ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಇದು ಹತಾಶೆಯ ಪರಮಾವಧಿ

ತೀರಾ ಇತ್ತೀಚೆಗೆ, ‘ರಷ್ಯಾ ಮತ್ತು ಭಾರತದ ಆರ್ಥಿಕತೆಗಳು ಕುಸಿಯಲಿವೆ’ ಎಂಬ ಭವಿಷ್ಯ ನುಡಿದು ಭಾರತ ವನ್ನು ದಿಕ್ಕೆಡಿಸಲು ಯತ್ನಿಸಿದ್ದೂ ಟ್ರಂಪ್ ಮಹಾಶಯರೇ; ಆದರೆ ಭಾರತದ ಆರ್ಥಿಕತೆಯು ಏರುಗತಿ ಯಲ್ಲಿರುವುದನ್ನು ಬಲ್ಲ ವಿಷಯತಜ್ಞರು, ಟ್ರಂಪ್‌ರ ಈ ಭವಿಷ್ಯವನ್ನು ಕೇಳಿ ನಕ್ಕರಷ್ಟೇ. ಇದು ಟ್ರಂಪ್‌ ರಿಗಾದ ಎರಡನೇ ಮುಖಭಂಗ.

Vishwavani Editorial: ಇದು ಹತಾಶೆಯ ಪರಮಾವಧಿ

Ashok Nayak Ashok Nayak Aug 4, 2025 8:09 AM

ಭಾರತವನ್ನು ತಮ್ಮ ಕಣ್ಣ ಇಶಾರೆಗೆ ತಕ್ಕಂತೆ ಕುಣಿಸಿ ಬಿಡಬಹುದು ಎಂಬ ಭ್ರಮೆಯಲ್ಲಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮತ್ತೆ ಮತ್ತೆ ಮುಖಭಂಗವಾಗುತ್ತಿದೆ. ಪಹಲ್ಗಾಮ್ ಹತ್ಯಾಕಾಂಡಕ್ಕೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ವಿರುದ್ಧ ಶುರು ಹಚ್ಚಿಕೊಂಡಿದ್ದ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯು ನಿಲ್ಲುವಂತೆ ಮಾಡಿದ್ದು ತಾವೇ ಎಂದು ಡಾಣಾಡಂಗುರ ಬಾರಿಸಿಕೊಂಡು ಬಂದಿದ್ದರು ಟ್ರಂಪ್; ಆದರೆ ಈ ಸಂಘರ್ಷವು ಸ್ಥಗಿತಗೊಳ್ಳುವಲ್ಲಿ ಯಾವುದೇ ಅಂತಾರಾಷ್ಟ್ರೀಯ ನಾಯಕನ ಪಾತ್ರವಿಲ್ಲ ಎಂದು ಭಾರತ ಸ್ಪಷ್ಟೀಕರಣ ನೀಡುತ್ತಿದ್ದಂತೆ, ‘ಭಾರತ ನನ್ನ ನಿರೀಕ್ಷೆಗೆ ತಕ್ಕಂತೆಯೇ ಬಾಗುತ್ತದೆ, ನಡೆದುಕೊಳ್ಳುತ್ತದೆ’ ಎಂದು ಭಾವಿಸಿದ್ದ ಟ್ರಂಪ್‌ಗೆ ಮೊದಲ ಬಾರಿಗೆ ಮುಖಭಂಗವಾಯಿತು.

ತೀರಾ ಇತ್ತೀಚೆಗೆ, ‘ರಷ್ಯಾ ಮತ್ತು ಭಾರತದ ಆರ್ಥಿಕತೆಗಳು ಕುಸಿಯಲಿವೆ’ ಎಂಬ ಭವಿಷ್ಯ ನುಡಿದು ಭಾರತವನ್ನು ದಿಕ್ಕೆಡಿಸಲು ಯತ್ನಿಸಿದ್ದೂ ಟ್ರಂಪ್ ಮಹಾಶಯರೇ; ಆದರೆ ಭಾರತದ ಆರ್ಥಿಕತೆಯು ಏರುಗತಿಯಲ್ಲಿರುವುದನ್ನು ಬಲ್ಲ ವಿಷಯತಜ್ಞರು, ಟ್ರಂಪ್‌ರ ಈ ಭವಿಷ್ಯವನ್ನು ಕೇಳಿ ನಕ್ಕರಷ್ಟೇ. ಇದು ಟ್ರಂಪ್‌ರಿಗಾದ ಎರಡನೇ ಮುಖಭಂಗ.

