ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಫಾರಿ ಪ್ರಾಣಿಸಂಪತ್ತಿನ ಅರಿವಿನ ಕಣಜ

ಕಳೆದ ಕೆಲವು ತಿಂಗಳಿನಿಂದ ಬಂಡೀಪುರದಲ್ಲಿ ಸಫಾರಿಯನ್ನು ಬಂದ್ ಮಾಡಲಾಗಿತ್ತು. ಅದಕ್ಕೆ ಕೊಟ್ಟ ಕಾರಣ ಆಸುಪಾಸಿನ ಪ್ರದೇಶಗಳಲ್ಲಿ ಹುಲಿ ದಾಳಿಯಾಗುತ್ತಿದೆ. ಸಾಕು ಪ್ರಾಣಿಗಳು, ಮನುಷ್ಯರು ಸಾಯುತ್ತಿದ್ದಾರೆ. ಇದನ್ನು ತಡೆಯಲು ಈ ಕ್ರಮ ಎಂದು ಅರಣ್ಯ ಸಚಿವಾಲಯ ಘೋಷಿಸಿತ್ತು.

ಸಫಾರಿ ಪ್ರಾಣಿಸಂಪತ್ತಿನ ಅರಿವಿನ ಕಣಜ

-

Ashok Nayak
Ashok Nayak Feb 19, 2026 3:30 PM

ವಿಶ್ವವಾಣಿ ಪತ್ರಿಕೆಯ ಸತತ ಹೋರಾಟದಿಂದಾಗಿ ಬಂಡೀಪುರ, ನಾಗರಹೊಳೆಯಲ್ಲಿ ಮತ್ತೆ ಸಫಾರಿ ಆರಂಭವಾಗುವುದು ಖಚಿತವಾಗಿದೆ. ಮುಂದಿನ ವಿಚಾರ ಹೇಳುವುದಕ್ಕಿಂತ ಮುನ್ನ ಸಫಾರಿ ಅಂದರೇನೆಂದು ಸಂಕ್ಷಿಪ್ತವಾಗಿ ತಿಳಿದುಕೊಳ್ಳಬೇಕು. ಬೇಕಾದಷ್ಟು ರೀತಿಯ ಪ್ರಾಣಿ ಗಳಿಂದ ತುಂಬಿರುವ ಕಾಡಿನಲ್ಲಿ ವ್ಯಕ್ತಿಗಳು ಅಧ್ಯಯನ ರೀತಿಯಲ್ಲಿ ಸಂಚರಿಸುವುದು, ಗಮನಿಸುವುದು, ಚಿತ್ರಗಳನ್ನು ತೆಗೆದುಕೊಳ್ಳುವುದು ಇವನ್ನೆಲ್ಲ ಒಟ್ಟಾಗಿ ಸಫಾರಿ ಎನ್ನಲಾಗುತ್ತದೆ.

ಬಂಡೀಪುರ, ನಾಗರಹೊಳೆಯಲ್ಲಿ ಅಂತಹದ್ದೊಂದು ಅಮೂಲ್ಯ ಅವಕಾಶ ಸಿಕ್ಕಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಬರುವ ಬಂಡೀಪುರ, ಮೈಸೂರು ಜಿಲ್ಲೆಯಲ್ಲಿ ಬರುವ ನಾಗರಹೊಳೆಯಲ್ಲಿ ಈ ರೀತಿಯ ಪರಂಪರೆ ಮೊದಲಿನಿಂದಲೂ ನಡೆದುಕೊಂಡು ಬಂದಿದೆ.

ಇದನ್ನೂ ಓದಿ: Vishwavani Editorial: ಎಐ ಉದ್ಯೋಗ ನಷ್ಟಕ್ಕೆ ಪರಿಹಾರ?

ಕಳೆದ ಕೆಲವು ತಿಂಗಳಿನಿಂದ ಬಂಡೀಪುರದಲ್ಲಿ ಸಫಾರಿಯನ್ನು ಬಂದ್ ಮಾಡಲಾಗಿತ್ತು. ಅದಕ್ಕೆ ಕೊಟ್ಟ ಕಾರಣ ಆಸುಪಾಸಿನ ಪ್ರದೇಶಗಳಲ್ಲಿ ಹುಲಿ ದಾಳಿಯಾಗುತ್ತಿದೆ. ಸಾಕು ಪ್ರಾಣಿ ಗಳು, ಮನುಷ್ಯರು ಸಾಯುತ್ತಿದ್ದಾರೆ. ಇದನ್ನು ತಡೆಯಲು ಈ ಕ್ರಮ ಎಂದು ಅರಣ್ಯ ಸಚಿವಾಲಯ ಘೋಷಿಸಿತ್ತು.

