ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs ZIM: ಜಿಂಬಾಬ್ವೆ ವಿರುದ್ಧ ಭರ್ಜರಿಯಾಗಿ ಗೆದ್ದ ಭಾರತ ತಂಡದ ಸೆಮಿಫೈನಲ್ಸ್‌ ಆಸೆ ಜೀವಂತ!

IND vs ZIM Match Highlights: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿದ ಭಾರತ ತಂಡ, ಜಿಂಬಾಬ್ವೆ ವಿರುದ್ಧದ ತನ್ನ ಎರಡನೇ ಸೂಪರ್‌-8ರ ಪಂದ್ಯದಲ್ಲಿ 71 ರನ್‌ಗಳ ಗೆಲುವು ಪಡೆಯಿತು. ಆ ಮೂಲಕ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಟೀಮ್‌ ಇಂಡಿಯಾದ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಆಸೆ ಜೀವಂತವಾಗಿದೆ.

ಜಿಂಬಾಬ್ವೆ ವಿರುದ್ಧ ಗೆದ್ದ ಭಾರತದ ಸೆಮೀಸ್‌ ಆಸೆ ಜೀವಂತ!

ಜಿಂಬಾಬ್ವೆ ವಿರುದ್ಧ ಭಾರತ ತಂಡಕ್ಕೆ ಭರ್ಜರಿ ಜಯ. -

Profile
Ramesh Kote Feb 26, 2026 10:42 PM

ಚೆನ್ನೈ: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿದ ಭಾರತ ತಂಡ, 2026ರ ಐಸಿಸಿ ಟಿ20 ವಿಶ್ವಕಪ್‌ (T20 World Cup 2026) ಟೂರ್ನಿಯ ಸೂಪರ್-‌8ರ ಪಂದ್ಯದಲ್ಲಿ (IND vs ZIM) ಜಿಂಬಾಬ್ವೆ ವಿರುದ್ಧ 72 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಈ ಗೆಲುವಿನ ಮೂಲಕ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಟೀಮ್‌ ಇಂಡಿಯಾ (India) ಚುಟುಕು ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್ಸ್‌ ಹಾದಿಯನ್ನು ಜೀವಂತವಾಗಿರಿಸಿಕೊಂಡಿದೆ. ಇನ್ನು ಸೋಲುವ ಮೂಲಕ ಸಿಕಂದರ್‌ ರಾಜಾ ನಾಯಕತ್ವದ ಜಿಂಬಾಬ್ವೆ ತಂಡ ಸೆಮೀಸ್‌ ರೇಸ್‌ನಿಂದ ಅಧಿಕೃತವಾಗಿ ಹೊರ ಬಿದ್ದರೆ, 4 ಅಂಕಗಳ ಮೂಲಕ ಅಗ್ರ ಸ್ಥಾನದಲ್ಲಿರುವ ದಕ್ಷಿಣ ಅಫ್ರಿಕಾ ಅಂತಿಮ ನಾಲ್ಕರ ಘಟ್ಟಕ್ಕೆ ಅಧಿಕೃತವಾಗಿ ಪ್ರವೇಶ ಮಾಡಿತು.

ಗುರುವಾರ ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ ತಂಡ ನೀಡಿದ್ದ 257 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಜಿಂಬಾಬ್ವೆ ತಂಡ, ಬ್ರಿಯಾನ್‌ ಬೆನೆಟ್‌ (97 ರನ್‌) ಅವರ ಏಕಾಂಗಿ ಹೋರಾಟದ ಹೊರತಾಗಿಯೂ 20 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 184 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಸೋಲು ಒಪ್ಪಿಕೊಂಡಿತು. ಭಾರತ ತಂಡದ ಪರ ಅರ್ಷದೀಪ್‌ ಸಿಂಗ್‌ ಮೂರು ವಿಕೆಟ್‌ ಪಡೆದು ಯಶಸ್ವಿ ಬೌಲರ್‌ ಎನಿಸಿಕೊಂಡರು.

IND vs ZIM: ಜಿಂಬಾಬ್ವೆ ಎದುರು 256 ರನ್‌ ಸಿಡಿಸಿ ವಿಶ್ವದಾಖಲೆ ಬರೆದ ಭಾರತ ತಂಡ!

