani Editorial : ಅಸಮಾಧಾನವೋ ಎಚ್ಚರಿಕೆಯೋ?
ಹಿಂದೆ ಗದ್ದುಗೆಯಲ್ಲಿದ್ದವರು ಆಡಳಿತ-ವಿರೋಧಿ ಅಲೆಗೆ ಗುರಿಯಾದ ಕಾರಣಕ್ಕೇ ನಮಗೀಗ ಅಧಿಕಾರ ಸಿಕ್ಕಿರುವುದು’ ಎಂಬ ವಾಸ್ತವವನ್ನು ಸಂಬಂಧಪಟ್ಟವರು ಒಂದೊಮ್ಮೆ ಅರ್ಥಮಾಡಿಕೊಂಡರೆ, ಎಲ್ಲ ತೆರನಾದ ಅಸಮಾಧಾನಗಳು ಮತ್ತು ಅಪಸ್ವರಗಳು ಶಮನವಾದಾವು. ಅಂಥದೊಂದು ಆರೋಗ್ಯಕರ ಪರಿಸ್ಥಿತಿ ರೂಪುಗೊಳ್ಳಲಿ ಎಂದಷ್ಟೇ ನಮ್ಮಂಥವರು ಹಾರೈಸಬಹುದು!


ಆಳುಗ ವ್ಯವಸ್ಥೆಯೊಂದಕ್ಕೆ ಸಂಬಂಧಿಸಿದಂತೆ ಎರಡು ತೆರನಾದ ವಿರೋಧಗಳು ಅಥವಾ ಅಪಸ್ವರ ಗಳನ್ನು ಕಾಣುವುದಿದೆ, ಕೇಳುವುದಿದೆ. ಮೊದಲನೆಯದು, ಆಡಳಿತಾರೂಢ ಪಕ್ಷಕ್ಕೆ ರಾಜಕೀಯ ಎದುರಾಳಿಯಾಗಿದ್ದು ವಿಪಕ್ಷ ಸ್ಥಾನದಲ್ಲಿ ಕೂತಿರುವ ಪಕ್ಷವು ಮಾಡುವ ಟೀಕೆ-ಟಿಪ್ಪಣಿ. ಇನ್ನು, ಸರಕಾರವೊಂದರ ಕಾರ್ಯವೈಖರಿ ಅಸಮರ್ಪಕವಾಗಿದ್ದಾಗ ಜನರಿಂದ ಹೊಮ್ಮುವ ಅಸಮಾಧಾನ ಎರಡನೆಯ ಬಗೆಯದು.
ಜನರ ಅಸಮಾಧಾನವು ತಾರಕಕ್ಕೇರಿ ‘ಆಡಳಿತ-ವಿರೋಧಿ ಅಲೆ’ಯಾಗಿ ರೂಪಾಂತರಗೊಂಡಾಗ, ಅಲ್ಲಿಯವರೆಗೂ ಗದ್ದುಗೆಯನ್ನು ಅಲಂಕರಿಸಿದ್ದ ರಾಜಕೀಯ ಪಕ್ಷವು ಮುಂದಿನ ಚುನಾವಣೆಯಲ್ಲಿ ಮಕಾಡೆ ಮಲಗಿರುವ ನಿರ್ದಶನಗಳೂ ಇವೆ. ಈ ಎರಡೂ ತೆರನಾದ ಟೀಕೆ-ಟಿಪ್ಪಣಿಗಳು, ಅಪಸ್ವರ ಗಳು ಅಥವಾ ಅಸಮಾಧಾನಗಳು ನಮ್ಮ ಸ್ಥಾಪಿತ ವ್ಯವಸ್ಥೆಯಲ್ಲಿ ಬಹುತೇಕ ಸ್ವೀಕಾರಾರ್ಹವೇ.