ಹುಲಿ ದಾಳಿ ಯಾಕೆ ಆಗುತ್ತಿದೆ, ಜನ ಯಾಕೆ ಸಾಯುತ್ತಿದ್ದಾರೆ ಎಂದು ಸುತ್ತಮುತ್ತಲಿನ ಜನರಿಗೆಲ್ಲ ಗೊತ್ತು. ಅದಕ್ಕೂ ಸಫಾರಿಗೂ ದೊಡ್ಡಮಟ್ಟದ ಸಂಬಂಧವಿಲ್ಲ. ಸಫಾರಿ ನಿರ್ಬಂಧದಲ್ಲಿ ಅದಕ್ಕೂ ಮೀರಿದ ರಾಜಕೀಯ ಲೆಕ್ಕಾಚಾರಗಳಿದ್ದವು ಎಂದೂ ವರದಿಗಳು ಬಂದಿವೆ.

ಹಿನ್ನೆಲೆಯೇನು ಬೇಕಾದರೂ ಆಗಿರಲಿ. ಪ್ರಾಣಿಸಂಪತ್ತಿನ ಬಗ್ಗೆ ಒಂದು ಅರಿವು ಜನರಿಗೆ ಇರಬೇಕು. ಜಗತ್ತಿನಲ್ಲಿ ಮನುಷ್ಯ ಮಾತ್ರ ಬದುಕಬೇಕು, ಇತರೆ ಜೀವರಾಶಿಗಳು ಮನುಷ್ಯನ ಅಡಿಯಾಳುಗಳು ಎಂಬ ಅಹಂಕಾರ ನಮ್ಮ ಪ್ರಜ್ಞಾಸ್ತರದಲ್ಲಿ ಸೇರಿಹೋಗಿದೆ.

ಆದರೆ ಮನುಷ್ಯನನ್ನು ಹೊರತುಪಡಿಸಿ ಇತರೆ ಪ್ರಾಣಿಗಳ ಅಸ್ತಿತ್ವದಿಂದಾಗಿಯೇ ಈ ಬ್ರಹ್ಮಾಂಡದಲ್ಲಿ ದೊಡ್ಡ ಪರಿಣಾಮವಿದೆ ಎನ್ನುವುದನ್ನು ಪದೇಪದೇ ವಿಜ್ಞಾನಿಗಳು ಸಾಬೀತು ಮಾಡುತ್ತಲೇ ಇದ್ದಾರೆ.

ಇತರೆ ಜೀವರಾಶಿಗಳು ಅಳಿಯುತ್ತ ಹೋದರೆ ನಮಗೆ ಗೊತ್ತಿಲ್ಲದಂತೆ ಪ್ರಕೃತಿಯಲ್ಲಿ ಋಣಾತ್ಮಕ ಪರಿಣಾಮವಾಗುತ್ತಲೇ ಹೋಗುತ್ತದೆ. ಅದು ಪರೋಕ್ಷವಾಗಿ ಮನುಷ್ಯನನ್ನೂ ತಟ್ಟುತ್ತದೆ. ಅಂತಹ ಪ್ರಾಣಿಜೀವನದ ಅರಿವು ಮೂಡಿಸಲು, ಅಲ್ಲಿನ ಬದುಕಿನ ವೈವಿಧ್ಯ, ಚೆಲುವನ್ನು ತಿಳಿದುಕೊಳ್ಳಲು ಸಫಾರಿಯ ಅಗತ್ಯವಿದೆ. ರಾಜ್ಯದ ಎಲ್ಲ ಕಡೆ ಇವನ್ನೆಲ್ಲ ಮಾಡುವ ಸ್ಥಿತಿಯಿಲ್ಲ. ಆದರೆ ಇರುವುದನ್ನಾದರೂ ಚೆನ್ನಾಗಿ ಬಳಸಿಕೊಳ್ಳಬೇಕಿದೆ. ಈ ವ್ಯವಸ್ಥೆಯನ್ನು ಉಳಿಸಿಕೊಂಡು ಹೋಗಬೇಕಿದೆ.