ಇದನ್ನೂ ಓದಿ: Vishwavani Editorial: ಇದು ತುಘಲಕ್ ದರ್ಬಾರು

ಇಷ್ಟಾಗಿದ್ದು ಸಾಲದೆಂಬಂತೆ, ‘ಭಾರತ ಇನ್ನು ಮುಂದೆ ರಷ್ಯಾದಿಂದ ಕಚ್ಚಾತೈಲವನ್ನು ಖರೀದಿಸುವು ದಿಲ್ಲ ಎಂಬುದು ನನಗೆ ತಿಳಿದುಬಂದಿದೆ’ ಎಂಬ ಮತ್ತೊಂದು ಹಸಿಸುಳ್ಳನ್ನು ಉದುರಿಸಿದ್ದಾರೆ ಟ್ರಂಪ್!

ಈ ಹೇಳಿಕೆಯನ್ನು ಭಾರತ ಸರಾಸಗಟಾಗಿ ತಳ್ಳಿ ಹಾಕಿದೆ ಎನ್ನಿ. ‘ಅಮೆರಿಕವು ಭಾರತದ ಆಪ್ತಮಿತ್ರ’ ಎಂದು ಕಾಗೆ ಹಾರಿಸುತ್ತಿದ್ದ ಟ್ರಂಪ್ ಈಗ, ಭಾರತದಿಂದ ಅಮೆರಿಕಕ್ಕೆ ಆಮದಾಗುವ ಸರಕು-ಸಾಮಗ್ರಿಗಳ ಮೇಲೆ ಆಗಸ್ಟ್ 1ರಿಂದ ಅನ್ವಯವಾಗುವಂತೆ ಶೇ.25ರಷ್ಟು ಸುಂಕವನ್ನು ಹೇರಿದ್ದಾರೆ.

ಕಳೆದ ಕೆಲ ದಿನಗಳ ಬೆಳವಣಿಗೆಗಳನ್ನು ಗಮನಿಸಿದರೆ, ಟ್ರಂಪ್‌ರ ಹತಾಶೆಯು ಪರಮಾವಧಿಯನ್ನು ಮುಟ್ಟಿದೆ ಎಂಬುದು ಯಾರಿಗಾದರೂ ಅರ್ಥವಾಗುತ್ತದೆ. ವಿವಿಧ ರಂಗಗಳಲ್ಲಿ ಭಾರತವು ಸಾಧಿಸು ತ್ತಿರುವ ಅನುಪಮ ಬೆಳವಣಿಗೆಯನ್ನು ಸಹಿಸಲಾಗದ ಕಾರಣಕ್ಕೆ ಮತ್ತು ‘ವಿಶ್ವದ ದೊಡ್ಡಣ್ಣ’ ಎಂಬ ಹಣೆಪಟ್ಟಿಯು ಅಮೆರಿಕದ ಶಿರದಿಂದ ಕಳಚಿಕೊಳ್ಳುವುದೇನೋ ಎಂಬ ಭಯದ ಕಾರಣಕ್ಕೆ ಹುಟ್ಟಿಕೊಂಡಿರುವ ಹತಾಶೆಯಿದು. ಅಮೆರಿಕಕ್ಕೆ ಹತಾಶೆಯಾಗುತ್ತದೆ ಅಂತ ಭಾರತವು ಅಭಿವೃದ್ಧಿ ಪಥದಿಂದ ಹಿಂದಡಿ ಇಡಲಾದೀತೆ?!!