ಬ್ರಿಯಾನ್‌ ಬೆನೆಟ್‌ ಏಕಾಂಗಿ ಹೋರಾಟ ವ್ಯರ್ಥ

ಬೃಹತ್‌ ಮೊತ್ತದ ಗುರಿಯನ್ನು ಹಿಂಬಾಲಿಸಿದ ಜಿಂಬಾಬ್ವೆ ತಂಡದ ಪರ ಆರಂಭಿಕ ಬ್ಯಾಟ್ಸ್‌ಮನ್‌ ಬ್ರಿಯಾನ್‌ ಬೆನೆಟ್‌ ಕೊನೆಯ ಎಸೆತದವರೆಗೂ ಏಕಾಂಗಿ ಹೋರಾಟ ನಡೆಸಿದರು. ಅವರು ಆಡಿದ 59 ಎಸೆತಗಳಲ್ಲಿ 6 ಸಿಕ್ಸರ್‌ ಹಾಗೂ 8 ಬೌಂಡರಿಗಳೊಂದಿಗೆ ಅಜೇಯ 97 ರನ್‌ಗಳನ್ನು ಸಿಡಿಸಿದರು. ತಾಡುವಾನಶೆ ಮಾರುಮಣಿ (20) ಹಾಗೂ ನಾಯಕ ಸಿಕಂದರ್‌ ರಾಜಾ (31 ರನ್‌) ಅವರು ಬೆನೆಟ್‌ಗೆ ಸ್ವಲ್ಪ ಹೊತ್ತು ಸಾಥ್‌ ನೀಡಿದ್ದು ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಅಲ್ಲದೆ ಫೀಲ್ಡಿಂಗ್‌ನಲ್ಲಿ ಕೆಲ ಕ್ಯಾಚ್‌ಗಳನ್ನು ಕೈ ಚೆಲ್ಲಿ ಭಾರತಕ್ಕೆ ಹೆಚ್ಚಿನ ರನ್‌ಗಳನ್ನು ಬಿಟ್ಟುಕೊಟ್ಟಿದ್ದು ಕೂಡ ಜಿಂಬಾಬ್ವೆಗೆ ಭಾರಿ ಹಿನ್ನಡೆಯನ್ನು ತಂದುಕೊಟ್ಟಿತು. ಒಂದು ವೇಳೆ 200ಕ್ಕೂ ಆಸುಪಾಸಿನ ಗುರಿಯನ್ನು ಪಡೆದಿದ್ದರೆ, ಫಲಿತಾಂಶ ವಿಭಿನ್ನವಾಗಿರುತ್ತಿತ್ತು.



256 ರನ್‌ ಕಲೆ ಹಾಕಿದ್ದ ಟೀಮ್‌ ಇಂಡಿಯಾ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ತಂಡ ಅಭಿಷೇಕ್‌ ಶರ್ಮಾ (55 ರನ್‌), ಹಾರ್ದಿಕ್‌ ಪಾಂಡ್ಯ (50 ರನ್‌) ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 256 ರನ್‌ಗಳನ್ನು ಕಲೆ ಹಾಕಿತ್ತು. ಭಾರತದ ಪರ ಸೂರ್ಯಕುಮಾರ್‌ ಯಾದವ್‌ 33 ರನ್‌ ಹಾಗೂ ತಿಲಕ್‌ ವರ್ಮಾ ಸ್ಪೋಟಕ 44 ರನ್‌ಗಳನ್ನು ಬಾರಿಸಿದ್ದರು.



ತಮ್ಮ ಸ್ಪೋಟಕ ಫಾರ್ಮ್‌ಗೆ ಮರಳಿದ ಅಭಿಷೇಕ್‌ ಶರ್ಮಾ

ಅಭಿಷೇಕ್‌ ಶರ್ಮಾ ಜೊತೆಗೆ ಇನಿಂಗ್ಸ್‌ ಆರಂಭಿಸಿದ ಸಂಜು ಸ್ಯಾಮ್ಸನ್‌ 15 ಎಸೆತಗಳಲ್ಲಿ 24 ರನ್‌ ಸಿಡಿಸಿ ಭಾರತ ತಂಡಕ್ಕೆ ಉತ್ತಮ ಆರಂಭ ನೀಡಿ ವಿಕೆಟ್‌ ಒಪ್ಪಿಸಿದರು. ಹ್ಯಾಟ್ರಿಕ್‌ ಡಕ್‌ಔಟ್‌ ಆಗಿ ವಿಶ್ವಾಸ ಕಳೆದುಕೊಂಡಿದ್ದ ಅಭಿಷೇಕ್‌ ಶರ್ಮಾ, ಸಂಜು ಔಟ್‌ ಆದ ಬಳಿಕ ತಮ್ಮ ನೈಜ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಅವರು ಆಡಿದ 30 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ ಅಷ್ಟೇ ಬೌಂಡರಿಗಳೊಂದಿಗೆ 55 ರನ್‌ ಗಳಿಸಿ ಭಾರತಕ್ಕೆ ಸ್ಪೋಟಕ ಆರಂಭ ನೀಡಿದರು ಹಾಗೂ ಇಶಾನ್‌ ಕಿಶನ್‌ (38 ರನ್‌) ಜೊತೆಗೆ ಎರಡನೇ ವಿಕೆಟ್‌ಗೆ 72 ರನ್‌ ಜೊತೆಯಾಟವನ್ನು ಆಡಿದರು.



84 ರನ್‌ಗಳ ಜೊತೆಯಾಟವನ್ನು ಆಡಿದ ತಿಲಕ್‌-ಹಾರ್ದಿಕ್‌

ನಾಯಕ ಸೂರ್ಯಕುಮಾರ್‌ ಯಾದವ್‌ 13 ಎಸೆತಗಳಲ್ಲಿ 33 ರನ್‌ ಗಳಿಸಿದರೆ, ಹಾರ್ದಿಕ್‌ ಪಾಂಡ್ಯ ಅವರು ಸ್ಪೋಟಕ ಬ್ಯಾಟ್‌ ಮಾಡಿ 23 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 2 ಬೌಂಡರಿಗಳೊಂದಿಗೆ ಅಜೇಯ 50 ರನ್‌ ಗಳಿಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವನ್ನುವಹಿಸಿದರು. ಇದರ ಜೊತೆಗೆ 16 ಎಸೆತಗಳಲ್ಲಿ ಅಜೇಯ 44 ರನ್‌ ಸಿಡಿಸಿದ ತಿಲಕ್‌ ವರ್ಮಾ ಜೊತೆಗೆ 84 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ಹಾರ್ದಿಕ್‌ ಪಾಂಡ್ಯ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.