ಇದನ್ನೂ ಓದಿ: Vishwavani Editorial: ಗುಡುಗಿನಲ್ಲಿದೆ ಪರೋಕ್ಷ ಸಂದೇಶ
ಆದರೆ, ಸರಕಾರವೊಂದರ ಅಂಗಭಾಗವೇ ಆಗಿರುವವರು ಅಥವಾ ಸರಕಾರವನ್ನು ರಚಿಸಿರುವ ಪಕ್ಷಕ್ಕೆ ಸೇರಿದವರೇ ಎನಿಸಿಕೊಂಡವರು, ತಮ್ಮದೇ ಸರಕಾರವನ್ನು ಟೀಕಿಸುವ ಅಥವಾ ಇಕ್ಕಟ್ಟಿಗೆ ಸಿಲುಕಿಸುವ ಬೆಳವಣಿಗೆ ಇದೆಯಲ್ಲಾ, ಅದು ಪ್ರಾಯಶಃ ಆಯಾ ಪಕ್ಷಕ್ಕೆ ಎಚ್ಚರಿಕೆಯ ಗಂಟೆ ಆಗಲೇ ಬೇಕು. ಏಕೆಂದರೆ, ‘ಎಲ್ಲೋ ಏನೋ ತಪ್ಪಾಗಿದೆ, ಆಡಳಿತಾರೂಢ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ’ ಎಂಬುದನ್ನು ಅವು ಒತ್ತಿ ಹೇಳುತ್ತವೆ.
ಜತೆಗೆ, ಪಕ್ಷದ/ ಸರಕಾರದ ಒಡನಾಡಿಗಳನ್ನೇ ನಿಯಂತ್ರಿಸಲಾಗದವರು, ಮಿಕ್ಕವರನ್ನು ಹೇಗೆ ನಿರ್ವಹಿಸಿಯಾರು? ಎಂಬ ಪ್ರಶ್ನೆ ಹುಟ್ಟುವುದಕ್ಕೂ ಅದು ಹೇತುವಾಗುತ್ತದೆ. ‘ಹೀಗೆ ನಮ್ಮವರೇ ನಮ್ಮ ಆಡಳಿತ ವೈಖರಿಯ ಕುರಿತು ದನಿಯೆತ್ತುವುದು, ಅಸಮಾಧಾನ ವ್ಯಕ್ತಪಡಿಸುವುದು ನಮ್ಮ ಪಕ್ಷದಲ್ಲಿನ ಆಂತರಿಕ ಪ್ರಜಾಪ್ರಭುತ್ವದ ದ್ಯೋತಕ’ ಎಂದು ಸಂಬಂಧಪಟ್ಟವರು ಪರರಿಗೆ ಸಮಜಾ ಯಿಷಿ ನೀಡಬಹುದಾದರೂ, ಅದು ಸ್ವೀಕಾರಾರ್ಹ ಉತ್ತರವಾಗುವುದಿಲ್ಲ.
‘ಹಿಂದೆ ಗದ್ದುಗೆಯಲ್ಲಿದ್ದವರು ಆಡಳಿತ-ವಿರೋಧಿ ಅಲೆಗೆ ಗುರಿಯಾದ ಕಾರಣಕ್ಕೇ ನಮಗೀಗ ಅಧಿಕಾರ ಸಿಕ್ಕಿರುವುದು’ ಎಂಬ ವಾಸ್ತವವನ್ನು ಸಂಬಂಧಪಟ್ಟವರು ಒಂದೊಮ್ಮೆ ಅರ್ಥಮಾಡಿ ಕೊಂಡರೆ, ಎಲ್ಲ ತೆರನಾದ ಅಸಮಾಧಾನಗಳು ಮತ್ತು ಅಪಸ್ವರಗಳು ಶಮನವಾದಾವು. ಅಂಥ ದೊಂದು ಆರೋಗ್ಯಕರ ಪರಿಸ್ಥಿತಿ ರೂಪುಗೊಳ್ಳಲಿ ಎಂದಷ್ಟೇ ನಮ್ಮಂಥವರು ಹಾರೈಸಬಹುದು!